Sunday, July 27, 2025

ಸತ್ಯ | ನ್ಯಾಯ |ಧರ್ಮ

ಸಂಜು ಸ್ಯಾಮ್ಸನ್ ಗೆ ತಪ್ಪಿದ ಅವಕಾಶ: ಸಿಟ್ಟಿಗೆದ್ದ ಅಭಿಮಾನಿಗಳು

ಸೆಡನ್ ಪಾರ್ಕ್ (ನ್ಯೂಜಿಲ್ಯಾಂಡ್): ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಇಂದು ಇಲ್ಲಿ ಆರಂಭಗೊಂಡಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವುದಕ್ಕೆ ಅಭಿಮಾನಿಗಳು ಕೆರಳಿದ್ದಾರೆ.

ಟ್ವಿಟರ್ ನಲ್ಲಿ  #SanjuSamson ಟ್ರೆಂಡ್ ಆಗುತ್ತಿದ್ದು, ಮೊದಲನೇ ಏಕದಿನ ಪಂದ್ಯದಲ್ಲಿ ಸಂಜು ಚೆನ್ನಾಗಿ ಆಡಿದ್ದರೂ ಎರಡನೇ ಪಂದ್ಯಕ್ಕೆ ಡ್ರಾಪ್ ಮಾಡಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಪದೇಪದೇ ವಿಫಲರಾಗುತ್ತಿದ್ದರೂ ರಿಷಬ್ ಪಂಥ್ ಅವರನ್ನು ಆಡಿಸಿ, ಸಂಜು ಸ್ಯಾಮ್ಸನ್ ಅವರನ್ನು ಕೂರಿಸಲಾಗುತ್ತಿದೆ. ಬಿಸಿಸಿಐ ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದೆ. ಇದು ಅಕ್ಷಮ್ಯ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಸಂಜು ಸ್ಯಾಮ್ಸನ್ ಅವರನ್ನು ಆಡಿಸಿ, ರಿಷಬ್ ಪಂಥ್ ದೇಶೀಯ ಪಂದ್ಯಾವಳಿಗಳಲ್ಲಿ ಆಡಿ ತನ್ನ ಸಾಮರ್ತ್ಯ ಸಾಬೀತುಪಡಿಸಲಿ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ನೀಡಿರುವ ಹೇಳಿಕೆಯನ್ನು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಸಂಜು ಸ್ಯಾಮ್ಸನ್ ಪಕ್ಷಪಾತ ಧೋರಣೆಗೆ ಬಲಿಪಶುವಾಗಿದ್ದಾರೆ. ಅವರಿಗೆ ಅವಕಾಶ ಕಲ್ಪಿಸುವವರೆಗೆ ನಾವು ಕ್ರಿಕೆಟ್ ನೋಡುವುದೇ ಇಲ್ಲ ಎಂದು ಆದರ್ಶ್ ಜೆ.ಎಸ್. ಎಂಬುವವರು ಟ್ವೀಟ್ ಮಾಡಿದ್ದಾರೆ.

ಇತರ ಆಟಗಾರರಿಗಿಂತ ಹೆಚ್ಚಿನ ಅರ್ಹತೆ, ಉತ್ತಮ ದಾಖಲೆ ಇದ್ದರೂ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಬಾಂಗ್ಲಾದೇಶ ಸರಣಿಗೆ ಕೈಬಿಡಲಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಸೆಡನ್ ಪಾರ್ಕ್ ನಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ 4.5 ಓವರ್ ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 22 ರನ್ ಗಳಿಸಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದು, ಶುಭಮನ್ ಗಿಲ್ 19, ಶಿಖರ್ ಧವನ್ 2 ರನ್ ಗಳಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page