Home ಅಂಕಣ ಮಿತ್ರಮೇಳ ಮತ್ತು ಅಭಿನವ್‌ ಭಾರತ್‌

ಮಿತ್ರಮೇಳ ಮತ್ತು ಅಭಿನವ್‌ ಭಾರತ್‌

0

ಅಧ್ಯಾಯ ೧೦
ಹಿಂದುತ್ವ ರಾಜಕಾರಣದ ಕಥೆ
ಮೂಲ ಮಲಯಾಳಂ: ಪಿ. ಎನ್‌. ಗೋಪಿಕೃಷ್ಣನ್‌
ಕನ್ನಡಕ್ಕೆ: ಸುನೈಫ್



ಮಿತ್ರಮೇಳ ಚಿತ್ಪಾವನ ಸಂಘಟನೆಯಾಗಿ ಹುಟ್ಟಿಕೊಂಡಿದ್ದರೂ ಕೂಡ ಅದೊಂದು ಸಾರ್ವಜನಿಕ ಸಂಘಟನೆಯಾಗಿದ್ದರಿಂದ ಇತರ ಜಾತಿಗಳ ಜನರನ್ನು ಸದಸ್ಯರಾಗಿಸಲು ಹಿಂದೇಟು ಹಾಕಲಿಲ್ಲ. ಆದರೆ ಮಾತೃ ಸಂಘಟನೆಯಾಗಿದ್ದ ರಾಷ್ಟ್ರಭಕ್ತಸಮೂಹ ಸಂಪೂರ್ಣ ಚಿತ್ಪಾವನ ಸಂಘಟನೆಯಾಗಿತ್ತು. ಬ್ರಾಹ್ಮಣ್ಯವನ್ನು ಕೇಂದ್ರಬಿಂದುವಾಗಿರಿಸಿಕೊಂಡು ಹಿಂದೂ ಸಮೂಹವೊಂದನ್ನು ಕಟ್ಟುವುದು ನವಸಂಪ್ರದಾಯವಾದಿ ಬ್ರಾಹ್ಮಣರ ಬಯಕೆಯಾಗಿತ್ತೆಂದು ನಾವು ಈಗಾಗಲೇ ಗಮನಿಸಿದೆವು. ಮಿತ್ರಮೇಳವೂ ಆ ತತ್ವವನ್ನೇ ಹಿಂಬಾಲಿಸಿತು. ಆ ಕಾಲದಲ್ಲಿ ಸಾವರ್ಕರ್‌ ಬರೆದ ಕವಿತೆಗಳು ಮತ್ತು ಬರಹಗಳು ಮಿತ್ರಮೇಳದ ತತ್ವಸಿದ್ದಾಂತವನ್ನು ಧ್ವನಿಸುವಂತವಾಗಿದ್ದವು. ಒಂದು ಕವಿತೆಯಲ್ಲಿ ಆತ ʼಓ ನನ್ನ ಆರ್ಯ ಸಹೋದರರೇ, ಎದ್ದು ನಿಲ್ಲಿರಿ.ʼ ಎಂದು ಆಹ್ವಾನ ನೀಡಿದ. ಇನ್ನೊಂದು ಕಡೆ ಹೀಗೆ ಬರೆದ, ʼಆರ್ಯ ವಂಶದ ಮತ್ತು ಆರ್ಯ ಭೂಮಿಯ ಉನ್ನತಿಗಾಗಿ ಒಂದು ಮಹಾಪ್ರಸ್ಥಾನದ ಅಡಿಯಲ್ಲಿ ಅವರನ್ನು ಯೋಜಿಸಬೇಕಾಗಿದೆ.ʼ ಮತ್ತೊಂದು ಕಡೆ ʼಪ್ರಕೃತಿಯ ನಿಯಮವನ್ನು ಹಿಂಬಾಲಿಸಿರಿ. ಹನಿಗಳು ಸೇರಿ ಹಳ್ಳವಾಗುತ್ತದೆ. ಎಲ್ಲ ಹಿಂದೂಗಳನ್ನು ಸಂಘಟಿಸಿ ಅವರನ್ನು ಒಗ್ಗಟ್ಟಾಗಿಸಿ.ʼ ʼಆರ್ಯʼ ಅಥವಾ ʼಹಿಂದೂʼ ಮತ್ತು ʼಏಕತೆʼ ಎಂಬುದೇ ಸಾವರ್ಕರ್‌ ಸಿದ್ಧಾಂತದ ಮೂಲಮಂತ್ರಗಳಾಗಿದ್ದವು ಎಂದು ಸಾವರ್ಕರ್ ಆತ್ಮಕತೆಗಾರರಲ್ಲಿ ಒಬ್ಬರಾದ ಧನಂಜಯ ಕೀರ್‌ ಹೇಳುತ್ತಾರೆ.


ಆರ್ಯ ಇತಿಹಾಸದ ಮುಂದುವರಿಕೆಯಾಗಿ ನವಬ್ರಾಹ್ಮಣಿಸಮ್ಮನ್ನು ಅಭಿವೃದ್ಧಿ ಪಡಿಸುವುದರಲ್ಲಿ ಮಿತ್ರಮೇಳ ಬಹಳವೇ ಪಾತ್ರ ವಹಿಸಿತು. ಬ್ರಿಟಿಷರ ವಿರುದ್ಧದ ಹೋರಾಟವನ್ನು ಆರ್ಯ ರಾಷ್ಟ್ರ ಸ್ಥಾಪನೆಗಾಗಿ ನಡೆಸುವ ಯುದ್ಧ ಎಂಬ ರೀತಿಯಲ್ಲಿ ಮಾರ್ಪಡಿಸಲು ಮಿತ್ರಮೇಳ ಹಲವು ಚಟುವಟಿಕೆಗಳನ್ನು ಯೋಜಿಸಿತ್ತು. ಬಾಬುರಾವ್‌ ಸಹಿತ ಹಲವರು ಮಿತ್ರಮೇಳದ ಕಾರ್ಯಕರ್ತರಾದರು. ಪ್ರತಿ ಶನಿವಾರ ಮತ್ತು ಭಾನುವಾರ ಮಿತ್ರಮೇಳದ ಸದಸ್ಯರು ಒಟ್ಟುಗೂಡುತ್ತಿದ್ದರು. ಯಾವುದಾದರೂ ಒಂದು ವಿಷಯವನ್ನು ಒಬ್ಬರು ಮಂಡಿಸುವುದು ಮತ್ತು ಉಳಿದವರು ಅದರ ಕುರಿತು ಚರ್ಚೆ ನಡೆಸುವುದು ಆ ಸಭೆಯ ಸಾಮಾನ್ಯ ರೀತಿಯಾಗಿತ್ತು. ಮೊದಮೊದಲಿಗೆ ಸಾಮಾನ್ಯ ಸಂಗತಿಗಳನ್ನು ಇಟ್ಟುಕೊಂಡು ಚರ್ಚೆ ನಡೆಸುತ್ತಿದ್ದರಾದರೂ, ಹೋಗುತ್ತಾ ಸಾವರ್ಕರ್‌ ತಾನೇ ಮುಂದಾಳುತ್ವ ವಹಿಸಿ ರಾಜಕೀಯ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳತೊಡಗಿದ. ಸಶಸ್ತ್ರ ಹೋರಾಟದ ಮೂಲಕ ಸ್ವರಾಜ್ಯ ಹೋರಾಟವನ್ನು ನಡೆಸಬೇಕಾದ ಅಗತ್ಯತೆಗಳ ಕುರಿತು ಸಾವರ್ಕರ್‌ ವಿಷಯ ಮಂಡಿಸುತ್ತಿದ್ದ.

ಒಂದಷ್ಟು ಜಾತ್ಯಾತೀತ ನಿಲುವು ಹೊಂದಿದ್ದ ಗೋಖಲೆ ಗುಂಪನ್ನು ಸಾವರ್ಕರ್‌ ಕಠಿಣವಾಗಿ ಟೀಕಿಸುತ್ತಿದ್ದ. ಅದೊಂದು ತಿಲಕ್‌ವಾದಿ ಸಂಘಟನೆಯಾಗಿದ್ದರೂ, ಸಶಸ್ತ್ರ ಹೋರಾಟವನ್ನು ಹಿಂದಿನಿಂದ ಮಾತ್ರ ಬೆಂಬಲಿಸುತ್ತಿದ್ದ ತಿಲಕರ ನಿಲುವನ್ನೂ ಕೂಡ ಅತಿ ಕಠಿಣವಾಗಿ ಸಾವರ್ಕರ್‌ ಟೀಕಿಸುತ್ತಿದ್ದ. ʼಒಂದು ವಿಷವೃಕ್ಷವನ್ನು, ಅಂದರೆ ಬ್ರಿಟಿಷ್‌ ಆಡಳಿತವನ್ನು ನಾಶ ಪಡಸಿಬೇಕಾದರೆ ಅದರ ತಾಯಿಬೇರನ್ನು ಕತ್ತರಿಸಬೇಕು. ಅಲ್ಲದೆ ಎಲೆಗಳನ್ನೂ ರೆಂಬೆಕೊಂಬೆಗನ್ನೂ ಕೀಳುತ್ತಾ ಕೂತರೆ ಸಾಲದು ಎಂಬುದು ಸಾವರ್ಕರ್‌ ನಿಲುವಾಗಿತ್ತು. ಅದೊಂದು ವಿಷವೃಕ್ಷವಾಗಿರುವುದರಿಂದ ತಾಯಿಬೇರು ಕತ್ತರಿಸಲು ಹೊರಡುವವರ ಪ್ರಾಣಕ್ಕೂ ಆಪತ್ತು ಎರಗಬಹುದು.

ವಿಷವೃಕ್ಷದ ಎಲೆಗಳನ್ನೂ ರೆಂಬೆಕೊಂಬೆಗಳನ್ನೂ ಕೀಳುತ್ತಾ ಕೂತು ಬುಡಕ್ಕೆ ಹಾಲೆರೆಯುವ ಕೆಲಸವನ್ನು ಕಾಂಗ್ರೆಸ್‌ ಮತ್ತು ಗೋಖಲೆ ಮಾಡುತ್ತಿದ್ದಾರೆ. ಗೋಖಲೆ ಮತ್ತು ಸಂಗಡಿಗರು ಅರ್ಜಿಗಳನ್ನು, ನಿವೇದನೆಗಳನ್ನು ಸಲ್ಲಿಸುವುದನ್ನು ಸಾವರ್ಕರ್‌ ಇಲ್ಲಿ ಎಲೆ ಕೀಳುವ ಕೆಲಸ ಎಂದು ಕರೆಯುತ್ತಿದ್ದಾನೆ. ಕೆಲ ಭಾರತೀಯರಿಗೆ ಇನ್ನಷ್ಟು ಸರಕಾರಿ ಕೆಲಸಗಳು ಮತ್ತು ಇನ್ನು ಕೆಲವರಿಗೆ ಪ್ರಶಸ್ತಿಗಳು ಲಭಿಸುವುದು ಬಿಟ್ಟರೆ ಇದರಿಂದ ಬೇರೆ ಯಾವ ಪ್ರಯೋಜನವೂ ಇಲ್ಲ. ಪ್ರಭುತ್ವದೊಂದಿಗೆ ಅಸಹಕಾರದ ಮೂಲಕ ನಡೆಸುವ ತಿಲಕರ ಚಟುವಟಿಕೆಗಳಿಂದಲೂ ಇನ್ನಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆಯೇ ಹೊರತು ಬೇರೇನಿಲ್ಲ.


ಮಿತ್ರಮೇಳಕ್ಕೆ ಒಂದು ಆಫೀಸ್‌ ಬೇಕಾಗಿತ್ತು. ನಾಸಿಕ್‌ನ ತಿಲ್‌ಬಂಡೇಶ್ವರದಲ್ಲಿ, ಸಾವರ್ಕರ್‌ ವಾಸವಿದ್ದ ಮನೆಯ ಬಳಿಯೇ ಒಂದು ಕೋಣೆ ಅದಕ್ಕಾಗಿ ಹೊಂದಿಸಿಕೊಳ್ಳುತ್ತಾರೆ. ರಾಜಾ ರವಿವರ್ಮ ರಚಿಸಿದ ಶಿವಾಜಿಯ ಭಾವಚಿತ್ರದ ಪ್ರತಿ ಆ ಕೋಣೆಯ ದೊಡ್ಡ ಆಕರ್ಷಣೆಯಾಗಿತ್ತು. ಅದರ ಜೊತೆಗೆ ೧೮೫೭ರ ದಂಗೆಯ ನಾಯಕನಾಗಿದ್ದ ನಾನಾಸಾಹೇಬ್‌, ರಾಣಿ ಲಕ್ಷ್ಮೀಬಾಯಿ, ವಾಸುದೇವ್‌ ಬಲ್‌ವಂತ್‌ ಫಾಡ್ಕೇ, ಚಾಪೇಕರ್‌ ಸಹೋದರರು, ಅವರ ಜೊತೆಗೆ ಗಲ್ಲಿಗೇರಿದ ಮಹಾದೇವ್‌ ವಿನಾಯಕ್‌ ರಾಣಡೆ ಅವರುಗಳ ಚಿತ್ರಗಳೂ ಅಲ್ಲಿದ್ದವು. ಹಿಂದೂ ದೇವರುಗಳ ಚಿತ್ರಗಳೂ ಆ ಕೋಣೆಯಲ್ಲಿ ತೂಗುತ್ತಿದ್ದವು.


ತಿಲಕ್‌ ಶುರು ಮಾಡಿದ್ದ ಶಿವಾಜಿ ಉತ್ಸವ ಮತ್ತು ಗಣೇಶೋತ್ಸವಗಳನ್ನು ದೊಡ್ಡ ಮಟ್ಟದಲ್ಲಿ ರಾಜಕೀಯವಾಗಿ ಬದಲಾಯಿಸಲು ಸಾವರ್ಕರ್‌ ಮತ್ತು ಮಿತ್ರಮೇಳ ಮುಂದಾದರು. ತಿಲಕ್‌ ಮರಾಠಾ ಜಾತಿಯ ಶಿವಾಜಿಯನ್ನು ಮುಂದಿಟ್ಟುಕೊಂಡು ಉತ್ಸವ ಶುರು ಆರಂಭಿಸಲು ಕಾರಣ ಬ್ರಾಹ್ಮಣರಿಗೆ ಇತರ ಹಿಂದೂ ಜಾತಿಗಳ ಬೆಂಬಲ ಸಿಗಲೆಂದಾಗಿತ್ತು. ಅದರ ಜೊತೆಗೆ ಚಿತ್ಪಾವನ ಪೇಶ್ವಾ ಸಾಮ್ರಾಜ್ಯಕ್ಕೆ ಮೂಲ ಶಿವಾಜಿ ಮಹಾರಾಜ ಎಂಬ ಚಾರಿತ್ರಿಕ ಸತ್ಯವನ್ನು ಸ್ಮರಿಸುವ ಉದ್ದೇಶವೂ ಇತ್ತು. ಆ ರಾಜಕೀಯ ಗುರಿಯನ್ನು ಸಾವರ್ಕರ್‌ ಹೇಳಿಕೊಳ್ಳುತ್ತಾನೆ.
ʼನಾಸಿಕ್‌ನಲ್ಲಿ ನಾವು ಸಂಘಟಿಸುವ ಮೇಳ ಚಾರಿತ್ರಿಕವೂ ರಾಜಕೀಯವೂ ಆಗಿದೆ. ಶಿವಾಜಿ ಮಹಾರಾಜರಂತೆ ತನ್ನ ದೇಶಕ್ಕಾಗಿ ಹೋರಾಡಲು ಶಕ್ತಿಯಿರುವವರಿಗೆ ಮಾತ್ರವೇ ಅವರನ್ನು ಸ್ಮರಿಸಲು ಮತ್ತು ಈ ಉತ್ಸವ ಆಚರಿಸಲು ನಿಜವಾದ ಅರ್ಹತೆಯಿರುವುದು. ಆದ್ದರಿಂದಲೇ ನಮ್ಮ ನಿಜವಾದ ಗುರಿ ಸಾಮ್ರಾಜ್ಯವಾದದ ಸಂಕೋಲೆಗಳನ್ನು ಕಿತ್ತೆಸೆಯಲು ಬೇಕಾದ ಕಾರ್ಯಗಳಲ್ಲಿ ಮಗ್ನರಾಗುವುದೇ ಆಗಿದೆ.


ಅದರ ಬೆನ್ನಿಗೇ ಬಂದ ಗಣೇಶೋತ್ಸವದಲ್ಲೂ ಮಿತ್ರಮೇಳದ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡರು. ಸ್ವಾತಂತ್ರ್ಯ ಲಕ್ಷ್ಮಿ ಕೀ ಜೈ ಎಂಬ ಘೋಷಣೆ ಕೂಗಿದರು. ಅದರ ಜೊತೆಗೆ ಶಿವಾಜಿಯ ಸೇನಾನಾಯಕರಾಗಿದ್ದ ತಾನಾಜಿ ಮಲುಸಾರೆ, ಬಾಜಿ ಪ್ರಭು ದೇಶ್‌ಪಾಂಡೆ ಮೊದಲಾದವರ ಕುರಿತು ಸಾವರ್ಕರ್‌ ಬರೆದಿದ್ದ ಗೀತೆಗಳನ್ನೂ ಹಾಡಲಾಯಿತು. ಬಿಜಾಪುರದ ಜನರಲ್‌ ಆಗಿದ್ದ ಅಫ್ಸಲ್‌ ಖಾನನ್ನು ಶಿವಾಜಿ ವಧಿಸಿದ ಘಟನೆಯನ್ನು ಇಟ್ಟುಕೊಂಡು ದಾರೇಕರ್‌ ರಚಿಸಿದ ಗೀತೆಯನ್ನೂ ಹಾಡಲಾಯಿತು.


ಅಷ್ಟರಲ್ಲಿ ಪ್ಲೇಗ್‌ ಮರಳಿ ಬಂದಿತು. ೧೯೦೧ ರಲ್ಲಿ ಸಾವರ್ಕರ್‌ ಮೆಟ್ರಿಕ್ಯುಲೇಷನ್‌ ಕ್ಲಾಸಲ್ಲಿ ಓದುತ್ತಿರುವಾಗ ಪ್ಲೇಗ್‌ ಎರಡನೇ ಅಲೆ ಶುರುವಾಯಿತು. ಪ್ಲೇಗಿನ ಈ ತಾಂಡವದಲ್ಲಿ ರಾಷ್ಟ್ರಭಕ್ತ ಸಮೂಹ ಎಂಬ ಮಾತೃಸಂಘಟನೆಯಲ್ಲಿ ಸಾವರ್ಕರ್‌ ಜೊತೆಗಿದ್ದ ಮಸ್ಕರ್‌ ಮತ್ತು ಪಾಗೇ ಮರಣ ಹೊಂದಿದರು. ಮಿತ್ರಮೇಳದ ಆಫೀಸನ್ನು ತಾತ್ಕಾಲಿಕವಾಗಿ ನಾಸಿಕ್‌ನಿಂದ ಬದಲಾಯಿಸಬೇಕಾದ ಪರಿಸ್ಥಿತಿ ಬಂದಿತು. ನಾಸಿಕ್‌ ಸಮೀಪದ ಕೊತ್ತೂರಿನಲ್ಲಿ ಇದಕ್ಕಾಗಿ ಜಾಗ ಕಂಡುಹಿಡಿಯಲಾಯಿತು. ಅಲ್ಲಿ ಮಿತ್ರಮೇಳದ ಶಾಖೆ ತೆರೆಯುವಲ್ಲಿ ಸಾವರ್ಕರ್‌ ಸಫಲನಾದ.


ನಂತರದ ಕಾಲದ ಹಿಂದೂ ರಾಜಕೀಯ ಸಂಘಟನೆಗಳ ರೂಪವನ್ನು ನಿರ್ಣಯಿಸುವಲ್ಲಿ ಫಾಡ್ಕೇಯ ಸಂಘಟನೆಯಿಂದಲೇ ಸಿಕ್ಕಿರುವ ಕೊಡುಗೆಗಳನ್ನು ನಾವು ಗಮನಿಸಿದೆವು. ದರೋಡೆಕೋರರ ಗುಂಪು ಎಂದು ಚಿರೋಲ್‌ ಕರೆದ ತಿಲಕರ ಜಿಮ್ನಾಸ್ಟಿಕ್‌ ಕ್ಲಬ್‌ಗಳೂ ದೈಹಿಕ ತಾಲೀಮಿಗೆ ಪ್ರಾಮುಖ್ಯತೆ ನೀಡಿದ್ದವಾಗಿದ್ದವು. ಮಿತ್ರಮೇಳವೂ ದೈಹಿಕ ತರಬೇತಿಗೆ ಪ್ರಾಮುಖ್ಯತೆ ನೀಡಿತ್ತು. ಭಾರತಕ್ಕೆ ಸ್ವಾತಂತ್ರ್ಯ ಒದಗಿಸಲು ಆರೋಗ್ಯವಂತ ಯುವಕರಿಂದಷ್ಟೇ ಸಾಧ್ಯವೆಂದು ಅವರೆಲ್ಲ ನಂಬಿದ್ದರು.


ಈ ಕಾಲದಲ್ಲಿಯೇ, ತನ್ನ ಹತ್ತೊಂಬತ್ತನೇ ವಯಸ್ಸಿಗೆ ಸಾವರ್ಕರ್‌ ಯಮುನಾಳನ್ನು ಮದುವೆಯಾಗುವುದು. ಮೆಟ್ರಿಕ್ಯುಲೇಷನ್‌ ಮುಗಿಸಿ, ಪುಣೆಯ ಫೆರ್ಗುಸನ್‌ ಕಾಲೇಜಿನಲ್ಲಿ ಸೀಟು ಹೊಂದಿಸಿಕೊಂಡಿದ್ದ ಸಾವರ್ಕರ್‌ಗೆ ಡಿಗ್ರೀ ಕಲಿಯಲು ಬೇಕಾದ ಆರ್ಥಿಕ ಸಹಾಯವನ್ನು ಯಮುನಾಳ ತಂದೆ ನೀಡುತ್ತಾರೆ. ಇದರ ಜೊತೆಗೆ ಚಿತ್ಪಾವನ ರಾಜಕಾರಣದ ಕೇಂದ್ರವಾಗಿದ್ದ ಪುಣೆಗೆ ಸಾವರ್ಕರ್‌ ಕೂಡ ಬಂದು ಸೇರುತ್ತಾನೆ. ಫೆರ್ಗುಸನ್‌ ಕಾಲೇಜು ಮತ್ತು ಡೆಕ್ಕನ್‌ ಕಾಲೇಜುಗಳಲ್ಲಿ ಮಿತ್ರಮೇಳದ ಶಾಖೆಗಳನ್ನು ತೆರೆಯಲು ಸಾವರ್ಕರ್‌ಗೆ ಬಹಳ ಸಮಯ ಹಿಡಿಯಲಿಲ್ಲ. ಅದರೊಂದಿಗೆ ನಾಸಿಕ್‌ನ ಮಿತ್ರಮೇಳದ ಜವಾಬ್ದಾರಿಯನ್ನು ಬಾಬುರಾವ್‌ ಹೊತ್ತುಕೊಳ್ಳುತ್ತಾನೆ.

ಸಾವರ್ಕರ್‌ ಸಹೋದರರಲ್ಲಿ ಕಿರಿಯನಾಗಿದ್ದ ನಾರಾಯಣ್‌ ದಾಮೋದರ್‌ ಸಾವರ್ಕರ್‌ ಎಂಬ ಬಾಲ್‌ ಶಾಲಾ ವಿದ್ಯಾರ್ಥಿಗಳನ್ನು ಸಂಘಟಿಸಿ ಮಿತ್ರಮೇಳದ ಬಾಲವಿಭಾಗ ಎಂಬ ನೆಲೆಯಲ್ಲಿ ಮಿತ್ರಸಮಾಜ್‌ ರೂಪೀಕರಿಸುತ್ತಾನೆ. ಬಾಬುರಾವನ ಪತ್ನಿ ಯೆಶುವಾಹಿನಿಯ ನೇತೃತ್ವದಲ್ಲಿ ಮಿತ್ರಮೇಳದ ಮಹಿಳಾ ವಿಭಾಗವಾಗಿ ಆತ್ಮನಿಷ್ಠಾ ಯುವತಿ ಸಂಘ ಅಸ್ತಿತ್ವಕ್ಕೆ ಬರುತ್ತದೆ. ಇವೆಲ್ಲ ಚಿತ್ಪಾವನ ಸಂಘಟನೆಗಳು ಆಗಿದ್ದವು ಎಂದು ಹೇಳಬೇಕಾದ ಅಗತ್ಯವಿಲ್ಲವಲ್ಲ. ತಿಲಕರ ಮಗಳು ಪಾರ್ವತೀಬಾಯಿ ಕೇತ್ಕರ್‌ ಈ ಸಂಘಟನೆಯ ಸದಸ್ಯೆಯಾಗಿದ್ದಳು.


ಮಹಾರಾಷ್ಟ್ರದಾದ್ಯಂತ ಮಿತ್ರಮೇಳ ಹರಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಮ್ಮೇಳನ ನಡೆಸಲು ಸಾವರ್ಕರ್‌ ತೀರ್ಮಾನಿಸುತ್ತಾನೆ. ಅದರ ಭಾಗವಾಗಿ ೧೯೦೩ರಲ್ಲಿ ಧುಲೇಯಲ್ಲಿ ಈ ಸಮ್ಮೇಳನ ನಡೆಯುತ್ತದೆ. ನಾಸಿಕ್‌, ಪುಣೆ, ಕೊತ್ತೂರ್, ಭಾಗೂರ್‌, ತ್ರಯಂಬಕ್‌, ಬೆರಾರ್‌ ಮೊದಲಾದ ಕಡೆಗಳ ಮಿತ್ರಮೇಳದ ಸದಸ್ಯರು ಒಟ್ಟುಗೂಡುತ್ತಾರೆ. ೧೯೦೪ರ ಸಮ್ಮೇಳನ ನಾಸಿಕ್‌ನಲ್ಲಿ ನಡೆಯುತ್ತದೆ. ಅಲ್ಲಿ ಸಾವರ್ಕರ್‌ ಮಿತ್ರಮೇಳಕ್ಕೆ ಹೊಸತೊಂದು ಹೆಸರು ಸೂಚಿಸುತ್ತಾನೆ. ಅಭಿನವ್‌ ಭಾರತ್‌. ನಂತರ ೧೯೦೫ರಲ್ಲಿ ಕೊತ್ತೂರಿನಲ್ಲೂ ೧೯೦೬ರಲ್ಲಿ ಸಯಣ್‌ನಲ್ಲೂ ಅಭಿನವ್‌ ಭಾರತ್‌ನ ಸಮ್ಮೇಳನಗಳು ನಡೆಯುತ್ತವೆ. ಬಂಗಾಳದ ಭೂಗತ ಸಂಘಟನೆಗಳಾಗಿದ್ದ ಅನುಶೀಲನ್‌ ಸಮಿತಿ ಮತ್ತು ಸ್ವಾಧೀನ್‌ ಭಾರತ್‌ ಮೊದಲಾದವುಗಳ ಜೊತೆ ಸೇರಿಕೊಂಡು ಅಭಿನವ್‌ ಭಾರತ್‌ ಕೆಲಸ ಮಾಡಲು ಶುರು ಮಾಡುವುದು ಇದೇ ಕಾಲದಲ್ಲಾಗಿತ್ತು. ಪ್ರತಿಜ್ಞೆಯ ಮೂಲಕ ಅಭಿನವ್‌ ಭಾರತ್‌ಗೆ ಸದಸ್ಯರನ್ನು ಸೇರಿಸಿಕೊಳ್ಳಲಾಗುತ್ತಿತ್ತು.


ಕಾಂಗ್ರೆಸ್‌ ಒಳಗಿನ ತಿಲಕರ ನವಸಂಪ್ರದಾಯವಾದಿ ಬ್ರಾಹ್ಮಣವಾದ ಮತ್ತು ಅದಕ್ಕೆದುರಾಗಿ ಜಾತ್ಯಾತೀತ ಆಧುನಿಕವಾದಗಳ ಸಂಘರ್ಷ ತಾರಕಕ್ಕೇರಿದ್ದ ದಿನಗಳವು. ಪಂಜಾಬಿನಲ್ಲಿ ಸ್ಥಳೀಯ ಸುಧಾರಣೆಗಳ ಭಾಗವಾಗಿ ಗೋಖಲೆಯ ಇಚ್ಛೆಯಂತೆ ಸಿಖ್‌ ಮತ್ತು ಮುಸ್ಲಿಮರಿಗೆ ಅಲ್ಲಿಯ ತನಕ ಇರದಿದ್ದ ಪ್ರಾತಿನಿದ್ಯ ನೀಡಲಾಯಿತು. ಇದು ಹಿಂದೂವಾದಿಗಳ ವಿರೋಧಕ್ಕೆ ಕಾರಣವಾಯಿತು. ತಿಲಕ್‌ ಇದರ ಲಾಭ ಪಡೆಯಲು ತೀರ್ಮಾನಿಸಿದರು. ಬಾಂಬೆಯಿಂದ ಪುಣೆಗೆ ಮರಳಿದ ತಿಲಕರನ್ನು ಸಾವರ್ಕರ್‌ ಭೇಟಿಯಾಗಿ ಹಿಂದೂ ಪರ ಸಶಸ್ತ್ರ ಹೋರಾಟದ ನಿಲುವಿಗೆ ಬೆಂಬಲವನ್ನೂ ನೀಡಿದ. ಅಭಿನವ್‌ ಭಾರತ್‌ನ ಎಲ್ಲ ಸದಸ್ಯರನ್ನು ಅದಕ್ಕಾಗಿ ಸಜ್ಜುಗೊಳಿಸುತ್ತೇನೆಂದು ವಾಗ್ದಾನವನ್ನೂ ನೀಡಿದ. ಅದಕ್ಕಾಗಿ ಸಾವರ್ಕರ್‌ ರೂಪಿಸಿದ ಯೋಜನೆ ವಿದೇಶಿ ವಸ್ತ್ರಗಳನ್ನು ಬೆಂಕಿಗಾಹುತಿ ಮಾಡುವುದಾಗಿತ್ತು. ಅದಕ್ಕಾಗಿ ಅಭಿನವ್‌ ಭಾರತ್‌ನ ಸದಸ್ಯರನ್ನು ವಿದೇಶಿ ವಸ್ತ್ರಗಳನ್ನು ಶೇಖರಿಸುವ ಕೆಲಸಕ್ಕೆ ಹಚ್ಚಲಾಯಿತು. ದೇವಸ್ತಾನಗಳನ್ನು ಕೇಂದ್ರವಾಗಿರಿಸಿ ಈ ಯೋಜನೆಯನ್ನು ವಿಜಯಗೊಳಿಸಲು ಬೇಕಾದ ಏರ್ಪಾಟುಗಳನ್ನು ಮಾಡಿದ. ಅಭಿನವ್‌ ಭಾರತ್ನ ಸಯಣ್‌ ಸಮ್ಮೇಳನಕ್ಕಿಂತ ಮೊದಲು ಈ ಚಟುವಟಿಕೆಗಳು ನಡೆಯುತ್ತವೆ. ೧೯೦೫ ಅಕ್ಟೋಬರ್ ೨ರಂದು ಪುಣೆಯ ಬ್ರಾಹ್ಮಣರು ಓಂಕಾರೇಶ್ವರ ದೇವಸ್ತಾನದಲ್ಲಿ ಸಭೆ ಸೇರಿ ಈ ಹಿಂದೂ ಕೇಂದ್ರಿತ ಬ್ರಿಟಿಷ್‌ ವಿರೋಧಿ ಹೋರಾಟಕ್ಕೆ ಬೆಂಬಲ ನೀಡುತ್ತಾರೆ. ಅಕ್ಟೋಬರ್‌ ೬ರಂದು ಮಹಾದೇವ್‌ ದೇವಸ್ತಾನಲ್ಲಿ ಸಭೆ ಸೇರಿದ ಬ್ರಾಹ್ಮಣ ಮಹಿಳೆಯರು ವಿದೇಶಿ ನಿರ್ಮಿತ ಬಳೆಗಳನ್ನೂ ಸೀಮೆಯೆಣ್ಣೆಯನ್ನೂ ಗಾಜಿನ ವಸ್ತುಗಳನ್ನೂ ಬಹಿಷ್ಕರಿಸಲು ತೀರ್ಮಾನಿಸುತ್ತಾರೆ.


೧೯೦೫ರ ಹಿಂದೂಗಳ ಪುಣ್ಯ ಉತ್ಸವವಾದ ದಸರಾದಂದು ಪಂಜರಪೋಲಿನ ಸಮೀಪದ ಮಹಾರಾಷ್ಟ್ರ ವಿದ್ಯಾಲಯದಿಂದ ಈ ಬೆಂಕಿಗಾಹುತಿ ಮಾಡುವ ಯೋಜನೆಯ ಮೆರವಣಿಗೆ ಶುರುವಾಗುತ್ತದೆ. ಕಾಲ್‌ ಸಂಪಾದಕ ಎಸ್.ಎಂ. ಪರಾಂಜಪೆ ಮತ್ತು ಭಾಸ್ಕರ್‌ ಬೋಪಟ್‌ ಈ ಧರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಪುಣೆಯ ಚಿತ್ರಶಾಲೆಯ ಪರಿಸರದಲ್ಲಿ ತಿಲಕ್‌ ಕೂಡ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಫೆರ್ಗುಸನ್‌ ಕಾಲೇಜಿನಲ್ಲಿ ಮೆರವಣಿಗೆ ಮುಕ್ತಾಯಗೊಳ್ಳುತ್ತದೆ. ಅದರ ನಂತರ ನಡೆದ ಸಭೆಯಲ್ಲಿ ತಿಲಕ್‌, ಪರಾಂಜಪೆ ಮತ್ತು ಸಾವರ್ಕರ್‌ ಮಾತನಾಡುತ್ತಾರೆ. ರಾತ್ರಿ ೯ ಗಂಟೆಯ ಹೊತ್ತಿಗೆ ಅಗ್ನಿಕುಂಡ ತಯಾರು ಮಾಡಿ ವಿದೇಶಿ ವಸ್ತುಗಳನ್ನು ಬೆಂಕಿಗಾಹುತಿ ನೀಡುತ್ತಾರೆ. ಇದೇ ಹೊತ್ತು ನಾಸಿಕ್‌ನಲ್ಲಿ ಬಾಬುರಾವನ ನೇತೃತ್ವದಲ್ಲಿ ಇದರ ಕಿರುರೂಪ ರಂಗಕ್ಕೇರಿತ್ತು.


ತಿಲಕರಿಗೆ ಬ್ರಾಹ್ಮಣರ ಒಳಗಿನ ಜಾತ್ಯಾತೀತವಾದಿ ಆಧುನಿಕ ಗುಂಪಿನ ಮೇಲೆ ಅಧಿಪತ್ಯ ಸ್ಥಾಪಿಸಲು ಈ ಘಟನೆ ದಾರಿ ಮಾಡಿಕೊಟ್ಟಿತು. ಪುಣೆಯ ಫೆರ್ಗುಸನ್‌ ಕಾಲೇಜು ಸಾರ್ವಜನಿಕ್‌ ಸಭಾದ ಭಾಗವಾಗಿದ್ದ ಡೆಕ್ಕನ್‌ ಎಜುಕೇಷನ್‌ ಸೊಸೈಟಿಯ ಅಡಿಯಲ್ಲಿದ್ದರೂ, ತಿಲಕ್‌ ಅದರಿಂದ ಹೊರ ಬಂದದ್ದನ್ನು ನಾವು ಈಗಾಗಲೇ ಚರ್ಚಿಸಿದೆವು. ಬ್ರಾಹ್ಮಣರೊಳಗಿನ ಜಾತ್ಯಾತೀತ ಆಧುನಿಕತೆಯ ಹಿಂಬಾಲಕರು ಅದರಲ್ಲಿ ಬಹುಸಂಖ್ಯಾತರಾಗಿದ್ದರು. ಆದ್ದರಿಂದಲೇ ವಿದ್ವಂಸಕ ಕೃತ್ಯದಲ್ಲಿ ಭಾಗವಹಿಸಿದ ಆರೋಪದ ಮೇಲೆ ವಿದ್ಯಾರ್ಥಿಯಾಗಿದ್ದ ಸಾವರ್ಕರ್‌ಗೆ ಹತ್ತು ರೂಪಾಯಿಗಳ ದಂಡವನ್ನು ಹಾಕಿ ಕಾಲೇಜು ಹಾಸ್ಟೆಲ್‌ನಿಂದ ಹೊರಹಾಕಲಾಯಿತು. ಇದರ ವಿರುದ್ಧ ಪ್ರತಿಭಟಿಸಲು ನವಸಂಪ್ರದಾಯವಾದಿ ಬ್ರಾಹ್ಮಣರು ಪರಾಂಜಪೆಯ ನೇತೃತ್ವದಲ್ಲಿ ಪ್ರತಿಭಟಣಾ ಧರಣಿ ನಡೆಸಿದರು. ಇದರಲ್ಲಿ ಹಲವಾರು ತಿಲಕ್‌ವಾದಿಗಳು ಭಾಗವಹಿಸಿ ಭಾಷಣ ಮಾಡಿದರು. ವಿನಾಯಕ್‌ ಸಾವರ್ಕರ್‌ ವಿರುದ್ಧ ಕ್ರಮ ಕೈಗೊಂಡ ಜಾತ್ಯಾತೀತ ಆಧುನಿಕ ವಿಭಾಗದ ಮೇಲೆ ಕಾಲ್ ಇನ್ನಿಲ್ಲದ ದಾಳಿ ನಡೆಸಿತು.


೧೯೦೫ರ ಲಾರ್ಡ್‌ ಕರ್ಜನ್‌ನ ಬಂಗಾಲ ವಿಭಜನೆಯ ವಿರುದ್ಧ ಜನಾಕ್ರೋಷ ಹೆಚ್ಚುತ್ತಿದ್ದ ಸಮಯವೂ ಅದಾಗಿದ್ದರಿಂದ ಮತ್ತಷ್ಟು ಹಿಂದೂಗಳನ್ನು ತಮ್ಮ ಛತ್ರಿಯಡಿಗೆ ತರಲು ನವಸಂಪ್ರದಾಯವಾದಿ ಬ್ರಾಹ್ಮಣರು ಈ ಘಟನೆಗಳನ್ನು ರಾಜಕೀಯವಾಗಿ ಬಳಸಿಕೊಂಡರು. ತಿಲಕ್‌ ಚಿತ್ಪಾವನ ಬ್ರಾಹ್ಮಣರೊಳಗಿನ ತನ್ನ ಎದುರಾಳಿಗಳ ಬಾಯಿ ಮುಚ್ಚಿಸಲು ʼಇವರು ನಮ್ಮ ಗುರುಗಳಲ್ಲʼ ಎಂಬ ತಲೆಬರಹದೊಂದಿಗೆ ಕೇಸರಿಯಲ್ಲಿ ಬರೆದರು. ಫೆರ್ಗುಸನ್‌ ಕಾಲೇಜು ತರಹದ ಖಾಸಗಿ ಮ್ಯಾನೇಜ್‌ಮೆಂಟ್‌ ಅಡಿಯಲ್ಲಿರುವ ಕಾಲೇಜ್‌ ಸಾವರ್ಕರ್‌ಗೆ ಶಿಕ್ಷೆ ವಿಧಿಸಿರುವುದನ್ನು ಅವರಿಗೆ ಬ್ರಿಟಿಷರ ಮೇಲೆ ಇರುವ ಪ್ರೀತಿಯೆಂದೇ ಕಾಣಬೇಕು ಎಂದು ತಿಲಕ್‌ ಬರೆದರು. ಗೋಖಲೆಯವರನ್ನು ವೈಯಕ್ತಿಕಾವಗಿ ನಿಂದಿಸಲೂ ಹಿಂದೇಟು ಹಾಕಲಿಲ್ಲ. ʼಮ್ಯಾಂಚೆಸ್ಟರಿನ ಬಹಿಷ್ಕಾರವನ್ನು ನ್ಯಾಯೀಕರಿಸುವ ಪ್ರೊ. ಗೋಖಲೆ, ತನ್ನದೇ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಸಮಾನ ಕಾರ್ಯದಲ್ಲಿ ಭಾಗಿಯಾದರೆ ಶಿಕ್ಷಿಸುತ್ತಾರೆ.


ಗೋಖಲೆಯ ಮೇಲೆ ಪರೋಕ್ಷವಾಗಿ ದಾಳಿ ಮಾಡುತ್ತಾ ತಿಲಕ್‌ ಮುಂದುವರಿದು ಬರೆದರು, ʼರಾಷ್ಟ್ರೀಯ ಚಳುವಳಿಯ ಸ್ಪರ್ಶದಿಂದ ದೂರ ನಿಲ್ಲಿಸಲೆಂದಲ್ಲ ನಾವು ನಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುವುದು. ಬದಲಿಗೆ ರಾಷ್ಟ್ರೀಯ ಭಾವನೆಯಿಂದ ಅವರು ಪ್ರಚೋದಿತರಾತರಾಗಲು. ಒಬ್ಬ ಗುರು ಸ್ವಾರ್ಥತೆ, ದಾಸ್ಯತನ ಮತ್ತು ಬೌದ್ಧಿಕ ದಿವಾಳಿತನದಿಂದ ವಿದ್ಯಾರ್ಥಿಗಳನ್ನು ಒಳಿತಿನಿಂದ ತಡೆಯುತ್ತಾನಾದರೆ, ಆತನನ್ನು ಗುರುವೆಂದು ಕರೆಯಲೇ ಬಾರದು. ಅಂತಹ ಗುರುವಿನ ಆಜ್ಞೆಯನ್ನು ಧಿಕ್ಕರಿಸುವುದು ಅಶಿಸ್ತುವಲ್ಲ. ಶಿಸ್ತಿನ ಹೆಸರಿನಲ್ಲಿ ಇಲ್ಲಿ ನಡೆಯುತ್ತಿರುವುದು ದಾಸ್ಯತನ.


ನಿಜದಲ್ಲಿ ತಿಲಕ್‌ ಗೋಖಲೆಯನ್ನು ಟೀಕಿಸುತ್ತಿರುವುದು ಮಾತ್ರವಲ್ಲ. ಬದಲಿಗೆ ರಾಷ್ಟ್ರೀಯತೆ ಎಂಬುದನ್ನು ಜಾತ್ಯಾತೀತ ಆಧುನಿಕವಾದಿಗಳ ಮೇಲೆ ನವಸಂಪ್ರದಾಯವಾಗಳಿಗೆ ಪ್ರಾಬಲ್ಯ ಸಾಧಿಸಲು ಉಪಕರಣವಾಗಿ ಬಳಸುತ್ತಿದ್ದಾರೆ. ಬ್ರಾಹ್ಮಣಿಸಂ ಎಂಬ ಕಲ್ಪನೆಗೆ ಉಸಿರು ನೀಡಲು ಸಾಮುದಾಯಿಕತೆಗಿಂತ ನೂರು ಪಟ್ಟು ಹೆಚ್ಚು ಶಕ್ತಿಯಿರುವ ರಾಷ್ಟ್ರೀಯತೆ ಹಿಂದೂ ರಾಜಕಾರಣದ ಪ್ರಧಾನ ಭಾಗವಾಗಿ ಬದಲಾಗುವುದು ಇದೇ ಸಂದರ್ಭದಲ್ಲಿ. ಸ್ವರಾಜ್ಯವೆಂಬುದು ಬ್ರಾಹ್ಮಣ ಸಾಮ್ರಾಜ್ಯ ಮತ್ತು ಇಂಡಿಯಾ ಒಟ್ಟಿಗೆ ಆಗುತ್ತದೆ.


೧೯೦೬ರಲ್ಲಿ ಪುಣೆ ಫೆರ್ಗುಸನ್‌ ಕಾಲೇಜಿನ ಓದಿನ ನಂತರ ಸಾವರ್ಕರ್‌ ಕಾನೂನು ಕಲಿಯಲು ಬಾಂಬೆಗೆ ಬರುತ್ತಾನೆ. ಆಗ ಶ್ಯಾಂಜೀ ಕೃಷ್ಣವರ್ಮ ಎಂಬ ಲಂಡನ್‌ ಕೇಂದ್ರಿತವಾಗಿ ಕೆಲಸ ಮಾಡುವ ಭಾರತೀಯ ರಾಷ್ಟ್ರೀಯವಾದಿ ಇಂಗ್ಲೆಂಡಿನಲ್ಲಿ ಓದಲು ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದಾಗಿ ತಿಳಿಯುತ್ತದೆ. ಅದಕ್ಕಾಗಿ ಎರಡು ಶಿಫಾರಸ್ಸು ಪತ್ರಗಳು ಬೇಕಾಗಿದ್ದವು. ತಿಲಕ್‌ ಮತ್ತು ಕಾಲ್‌ ಸಂಪಾದಕ ಎಸ್.ಎಂ. ಪರಾಂಜಪೆ ಅವರುಗಳು ಆ ಶಿಫಾರಸ್ಸುಗಳನ್ನು ನೀಡುತ್ತಾರೆ.

You cannot copy content of this page

Exit mobile version