Friday, June 6, 2025

ಸತ್ಯ | ನ್ಯಾಯ |ಧರ್ಮ

ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ‘ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್ ಪರಿಷತ್ತಿ’ನಲ್ಲಿ ಪೂರ್ತಿ ‘ಮೋದಿ ಭಕ್ತರು’ ; ಸಿಎಂ ಸಿದ್ದರಾಮಯ್ಯನವರೇ.. ಈ ಬಗ್ಗೆ ನಿಮಗೆ ಅರಿವಿದೆಯೇ?

ಕರ್ನಾಟಕದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವೃತ್ತಿಪರತೆ ತರುಲು ರಾಜ್ಯ ಸರಕಾರ ಹೊರತಂದ ಹೊಸ ಕಾನೂನನ್ನು ‘ಮೋದಿ ಭಕ್ತರು’ ಗಂಜಿಕೇಂದ್ರ ಸೃಷ್ಟಿಸಿಕೊಳ್ಳಲು ಬಳಕೆ ಮಾಡಿಕೊಂಡಿರು ಆಘಾತಕಾರಿ ವರದಿಯೊಂದು ಹೊರಬಿದ್ದಿದೆ.

2024ರ ಫೆಬ್ರವರಿಯಲ್ಲಿ ಆಡಳಿತರೂಢ ಕಾಂಗ್ರೆಸ್ ಸರಕಾರವು ‘ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್ ಕಾಯ್ದೆ’ಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿತು. ಇದರ ಭಾಗವಾಗಿ ರಾಜ್ಯದ ಸಿವಿಲ್ ಎಂಜಿನಿಯರ್‍ಸ್‌ಗಳಿಗಾಗಿ ಪರಿಷತ್ತೊಂದನ್ನು ರಚಿಸಲು ತೀರ್ಮಾನಿಸಲಾಯಿತು. ಹಾಗೂ, ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್‌ಗಳಿಗೆ ಪ್ರಮಾಣ ಪತ್ರ ನೀಡುವುದು, ಅವರುಗಳನ್ನು ಒಂದೇ ಸೂರಿನಡಿ ತರುವುದು, ಅವರ ವೃತ್ತಿಯನ್ನು ಪ್ರಮಾಣೀಕರಿಸುವುದು ವಿದೇಯಕ ಉದ್ದೇಶವಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಿವಿಲ್ ಎಂಜಿನೀಯರ್‍ಸ್‌ಗಳಿಗೂ ವೃತ್ತಿಪರ ಸಂಸ್ಥೆಯೊಂದನ್ನು ಕಟ್ಟಿಕೊಳ್ಳಲು ಕಾನೂನಿನ ಅಡಿಯಲ್ಲಿ ಸರಕಾರ ಅವಕಾಶ ಮಾಡಿಕೊಟ್ಟಿತು. ಇದಕ್ಕೆ ವೃತ್ತಿಪರ ಎಂಜಿನೀಯರ್‍ಗಳಿಂದ ಶ್ಲಾಘನೆಯೂ ವ್ಯಕ್ತವಾಗಿತ್ತು.

ಇದರ ಮುಂದುವರಿದ ಭಾಗವಾಗಿ 2025ರ ಮೇ ತಿಂಗಳಲ್ಲಿ ಸರಕಾರದ ಕಡೆಯಿಂದ ಅಧಿಸೂಚನೆಯೊಂದು ಹೊರಬಿದ್ದಿದ್ದು, ಇದೇ ಈಗ ವಿವಾದಕ್ಕೆ ಕಾರಣವಾಗಿದೆ. ಇಲ್ಲಿ ಅಚ್ಚರಿ ಮತ್ತು ಆತಂಕದ ಅಂಶ ಏನೆಂದರೆ, ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್‌ ಕಾಯ್ದೆಯ ಭಾಗವಾಗಿ ಪರಿಷತ್‌ನ್ನು ಸರಕಾರ ಆರಂಬಿಸಿರುವುದು ಅಧಿಸೂಚನೆಯಲ್ಲಿ ಪ್ರಕಟಿಸಲಾಯಿತು. ಎಲ್ಲಾ ಕಂದಾಯ ವಿಭಾಗಗಳಿಂದ ಒಟ್ಟು 10 ಸದಸ್ಯರನ್ನು ಸರಕಾರ  ಸ್ಥಾಪಕ ಸದಸ್ಯರಾಗಿ ಪರಿಷತ್‌ಗೆ ನೇಮಿಸಿರುವುದು ಅಧಿಸೂಚನೆಯ ಪ್ರಮುಖ ಅಂಶವಾಗಿತ್ತು. ಮುಂದಿನ ಎರಡು ವರ್ಷಗಳ ಅವಧಿಗೆ ಸರಕಾರದಿಂದ ನಾಮನಿರ್ದೇಶಿತ ಸದಸ್ಯರುಗಳ ಜತೆಗೆ ಈ ಸ್ಥಾಪಕ ಸದಸ್ಯರುಗಳು ರಾಜ್ಯದ ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್‌ಗಳನ್ನು ಪ್ರತಿನಿಧಿಸಲಿದ್ದಾರೆ.

ಇಲ್ಲಿ ಇರುವ ಗಮನಾರ್ಹ ಅಂಶ ಏನೆಂದರೆ, ಈ ಸ್ಥಾಪಕ ಸದಸ್ಯರುಗಳಲ್ಲಿ ಬಹುತೇಕರು ಬಿಜೆಪಿ ಹಾಗೂ ಸಂಘಪರಿವಾರದ ಬೆಂಬಲಿಗರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರುಗಳು ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆಗಳನ್ನು ನಿರಂತರವಾಗಿ ಹೀಯಾಳಿಸಿಕೊಂಡು ಬರುತ್ತಿದ್ದಾರೆ. ಉದಾಹರಣೆಗೆ, ಬೆಂಗಳೂರು ಕಂದಾಯ ವಲಯದಿಂದ ನೇಮಕಗೊಂಡಿರುವ ಸದಸ್ಯ ಶ್ರೀಕಾಂತ್ ಎಸ್ ಚನಾಲ್ ಅವರ ಸಾಮಾಜಿಕ ಜಾಲತಾಣದ ಅಕೌಂಟ್‌ಗಳಲ್ಲಿ ಮೋದಿ ಗುಣಗಾನ, ಕಾಂಗ್ರೆಸ್‌ನ ಅಪಮಾನ ನಡೆಯುತ್ತಲೇ ಇದೆ.

ಇತರೆ ಸದಸ್ಯರುಗಳಾದ ಡಿ. ರಂಗನಾಥ್, ಡಾ. ಸನತ್ ಕುಮಾರ್ ರಾಜಮಾನೆ, ದೀಪಕ್ ಎಚ್. ಎಸ್, ಜಗದೀಶ್ ಪ್ರಸಾದ್ ರಾವ್‌ ಮತ್ತಿತರರು ಕೂಡ ಸಿವಿಲ್ ಎಂಜಿನೀಯರ್‍ಸ್‌ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ನಿರಂತರವಾಗಿ ಕಾಂಗ್ರೆಸ್ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಹೀಗಿರುವಾಗ, ಇಂತವರುಗಳು ಹೇಗೆ ಸಿವಿಲ್ ಎಂಜಿನಿಯರ್‍ಗಳ ಪರಿಷತ್‌ಗೆ ಸ್ಥಾಪಕ ಸದಸ್ಯರಾದರು ಎಂಬುದು ಅಚ್ಚರಿಗೆ ಕಾರಣವಾಗಿದೆ.

ರಾಜ್ಯದಲ್ಲಿ ಕಾನೂನು ಜಾರಿಯಾದ ನಂತರ, ಅಧಿಸೂಚನೆ ಹೊರಬೀಳುವ ಕೆಲವೇ ದಿನಗಳ ಮುಂಚೆಯಷ್ಟೆ ಇದೇ ವ್ಯಕ್ತಿಗಳು ಗುಂಪೊಂದನ್ನು ರಚಿಸಿಕೊಂಡಿದ್ದರು. ಕೆಪಿಸಿಇಎಎಸ್‌ಇ (www.kpceasc.com) ಹೆಸರಿನಲ್ಲಿ ವೃತ್ತಿಪರ ಸಿವಿಲ್ ಎಂಜಿನಿಯರ್‍ಗಳಿಗಾಗಿ ಕಾನೂನು ತರಲು ಹೋರಾಟ ಮಾಡುತ್ತಿದ್ದೇವೆ ಎಂದು ಇದೇ ಸದಸ್ಯರುಗಳು ಚಂದಾ ವಸೂಲಿಯನ್ನೂ ಮಾಡಿದ್ದರು. ಇದೀಗ ಇದೇ ಗುಂಪಿನ ಸುಮಾರು ಒಟ್ಟು 9 ಸದಸ್ಯರಗಳು ಸ್ಥಾಪಕ ಸದಸ್ಯರುಳಾಗಿ ಸರಕಾರದ ಭಾಗವಾಗಲು ಹೊರಟಿರುವುದನ್ನು ಪ್ರಶ್ನಿಸಬೇಕಿದೆ ಎನ್ನುತ್ತವೆ ಮೂಲಗಳು. 

ಇದರ ಜತೆಗೆ, ಎಲ್ಲಾ ಸದಸ್ಯರುಗಳು ಮೇಲ್ಜಾತಿ ಹಿನ್ನೆಲೆಯವರೇ ಆಗಿದ್ದು, ಒಂದೇ ಗುಂಪಿನ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುತ್ತವೆ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದ ಮೂಲಗಳು. ಸರಕಾರ ಉದ್ದೇಶಿತ ಪರಿಷತ್‌ಗೆ ಸದಸ್ಯರುಗಳನ್ನು ನೇಮಕ ಮಾಡುವಾಗಿ ಯಾಕೆ ಸಾಮಾಜಿಕ ನ್ಯಾಯದ ನೆಲೆಯನ್ನು ಪರಿಗಣಿಸಲಿಲ್ಲ ಎಂಬುದು ಕೂಡ ಇಲ್ಲಿ ಪ್ರಶ್ನೆಯಾಗಿದೆ. ಇಡೀ ರಾಜ್ಯಾದ್ಯಂತ ಇರುವ ಸಿವಿಲ್ ಎಂಜಿನಿಯರ್‍ಗಳನ್ನು ಪ್ರತಿನಿಧಿಸುವ ಈ ಪರಿಷತ್‌ನಲ್ಲಿ ಎಲ್ಲರ ಪ್ರತಿನಿಧಿತ್ವಕ್ಕೆ ಆಸ್ಪದ ಇಲ್ಲದಂತೆ ತಡೆದಿರುವ ಈ ನೇಮಕಾತಿ ಗೊಂದಲ ಮೂಡಿಸುತ್ತಿದೆ. ಒಂದು ಗುಂಪಾಗಿ ಹಿಡನ್ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುವವರನ್ನೇ ಸದಸ್ಯರುಗಳಾಗಿ ನೇಮಕ ಮಾಡಿರುವುದು, ಸಿವಿಲ್ ಎಂಜಿನಿಯರ್‍ಗಳ ಪರಿಷತ್ ಸ್ಥಾಪನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಸಾಧ್ಯತೆಯೂ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page