ಕಳೆದ 60 ವರ್ಷಗಳಲ್ಲಿ ನಮಗೆಲ್ಲ ಬಗೆ ಬಗೆಯ ಸಾಹಿತ್ಯ ಓದಲು ಸಿಗುತ್ತಿತ್ತು. ಚಳುವಳಿಗಾರರು ಮಾತಾಡಲೂ ಸಿಗುತ್ತಿದ್ದರು. ಸಾಮಾಜಿಕ ವಾತಾವರಣವೂ ಇಂದಿನಂತಿರದೆ ಮುಕ್ತವಾಗಿತ್ತು. ಆ ಕಾಲದಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣಗಳು ನಮಗೆ ಪ್ರಶ್ನಿಸುವುದನ್ನು ಕಲಿಸಿದುವು. ಇತಿಹಾಸವನ್ನು ಹೊಸದಾಗಿ ನೋಡಲು ಹೇಳಿಕೊಟ್ಟವು. ನಾವೆಲ್ಲ ನಮ್ಮದೇ ರೀತಿಗಳಲ್ಲಿ ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸತೊಡಗಿದೆವು. ಮಾನವೀಯ ಸಂಬಂಧಗಳಿಗೆ ಒತ್ತು ನೀಡತೊಡಗಿದೆವು… 68 ನೇ ಕರ್ನಾಟಕ ರಾಜ್ಯೋತ್ಸ ವದ ಹಿನ್ನೆಲೆಯಲ್ಲಿ ಪ್ರೊ. ಪುರುಷೋತ್ತಮ ಬಿಳಿಮಲೆಯವರ ವಿಶೇಷ ಲೇಖನ ಇಲ್ಲಿದೆ. ನಾಡಿನ ಸಮಸ್ತ ಜನತೆಗೆ ರಾಜ್ಯೋತ್ಸ ವದ ಹಾರ್ದಿಕ ಶುಭಾಶಯಗಳು
ಕುವೆಂಪು ಅವರು ಕರ್ನಾಟಕ ರಾಜ್ಯವನ್ನು ʼಸರ್ವಜನಾಂಗದ ಶಾಂತಿಯ ತೋಟʼವೆಂದು ಬಹಳ ಸಮರ್ಪಕವಾಗಿ ಕರೆದರು. ಚಾರಿತ್ರಿಕವಾಗಿ ಕರ್ನಾಟಕ-ಕನ್ನಡವು ಎಲ್ಲರನ್ನೂ ಮತ್ತು ಎಲ್ಲ ಅನುಭವಗಳನ್ನೂ ಒಳಗೊಂಡೇ ಬೆಳೆದಿದೆ. ಉತ್ತರ ದೇಶದ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರಬಾಹು ಭಟಾರರು ಜೈನ ಧರ್ಮವನ್ನು ಕರ್ನಾಟಕಕ್ಕೆ ತಂದರು. ಮುಂದೆ ಕರ್ನಾಟಕವು “ಜಿನ ಧರ್ಮದ ಆಡುಂಬೊಲಂ” ಆಗಿ, ಕನ್ನಡಕ್ಕೆ ಪಂಪ, ಪೊನ್ನ, ರನ್ನ, ನಾಗಚಂದ್ರ, ಜನ್ನ, ರತ್ನಾಕರವರ್ಣಿ ಮೊದಲಾದ ಅತ್ಯಂತ ಮುಖ್ಯ ಕವಿಗಳನ್ನು ಕೊಟ್ಟಿತು. ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಮಧ್ಯ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು, ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳಲ್ಲಿ ವಾಸಿಸಿ, ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು. ಬಿಹಾರದ ಮಂಡನಮಿಶ್ರರು ಸುರೇಶಾಚಾರ್ಯರಾಗಿ ಶೃಂಗೇರಿಯಲ್ಲಿ ನೆಲೆಸಿದರು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸಲಿಲ್ಲ. ಕ್ರಿಶ್ತಶಕ ಪೂರ್ವದಲ್ಲಿಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ತಮ್ಮ ವ್ಯಾಪಾರದ ಚಾತುರ್ಯಗಳಿಂದ ಕರಾವಳಿಗೆ ಕಡಲಾಚೆಯ ಸಂಪರ್ಕಗಳನ್ನು ಒದಗಿಸಿಕೊಟ್ಟರು. ಮುಂದೆ ಬಿಜಾಪುರದಿಂದ ನಾಡನ್ನು ಆಳಿದಾಗ ಇಂಡೋ ಇಸ್ಲಾಮಿಕ್ ಪರಂಪರೆಯ ಅತ್ಯದ್ಭುತ ವಾಸ್ತುಶಿಲ್ಪವೇ ಹುಟ್ಟಿಕೊಂಡಿತು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗಳಲ್ಲಿ ಕೆಲಸ ಮಾಡುತ್ತಾ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಾ, ಉದಾರವಾದೀ ಮಾನವೀಯತೆಯ ನೆಲೆಗಳನ್ನು ನಮಗೆ ಕಲಿಸಿದರು. 19-20 ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗಳಿಗೆ ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ನಾಟಕ, ಭಾವಗೀತೆಯೇ ಮೊದಲಾದ ಅನೇಕ ಪ್ರಕಾರಗಳನ್ನು ಬೆಳೆಯಿಸಿಕೊಂಡಿತು. ಹೀಗೆ ಎಲ್ಲರನ್ನೂ ಒಳಗೊಳ್ಳುತ್ತಾ ಬೆಳೆದ ಕರ್ನಾಟಕವು ಕೆಲವು ಮುಖ್ಯ ವೈಚಾರಿಕ ಧಾರೆಗಳಿಗೆ ಮೈಗೊಟ್ಟು ಬೆಳೆದಿರುವುದನ್ನು ಗಮನಿಸಬಹುದು.

ಮುಖ್ಯವಾಗಿ 1970 ರ ದಶಕದ ಉತ್ತರಾರ್ಧದಲ್ಲಿ ಬಂಡಾಯ ದಲಿತ ಸಾಹಿತ್ಯ ಚಳವಳಿಯು ಪ್ರಬಲವಾಗಿ ಕಾಣಿಸಿಕೊಂಡಿತು. ಈ ಚಳುವಳಿಗೆ ಸ್ಥೂಲವಾಗಿ ಎಡಪಂಥೀಯ ಸಿದ್ಧಾಂತಗಳು ಪ್ರೇರಣೆ ನೀಡಿದುವು. ಕಾರಣ, ಆರ್ಥಿಕ ಅಸಮಾನತೆ, ಜಾತಿಯ ತಾರತಮ್ಯ, ಧಾರ್ಮಿಕ ಮೂಲಭೂತವಾದ ಇತ್ಯಾದಿಗಳನ್ನೆಲ್ಲ ವಿರೋಧಿಸುವ ಚಿಂತನೆ ಬಲವಾಗಿ ಬೆಳೆಯಿತು. ಇದಕ್ಕೆ ಪೂರಕವಾಗಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿಯೆತ್ತಿದ್ದ ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ಗಾಂಧಿ, ಲೋಹಿಯಾ, ಫುಲೆ, ನಾರಾಯಣಗುರು, ಪೆರಿಯಾರ್, ಮೊದಲಾದವರೆಲ್ಲ ದೊಡ್ಡ ಮಟ್ಟದಲ್ಲಿ ಕನ್ನಡದೊಳಕ್ಕೆ ಬಂದರು. ಮಾರ್ಕ್ಸ್ವಾದ, ಲೋಹಿಯವಾದ ಮತ್ತು ಅಂಬೇಡ್ಕರ್ ವಾದಗಳ ಕುರಿತು ಹಿಂದೆಂದಿಗಿಂತಲೂ ಹೆಚ್ಚು ಚರ್ಚೆಗಳು ನಡೆದುವು, ಪುಸ್ತಕಗಳೂ ಪ್ರಕಟವಾದುವು. ಆ ಕಾಲದಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಕೇಳುತ್ತಿದ್ದ ಪ್ರಮುಖ ಪ್ರಶ್ನೆಗಳೆಂದರೆ-
- ಭಾರತೀಯ ಸಮಾಜದಲ್ಲಿ ಅಸಮಾನತೆಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುತ್ತಿರುವ ಪ್ರಮುಖ ಅಂಶಗಳು ಯಾವುವು?
- ದಲಿತರನ್ನು ಮತ್ತು ಶೂದ್ರರನ್ನು ಸಂಪೂರ್ಣವಾಗಿ ನಿರಾಯುಧರನ್ನಾಗಿಸುವ ತಂತ್ರಗಳು ಯಾವುವು ಮತ್ತು ಅವುಗಳನ್ನು ಯಾರು ಹೆಣೆದರು?
- ಅಧಿಕಾರ ಸ್ಥಾನಗಳನ್ನು ಶೂದ್ರರು ಮತ್ತು ದಲಿತರು ಪಡೆದುಕೊಳ್ಳಲು ಏನು ಮಾಡಬೇಕು?
- ಶಿಕ್ಷಣದಿಂದ ವಂಚಿತರಾದ ಶೂದ್ರರು ಮತ್ತು ದಲಿತರಿಗೆ ಶಿಕ್ಷಣ ದೊರೆಯುವಂತೆ ಮಾಡುವ ಬಗೆ ಹೇಗೆ?
- ಶೂದ್ರರು ಮತ್ತು ದಲಿತರಿಗೆ ಆಸ್ತಿಯ ಹಕ್ಕು ದೊರೆಯುವುದು ಹೇಗೆ?
- ಮಹಿಳೆಯರು ಸಬಲೀಕರಣಗೊಳ್ಳಲು ಏನು ಮಾಡಬೇಕು?
ಇಂಥ ಹಲವು ಪ್ರಶ್ನೆಗಳು ಕರ್ನಾಟಕದಾದ್ಯಂತ ಪ್ರತಿಧ್ವನಿಸಿದ್ದು ಕಳೆದ 60 ವರ್ಷಗಳಲ್ಲಿ ಎಂಬುದು ಗಮನಾರ್ಹ. ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಲಂಕೇಶ್, ತೇಜಸ್ವಿ, ಕಾಳೇಗೌಡ ನಾಗವಾರ, ಅರವಿಂದ ಮಾಲಗತ್ತಿ, ಬರಗೂರು, ಕುಂ ವೀರಭದ್ರಪ್ಪ, ಚಂದ್ರಶೇಖರ ಪಾಟೀಲ ಮೊದಲಾದವರು ಇವುಗಳ ಬಗ್ಗೆ ಬರೆದರು. ಇದೆಲ್ಲದರ ಪರಿಣಾಮವೆಂಬಂತೆ, ಮೀಸಲಾತಿಗೆ ಸಂಬಂಧಿಸಿದ ಹೋರಾಟಗಳು ಹುಟ್ಟಿಕೊಂಡವು. 1969 ರಲ್ಲಿ, ದೇವರಾಜ ಅರಸರ ನೇತೃತ್ವದಲ್ಲಿ ಎಲ್. ಜಿ ಹಾವನೂರರು ಮಂಡಿಸಿದ ವರದಿಯ ಜಾರಿಗಾಗಿ 1969 ರ ಅಂಬೇಡ್ಕರ್ ದಿನದಂದು (ಎಪ್ರಿಲ್ 14) ದೊಡ್ಡ ಆಂದೋಲನ ನಡೆಯಿತು. ಇದು ಕಾರಣವಾಗಿ ದಲಿತಪರ ಚಿಂತಕರೆಲ್ಲ ಒಂದುಗೂಡುವಂತಾಯಿತು. ಮುಂದೆ 1973 ರಲ್ಲಿ ನಡೆದ ಬೂಸಾ ಪ್ರಕರಣವು ಕೂಡಾ ನಾಡಿನ ಜನರನ್ನು ಬಡಿದೆಬ್ಬಿಸಿತು. ಬಸವಲಿಂಗಪ್ಪನವರು ದಲಿತರು ತಲೆ ಮೇಲೆ ಹೇಲು ಹೊರುವುದನ್ನು ನಿಷೇಧಿಸಿದರು. ಆ ಕಾಲಕ್ಕೆ ಇವೇನೂ ಸಣ್ಣ ಘಟನೆಗಳಾಗಿರಲಿಲ್ಲ. ಇಂಥ ಘಟನೆಗಳ ಜೊತೆಗೆ, ದೇವರು, ಧರ್ಮ, ಜಾತಿಗಳ ವಿರುದ್ಧ ಕರ್ನಾಟಕದ ಯುವಜನತೆ ಬಲವಾದ ಕೂಗೆಬ್ಬಿಸಿತು. ಪರಿಣಾಮವಾಗಿ 1973 ರ ಆಗಸ್ಟ್ 25-26 ರಂದು ಮೈಸೂರಿನಲ್ಲಿ ಚಾರಿತ್ರಿಕವಾದ ಜಾತಿವಿನಾಶ ಸಮ್ಮೇಳನ ನಡೆಯಿತು. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮದಾಸ್, ಶ್ರಿಕೃಷ್ಣ ಆಲನಹಳ್ಳಿ, ದೇವನೂರು ಮಹಾದೇವ, ಸಿದ್ಧಲಿಂಗಯ್ಯ, ಮೊದಲಾದವರೆಲ್ಲ ಈ ಸಮ್ಮೇಳನದಲ್ಲಿ ಪಾಲ್ಗೊಂಡಾಗ ಕರ್ನಾಟಕದಾದ್ಯಂತ ಒಂದು ಬಗೆಯ ರೋಮಾಂಚನ ಉಂಟಾಯಿತು. ಅನೇಕ ಕಡೆಗಳಲ್ಲಿ ಅಂತರಜಾತಿ ಮದುವೆಗಳೂ ನಡೆದುವು. ಮುಂದೆ 1974 ರ ಏಪ್ರಿಲ್ 20 ಮತ್ತು 21 ರಂದು ಮೈಸೂರಿನಲ್ಲಿ ‘ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ದ ಸಮ್ಮೇಳನ ನಡೆದಾಗ ವಿದ್ಯಾರ್ಥಿಯಾಗಿದ್ದ ನಾನೂ ಅದರಲ್ಲಿ ಭಾಗವಹಿಸಿ ಪ್ರೇರಣೆ ಪಡೆದಿದ್ದೆ. ಶೂದ್ರ ಪ್ರಜ್ಞೆ ಮತ್ತೊಮ್ಮೆ ಸ್ವಾಭಿಮಾನದ ಸಂಕೇತವಾಯಿತು. ಆ ಸಮ್ಮೇಳನದಲ್ಲಿ ಕುವೆಂಪುರವರು ಮಾಡಿದ ಉದ್ಘಾಟನಾ ಭಾಷಣ ಅನೇಕರ ರಕ್ತವನ್ನು ಬೆಚ್ಚಗಾಗಿಸಿತು. ‘ಕನ್ನಡ ಸಾಹಿತ್ಯದಲ್ಲಿರುವುದೆಲ್ಲ ಬೂಸಾ’ ಎಂದು ಘೋಷಿಸಿದ ಬಸವಲಿಂಗಪ್ಪನವರು ಆ ಕಾರಣಕ್ಕಾಗಿ ತಮ್ಮ ಮಂತ್ರಿ ಪದವಿಯನ್ನು ಕಳೆದುಕೊಂಡರೂ, ಸ್ವಸ್ಥಚಿತ್ತರಾಗಿ ಕುಳಿತಿದ್ದ ಸಾಂಪ್ರದಾಯಿಕ ಸಾಹಿತಿಗಳ ಚಿತ್ತವನ್ನು ಕೆಡಿಸುವುದರಲ್ಲಿ ಯಶಸ್ವಿಯಾದರು. ಜಡವಾಗಿದ್ದ ಸಾಹಿತಿಗಳ ಸಮುದಾಯ ಮೈಕೊಡವಿ ನಿಲ್ಲುವಂತಾಯಿತು.
ದಲಿತರಲ್ಲಿ ಉಂಟಾದ ಎಚ್ಚರದ ಪರಿಣಾಮವಾಗಿ 1974 ರಲ್ಲಿ ಭದ್ರಾವತಿಯಲ್ಲಿ ‘ದಲಿತ ಸಂಘರ್ಷ ಸಮಿತಿ’ ರೂಪುಗೊಂಡಿತು. ಮುಂದೆ ಇದು ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ಯಾಗಿ ಬೆಳೆದು ದಲಿತರ ಸಂರಕ್ಷಣೆಗೆ ಕಟಿಬದ್ದವಾಯಿತು. ದಲಿತ ಬರಹಗಾರರ ಯುವ ಸಂಘಟನೆ ಕರ್ನಾಟಕದಾದ್ಯಂತ ಕ್ಷಿಪ್ರವಾಗಿ ಪಸರಿಸಿಕೊಂಡು ದಲಿತರ ಮೇಲಾಗುವ ದೌರ್ಜನ್ಯಗಳ ವಿರುದ್ಧ ಎತ್ತಿದ ಸ್ವರ ಅಸಾಧಾರಣವಾದುದು. ಮುಂದೆ ಇದು ‘ದಲಿತ ವಿದ್ಯಾರ್ಥಿ ಒಕ್ಕೂಟ’, ‘ದಲಿತ ಮಹಿಳಾ ಒಕ್ಕೂಟ’, ‘ದಲಿತ ಕಲಾ ಮಂಡಳಿ’, ‘ದಲಿತ ನೌಕರರ ಒಕ್ಕೂಟ’, ‘ದಲಿತ ವೈದ್ಯ ಒಕ್ಕೂಟ’ವೇ ಮೊದಲಾದ ಹಲವು ಸಹ-ಸಂಘಟನೆಗಳನ್ನು ಕಟ್ಟಿ ಬೆಳೆಸಿತು. ಈ ಬೆಳವಣಿಗೆಗಳು ದಲಿತ ಸಾಹಿತ್ಯವನ್ನು ಗಟ್ಟಿಯಾಗಿ ಬೆಳೆಸಿದ್ದಲ್ಲದೆ, ಬೀದಿಬೀದಿಯಲ್ಲಿ ದಲಿತರ ಸ್ವರ ಕೇಳಿಸುವಂತೆ ಮಾಡಿತು. ಸಾಹಿತ್ಯಕ್ಕೆ ತಮಟೆಯ ಧ್ವನಿ ಸೇರಿಕೊಂಡಿತು. ಸಿದ್ದಲಿಂಗಯ್ಯನವರ ಕವಿತೆಗಳು ಬೀದಿಗಳಲ್ಲಿ ಗೋಡೆಗಳಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಂಡವು.
1970 ರ ದಶಕದಲ್ಲಿ ಕಾಂಗ್ರೆಸ್ ಭೂ ಮಸೂದೆಯನ್ನು ಜ್ಯಾರಿಗೆ ತಂದಿತು. ಕರ್ನಾಟಕದಲ್ಲಿ ಅದು ದೇವರಾಜ ಅರಸರ ಮುಂದಾಳತ್ವದಲ್ಲಿ ಸಾಕಷ್ಟು ಯಶಸ್ವಿಯಾಯಿತು. ಅನೇಕ ಭೂರಹಿತರಿಗೆ ಭೂಮಿ ದೊರೆಯಿತು. ಅದು ಕೆಳವರ್ಗದ ಜನರಲ್ಲಿ ಮೂಡಿಸಿದ ಸ್ವಾಭಿಮಾನವು ಚಾರಿತ್ರಿಕವಾದದು. ಜಮೀನು ಸಂಬಂಧದಲ್ಲಾದ ಬದಲಾವಣೆಗಳು ಕರ್ನಾಟಕದ ಸಾಮಾಜಿಕ ಜೀವನದ ಮೇಲೂ ಗಾಢ ಪರಿಣಾಮಗಳನ್ನು ಬೀರಿತು. ಬಡವರನ್ನು ಕೇಂದ್ರದಲ್ಲಿರಿಸಿಕೊಂಡು ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದ ಎಡ ಪಕ್ಷಗಳು ಭೂಸುಧಾರಣೆಯಾದನಂತರ ನೆಲೆ ಕಳೆದುಕೊಂಡವು. ಕಾನೂನಿನ ಬಲದಿಂದ ಉಳುವ ನೆಲವನ್ನು ತನ್ನದಾಗಿಸಿಕೊಂಡ ಬಡವರು, ನಿಧಾನವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಾರಂಭಿಸಿದರು. ಕ್ರಿಸ್ತ ಶಕ 2000 ರ ಹೊತ್ತಿಗೆ ವಿದ್ಯೆ ಪಡೆದು ಉದ್ಯೋಗಕ್ಕೆ ಸಿದ್ಧರಾದ ಈ ಹೊಸ ತಲೆಮಾರಿನ ಹುಡುಗರು ಭೂಸುಧಾರಣೆಯ ನೇರವಾದ ಫಲ ಎಂಬುದನ್ನು ಗುರುತಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಹೀಗೆ ಹುಟ್ಟಿಕೊಂಡ ಉದೀಯಮಾನ ಮಧ್ಯಮ ವರ್ಗವನ್ನು ಬಲಪಂಥೀಯ ರಾಜಕಾರಣ ಸುಲಭವಾಗಿ ಮುಂದೆ ಆಕ್ರಮಿಸಿಕೊಂಡಿತು.
ಭೂಮಸೂದೆ ಜ್ಯಾರಿಯಾಗುತ್ತಲೇ ಪ್ರಬಲವಾಗಿದ್ದ ಭೂಮಾಲಕ ವ್ಯವಸ್ಥೆ ಶಿಥಿಲವಾಯಿತು. ಅದರ ಜಾಗದಲ್ಲಿ ಹೋಟೆಲ್ ಉದ್ಯಮ, ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಮುಕ್ತ ಮಾರುಕಟ್ಟೆ, ರಸ್ತೆ ಸಾರಿಗೆಯ ಖಾಸಗೀಕರಣ – ಮೊದಲಾದ ಹೊಸ ಬಗೆಯ ವ್ಯವಹಾರಗಳು ಅರಂಭಗೊಂಡವು. ಇದರಲ್ಲಿ ತಳವರ್ಗದವರೂ ಕಾಣಿಸಿಕೊಂಡರು. ಭೂಮಸೂದೆಯಿಂದ ಯಾವ ರೀತಿಯ ಪ್ರಯೋಜನವೂ ಆಗದ ಸಾಮಾನ್ಯ ದಲಿತರು ( ಅವರು ಒಕ್ಕಲುತನದ ಹೊರಗೇ ಇದ್ದು, ದಿನಕೂಲಿಗಳಾಗಿದ್ದುದರಿಂದ ಅವರಲ್ಲಿ ಯಾವ ಭೂ ಸಂಬಂಧೀ ದಾಖಲೆಗಳೇ ಇರಲಿಲ್ಲ) ಮಾತ್ರ ಈ ಸ್ಥಿತ್ಯಂತರಗಳಿಂದ ಹೊರಗೇ ಇದ್ದರು. ಆದರೆ ಸುಶಿಕ್ಷಿತ ದಲಿತರು ಸಂಘಟಿತರಾದರು. ಈ ಎಲ್ಲಾ ಘಟನೆಗಳು ಆ ಕಾಲದ ಸಾಹಿತ್ಯದ ಮೇಲೂ ಪರಿಣಾಮ ಬೀರಿವೆ.
1975 ರ ಜೂನ್ 25 ರಂದು ಜ್ಯಾರಿಗೆ ಬಂದ ತುರ್ತುಪರಿಸ್ಥಿತಿಯಿಂದಾಗಿ ಕರ್ನಾಟಕದ ಕೆಲವು ಬರಹಗಾರರು ಮತ್ತು ಕಲಾವಿದರು ಬೀದಿಗಿಳಿಯಬೇಕಾಯಿತು. ಬಂಡಾಯದ ಮುಂಚೂಣಿಯ ಲೇಖಕ ಚಂದ್ರಶೇಖರ ಪಾಟೀಲರು ಸೆರೆಮನೆ ಸೇರಿದರು. ಇಂಥ ಘಟನೆಗಳು ಸಾಹಿತಿಗಳ ಮೈ ಛಳಿ ಬಿಡಿಸಿದ್ದಂತೂ ನಿಜ. ಸಾಹಿತಿಗಳು ತಮಗೆ ರಾಜಕೀಯ ಕಾಳಜಿ ಅಗತ್ಯ ಮತ್ತು ಅನಿವಾರ್ಯ ಎಂದು ಭಾವಿಸಲು ಆರಂಭಿಸಿದರು. ಇವೆಲ್ಲವುಗಳ ನಡುವೆ 1976 ಮಾರ್ಚ್ 10 ರಂದು ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನ ನಡೆದು ಅದಕ್ಕೆ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾದರು. ಸಮ್ಮೇಳನದಲ್ಲಿ ‘ದಲಿತ ಸಾಹಿತ್ಯ’ದ ಬಗ್ಗೆ ಪ್ರತ್ಯೇಕ ಗೋಷ್ಠಿಯನ್ನಿಡಲು ಕನ್ನಡ ಸಾಹಿತ್ಯ ಪರಿಷತ್ತು ಒಪ್ಪದೇ ಇದ್ದುದರಿಂದ ಬಂಡಾಯ ದಲಿತ ಸಾಹಿತಿಗಳೆಲ್ಲರೂ ಪ್ರತ್ಯೇಕವಾಗಿ ಸಮ್ಮೇಳನ ನಡೆಸಲು ನಿರ್ಧರಿಸಿದರು. ಅದುವರೆಗೆ ಬೇರೆ ಬೇರೆ ಕಾರಣಗಳಿಂದ ಲೇಖಕರಲ್ಲಿ ಬೆಳೆದು ಬಂದಿದ್ದ ಅಸಮಾಧಾನ ಸ್ಪೋಟಗೊಳ್ಳಲು ಧರ್ಮಸ್ಥಳ ಸಾಹಿತ್ಯ ಸಮ್ಮೇಳನ ಒಂದು ನೆವವಾಯಿತು. ಬೆಂಗಳೂರಲ್ಲಿ ನಡೆದ ಪರ್ಯಾಯ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಮುಂದೆ ಬಂಡಾಯ ಸಾಹಿತ್ಯ ಸಮ್ಮೇಳನಗಳು ಪ್ರತಿ ವರ್ಷವೂ ರಾಜ್ಯದ ಬೇರೆ ಬೇರೆ ಕಡೆ ನಡೆದುವು. ಹೆಚ್ಚಿನವರು ಸಾಹಿತ್ಯ ಪರಿಷತ್ತಿಗೆ ಬಹಿಷ್ಕಾರ ಹಾಕಿದರು. ‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಘೋಷಣೆಯು ಎಲ್ಲೆಡೆಯೂ ಮೊಳಗಿತು. ಕ್ರಾಂತೀಕಾರೀ ಕವಿಗಳ ಕವಿತೆಗಳೂ ಕನ್ನಡಕ್ಕೆ ಅನುವಾದಗೊಂಡವು.
ಬಂಡಾಯ ದಲಿತ ಚಳುವಳಿಯ ಸಂದರ್ಭದಲ್ಲಿ ಹೋರಾಟಗಾರರು ಕೆಲವು ಮಹತ್ವದ ಪತ್ರಿಕೆಗಳನ್ನು ಪ್ರಕಟಿಸುತ್ತಾ ಜನಗಳನ್ನು ತಲುಪಲು ಪ್ರಯತ್ನಿಸಿದರು. ಮುಖ್ಯವಾಹಿನಿಯ ಪತ್ರಿಕೆಗಳೂ ಚಳುವಳಿಯ ಬಗೆಗೆ ಮೃದು ಧೋರಣೆಯನ್ನಿಟ್ಟುಕೊಂಡಿದ್ದರಿಂದ ಸುದ್ದಿ ಪ್ರಸರಣಕ್ಕೇನೂ ತೊಂದರೆ ಇರಲಿಲ್ಲ. ಆದರೆ ಪ್ರಖರ ವೈಚಾರಿಕತೆಯ ಲೇಖನಗಳನ್ನು ಪ್ರಕಟಿಸಲು ಅವು ಹಿಂದೇಟು ಹಾಕುತ್ತಿದ್ದವು. ಅಂತ ಸಂದರ್ಭದಲ್ಲಿ ಲೇಖಕರ ಬೆಂಬಲಕ್ಕೆ ನಿಂತದ್ದು ಚಂದ್ರಶೇಖರ ಪಾಟೀಲರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ‘ಸಂಕ್ರಮಣ’ ಮಾಸಿಕ. ಆರ್. ಜಿ. ಹಳ್ಳಿ ನಾಗರಾಜರ ಸಂಪಾದಕತ್ವದ ‘ಅನ್ವೇಷಣೆ’ ದ್ವೈಮಾಸಿಕವು ನವ್ಯೋತ್ತರ ಸಾಹಿತ್ಯದ ದಾಖಲಾತಿಗೆಂದೇ ಹುಟ್ಟಿಕೊಂಡ ಪತ್ರಿಕೆ. ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕತ್ವದ “ಮುಂಗಾರು” ದೈನಿಕವು ಬಂಡಾಯ ದಲಿತ ಚಳವಳಿ ಮತ್ತು ಸಾಹಿತ್ಯವನ್ನು ನಿರಂತರವಾಗಿ ಪೋಷಿಸಿಕೊಂಡು ಬಂತು. ಇವುಗಳ ಜೊತೆಗೆ ಬಂಡಾಯ ಸಾಹಿತ್ಯ ಸಂಘಟನೆಯ ಮುಖವಾಣಿಯಾಗಿದ್ದ ‘ಬಂಡಾಯ ಸಾಹಿತ್ಯ’ ದಲಿತರ ಧ್ವನಿಯಾಗಿದ್ದ ‘ಪಂಚಮ’ ಮತ್ತು ‘ಹೊಸದಿಕ್ಕು’ ಪತ್ರಿಕೆಗಳು, ಸಮುದಾಯದ ಮುಖವಾಣಿಯಾಗಿದ್ದ ‘ಸಮುದಾಯ ವಾರ್ತಾಪತ್ರ’, ಕಮ್ಯೂನಿಸ್ಟ್ ಪಕ್ಷಗಳ ಪತ್ರಿಕೆಗಳಾಗಿರುವ ‘ಕೆಂಬಾವುಟ’ ಮತ್ತು ‘ಐಕ್ಯರಂಗ’ಗಳು ಬಂಡಾಯ ದಲಿತ ಚಳುವಳಿಗೆ ಪ್ರಮುಖ ಒತ್ತಾಸೆ ನೀಡಿವೆ. ತೆಲುಗಿನಲ್ಲಿ1965 ರಿಂದೀಚೆಗೆ ಪ್ರಬಲವಾಗಿ ಕಾಣಿಸಿಕೊಂಡ ದಿಗಂಬರ ಕಾವ್ಯ, ಮರಾಠೀ ದಲಿತ ಸಾಹಿತ್ಯ, ಹಿಂದಿಯ ಜನವಾದೀ ಸಾಹಿತ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗುತ್ತಿದ್ದ ‘ಕಪ್ಪುಸಾಹಿತ್ಯ’ವು ಕನ್ನಡದಲ್ಲಿಯೂ ಕಾಣಿಸಿಕೊಂಡಿತು.
ಹೀಗೆ ಕಳೆದ 60 ವರ್ಷಗಳಲ್ಲಿ ನಮಗೆಲ್ಲ ಬಗೆ ಬಗೆಯ ಸಾಹಿತ್ಯ ಓದಲು ಸಿಗುತ್ತಿತ್ತು. ಚಳುವಳಿಗಾರರು ಮಾತಾಡಲೂ ಸಿಗುತ್ತಿದ್ದರು. ಸಾಮಾಜಿಕ ವಾತಾವರಣವೂ ಇಂದಿನಂತಿರದೆ ಮುಕ್ತವಾಗಿತ್ತು. ಆ ಕಾಲದಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣಗಳು ನಮಗೆ ಪ್ರಶ್ನಿಸುವುದನ್ನು ಕಲಿಸಿದುವು. ಇತಿಹಾಸವನ್ನು ಹೊಸದಾಗಿ ನೋಡಲು ಹೇಳಿಕೊಟ್ಟವು. ನಾವೆಲ್ಲ ನಮ್ಮದೇ ರೀತಿಗಳಲ್ಲಿ ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸತೊಡಗಿದೆವು. ಮಾನವೀಯ ಸಂಬಂಧಗಳಿಗೆ ಒತ್ತು ನೀಡತೊಡಗಿದೆವು. ಮುಕ್ತ ಚಿಂತನೆಗೆ ಮತ್ತು ವಿಮರ್ಶೆಗೆ ಸಾಕಷ್ಟು ಅವಕಾಶವಿತ್ತು.
ಆದರೆ 1990 ರ ದಶಕದಲ್ಲಿ ಆರಂಭಗೊಂಡ ಜಾಗತೀಕರಣ ಪ್ರಕ್ರಿಯೆ ಮತ್ತು ಕೋಮುವಾದೀ ಬೆಳವಣಿಗೆಗಳು ಎಲ್ಲ ಬಗೆಯ ಜನಪರ ಹೋರಾಟಗಳನ್ನು ನುಂಗಿ ಹಾಕಿದುವು. ಇವುಗಳನ್ನೆದುರಿಸಲು ಹೊಸ ಬಗೆಯ ಚಳುವಳಿಯೊಂದು ಇನ್ನಷ್ಟೇ ಹುಟ್ಟಿಕೊಳ್ಳಬೇಕಾಗಿದೆ.
ಪುರುಷೋತ್ತಮ ಬಿಳಿಮಲೆ, ನಿವೃತ್ತ ಪ್ರಾಧ್ಯಾಪಕರು, ಜೆ ಎನ್ ಯು, ದೆಹಲಿ
ಇದನ್ನೂ ಓದಿ-ಕನ್ನಡ ಓದಿನ ಸಂಭ್ರಮ ಕಳೆದು ಹೋಗದಿರಲಿ