ಕೊಡಗು ಜಿಲ್ಲೆಯ ಮಡಿಕೇರಿ ರೆಡ್ ಕ್ರಾಸ್ ಸಭಾಂಗಣದ ಹತ್ತಿರ ಭೀಕರ ದುರಂತ ನಡೆದಿದೆ. ಮಡಿಕೇರಿ ಪಟ್ಟಣ ವ್ಯಾಪ್ತಿಯಲ್ಲಿ ಬರುವ ರೆಡ್ಕ್ರಾಸ್ ಸಭಾಂಗಣ ಬಳಿ ಅನಿರೀಕ್ಷಿತವಾಗಿ ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ದಿಢೀರ್ ಗುಡ್ಡ ಕುಸಿದ ಪರಿಣಾಮ, ಅದರಡಿ ಮೂವರು ಸಿಲುಕಿದ್ದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಸ್ಥಳೀಯರು ಮೂವರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಇಬ್ಬರು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇನ್ನೋರ್ವ ಕಾರ್ಮಿಕ ರಕ್ಷಣಾ ಕಾರ್ಯದ ನಂತರ ಸಾವನ್ನಪ್ಪಿದ್ದಾರೆ.
ಮೃತ ಕಾರ್ಮಿಕರನ್ನು ಹುಬ್ಬಳ್ಳಿ ಮೂಲದ ಬಸವ, ಲಿಂಗಪ್ಪ ಮತ್ತು ಆನಂದ್ ಎಂಬುದಾಗಿ ಗುರುತಿಸಲಾಗಿದೆ.
ಮಣ್ಣಿನಡಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ತೀವ್ರಗತಿಯಲ್ಲಿ ಸಾಗಿದರೂ ಇಬ್ಬರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆದರೆ ಗಂಭೀರ ಗಾಯಗೊಂಡ ಒಬ್ಬರ ರಕ್ಷಣಾ ಕಾರ್ಯ ನಡೆದರೂ ಕೊನೆಯ ಹಂತದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಇನ್ನೊರ್ವ ಕಾರ್ಮಿಕನೂ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಎಸ್ಪಿ ಕೆ.ರಾಮರಾಜನ್, ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.