ಬೆಂಗಳೂರು: ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಭಿನವ ಹಾಲಶ್ರೀ ಇಂದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.
ಸ್ವಾಮಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಬಿಡುಗಡೆಯಾಗುತ್ತಿದ್ದಂತೆಯೇ ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್ ಮುತಾಲಿಕ್ ಅವರು ಕೇಸರಿ ಶಾಲು ಹಾಕಿ ಸ್ವಾಗತ ಮಾಡಿದರು. ಟಿಕೆಟ್ ವಂಚನೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಇದರೊಂದಿಗೆ ಜೈಲಿನಿಂದ ಹೊರಬಂದಂತಾಗಿದೆ.
ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ವಾಮಿಗೆ ರಾಜ್ಯ ಹೈಕೋರ್ಟ್ ನವೆಂಬರ್ 8ರಂದು ಜಾಮೀನು ಮಂಜೂರು ಮಾಡಿತ್ತು. ಇದಾದ ಬಳಿಕ ಶೂರಿಟಿ, ಇಬ್ಬರು ವ್ಯಕ್ತಿಗಳ ಬಾಂಡ್ ಸೇರಿದಂತೆ ಹಲವು ಷರತ್ತುಗಳನ್ನು ಪೂರೈಸಿದ ಬಳಿಕ ಶನಿವಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಸ್ವಾಮಿ ʻʻಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡಬೇಕು. ಪ್ರಕರಣದ ತನಿಖೆ ವೇಳೆ ಅದನ್ನು ಪರಿಗಣಿಸಬೇಕು. ಮುಂದೊಂದು ದಿನ ಈ ಪ್ರಕರಣದ ಬಗ್ಗೆ ಮಾತನಾಡುತ್ತೇನೆʼʼ ಎಂದು ತಿಳಿಸಿದರು.
ʻನಮ್ಮನ್ನ ನಂಬಿ ಅರಾಧಿಸುವ ಸಮಾಜಕ್ಕೆ, ನಮ್ಮ ಮೇಲೆ ನಂಬಿಕೆಯಿಟ್ಟಿರುವ ಭಕ್ತ ಸಮೂಹದ ಆಶಯಕ್ಕೆ ಯಾವುದೇ ಧಕ್ಕೆ ಬರದಂತೆ ಬದುಕು ಕಟ್ಟಿಕೊಂಡು ಬಂದಿದ್ದೇನೆ. ಮುಂದೆಯೂ ಅದೇ ರೀತಿ ಬದುಕು ಸಾಗಿಸುತ್ತೇನೆʼʼ ಕೇಂದ್ರ ಕಾರಾಗೃಹದೆದುರು ನಿಂತು ಸ್ವಾಮಿ ನುಡಿದರು.
ಟಿಕೆಟ್ ಪ್ರಕರಣದಲ್ಲಿ ಜೈಲು ಸೇರಿದ್ದ ಅಭಿನವ ಹಾಲಶ್ರೀ ಜಾಮೀನು ಪಡೆದಿದ್ದು, ಉಳಿದ ಎಲ್ಲಾ ಆರೋಪಿಗಳು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಹಗರಣದ ಸೂಕ್ಷ್ಮತೆಯನ್ನು ಪರಿಗಣಿಸಿ ನ್ಯಾಯಾಲಯಗಳು ಆರೋಪಿಗಳಿಗೆ ಇದುವರೆಗೆ ಜಾಮೀನು ನಿರಾಕರಿಸಿದೆ.