ಸಕಲೇಶಪುರ : ತಾಲೂಕಿನ ಸುಳ್ಳಕ್ಕಿ ಗ್ರಾಮದ ರಸ್ತೆಯೊಂದರ ಬದಿಯಲ್ಲಿ ದೈತ್ಯ ಕಾಡಾನೆಯೊಂದು ಸಂಸಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ರಕ್ತದ ಮಡುವಿನಲ್ಲಿ ಕಳೇಬರ ಕಂಡುಬಂದಿದೆ. ಆನೆಯ ಸಾವಿಗೆ ವಿದ್ಯುತ್ ಆಘಾತ, ಗುಂಡೇಟು ಅಥವಾ ವಾಹನದ ಡಿಕ್ಕಿಯೇ ಕಾರಣವಿರಬಹುದೆಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 28 ವರ್ಷಪ್ರಾಯದ ಗಂಡಾನೆಯೊಂದು ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದು ಸಾವನ್ನಪ್ಪಿದೆ. ಆನೆಯ ಕಳೇಬರದ ಕೆಳಗೆ ಗೈ ವೈರ್ ಸಿಲುಕಿರುವುದು ಕಂಡುಬಂದಿದ್ದು, ತಲೆಯ ಭಾಗದಲ್ಲಿ ರಕ್ತಸ್ರಾವದಿಂದ ಕೂಡಿದ ಗಾಯದ ಗುರುತುಗಳಿವೆ. ಬೆಳಿಗ್ಗೆ ಈ ದಾರಿಯಲ್ಲಿ ಸಂಚರಿಸುತ್ತಿದ್ದವರು ಆನೆಯ ಕಳೇಬರವನ್ನು ಗಮನಿಸಿ, ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ಒದಗಿಸಿದ್ದಾರೆ.ಸೆಸ್ಕ್ ಸಿಬ್ಬಂದಿ ಹೈಟೆನ್ಷನ್ ವಿದ್ಯುತ್ ಲೈನ್ನ ಕಂಬಕ್ಕೆ ಸಂಬಂಧಿಸಿದ ಗೈ ವೈರನ್ನು ಸಮೀಪದ ಮರಕ್ಕೆ ಕಟ್ಟಿರುವುದು ಸಾವಿಗೆ ಕಾರಣವಾಗಿರಬಹುದು ಎಂದು ಸಂಕಿಸಲಾಗಿದೆ. ಈ ವೈರ್ಗೆ ಆನೆ ತಾಗಿದ ಪರಿಣಾಮ ವಿದ್ಯುತ್ ಆಘಾತಕ್ಕೊಳಗಾಗಿರಬಹುದೆಂದು ಅಂದಾಜಿಸಲಾಗಿದೆ.
ಘಟನೆಯ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧ ಕೋನಗಳಿಂದ ಪರಿಶೀಲನೆ ನಡೆಸಿದ್ದಾರೆ. ಆನೆಯ ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವಿನ ನಿಖರ ಕಾರಣ ದೃಢವಾಗಲಿದೆ. ಆನೆಯ ಸಾವಿನ ದೃಶ್ಯವನ್ನು ಕಂಡ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.