ಮೈಸೂರು: ಈ ಬಾರಿಯ ಮೈಸೂರು ದಸರಾದಲ್ಲಿ ಹೂವಿನಿಂದ ಅಲಂಕರಿಸಿದ ಪುನಿತ್ ರಾಜ್ ಕುಮಾರ್ ಅವರ ಪುತ್ಥಳಿಗಳೇ ಕೇಂದ್ರ ಬಿಂದು ವಾಗಿರಲಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮವನ್ನು ಏರ್ಪಡಿಸರಿರಲಿಲ್ಲದ ಕಾರಣದಿಂದ ಈ ವರ್ಷ ಅದ್ಧೂರಿಯಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಮೈಸೂರು ಜಿಲ್ಲಾಡಳಿತ ನಿರ್ಧರಿಸಿದೆ.
ಈ ಫಲ ಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಅಲಂಕರಿಸಲಿರುವ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯೇ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇನ್ನು ವಿಶೇಷವಾಗಿ ಈ ಬಾರಿ ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ದಸರಾ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಹಿನ್ನೆಲೆಯಲ್ಲಿ ಕುಪ್ಪಣ್ಣ ಉದ್ಯಾನದ ಒಳಭಾಗದ ಗಾಜಿನ ಮನೆ ಆವರಣದಲ್ಲಿ 20 ಅಡಿ ಎತ್ತರದ ರಾಷ್ಟ್ರಪತಿ ಭವನದ ಪ್ರಕೃತಿ ನಿರ್ಮಿಸಿ, ಕೆಂಪು, ಬಿಳಿ ಗುಲಾಬಿ, ಸೇವಂತಿಕೆ ಹೂವುಗಳಿಂದ ಅಲಂಕರಿಸಲಾಗುತ್ತಿರುವುದು ವಿಶೇಷ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅವರ ವಿವಿಧ ಭಂಗಿಯ ಸುಮಾರು ಐದು ಪುತ್ತಳಿಗಳನ್ನು ಸ್ಥಾಪಿಸಿ, ಅವುಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ತಮ್ಮ ನೆಚ್ಚಿನ ನಟನ ಪುತ್ಥಳಿ ಜೊತೆಗೆ ಚಿತ್ರ ತೆಗೆಸಿಕೊಳ್ಳಲು ಅನುಕೊಲವಾಗುವಂತೆ ಸೆಲ್ಸಿ ಪಾಯಿಂಟ್ ಕೂಡ ಸ್ಥಾಪಿಸಲಾಗುತ್ತದೆ. ಇದಲ್ಲದೇ, ವರನಟ ಡಾ. ರಾಜ್ ಕುಮಾರ್ ಅವರ ಗಾಜನೂರಿನ ಮನೆ ಚಾಮುಂಡಿ ಬೆಟ್ಟ, ನಂದಿವಿಗ್ರಹ ಕೂಡ ಇರಲಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಅವರು ಮಾಹಿತಿ ನೀಡಿದರು.