Monday, June 23, 2025

ಸತ್ಯ | ನ್ಯಾಯ |ಧರ್ಮ

ನಾಯಕರ ಕೊರತೆಯಿದ್ದರೆ ಕಾಂಗ್ರೆಸ್ಸಿನಿಂದ ಔಟ್‌ಸೋರ್ಸ್‌ ಮಾಡಿ: ಬಿಜೆಪಿ ಕಾಲೆಳೆದ ನಾಗತಿಹಳ್ಳಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಸರ್ಕಾರ ಸ್ಥಾಪನೆಯಾಗಿ ನೂರು ದಿನಗಳು ಕಳೆದಿದ್ದರೂ ವಿರೋಧ ಪಕ್ಷದ ನಾಯಕನ್ನು ಆರಿಸದ ಕುರಿತು‌ ಈಗಾಗಲೇ ಸಾಕಷ್ಟು ತಮಾಷೆ ಟೀಕೆಗಳು ಕೇಳಿ ಬರುತ್ತಿವೆ. ಈ ಕುರಿತು ಪ್ರತಿಕ್ರಿಯೆಯಾಗಿ ಕತೆಗಾರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬಿಜೆಪಿಯ ಕಾಲೆಳೆದು ಟ್ವೀಟ್‌ (X) ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು “ಬಿಜೆಪಿಗೆ ಒಂದು ವಿನಮ್ರ ಸಲಹೆ. ವಿಪಕ್ಷ ನಾಯಕನಿಲ್ಲದೆ ವಿಧಾನ ಸಭೆ ಅಪೂರ್ಣ ಎನಿಸುತ್ತಿದೆ. ನಿಮಗೆ ಆಯ್ಕೆ ತೀರಾ ಕಷ್ಟವಾದಲ್ಲಿ ಕಾಂಗ್ರೆಸ್ ನಲ್ಲೇ ಸೂಕ್ತರಾದ ಒಬ್ಬರನ್ನು ಹುಡುಕಿ ವಿಪಕ್ಷ ನಾಯಕನ ಹುದ್ದೆಯನ್ನು ‘ಔಟ್ ಸೋರ್ಸ್’ ಮಾಡಿ!” ಎಂದಿದ್ದಾರೆ.

ಇದರಿಂದ ಒಂದಷ್ಟು ಕೆರಳಿದಂತೆ ಕಾಣುವ ಶಿವಮೊಗ್ಗ ಬಿಜೆಪಿ ಹ್ಯಾಂಡಲ್‌ @BJP4Shivamogga “ಇವ್ರ್ ಜೊತೆ ಕೆಲಸ ಮಾಡಿದವರಿಗೆ ಗೊತ್ತು.. ಇವ್ರ್ ಎಷ್ಟ್ ದುರಹಂಕಾರಿ ಅಂತ.. ಇವ್ರ್ ಬಂದ್ ನಮಿಗ್ ಪುಂಗ್ತಾರೆ..” ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಈ ಪೋಸ್ಟಿಗೆ ಹಲವರು ಪ್ರತಿಕ್ರಿಯಿಸಿದ್ದು ಕೆಲವರು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದರೆ ಇನ್ನೂ ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಅತ್ತ ಬಿಜೆಪಿಯ ಒಳ ಜಗಳಗಳು ಮುಗಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲವಾದ ಕಾರಣ ವಿರೋಧ ಪಕ್ಷದ ನಾಯಕನ ಆಯ್ಕೆಯ ಸರ್ಕಸ್‌ ಕೂಡಾ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ನಿನ್ನೆ ಹಿರಿಯ ಬಿಜೆಪಿ ನಾಯಕ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ಬಿ ಎಲ್‌ ಸಂತೋಷ ಗ್ಯಾಂಗ್‌ ಸಭೆಯೊಂದನ್ನು ನಡೆಸಿ ತನ್ನ ಜೊತೆ 45 ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂದು ಘೋಷಿಸಿದ್ದಾರೆ. ಆಶ್ಚರ್ಯವೆಂದರೆ ಇವರೆಲ್ಲರೂ ಕಾಂಗ್ರೆಸ್‌ ಶಾಸಕರು ಎಂದು ಅವರು ಹೇಳಿಕೊಂಡಿರುವುದು.

ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಬಣವೂ ಸಭೆಯನ್ನು ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಈಗಾಗಲೇ ಶೋಮಶೇಖರ್‌, ರೇಣುಕಾಚಾರ್ಯ ಅವರಂತಹ ಶಾಸಕರು ಪಕ್ಷದ ವಿರುದ್ಧ ಸಾಕಷ್ಟು ಡ್ಯಾಮೇಜಿಂಗ್‌ ಹೇಳಿಕೆಗಳನ್ನು ನೀಡುತ್ತಿದ್ದು, ಪಕ್ಷವು ಬಿಟ್ಟ ಕಣ್ಣಿನಿಂದ ನೋಡುತ್ತಾ ಅಸಹಾಯಕವಾಗಿ ನಿಂತಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page