ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ ಆರೋಪದ ಮೇಲೆ ಪ್ರಕರಣದ ಎಂಟನೇ ಆರೋಪಿ ಪ್ರಸಾದ್ ಬೈಂದೂರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಕೆಲವು ವಿಚಾರಣೆ ಎದುರಿಸಿರುವ ಪ್ರಸಾದ್ ಬೈಂದೂರಿಗೆ ನೋಟಿಸ್ ಜಾರಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಈ ನಡುವೆ ಅಭಿನವ ಹಾಲಶ್ರೀ ಸ್ವಾಮಿಯ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿ ಇಲ್ಲಿಯವರೆಗೆ ಹಾಲಶ್ರೀ ಸ್ವಾಮಿ ತಲೆಮರೆಸಿಕೊಂಡಿದ್ದು, ಸ್ವಾಮಿ ಸಿಕ್ಕ ನಂತರ ಪ್ರಕರಣ ಬೇರೆಯದೇ ರೀತಿಯಾಗಿ ತಿರುಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ಪ್ರಕರಣದಲ್ಲಿ ಬಿಜೆಪಿ ಘಟಾನುಘಟಿ ಮುಖಂಡರು ಜೊತೆಗೆ ಬಿಜೆಪಿಯ ಬಾಡಿಗೆ ಭಾಷಣಕಾರನೊಬ್ಬ ಭಾಗಿ ಆಗಿದ್ದಾನೆ ಎಂಬ ಮಾತು ಕೇಳಿ ಬರುತ್ತಿದೆ.
ಸಧ್ಯ ಅನಾರೋಗ್ಯ ನೆಪದಲ್ಲಿ ಆಸ್ಪತ್ರೆಗೆ ಸೇರಿರುವ ಚೈತ್ರ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಮೂರ್ಛೆರೋಗ ಅವರನ್ನು ಭಾದಿಸಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಿಚಾರಣೆ ತಪ್ಪಿಸಿಕೊಳ್ಳಲು ಸೋಪಿನ ನೊರೆ ಬಳಸಿಕೊಂಡು ಮೂರ್ಛೆರೋಗ ಬಂದಂತೆ ನಾಟಕ ಮಾಡಿರಬಹುದು. ಎಲ್ಲಾ ರೀತಿಯ ಚಿಕಿತ್ಸೆಯ ಪ್ರಕ್ರಿಯೆ ಮುಗಿದಿದೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಹಣಕಾಸಿನ ವ್ಯವಹಾರ, ಸಂಪರ್ಕಗಳಿಗೆ ಸಂಬಂಧಿಸಿದಂತೆ ಎರಡು ದಿನದ ಹಿಂದೆ ವಿಚಾರಣೆ ನಡೆಸಿ ಕಳುಹಿಸಿದ್ದ ಪ್ರಸಾದ್ ಬೈಂದೂರನನ್ನು ಸಿಸಿಬಿ ಪೊಲೀಸರು ಮತ್ತೊಮ್ಮೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಈ ನಡುವೆ, ಚೈತ್ರಾ ಮತ್ತು ಪ್ರಸಾದ್ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಈ ಸಂಭಾಷಣೆ ವೇಳೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಪ್ರಸಾದ್ ಚೈತ್ರಾಗೆ ಪರಿಚಯಿಸಿದ್ದಾನೆ. ಅಷ್ಟು ಮಾತ್ರವಲ್ಲದೆ, ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು ಕೂಡ ಪ್ರಸ್ತಾಪವಾಗಿದೆ.