Home ದೇಶ ಗ್ಯಾರಂಟಿಗಳ ಬೆನ್ನೇರಿ ಹೊರಟ ತೆಲಂಗಾಣ ಕಾಂಗ್ರೆಸ್‌, ಸಿಗುವುದೇ ಅಧಿಕಾರದ ಹಕ್ಕಿ?

ಗ್ಯಾರಂಟಿಗಳ ಬೆನ್ನೇರಿ ಹೊರಟ ತೆಲಂಗಾಣ ಕಾಂಗ್ರೆಸ್‌, ಸಿಗುವುದೇ ಅಧಿಕಾರದ ಹಕ್ಕಿ?

0

ಹೈದರಬಾದ್:‌ ಇಂದಿನಿಂದ ಆರಂಭಗೊಂಡಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿರುವ ಬೆನ್ನಲ್ಲೇ ತೆಲಂಗಾಣ ವಿಧಾಸಭಾ ಚುನಾವಣೆಗೂ ಇಲ್ಲಿ ತಂತ್ರಗಳನ್ನು ಹೆಣೆಯಲಾಗುತ್ತದೆ ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿ ಭರ್ಜರಿ ಗೆಲುವನ್ನು ಪಡೆದ ನಂತರ ಕಾಂಗ್ರೆಸ್‌ ಮಧ್ಯಪ್ರದೇಶದಲ್ಲೂ ಗ್ಯಾರೆಂಟಿ ಅಸ್ತ್ರವನ್ನೇ ಪ್ರಯೋಗಿಸಲು ನಿರ್ಧರಿಸಿದೆ. ಇದರಿಂದ ಕಂಗಾಲಾದ ಬಿಜೆಪಿ ಈಗಾಗಲೇ ಅಲ್ಲಿ ಮಹಿಳೆಯರಿಗೆ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿಗಳನ್ನು ನೀಡುವ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಇತ್ತ ಅಹಿಂದ ಮತಗಳೇ ಹೆಚ್ಚಿರುವ ತೆಲಂಗಾಣದಲ್ಲಿಯೂ ಗ್ಯಾರಂಟಿ ಯೊಜನೆಯನ್ನು ಘೋಷಿಸುವುದರ ಜೊತೆಗೆ, ಗ್ಯಾರಂಟಿ ಹಾಗೂ ಅಹಿಂದ ಎರಡಕ್ಕೂ ರೂವಾರಿಯಾಗಿರುವ ಸಿದ್ಧರಾಮಯ್ಯ ತೆಲಂಗಾಣದಲ್ಲಿ ಸ್ಟಾರ್‌ ಕ್ಯಾಂಪೇನರ್‌ ಆಗುವ ಸಾಧ್ಯತೆಯೂ ಇದೆ.

ಬಿಜೆಪಿ ಮತ್ತು ಬಿಆರ್‌ಎಸ್‌ ನಡುವಿನ ತಿಕ್ಕಾಟದ ಲಾಭವನ್ನು ತಾನು ಪಡೆಯುವ ಕನಸಿನಲ್ಲಿರುವ ಕಾಂಗ್ರೆಸ್‌ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಮುಂತಾದ ಅಸ್ತ್ರಗಳೊಡನೆ ಅಲ್ಲಿ ಕಣಕ್ಕಿಳಿದಿದೆ.

119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಗೆ ಇದೇ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಈ ಕುರಿತು ಚುನಾವಣಾ ಆಯೋಗ ಸಿದ್ಧತೆಯನ್ನು ಕೂಡ ನಡೆಸುತ್ತಿದೆ. ಇಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದ ಪಕ್ಷವು ಅಲ್ಲಿ ಆರು ಗ್ಯಾರಂಟಿಗಳನ್ನು ಘೋಷಿಸಲಿದೆ ಎನ್ನಲಾಗುತ್ತಿದೆ.

ತೆಲಂಗಾಣ  ಕಾಂಗ್ರೆಸ್‌ನ ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯರೋರ್ವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಚುನಾವಣೆಗೆ ಮುನ್ನ ರಾಜ್ಯದಲ್ಲಿ ಗ್ಯಾರೆಂಟಿಗಳನ್ನು ಘೋಷಿಸಲಾಗುವುದು. ಸ್ಥಳೀಯ ಜನರ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ಗ್ಯಾರೆಂಟಿಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಘೋಷಿಸಲಿರುವ ಆರು ಗ್ಯಾರೆಂಟಿಗಳಲ್ಲಿ ಬಿಪಿಎಲ್ ವರ್ಗದ ಮಹಿಳೆಯರಿಗೆ 3,000ರೂ.  500ರೂ.ಗೆ ಎಲ್‌ಪಿಜಿ ಸಿಲಿಂಡರ್ ಮತ್ತು 5ಲಕ್ಷ ರೂ. ಮನೆ ನಿರ್ಮಾಣಕ್ಕೆ ನೆರವು ಸೇರಿದೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಮೂಲಗಳು ತಿಳಿಸಿದೆ.

ನಾಳೆ ಹೈದರಾಬಾದಿನಲ್ಲಿ ಬೃಹತ್‌ ಸಭೆ ನಡೆಯಲಿದ್ದು, ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಸಿದ್ಧರಾಮಯ್ಯ ಸೇರಿದಂತೆ ಹಲವರು ಭಾಗಿಯಾಗಲಿದ್ದು, ಈ ಸಭೆ ಮತ್ತು ಯಾತ್ರೆಗೆ ವಿಜಯಭೇರಿ ಎಂದು ಹೆಸರಿಡಲಾಗಿದೆ.

You cannot copy content of this page

Exit mobile version