ಶ್ರೀ ಖೊಂಗಮೆನ್ ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಬಗ್ಗೆ ನನಗೆ ವಿವರಗಳನ್ನು ನೀಡಿದರು. ಈ ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ ಸಮ್ಮೇಳನಗಳನ್ನು ಆಯೋಜಿಸುವುದು ನಿಜಕ್ಕೂ ಒಳ್ಳೆಯ ಸಂಗತಿ. ಇಂತಹ ಸಮ್ಮೇಳನ ಯಾವಾಗಲೋ ನಡೆಯಬೇಕಿತ್ತು. ತಡವಾದರೂ ಈಗ ನಡೆಯುತ್ತಿರುವುದು ಸಂತೋಷದ ಸಂಗತಿಯೇ ಸರಿ. ನನ್ನ ಮಂತ್ರಿಮಂಡಲದಲ್ಲಿ ಬೇರೆಬೇರೆ ರಾಜ್ಯಗಳಿಗೆ ಸೇರಿದ ಅನೇಕ ಮಂತ್ರಿಗಳಿದ್ದಾರೆ. ಅವರನ್ನು ಹೀಗಳೆಯುವುದು ನನ್ನ ಉದ್ದೇಶವಲ್ಲ, ಅವರು ದೆಹಲಿಯಿಂದ ತಮ್ಮ ರಾಜ್ಯಕ್ಕೆ, ತಮ್ಮ ರಾಜ್ಯದಿಂದ ದೆಹಲಿಗೆ ಓಡಾಡುತ್ತಲೇ ಇರುತ್ತಾರೆ. ಅವರು ಕೆಲವು ಸಭೆಗಳನ್ನು ಅತ್ಯಂತ ನೀರಸವಾಗಿ ರೂಪಿಸುತ್ತಾರೆ. ಸಭೆಗಳು ನಿರ್ವಿಕಾರವಾಗಿ ನಡೆದು ಮುಗಿದು ಹೋಗುತ್ತವೆ. ಇಂತವರು ತುಂಬಾ ಜನ ಇದ್ದಾರೆ. ಸಮ್ಮೇಳನಗಳನ್ನು ರೂಪಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯವೆಂದು ತೋರುತ್ತದೆ. ಆದರೆ ಈ ಸಮ್ಮೇಳನ ನಿಜಕ್ಕೂ ಒಳ್ಳೆಯ ಆಶಯಗಳಿಂದಲೇ ಆಯೋಜನೆಗೊಂಡಿದೆ.
ನಾವು ಆದಿವಾಸಿಗಳ ಕುರಿತು ಮಾತನಾಡುವಾಗ, ನನಗೆ ಆಶ್ಚರ್ಯವಾಗುವ ಸಂಗತಿಯೆಂದರೆ, ನಾವೆಲ್ಲ ಒಂದೇ ಬಗೆಯ ಪೂರ್ವಾಗ್ರಹಗಳಿಂದ ಅವರ ಬಗ್ಗೆ ಯೋಚಿಸುತ್ತಿರುತ್ತೇವೆ. ನನಗೆ ಅನ್ನಿಸುವ ಮಟ್ಟಿಗೆ, ನಾವೆಲ್ಲ ಬುಡಕಟ್ಟು ಜನರೇ ಆಗಿದ್ದೇವೆ. ನಾವು ದೆಹಲಿಯಲ್ಲಿಯೇ ವಾಸವಾಗಿರಲಿ, ಮದ್ರಾಸ್ನಲ್ಲಿರಲಿ, ಬಾಂಬೆ ಅಥವಾ ಕಲ್ಕತ್ತಾ, ಇಲ್ಲವೆ ಗುಡ್ಡಗಾಡಲ್ಲಿರಲಿ, ಬಯಲು ಸೀಮೆಯಲ್ಲಿರಲಿ ನಾವೆಲ್ಲ ಬುಡಕಟ್ಟುಗಳೇ ಆಗಿದ್ದೇವೆ. ಗುಡ್ಡಗಾಡು ಜನರನ್ನು ಆದಿಮ ಜನಾಂಗಗಳೆಂದು, ನಮ್ಮನ್ನು ನಮ್ಮಷ್ಟಕ್ಕೆ ಅತ್ಯಂತ ಮುಂದುವರಿದ ನಾಗರಿಕ ಪ್ರಜೆಗಳೆಂದು ಕರೆದು ಕೊಳ್ಳುವುದು ನನ್ನ ಪ್ರಕಾರ ಸರಿಯಾದ ಕ್ರಮವಲ್ಲ. ಅವರ ಮತ್ತು ನಮ್ಮ ಮಧ್ಯೆ ಗುರುತಿಸಬಹುದಾದ ಕೆಲವು ವ್ಯತ್ಯಾಸಗಳಿರಬಹುದು. ಉದಾಹರಣೆಗೆ ಪಂಜಾಬಿನ ಜನತೆಗೂ ಮದ್ರಾಸಿನ ಜನತೆಗೂ ಭಿನ್ನತೆಗಳಿವೆ ನಿಜ. ಗುಡ್ಡಗಾಡುಗಳಲ್ಲಿ ಬದುಕುವ ಸಮುದಾಯಗಳಿಗೂ ಮತ್ತು ಬಯಲುಸೀಮೆಯಲ್ಲಿ ಬದುಕುವ ಸಮುದಾಯಗಳಿಗೂ ಬದುಕುವ ರೀತಿಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ವಾಸಿಸುವ ಪ್ರದೇಶ ಮತ್ತು ಅಲ್ಲಿನ ಹವಾಮಾನಗಳಿಗೆ ತಕ್ಕಂತೆ ಅಲ್ಲಿನ ಜನಸಮುದಾಯಗಳ ಆಹಾರವ್ಯವಸ್ಥೆ, ಉಡುಗೆ ತೊಡುಗೆ ಮತ್ತು ಜೀವನವಿಧಾನಗಳಲ್ಲಿ ಅನೇಕ ವ್ಯತ್ಯಾಸಗಳು ಇದ್ದೇ ಇರುತ್ತವೆ. ಇದು ಅನಿವರ್ಯ ಮತ್ತು ಸಹಜವೂ ಹೌದು. ಉದಾಹರಣೆಗೆ ಚೀನಿಯರನ್ನು ಇಲ್ಲವೆ ಜಪಾನದವರನ್ನು ತೆಗೆದುಕೊಳ್ಳಿ. ನಮಗೂ ಚೀನಿಯರಿಗೂ ಅನೇಕ ವಿಧಗಳಲ್ಲಿ ಸಾಮ್ಯತೆಗಳಿವೆ. ಯುರೋಪಿನ ಕೆಲವು ಸಮುದಾಯಗಳಿಗಿಂತ ನಾವು ಜಪಾನದವರ ಜೊತೆ ಕೆಲವು ಸಂಗತಿಗಳಲ್ಲಿ ಸಾಮ್ಯತೆಗಳನ್ನು ಗುರುತಿಸಿ ಕೊಳ್ಳಬಹುದು. ಇನ್ನೊಂದೆಡೆ, ಭಾಷೆಯ ವಿಷಯದಲ್ಲಿ ನಮಗೂ ಯುರೋಪಿನ ಭಾಷೆಗಳಿಗೂ ಹಲವು ರೀತಿಯಲ್ಲಿ ಹೋಲಿಕೆಗಳಿವೆ. ಈ ಕಾರಣದಿಂದಾಗಿ ಭಿನ್ನತೆಗಳು ಮತ್ತು ವೈವಿಧ್ಯತೆಗಳು ಸರ್ವೇಸಾಮಾನ್ಯವಾದವುಗಳು. ಆದರೆ ನಾನು ಖಚಿತವಾಗಿ ಹೇಳುವುದೇನೆಂದರೆ, ಬುಡಕಟ್ಟು ಜನರಿಗೂ, ಬುಡಕಟ್ಟೇತರ ಜನರಿಗೂ ಭಿನ್ನತೆಗಳನ್ನು ಗುರುತಿಸುವ ಕ್ರಮವೇ ತಪ್ಪಿನದು. ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಪದದ ಶಬ್ದಶಃ ಅರ್ಥ ವಿವರಣೆಯನ್ನೇ ತೆಗೆದುಕೊಳ್ಳಿ. ನಿಮಗೆಲ್ಲ ತಿಳಿದಂತೆ ಆ ಪದ ಇನ್ನೂ ಬಹುತೇಕ ಖಚಿತ ಅರ್ಥ ವಿವರಣೆಯನ್ನು ಬಯಸುತ್ತದೆ. ಒಂದು ಜಾತಿಯು ಪರಿಶಿಷ್ಟವೇ ಅಥವಾ ಅಲ್ಲವೇ ಎಂಬುದನ್ನು ಸರ್ಕಾರ ಆನಂತರ ತೀರ್ಮಾನಿಸಿತು. ಆದರೆ ಸಮುದಾಯಗಳ ಮಧ್ಯೆ ಇಷ್ಟು ತೀವ್ರವಾಗಿ ಮತ್ತು ಗಟ್ಟಿಯಾಗಿ ಒಂದು ಗೆರೆ ಎಳೆಯುವುದು ಅಷ್ಟು ಸುಲಭವಲ್ಲ. ಈ ಬಗೆಯ ವರ್ಗೀಕರಣಗಳನ್ನು ನಿರಾಕರಿಸುವುದು ನಮ್ಮ ಸದ್ಯದ ಗುರಿಯಾಗಿರಬೇಕು. ಹರಿಜನರು, ದುರ್ಬಲ ವರ್ಗಗಳು, ಪರಿಶಿಷ್ಟರು, ಬುಡಕಟ್ಟುಗಳು ಎಂದು ಸಮುದಾಯಗಳನ್ನು ವರ್ಗೀಕರಿಸಿ ದರೆ ಸೈದ್ಧಾಂತಿಕವಾಗಿ ಅದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಅಲ್ಲದೆ ಈ ವರ್ಗೀಕರಣ ನಮ್ಮ ದೇಶದ ಬೃಹತ್ ಜನಸ್ತೋಮದ ವರ್ತಮಾನದ ಬದುಕಲ್ಲಿ ಬಿರುಕುಗಳನ್ನು ಮೂಡಿಸುತ್ತದೆ. ಆಯಾ ಸಮುದಾಯಗಳ ಜೀವನವಿಧಾನ ಮತ್ತು ರೂಢಿ ಸಂಪ್ರದಾಯಗಳಲ್ಲಿ ಕಾಣುವ ವೈವಿಧ್ಯತೆಗಳಿಗೆ ಅನುಗುಣವಾಗಿ ಸಮುದಾಯಗಳ ಮಧ್ಯೆ ಭಿನ್ನತೆಗಳು ರೂಪಗೊಂಡಿರುತ್ತವೆ. ಆದರೆ ಇಂತಿಂಥವರು ಪರಿಶಿಷ್ಟರು ಎಂಬ ಪ್ರತ್ಯೇಕಿಸುವ ವಿಧಾನ ಮಾತ್ರ ನಾಶವಾಗಲೇಬೇಕು.
ಕಾಕಾ ಕಾಲೇಲ್ಕರ್ ಅಧ್ಯಕ್ಷತೆಯಲ್ಲಿ ಬ್ಯಾಕ್ವರ್ಡ್ ಕ್ಯಾಸ್ಟ್ ಕಮೀಶನ್ನನ್ನು ರಚಿಸಲಾಗಿದೆ. ಹಲವು ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಗಳ ಸಮುದಾಯಗಳು ಹಿಂದುಳಿದಿವೆ. ನಿಜಕ್ಕೂ ಕೆಲವು ಸಮುದಾಯಗಳು ತುಂಬಾ ಹಿಂದುಳಿದಿವೆ. ಹಿಂದುಳಿದ ಎಲ್ಲ ವರ್ಗಗಳಿಗೆ ಸಹಾಯ ಮಾಡುವುದು ಸರ್ಕಾರದ ಇಂದಿನ ಬಹುಮುಖ್ಯ ಕರ್ತವ್ಯವಾಗಿದೆ. ಭಾರತದಲ್ಲಿ ಬೆರಳೆಣಿಕೆಯ ಜನ ಮಾತ್ರ ಇಂದು ಅತಿ ಶ್ರೀಮಂತರಿದ್ದಾರೆ. ಈ ಶ್ರೀಮಂತ ವರ್ಗ ಸಹಜವಾಗಿಯೇ ಇತರ ಸಮುದಾಯಗಳಿಗಿಂತ ಭಿನ್ನವಾಗಿದೆ. ಕಾರಣ, ಶತಶತಮಾನಗಳಿಂದ, ತಲೆಮಾರು ಗಳಿಂದ ಅವರಿಗೆ ಶಿಕ್ಷಣ ಪಡೆಯಲು ಮತ್ತು ಮುಂದುವರಿದ ಜೀವನವಿಧಾನ ರೂಪಿಸಿಕೊಳ್ಳಲು ಅನೇಕ ಅವಕಾಶಗಳು ಒದಗಿಬಂದಿವೆ. ಅದಕ್ಕಾಗಿ ಆ ಹಣವಂತರ ವರ್ಗ, ಭಾರತದ ಅತಿ ಮುಂದುವರಿದ ಜನವರ್ಗವಾಗಿದೆ. ಈ ವರ್ಗ ಸಹಜವಾಗಿ ಬೇರೆಯವರಿಗಿಂತ, ವ್ಯಕ್ತಿಗತ ನೆಲೆಯಲ್ಲೂ ಮುಂದುವರಿಯುವ ಅವಕಾಶಗಳನ್ನು ಪಡೆದುಕೊಂಡಿದೆ. ಆದರೆ ಕೆಲವೇ ಜನ ಮಾತ್ರ ಶ್ರೀಮಂತರಾಗಿ ಮುಂದುವರಿಯು ವುದು ಶೋಷಿತ ಸಮುದಾಯಗಳಿಗೆ ಒಳಿತಾದಂತಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ರೂಪಿಸಿಕೊಳ್ಳಲು ಅವಕಾಶಗಳು ಸಿಗುವಂತಾಗಬೇಕು. ಭಾರತದಲ್ಲಿನ ಎಲ್ಲ ದುರ್ಬಲ ವರ್ಗಗಳು ಅಭಿವೃದ್ಧಿ ಹೊಂದಬೇಕು. ಕೇವಲ ಆ ವರ್ಗ ಇಲ್ಲವೆ ಈ ವರ್ಗ ಮಾತ್ರವಲ್ಲ. ಬರಿ ಕೆಲವು ಗುಂಪುಗಳು ಮಾತ್ರ ಮುಂದುವರಿದರೆ ದೇಶ ಮುಂದುವರಿದಂತೆ ಆಗುವುದಿಲ್ಲ. ಹಾಗೇನಾದರೂ ಆದಲ್ಲಿ ಶಿಕ್ಷಣದ ಮತ್ತು ನಿರುದ್ಯೋಗದ ಸಮಸ್ಯೆಗಳು ವ್ಯಾಪಕವಾಗಿ ಬೆಳೆದು ನಿಲ್ಲುತ್ತವೆ. ನಾವೀಗ ಮೂಲಭೂತ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದೇವೆ. ಇಷ್ಟರಲ್ಲೇ ಈ ಕುರಿತು ನಿರ್ಣಯಗಳನ್ನು ನಾವು ತೆಗೆದುಕೊಳ್ಳಲಿದ್ದೇವೆ. ನಿಜಕ್ಕೂ ನಮ್ಮ ದೇಶದಲ್ಲಿ ಶಿಕ್ಷಣದ ಮಹತ್ವವನ್ನು ಕುರಿತು ಯೋಚಿಸುವ ಮತ್ತು ಜನರನ್ನು ಕಲಿಯುವಂತೆ ಪ್ರೇರೇಪಿಸುವ ಕೆಲಸವನ್ನು ನಾವು ಮಾಡಿಲ್ಲ.
ನಮ್ಮ ಈ ನಿರ್ಲಕ್ಷ್ಯದ ಸದ್ಯದ ಪರಿಣಾಮಗಳು ದೇಶದ, ನಾಡಿನ ಜನರನ್ನು ಹೇಗೆ ಅಸ್ತಿತ್ವದಲ್ಲಿಟ್ಟಿವೆಯೋ ಅದೇ ರೀತಿ ಆದಿವಾಸಿಗಳನ್ನೂ ಕತ್ತಲಲ್ಲಿಟ್ಟಿವೆ. ನಾನು ಇನ್ನೊಂದು ಮಹತ್ವದ ಸಂಗತಿಯ ಕಡೆಗೆ ನಿಮ್ಮ ಗಮನ ಸೆಳೆಯಲಿಚ್ಛಿಸುತ್ತೇನೆ. ನಗರದಲ್ಲಿ ವಾಸಿಸುತ್ತಿರುವ ನಾವು, ಆದಿವಾಸಿಗಳೆಂದು ಕರೆಸಿಕೊಳ್ಳುವ ಜನಕ್ಕಿಂತ ಉನ್ನತ ರೀತಿಯಲ್ಲಿ ಬದುಕುತ್ತಿದ್ದೇವೆ ಎಂಬ ನಂಬಿಕೆಗಳನ್ನು ಬಿಟ್ಟುಕೊಡಬೇಕಿದೆ. ಈ ಬಗೆಯ ಹುಸಿ ಪ್ರತಿಷ್ಠೆ ಮತ್ತು ಅಹಂಗಳು ನಮ್ಮಿಂದ ತೊಲಗಬೇಕಿದೆ. ಕೆಲವು ಬುಡಕಟ್ಟು ಜನ ಅತ್ಯಂತ ಮುಂದುವರಿದ ಬದುಕನ್ನು ಬದುಕುತ್ತಿದ್ದಾರೆ. ನಾನೇ ಸ್ವತಃ ಗಮನಿಸಿದಂತೆ, ಜಾತಿನಿಷ್ಠ ಸಮಾಜದಲ್ಲಿನ ಜನರಿಗಿಂತ ಆದಿವಾಸಿಗಳು ಕೆಲವೆಡೆ ಒಳ್ಳೆಯ ಶಿಕ್ಷಣ ಪಡೆದು ಶಿಸ್ತಿನ ಸಾಮುದಾಯಿಕ ಜೀವನ ನಡೆಸುತ್ತಿದ್ದಾರೆ.
ಇಂಡಿಯಾದಲ್ಲಿ ಬದುಕುತ್ತಿರುವ ನಾವೆಲ್ಲ ಜಾಗತಿಕ ಆರ್ಥಿಕ ವ್ಯವಸ್ಥೆ ಅಥವಾ ‘ಮಾರುಕಟ್ಟೆಯ ಆರ್ಥಿಕ ನೀತಿ’ ಎಂದು ನಾವೇನು ಕರೆಯುತ್ತೇವೆಯೋ ಅದರಿಂದ ಬಹಳ ಕಠೋರ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಈ ಆರ್ಥಿಕ ನೀತಿಯಲ್ಲಿ ನಾವು ಯಶಸ್ಸನ್ನು ಕಾಣಬೇಕೆಂದರೆ ನಮಗೆ ಕೆಲವು ಅರ್ಹತೆಗಳು ಬೇಕೇ ಬೇಕು. ವಿಪರ್ಯಾಸವೆಂದರೆ, ಬಲವಿದ್ದವನು ಮಾತ್ರ ಬದುಕಬಲ್ಲ ಎಂಬ ಧೋರಣೆಯೇ ಮಾರುಕಟ್ಟೆ ನೀತಿಯ ಹಿಂದೆ ಕೆಲಸ ಮಾಡುತ್ತಿದೆ. ಆದರೆ ಈ ಮಾರುಕಟ್ಟೆ ಆರ್ಥಿಕತೆಯ ವಲಯದಿಂದ ಈ ಆದಿವಾಸಿ ಪ್ರದೇಶಗಳು ದೂರದಲ್ಲಿವೆ. ಈವತ್ತಿನ ನಮ್ಮ ಬಹುಮುಖ್ಯ ಕರ್ತವ್ಯವೇನೆಂದರೆ, ಸಂವಿಧಾನವೇ ಹೇಳುವಂತೆ, ಮಾರುಕಟ್ಟೆಯ ಆರ್ಥಿಕ ನೀತಿಯ ಆಕ್ರಮಣದಿಂದ ಈ ಆದಿವಾಸಿ ಪ್ರದೇಶಗಳನ್ನು ರಕ್ಷಿಸಬೇಕಿದೆ. ಆದಿವಾಸಿಗಳ ಭೂಮಿಗಳನ್ನು ಆಕ್ರಮಿಸಿಕೊಂಡು, ಅವರನ್ನು ಒಕ್ಕಲೆಬ್ಬಿಸುವ ಶ್ರೀಮಂತ ವರ್ತಕರನ್ನು ನಾವು ನಿಯಂತ್ರಿಸಬೇಕಿದೆ. ಬುಡಕಟ್ಟು ಜನರ ಆರ್ಥಿಕ ಚಟುವಟಿಕೆ ಗಳನ್ನು ಹಾಳು ಮಾಡುವ ಕಾರ್ಯಾಚರಣೆಗಳನ್ನು ನಾವು ಸಹಿಸುವುದಿಲ್ಲ. ಆದಿವಾಸಿ ಗಳು ಶಾಂತಿ, ನೆಮ್ಮದಿಯಿಂದ ಬದುಕಬೇಕೆಂಬುದೇ ನಮ್ಮ ಆಶಯ.
ಇಂಡಿಯಾದ ಹೊರಗೆ, ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ನೀವು ನೋಡಿ, ಎರಡು ಬಹುಮುಖ್ಯ ಸಂಗತಿಗಳು ಅವರನ್ನು ಇನ್ನಿಲ್ಲದಂತೆ ನೋಯಿಸಿವೆ. ಒಂದು, ಅಲ್ಲಿನ ಸರ್ಕಾರ ಮಾರುಕಟ್ಟೆ ನೀತಿಯನ್ನು ಯಥಾವತ್ತಾಗಿ ಆದಿವಾಸಿ ಪ್ರದೇಶಗಳಿಗೆ ಅನ್ವಯಿಸಿರುವುದು, ಮತ್ತು ಎರಡನೆಯದು, ಜಿನ್ ಮೊದಲಾದ ಮಾದಕ ಪೇಯಗಳನ್ನು ಯುರೋಪಿನಿಂದ ನೇರವಾಗಿ ಈ ಅನುಸೂಚಿತ ಪ್ರದೇಶಗಳಿಗೆ ಪರಿಚಯಿಸಿರುವುದು. ಈ ಎರಡು ಸಂಗತಿಗಳು ಅವರ ಪಾರಂಪರಿಕ ಗುಡಿಕೈಗಾರಿಕೆಗಳನ್ನು ಮತ್ತು ಕಲೆಗಳನ್ನು ಶಾಶ್ವತವಾಗಿ ನಾಶಗೊಳಿಸಿವೆ. ಅವರು ತಮ್ಮ ಸಹಜ ಸುಂದರ ಜೀವನವಿಧಾನವನ್ನು ಬಿಟ್ಟುಕೊಟ್ಟು, ಅತ್ಯಂತ ವಿಪತ್ಕಾರಿಯಾದ ಯುರೋಪಿನ ನಾಗರಿಕ ಬದುಕನ್ನು ರೂಡಿsಸಿಕೊಳ್ಳತೊಡಗಿದ್ದಾರೆ. ಹಲವು ಸಲ ನನಗೆ ಅನ್ನಿಸುತ್ತದೆ, ಭಾರತದ ನಾಗರಿಕ ಸಮಾಜ ಸಹ ಇಲ್ಲಿನ ಆದಿವಾಸಿಗಳನ್ನು ಇದೇ ಬಗೆಯಲ್ಲಿ ನಾಶ ಮಾಡಿಬಿಡಬಲ್ಲದು. ಈ ಕಾರಣದಿಂದ ನಾವು ಈ ಬಗೆಯ ಕೃತ್ಯಗಳಿಗೆ ನಿರ್ಬಂಧ ಹಾಕಲೇಬೇಕಿದೆ. ಒಂದಂತೂ ಸ್ಪಷ್ಟ, ಆದಿವಾಸಿಗಳು ಅಭಿವೃದ್ಧಿ ಹೊಂದಲೇಬೇಕು. ಯಾರೂ ಇವರನ್ನು ವಸ್ತುಸಂಗçಹಾಲಯದ ಅಪರೂಪದ ವಸ್ತುಗಳಿದ್ದಂತೆ ಇರಬೇಕು ಎಂದು ಬಯಸುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಆದಿವಾಸಿಗಳು ಅವರದೇ ಹಾದಿಯಲ್ಲಿ ಅವರ ಇಚ್ಛೆಗೆ ಅನುಗುಣವಾಗಿ ಅಭಿವೃದ್ಧಿ ಹೊಂದಬೇಕು. ಒತ್ತಾಯ ಪೂರ್ವಕವಾಗಿ ನಾವು ಹೊರಗಿನ ಸಂಗತಿಗಳನ್ನು ಅವರ ಮೇಲೆ ಹೇರಿದರೆ ಅವರು ಅದನ್ನು ಒಪ್ಪಿಕೊಳ್ಳಲಾರರು. ಯಾವುದೇ ವ್ಯಕ್ತಿ ತನ್ನ ಪರಿಸರ, ಪರಂಪರೆ ಮತ್ತು ಆಚರಣೆಗಳ ಆಚೆ ಇದ್ದು ಬದುಕಲಾರ. ನಾವು ಹೇಗೆ ಈ ಆದಿವಾಸಿಗಳನ್ನು ಎರಡು ಅತಿಗಳ ಮೂಲಕ ತಲುಪಲು ಯತ್ನಿಸುತ್ತಿದ್ದೇವೆ ಗೊತ್ತೇ? ಅವರನ್ನು ತಲುಪುವ ಈ ಎರಡೂ ಕ್ರಮಗಳು ಅತಿರೇಕದವೇ ಆಗಿವೆ. ಮೊದಲನೆಯದು ‘ಮ್ಯೂಸಿಯಂ ಕ್ರಮ’, ಮಾನವಶಾಸ್ತ್ರಜ್ಞರ ಚರ್ಚೆಗಳಿಗಾಗಿ, ಆಸಕ್ತಿ ಹುಟ್ಟಿಸುವ ಅಧ್ಯಯನಕ್ಕೆ ಮ್ಯೂಸಿಯಂ ಮಾದರಿಗಳ ತರಹ ಉಳಿಸಿಕೊಳ್ಳುವುದಕ್ಕಾಗಿ ಆದಿವಾಸಿಗಳನ್ನು ರಕ್ಷಿಸಬೇಕೆನ್ನುವುದು. ಎರಡನೆಯದು ‘ಮುಕ್ತದ್ವಾರ’ ನೀತಿಯ ಕ್ರಮ. ನಾವು ಇವರನ್ನು ತಲುಪಲು ಯೋಚಿಸಿರುವ ಈ ಎರಡನೇ ಕ್ರಮ ಅತ್ಯಂತ ಅಪಾಯಕಾರಿಯಾದದ್ದು. ಈ ‘ಮುಕ್ತದ್ವಾರ’ ನೀತಿ ಆದಿವಾಸಿಗಳನ್ನು ಆರ್ಥಿಕವಾಗಿ ಭೀಕರ ಶೋಷಣೆಗೆ ಈಡು ಮಾಡುತ್ತದೆ. ಇದರಿಂದಾಗಿ ಹೊರಗಿನ ಎಲ್ಲ ಬಗೆಯ ಶೋಷಣೆಯ ಆಯಾಮಗಳು ಆದಿವಾಸಿ ಪ್ರದೇಶಗಳಿಗೆ ಪ್ರವೇಶ ಪಡೆಯುತ್ತವೆ. ಅಲ್ಲದೆ ಆದಿವಾಸಿಗಳನ್ನು ಅವರ ನೆಲೆಗಳಿಂದಲೇ ಒಕ್ಕಲೆಬ್ಬಿಸುವ ಅಪಾಯ ಸಹಜವಾಗಿಯೇ ಇದರಿಂದ ಸಂಭವಿಸಿಬಿಡುತ್ತದೆ. ಅವರನ್ನು ತಲುಪುವ ಈ ಎರಡೂ ಮಾರ್ಗಗಳು ಅಪಾಯವನ್ನುಂಟು ಮಾಡುತ್ತವೆ. ಅದಕ್ಕಾಗಿ ಒಂದು ಸುವರ್ಣ ಮಾಧ್ಯಮ ಸೂತ್ರವನ್ನು ನಾವು ಅನುಸರಿಸಬೇಕಿದೆ. ಈ ಸುವರ್ಣ ಮಾಧ್ಯಮ ಸೂತ್ರದಲ್ಲಿ ಹೇರಿಕೆಯ ಸಂಗತಿಗಳಿರದಿದ್ದರೆ ಮಾತ್ರ ಇದು ಯಶಸ್ವಿಯಾಗಬಲ್ಲದು. ಈ ಸುವರ್ಣ ಮಾಧ್ಯಮ ನೀತಿಯನ್ನು ಅವರ ಜನರ ಮೂಲಕವೇ ಅನುಷ್ಠಾನ ಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಇದು ಮೊದಲ ಹಂತ, ಅಂದರೆ ಅವರ ಜನರನ್ನೇ ಯೋಜನೆಗಳನ್ನು ಅನುಷ್ಠಾನಗೊಳಿಸಲು ತರಬೇತಿಗೊಳಿಸುವುದು. ಹೀಗೆ ತರಬೇತಿಗೊಂಡ ಆದಿವಾಸಿ ಜನರು ತಮ್ಮವರನ್ನು ಪರಿಣಾಮಕಾರಿಯಾಗಿ ತಲುಪಬಲ್ಲರು. ಹೊರಗಿನಿಂದ ಬಂದವರು ಆದಿವಾಸಿಗಳಿಗಾಗಿ ಕೆಲಸ ಮಾಡುವುದಕ್ಕಿಂತ, ಆದಿವಾಸಿಗಳೇ ತಮ್ಮ ಜನರ ಅಭಿವೃದ್ಧಿಗೆ ತೊಡಗಿಸಿಕೊಳ್ಳುವಂತಾಗುವುದು ಹೆಚ್ಚು ಪರಿಣಾಮಕಾರಿ ಎಂದು ನನಗನ್ನಿಸುತ್ತಿದೆ. ಈ ಆದಿವಾಸಿ ಜನ ನಿಜಕ್ಕೂ ಉನ್ನತ ಹಂತಕ್ಕೆ ಬರಬೇಕಿದೆ. ಆದರೆ ಯಾವ ಅಬಿsವೃದ್ಧಿಯ ಮಾನದಂಡಗಳಿಂದ ಭಾರತದ ಉಳಿದ ಜನಾಂಗಗಳನ್ನು ಮೇಲೆತ್ತಲು ಬಯಸುತ್ತೇವೋ ಅವೇ ಮಾನ ದಂಡಗಳು ಆದಿವಾಸಿಗಳಿಗೂ ಅನ್ವಯವಾಗಕೂಡದು. ಅವೇ ಇಲ್ಲಿ ಪುನರಾವರ್ತನೆ ಯಾಗಬಾರದು. ದೇಶಕ್ಕೂ ಸಹ ಈ ಬಗೆಯ ಕ್ರಮ ಒಳಿತೆಂದು ಕಾಣುತ್ತದೆ. ಅಭಿವೃದ್ಧಿ ಹಂತಹಂತವಾಗಿ ಆಗಬೇಕು. ಒತ್ತಾಯದ ಹೇರಿಕೆಗಳು ಇರಬಾರದು. ಜನ ತರಬೇತಿಗೊಳ್ಳುತ್ತ ಇತರರನ್ನೂ ಅಬಿsವೃದ್ಧಿಗೆ ತರಬೇತಿಗೊಳಿಸುವಂತಾಗಬೇಕು. ಇದರಿಂದಾಗಿ ಅಭಿವೃದ್ಧಿ ಯೋಜನೆಗಳು ತೀವ್ರವಾಗಿ ಅನುಷ್ಠಾನಗೊಳ್ಳುವುದಿಲ್ಲ ನಿಜ. ಆದರೆ ಅವರದೇ ವ್ಯಕ್ತಿಯನ್ನು ತರಬೇತಿಗೊಳಿಸುವುದರ ಮೂಲಕ ಯೋಜನೆ ಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬಹುದು. ಯಾವುದೇ ವೃತ್ತಿಯನ್ನು ತೆಗೆದುಕೊಳ್ಳಿ. ಇಂಜಿನಿಯರ್, ಡಾಕ್ಟರ್, ಇವರನ್ನು ರೂಪಿಸಲು ತರಬೇತಿ ಅತ್ಯಗತ್ಯ. ತರಬೇತಿ ದೀರ್ಘಕಾಲ ಹಿಡಿಯುತ್ತದೆ. ಈ ರೀತಿಯ ಶಿಸ್ತುಬದ್ಧ ನೆಲೆಯಿಂದ ಹೊರಡುವುದೇ ಒಳ್ಳೆಯದು.
ಇದನ್ನು ಓದಿದ್ದೀರಾ?: https://peepalmedia.com/nehru-speeches-translated-by-dr-as-prabhakar/