ಎನ್ಇಪಿ ಎನ್ನುವುದು ನಾಗಪುರದ ಸಿದ್ಧಾವಂತನ್ನು ಸೀದಾ ತರಗತಿಗಳಲ್ಲಿ ತಂದು ಸುರಿಯುವ ನೀತಿಯಾಗಿದೆ ಎಂದು ಮಾಜಿ ರಾಜ್ಯಸಭೆ ಸದಸ್ಯರಾದ ರಾಜೀವ ಗೌಡ ಅವರು ಇಂದಿನ ರಾಹುಲ್ ಗಾಂಧಿಯವರೊಡನೆ ನಡೆದ ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ಹೇಳಿದರು.
ಎನ್ ಇಪಿ ಮಾರ್ಪಾಡಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎನ್ ಇಪಿ ಎಂದರೆ ನಾಗ್ಪುರ ಶಿಕ್ಷಣ ನೀತಿ. ಅಲ್ಲಿ ಇತಿಹಾಸ ಹಾಗೂ ಪುರಾಣಕ್ಕೆ ಗೊಂದಲವಿದೆ. ನಾವು ಪುರಾಣ, ಮಹಾಭಾರತ, ರಾಮಾಯಣದ ವಿರುದ್ಧ ಇಲ್ಲ. ಅದನ್ನು ಕಲಿತು ಅದರ ಜತೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಪಾಠಗಳನ್ನು ಕಲಿಸಬೇಕು’ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ರಾಜೀವ್ ಗೌಡ ಅವರು, ‘ಈ ಎನ್ಇಪಿ ವಿಚಾರವಾಗಿ ಕೇಂದ್ರ ಸರ್ಕಾರ ಸದನದಲ್ಲಿ ಚರ್ಚೆ ಮಾಡಿಲ್ಲ. ನಾಗ್ಪುರದ ಸಿದ್ಧಾಂತವನ್ನು ಇಲ್ಲಿಗೆ ತಂದು ಹಾಕಿದ್ದಾರೆ’ ಎಂದರು.
ಕಾಂಗ್ರೆಸ್ ಸರ್ಕಾರ ಬಂದರೆ ಎನ್ ಇಪಿ ರದ್ದು ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಗೌಡ ಅವರು, ‘ಶಿಕ್ಷಣವು ಕೇಂದ್ರಕ್ಕೆ ಸಂಬಂಧಿಸಿದ ವಿಚಾರವಲ್ಲ. ಇದು ರಾಜ್ಯದ ವಿಚಾರ. ಹೀಗಾಗಿ ನಮ್ಮ ಸರ್ಕಾರ ಬಂದರೆ ವೈಜ್ಞಾನಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ನೀಡುವಂತಹ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದರು. ನಂತರ ಮಾತನಾಡಿದ ಜೈರಾಮ್ ರಮೇಶ್ ಅವರು ‘ನಮ್ಮ ಸರ್ಕಾರ ಬಂದರೆ ಈ ಎನ್ಇಪಿಯ ಪ್ರತಿ ಪದವನ್ನು ರದ್ದು ಮಾಡಲಾಗುವುದು’ ಎಂದರು.
ನಂತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ರಾಜ್ಯ ಸರ್ಕಾರ ಎನ್ ಇಪಿ ಬಗ್ಗೆ ಒಂದು ಪುಸ್ತಕ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ವತಃ ಸರ್ಕಾರವೇ ಈ ಎನ್ಇಪಿಗೆ ರಾಜ್ಯ ಸಿದ್ಧವಾಗಿಲ್ಲ. ಹೀಗಾಗಿ ಇದನ್ನು ಜಾರಿಗೆ ತರಲು ಹಲವು ವರ್ಷಗಳು ಬೇಕಿದೆ ಎಂದು ಹೇಳಿದೆ. ಕೆಲವು ಮಂತ್ರಿಗಳು ಈ ಎನ್ಇಪಿ ಜಾರಿ ಮಾಡಿದರೆ ನಾಗ್ಪುರದವರನ್ನು ಮೆಚ್ಚಿಸಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಇದು ಮಂತ್ರಿಗಳ ಅನುಕೂಲಕ್ಕೆ ಹೊರತು, ವಿದ್ಯಾರ್ಥಿಗಳಿಗೆ ಅಲ್ಲ’ ಎಂದರು.
ಆರ್ ಎಸ್ಎಸ್ ನವರು 5 ವಿವಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ರಾಜ್ಯದಲ್ಲಿ ಚಾಣಕ್ಯ ವಿವಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಈ ವಿವಿಗೆ ಕಡಿಮೆ ಬೆಲೆಗೆ ಸರ್ಕಾರ ಜಾಗವನ್ನು ಮಂಜೂರು ಮಾಡಿದೆ. ಸದನದಲ್ಲಿ ನಮಗೆ ಸಂಖ್ಯಾಬಲದ ಕೊರತೆಯಿಂದ ಇದನ್ನು ತಡೆಯಲು ಆಗಲಿಲ್ಲ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಬೇಕಾದರೆ ಕಾಂಗ್ರೆಸ್ ಪಕ್ಷವೇ ಉತ್ತಮ ಆಯ್ಕೆ’ ಎಂದರು.
ಈ ವೇಳೆ ಎನ್ಇಪಿ ವಿಚಾರವಾಗಿ ಮಾತನಾಡಿದ ಜೈರಾಮ್ ರಮೇಶ್ ಅವರು, ‘1996ರಲ್ಲಿ ಜಾರಿಗೆ ತಂದ ಶಿಕ್ಷಣ ನೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ನವೋದಯ ಶಾಲೆಗಳನ್ನು ಆರಂಭಿಸಲಾಗಿತ್ತು. ಅಲ್ಲಿ ಎಲ್ಲ ವರ್ಗದವರು ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದಿದ್ದು, ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿತ್ತು ಶಿಕ್ಷಣದ ಖಾಸಗಿಕರಣ ಬಹಳ ಅಪಾಯಕಾರಿ’ ಎಂದರು.
ಮೀಸಲಾತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿಯು ತನ್ನ ವರದಿ ನೀಡಿ ಎರಡೂವರೆ ವರ್ಷವಾಗಿದೆ. ಸಮಿತಿ ವರದಿ ಮೇಲೆ ಮತ್ತೊಂದು ಸಮಿತಿ ಮಾಡಿರುವುದು ಕಾಲಹರಣದ ಪ್ರಯತ್ನವಲ್ಲದೇ ಬೇರೆನೂ ಅಲ್ಲ’ ಎಂದು ತಿಳಿಸಿದರು.