ಹಾಸನ : ಜಿಲ್ಲೆಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿ ಕೆ.ಎಸ್. ಲತಕುಮಾರಿರವರು ಮೊದಲು ಆದಿ ದೇವತೆ ಹಾಸನಾಂಬೆ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮ ಕಛೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ಇದೆ ವೇಳೆ ನೂತನ ಡಿಸಿ ಕೆ.ಎಸ್. ಲತಾಕುಮಾರಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಅಮ್ಮನ ಆಶೀರ್ವಾದ ಪಡೆದು ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಮಾಡಲು ಮೊದಲ ಹೆಜ್ಜೆ ಇಟ್ಟಿದ್ದೇನೆ ಎಂದರು. ಡಿಸಿ ಆಗೋದು ಐಎಎಸ್ ಆದ ಎಲ್ಲರ ಕನಸು. ಅಂತಹ ಅವಕಾಶ ಹಾಸನ ಜಿಲ್ಲೆಯಲ್ಲಿ ನನಗೆ ಸಿಕ್ಕಿದೆ ಇದು ನನ್ನ ಅದೃಷ್ಟ. ಹಾಸನಾಂಬೆ ಅಶೀರ್ವಾದದಿಂದ ಸಂವಿಧಾನದ ನಿಯಮದಂತೆ ಪ್ರಾಮಾಣಿಕತೆ, ನಿಷ್ಟೆಯಿಂದ ಕೆಲಸ ಮಾಡುವೆನು. ನಾನು ಎಸಿಯಾಗಿ ಕೆಲಸ ಹಾಗೂ ಇತರೆ ಹುದ್ದೆ ನಿಬಾಯಿಸಿದ ಅನುಭವ ಇದೆ. ಹಾಗಾಗಿ ಕಂದಾಯ ಇಲಾಖೆ ನನಗೆ ಹೊಸದಲ್ಲ. ನಾನು ಜಿಲ್ಲಾಧಿಕಾರಿ ಆಗಿರುವ ಬಗ್ಗೆ ಅದರಲ್ಲೂ ಹಾಸನ ಎಂದ ಕೂಡಲೇ ಮೊದಲು ಹಾಸನಾಂಬೆ ದರ್ಶನಕ್ಕೆ ಬರೋ ಭಕ್ತರಿಗೆ ಇನ್ನಷ್ಟು ಸುಗಮ ದರ್ಶನ ವ್ಯವಸ್ಥೆ ಕಲ್ಪಿಸುವುದು ಸವಾಲಿನ ಕೆಲಸ. ಸಣ್ಣ ಜಾಗದಲ್ಲಿ ಅಷ್ಟೊಂದು ಜನ ಸಾಗರವೇ ಬರುತ್ತದೆ. ತಿರುಪತಿಯಂತಾ ಕಡೆಯಲ್ಲಿ ಲಕ್ಷ ಲಕ್ಷ ಜನರು ಬರ್ತಾರೆ. ಅದರಂತೆ ಇಲ್ಲಿಯು ತುಂಬಾ ಸುಗಮವಾಗಿ ದರ್ಶನ ವ್ಯವಸ್ಥೆ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಈ ಬಾರಿ ಸರಾಗವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸುವ ಭರವಸೆ ಇದೆ ಎಂದು ಹೇಳಿದರು.ಇದೆ ವೇಳೆ ಉಪವಿಭಾಗಧಿಕಾರಿ ಮಾರುತಿ, ತಹಸೀಲ್ದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.