Wednesday, June 18, 2025

ಸತ್ಯ | ನ್ಯಾಯ |ಧರ್ಮ

ಹೊಸ ಕಾನೂನುಗಳು ಪೊಲೀಸ್‌ ರಾಜ್ಯಕ್ಕೆ ರಹದಾರಿಯಾಗಲಿವೆ: ತೀಸ್ತಾ ಸೆಟಲ್ವಾಡ್

ಮತಾಂಧ ಸಿದ್ಧಾಂತದಿಂದ ಯುವಕರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ- ಪ್ರಶ್ನಿಸುವವರ ಕತ್ತು ಹಿಸುಕುತ್ತಿದೆ‌ - ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್

ಗುಂಟೂರು: ಸುಮಾರು 70 ವರ್ಷಗಳ ನಂತರ ಕೇಂದ್ರ ಸರ್ಕಾರವು ದೇಶದ ಮಹತ್ವದ ಐಪಿಸಿ ಮತ್ತು ಸಿಆರ್‌ಪಿಸಿ ಕಾನೂನುಗಳಲ್ಲಿ ತಂದಿರುವ ಬದಲಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಎಂದು ಸಾಮಾಜಿಕ ಹೋರಾಟಗಾರ್ತಿ ಹಾಗೂ ಖ್ಯಾತ ವಕೀಲೆ ತೀಸ್ತಾ ಸೆಟಲ್‌ವಾಡ್ ಹೇಳಿದರು.

ಅಖಿಲ ಭಾರತ ವಕೀಲರ ಒಕ್ಕೂಟ (ಐಎಲ್‌ಯು) ಆಂಧ್ರ ಪ್ರದೇಶ ರಾಜ್ಯ ಸಮಾವೇಶದ ನಿಮಿತ್ತ ಗುಂಟೂರಿನಲ್ಲಿ ನಡೆದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಮಾತು ಮುಂದುವರಿಸಿದ ತೀಸ್ತಾ, “ಸಂವಿಧಾನ ರಚನೆಯಲ್ಲಿ ಎಲ್ಲ ವರ್ಗದವರ ಅಭಿಪ್ರಾಯಗಳಿಗೆ ಪ್ರಾತಿನಿಧ್ಯ ನೀಡಲಾಗಿದ್ದು, ಅದಕ್ಕಾಗಿಯೇ ಸಮಾನತೆಗೆ ಅಂದು ಆದ್ಯತೆ ನೀಡಲಾಗಿತ್ತು ಎಂದರು. ಈಗ ಮಾಡುತ್ತಿರುವ ಕಾನೂನು, ತಿದ್ದುಪಡಿಗಳೆಲ್ಲ ಏಕಪಕ್ಷೀಯವಾಗಿ ನಡೆಯುತ್ತಿವೆ ಎಂದರು. ಎನ್ ಡಿಎ ಆಡಳಿತದಲ್ಲಿ ಸಂಸತ್ತಿನಲ್ಲೇ ಸಂವಿಧಾನ ಉಲ್ಲಂಘನೆಯಾಗುತ್ತಿದೆ” ಎಂದರು.

ಎಡಪಕ್ಷಗಳ ಬೆಂಬಲದಿಂದ ಮುಂದುವರಿದ ಯುಪಿಎ ಸರಕಾರದಲ್ಲಿ ಜನ ಸಾಮಾನ್ಯರಿಗೆ ಸಂಬಂಧಿಸಿದ ಹಲವು ಉತ್ತಮ ಕಾನೂನುಗಳು ಬಂದಿವೆ ಎಂದರು.
“ಎನ್‌ಡಿಎ ಆಡಳಿತದಲ್ಲಿ ಜನರ ನಡುವೆ ದ್ವೇಷ ಹೆಚ್ಚಿಸುವುದು, ಅಧಿಕಾರದ ಕೇಂದ್ರೀಕರಣ ಮತ್ತು ಪ್ರಶ್ನಿಸುವ ತತ್ವವನ್ನು ನಿಯಂತ್ರಿಸುವುದು ಪ್ರತಿ ಕಾನೂನಿನಲ್ಲೂ ವಾಡಿಕೆಯಾಗಿದೆ ಎಂದು ಹೇಳಿದರು. ಐಪಿಸಿ ಮತ್ತು ಸಿಆರ್‌ಪಿಸಿ ಕಾನೂನುಗಳಲ್ಲಿ ಇತ್ತೀಚಿನ ಬದಲಾವಣೆಗಳು ಭವಿಷ್ಯದ ಪೀಳಿಗೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿವೆ” ಎಂದು ಅವರು ಹೇಳಿದರು.

ಮುಖ್ಯವಾಗಿ ವಿವಿಧ ಪ್ರಕರಣಗಳಲ್ಲಿ ಪ್ರಸ್ತುತ ಕಾನೂನುಗಳಡಿ ಪೊಲೀಸ್ ಕಸ್ಟಡಿ 15 ದಿನಗಳನ್ನು ಮೀರದಿದ್ದರೂ, ಈಗ ಹೊಸ ಕಾನೂನಿನಡಿ 15 ದಿನಗಳಿಂದ 45 ದಿನಗಳಿಗೆ ಹೆಚ್ಚಿಸಲಾಗಿದ್ದು ಮತ್ತು ಅಗತ್ಯವೆನ್ನಿಸಿದರೆ 90 ದಿನಗಳಿಗೆ ವಿಸ್ತರಿಸುವ ಅವಕಾಶ ನೀಡಲಾಗಿದೆ. ಇದರಿಂದಾಗಿ ಪೊಲೀಸ್ ರಾಜ್ಯ ನಿರ್ಮಾಣವಾಗಲಿದೆ ಎಂದು ತೀಸ್ತಾ ಆತಂಕ ವ್ಯಕ್ತಪಡಿಸಿದರು.

“ಇದರಿಂದಾಗಿ ಪಕ್ಷ ರಾಜಕೀಯವಾಗಿ ಗೆಲ್ಲುವ ಅವಕಾಶಗಳು ಹೆಚ್ಚಿವೆ. ಹಿಂದಿನ ಕಾಲದಲ್ಲಿ ಲೇಖಕರು, ಕವಿಗಳೂ ತಮ್ಮ ಕವಿತೆ ಮತ್ತು ಬರಹಗಳ ಮೂಲಕ ಪ್ರಶ್ನಿಸುವುದನ್ನು ಜನರಿಗೆ ಕಲಿಸುತ್ತಿದ್ದರು ಎಂದು ನೆನಪಿಸಿದರು. ಕಳೆದ ಒಂಬತ್ತು ವರ್ಷಗಳಿಂದ ಅವರನ್ನು ಪ್ರಶ್ನಿಸುವುದೇ ಅಪರಾಧ ಎಂದು ಪರಿಗಣಿಸಿ ಕಿರುಕುಳ ನೀಡುತ್ತಿದ್ದಾರೆ” ಎಂದರು.

“ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ದೇಶದ ವಿಘಟಿತ ಪರಿಸ್ಥಿತಿಯ ವಿರುದ್ಧ ಬುದ್ದಿಜೀವಿಗಳು, ವಕೀಲರು, ಕವಿಗಳು, ಸಾಹಿತಿಗಳು ಸಂಘಟಿತರಾಗುವ ಅಗತ್ಯವಿದೆ. ರಾಜಕೀಯ ಪಕ್ಷಗಳಿಗೆ ಎಲೆಕ್ಟೋರಲ್ ಬಾಂಡ್ ಜಾರಿಗೆ ತಂದಿರುವ ಎನ್ ಡಿಎ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಂದ ಭಾರಿ ದೇಣಿಗೆ ಪಡೆದು ಧಾರ್ಮಿಕ ದ್ವೇಷ ಹುಟ್ಟು ಹಾಕುತ್ತಿದೆ” ಎಂದು ಅಭಿಪ್ರಾಯಪಟ್ಟರು.

37ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದ ಎನ್ ಡಿಎ ಸರ್ಕಾರ ತಾವು ಏನು ಮಾಡಿದರೂ ಸಿಂಧು ಎಂಬ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದೆ. ಚುನಾವಣಾ ಆಯೋಗದ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನವನ್ನು ತೆಗೆದುಹಾಕುವುದು ಇದರ ಒಂದು ಭಾಗವಾಗಿದೆ.

“ದೇಶದಲ್ಲಿ ಜಾತ್ಯತೀತತೆ ಅಪಾಯದಲ್ಲಿದೆ. ಸಂವಿಧಾನವನ್ನು ಧಾರ್ಮಿಕ ಸಂವಿಧಾನವನ್ನಾಗಿಸಲು ಬಿಜೆಪಿ ಹಲವಾರು ಕಾನೂನುಗಳನ್ನು ತರುತ್ತಿದೆ. 18ರಿಂದ 35 ವರ್ಷದೊಳಗಿನ ಯುವಕರನ್ನು ಧಾರ್ಮಿಕ ಸಿದ್ಧಾಂತದತ್ತ ತನ್ನತ್ತ ಸೆಳೆಯಲು ಬಿಜೆಪಿ ಹಲವು ತಂತ್ರಗಳನ್ನು ಮಾಡುತ್ತಿದೆ. 52ರಷ್ಟು ಶ್ರೀಮಂತರು ಸಂಸತ್ತಿನಲ್ಲಿ ಸಂಸದರಾಗಿದ್ದಾರೆ. 2040ರ ವೇಳೆಗೆ, ಈ ಸಂಖ್ಯೆಯು 80 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಅಷ್ಟೊತ್ತಿಗಾಗಲೇ ಬಡವರ, ನತದೃಷ್ಟರ ಬಗ್ಗೆ ಚರ್ಚಿಸುವವರೇ ಇರುವುದಿಲ್ಲ” ಎಂದು ತೀಸ್ತಾ ಸೆಟಲ್ವಾಡ್ ಹೇಳಿದ್ದಾರೆ,

Related Articles

ಇತ್ತೀಚಿನ ಸುದ್ದಿಗಳು

You cannot copy content of this page