ಜನವರಿ 2 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸರ್ಕಾರಿ ಬಸ್ ಟಿಕೆಟ್ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಇಂದು ಮಧ್ಯರಾತ್ರಿಯಿಂದಲೇ ಈ ನಿಯಮ ಜಾರಿಗೊಳಿಸುವಂತೆ ಸರ್ಕಾರ ಎಲ್ಲಾ 4 ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಆದೇಶಿಸಿದೆ.
ಹಾಗೆಯೇ ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿ ನಾಲ್ಕು ಸಾರಿಗೆ ಬಸ್ ಗಳ ದರ ಏರಿಕೆಯಾಗಲಿದ್ದು, ಶೇಕಡಾ 15 ರಷ್ಟು ಟಿಕೆಟ್ ದರ ಹೆಚ್ಚಳವಾಗಲಿದೆ.
ಕ್ಯಾಬಿನೆಟ್ ನಲ್ಲಿ ಬಸ್ ದರ ಪರಿಷ್ಕರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾಪಿಸಿದರು. ಬಸ್ ದರ ಏರಿಕೆಗೆ ಕಾರಣಗಳು, ಸಾರಿಗೆ ನಿಗಮಗಳ ಹಣಕಾಸು ಪರಿಸ್ಥಿತಿ ಬಗ್ಗೆ ಮಾಹಿತಿ ಸಭೆಗೆ ಮಾಹಿತಿ ನೀಡಿದರು.
ಈ ನಡುವೆ ಪ್ರತಿಪಕ್ಷಗಳು ನಿರೀಕ್ಷೆಯಂತೆ ಸಾರಿಗೆ ಬೆಲೆ ಪರಿಷ್ಕರಣೆ ಬಗ್ಗೆ ಆಕ್ರೋಶ ಹೊರಹಾಕಿವೆ. ಆರ್ ಅಶೋಕ್ ಮಾಧ್ಯಮಗಳೊಂದಿಗೆ ಮಾತನಾಡಿ ‘ಬಿಜೆಪಿ ಅವಧಿಯಲ್ಲಿ ನಷ್ಟ ಆಗಿತ್ತು ಎಂದು ಸಬೂಬು ಹೇಳುತ್ತಾರೆ. ಆಗ ಕೋವಿಡ್ ಇತ್ತು. ಲಾಕ್ಡೌನ್ನಿಂದ ತಿಂಗಳುಗಟ್ಟಲೆ ಬಸ್ ಸಂಚಾರವೇ ನಿಂತು ಹೋಗಿತ್ತು. ಹತ್ತು ವರ್ಷಗಳಲ್ಲಿ ಇಂಧನ ಬೆಲೆ ಏರಿಕೆ ಆಗಿಲ್ಲವೇ? ನೌಕರರಿಗೆ ಟಿ.ಎ–ಡಿ.ಎ ಹೆಚ್ಚು ಮಾಡಿರಲಿಲ್ಲವೇ? ಹಿಂದಿನ ಬಿಜೆಪಿ ಸರ್ಕಾರ ಪ್ರಯಾಣ ದರ ಏರಿಕೆ ಮಾಡಿತ್ತೇ? 2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ, ₹1ಸಾವಿರ ಕೋಟಿಗೂ ಹೆಚ್ಚು ಲಾಭ ತಂದುಕೊಟ್ಟಿದ್ದೆ’ ಎಂದು ಹೇಳಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.