ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವ ಸನ್ನದ್ಧರಾಗಬೇಕು, ಆ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಅವರ ಹೆಸರನ್ನು ನಾಯಕರು ಶಿಫಾರಸು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಎರಡ್ಮೂರು ದಿನಗಳಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಜ್ಯ ನಾಯಕರ ಸಭೆ ಕರೆದಿದ್ದು, ಸಭೆಯಲ್ಲಿ ಬಹುತೇಕ ಅಭ್ಯರ್ಥಿಗಳ ಪಟ್ಟಿ ಕೊಡಬೇಕು ಎಂಬ ಸೂಚನೆ ನೀಡಿದ್ದರು. ತುಮಕೂರು ಭಾಗಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಅಭ್ಯರ್ಥಿ ಆಯ್ಕೆಯ ಜವಾಬ್ದಾರಿ ನೀಡಲಾಗಿದೆ. ನಿಕೇತ್ ರಾಜ್ ಮೌರ್ಯ ಈಗಾಗಲೇ ರಾಜ್ಯಾದ್ಯಂತ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದು, ಈ ನಿಟ್ಟಿನಲ್ಲಿ ಜನರನ್ನು ಆಕರ್ಷಿಸುವ ವ್ಯಕ್ತಿತ್ವ ಹೊಂದಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನೇ ಅಭ್ಯರ್ಥಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ
ಇನ್ನು ಹೇಳಿಕೇಳಿ ಅಹಿಂದ ಸಮುದಾಯದ ಹಿನ್ನೆಲೆಯಿಂದ ಬಂದ ನಿಕೇತ್ ರಾಜ್ ಮೌರ್ಯ ಅವರಿಗೆ ಸ್ಥಳೀಯ ನಾಯಕರಾದ ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಅವರ ಆಶೀರ್ವಾದದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೃಪೆ ಕೂಡಾ ಡಬಲ್ ಧಮಾಕದ ಕಾಣಿಕೆ ಸಿಗಲಿದೆ.
ಅಷ್ಟೆ ಅಲ್ಲದೆ ಕಾಂಗ್ರೆಸ್ ಪಾಲಿನ ರಾಜ್ಯದ ಕೆಲವು ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ತುಮಕೂರು ಕ್ಷೇತ್ರ ಕೂಡ ಇದ್ದು, ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಟಾರ್ಗೆಟ್ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ನಿಕೇತ್ ರಾಜ್ ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಎಂದು ಸ್ಥಳೀಯ ಮಟ್ಟದಲ್ಲೂ ಮಾತುಗಳು ಕೇಳಿ ಬಂದಿವೆ.
ಇತ್ತ ಸಮುದಾಯದ ಹಿನ್ನೆಲೆಯಲ್ಲಿ ಕುರುಬರಾಗಿರುವ ನಿಕೇತ್ ರಾಜ್ ಅವರಿಗೆ ಒಂದೂವರೆಯಿಂದ ಎರಡು ಲಕ್ಷದಷ್ಟು ಇರುವ ಸಮುದಾಯದ ಮತಗಳು ಏಕಪಕ್ಷೀಯವಾಗಿ ಒಂದೆಡೆ ಸೇರಲಿದೆ. ಇನ್ನು ಸ್ವಲ್ಪ ಮಟ್ಟಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಲೆ ಮುಂದುವರೆದರೆ ಒಕ್ಕಲಿಗ ಮತಗಳೂ ಸಹ ನಿಕೇತ್ ರಾಜ್ ಅವರಿಗೆ ಬೀಳುವ ಬಗ್ಗೆಯೂ ಯಾವುದೇ ಅನುಮಾನವಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಪರಮೇಶ್ವರ್ ಮತ್ತು ರಾಜಣ್ಣ ಅವರ ಸಂಪೂರ್ಣ ಬೆಂಬಲ ಇವರ ಮೇಲೆ ಇರುವುದೂ ಸಹ ಬೇರಾವುದೇ ಪ್ರಬಲ ಆಕಾಂಕ್ಷಿಯ ಹೆಸರೂ ಸಹ ಈವರೆಗೆ ಓಡಾಡದೇ ಇರುವುದರಿಂದ ಕಾಂಗ್ರೆಸ್ ತುಮಕೂರಿನಲ್ಲಿ ನಿಕೇತ್ ರಾಜ್ ಮೌರ್ಯ ಅವರನ್ನು ಕಣಕ್ಕಿಳಿಸಲು ಎಲ್ಲಾ ತಯಾರಿ ಮಾಡಿಕೊಂಡಂತಿದೆ.
ನಿಕೇತ್ ರಾಜ್ ಕೂಡಾ ಹಲವು ದಿನಗಳಿಂದ ತುಮಕೂರು ಕ್ಷೇತ್ರದಾದ್ಯಂತ ಪ್ರವಾಸ ನಡೆಸುತ್ತಿದ್ದು, ಹಳ್ಳಿ ಹಳ್ಳಿಗಳಲ್ಲಿ ಕಾಂಗ್ರೆಸ್ ಪರವಾಗಿ, ಸರ್ಕಾರದ ಯೋಜನೆಗಳ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಿಕೇತ್ ರಾಜ್ ಈಗ ತುಮಕೂರಿನಾದ್ಯಂತ ಯುವ ಪಡೆಗಳನ್ನು ಕಟ್ಟಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿರುವುದು ಈ ಸುದ್ದಿಗೆ ಇಂಬು ಕೊಟ್ಟಂತಿದೆ.