Home ಅಂಕಣ “ಬೊಗಸೆಗೆ ದಕ್ಕಿದ್ದು” – 4 : ಅಪರೇಷನ್ “ಕ್ಯಾಕ್ಟಸ್”; ಹಿನ್ನೆಲೆ ಮುನ್ನೆಲೆ

“ಬೊಗಸೆಗೆ ದಕ್ಕಿದ್ದು” – 4 : ಅಪರೇಷನ್ “ಕ್ಯಾಕ್ಟಸ್”; ಹಿನ್ನೆಲೆ ಮುನ್ನೆಲೆ

0



ಮೊದಲೇ ನಾನು ನಿಮ್ಮನ್ನು ಒಂದು ಚಿಂತನೆಗೆ ಎಳೆಯುತ್ತೇನೆ. ಯೋಚಿಸಿ ನೋಡಿ. ನೀವು ಸುರಕ್ಷಿತವಾಗಿ ಇದ್ದೀರಾ? ಹೌದೆಂದರೆ ಯಾಕೆ? ಇಲ್ಲವೆಂದರೆ ಯಾಕೆ? ನಿಮಗೆ ಯಾವುದೇ ಹಿತಾಸಕ್ತಿಗಳು ಇಲ್ಲವೆಂದಾದರೆ, ನೀವು ನಿಮ್ಮಷ್ಟಕ್ಕೇ ಬದುಕಿದ್ದರೆ ಆರಾಮವಾಗಿ ಇರಬಹುದು. ನಿಮನ್ನು ನಾಯಿಯೂ ಮೂಸುವುದಿಲ್ಲ. ಆದರೂ, ನಿಮ್ಮ ಪಾಡಿಗೆ ನೀವಿದ್ದರೂ ಸುರಕ್ಷಿತ ಎಂದು ಭಾವಿಸಲಾಗದು. ನೀವು ದೊಡ್ಡ ದೇಹದವರೆಂದೋ, ನೋಡಲು ಚೆನ್ನಾಗಿದ್ದೀರಿ ಎಂದೋ, ಹೊಸದಾಗಿ ಚಪ್ಪಲಿ ಅಥವಾ ಬೈಕ್ ತೆಗೆದುಕೊಂಡಿದ್ದೀರಿ ಎಂದೋ, ಶಾಲೆಯಲ್ಲಿ ತುಂಬಾ ಚೆನ್ನಾಗಿ ಕಲಿಯುತ್ತೀರಿ ಎಂದೋ, ನಿಮ್ಮ ಗಂಡ ಅಥವಾ ಹೆಂಡತಿಗೆ ನೀವಿನ್ನು ಇಷ್ಟವಿಲ್ಲ ಎಂದೋ, ಅಥವಾ ನೀವು “ಕೆಳಜಾತಿ” ದಲಿತರೆಂದೋ, ಮುಸ್ಲಿಮ್, ಕ್ರೈಸ್ತ ರೆಂದೋ, ಅಥವಾ ಬಡವ, ಹಿಂದೂ ಎಂದೋ ನಿಮ್ಮ ಮೇಲೆ ದಾಳಿಗಳು ನಡೆಯಬಹುದು. ಆಗ ನೀವೇನು ಮಾಡುತ್ತಿರಿ? ಒಂದೋ ಒಗ್ಗಟ್ಟಾಗುತ್ತೀರಿ. ಇಲ್ಲವೇ ಇನ್ನೊಬ್ಬ ಬಲಿಷ್ಟ ವ್ಯಕ್ತಿಯ ಜೊತೆ ಸೇರುತ್ತೀರಿ- ಆತ ನಿಮ್ಮನ್ನು ನಾಯಿಗಿಂತ ಕೀಳಾಗಿ ಕಂಡರೂ ಪರವಾಗಿಲ್ಲ. ಶತ್ರುವಿನ ಶತ್ರು ನನ್ನ ಮಿತ್ರ.

ದೇಶ-ದೇಶಗಳ ಕತೆಯೂ ಹೀಗೆಯೇ. ಪ್ರಪಂಚದಲ್ಲಿ ಹಲವಾರು ದೊಡ್ಡ ದೇಶಗಳೂ ಇವೆ. ಪುಟ್ಟ ದೇಶಗಳೂ ಇವೆ. ಶ್ರೀಮಂತ ದೇಶಗಳಿವೆ. ಬಡದೇಶಗಳೂ ಇವೆ. ಊಟಕ್ಕೆ ಗತಿ ಇಲ್ಲದಿದ್ದರೂ ದೇಶಪ್ರೇಮಕ್ಕೆ ನಮ್ಮಲ್ಲಿ ಕೊರತೆಯಿಲ್ಲ . ಯುದ್ಧಗಳು ಇತಿಹಾಸದ ಉದ್ದಕ್ಕೂ ನಡೆದಿವೆ. ಬಲಿಷ್ಟ ರಾಷ್ಟ್ರಗಳು ಬಡ ರಾಷ್ಟ್ರಗಳನ್ನು ಬಡಿದೋ, ಒಲಿಸಿಯೋ ತಮ್ಮ ಮಿತ್ರ ರಾಷ್ಟ್ರಗಳನ್ನಾಗಿ ಮಾಡುತ್ತವೆ. ಹಾಗೆಂದು ಪ್ರಪಂಚದಲ್ಲಿ ಇಂದು ನಾಮ್ ಕಾ ವಾಸ್ತೆ ಪ್ರಜಾಪ್ರಭುತ್ವದಿಂದ ಹಿಡಿದು ರಾಜಪ್ರಭುತ್ವ, ಸರ್ವಾಧಿಕಾರದ ವರೆಗೆ ಎಲ್ಲಾ ರೀತಿಯ ಪ್ರಭುತ್ವಗಳಿವೆ. ಚೀನಾದಂತಹ ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುವ ಅಧಿಕಾರಶಾಹಿ ಸರ್ವಾಧಿಕಾರವಿರುವ ದೇಶಗಳಿದ್ದರೂ ಇಂದು ರಾಜ್ಯಭಾರ ಇರುವುದು ಬಂಡವಾಳಶಾಹಿ ವ್ಯವಸ್ಥೆಯ ಅಡಿಯಲ್ಲಿಯೇ ಮತ್ತು ಬಂಡವಾಳದ ಅಡಿಯಲ್ಲಿಯೇ. ಅದಕ್ಕಾಗಿಯೇ ಎಲ್ಲಾ ಯುದ್ಧಗಳು, ಕ್ರಾಂತಿಗಳು ನಡೆಯುತ್ತವೆ. ಮುಖ್ಯವಾಗಿ ಇರುವುದು ದೇಶದ ನಿಯಂತ್ರಣ, ಅಧಿಕಾರದ ನಿಯಂತ್ರಣ ಮತ್ತು ಬಂಡವಾಳಶಾಹಿಗೆ ಪೂರಕವಾದ ವ್ಯವಸ್ಥೆ ರೂಪಿಸುವುದು. ಹಿಂದಿನಿಂದಲೂ ಅಧಿಕಾರಸ್ಥರು ಅಧಿಕಾರಸ್ಥರಾಗಿಯೇ ಉಳಿಯುವುದು. ಬಂಡವಾಳಕ್ಕೆ ಧರ್ಮವಿಲ್ಲ, ಜಾತಿಯಿಲ್ಲ, ಲಿಂಗವಿಲ್ಲ.

ಹಾಗೆಂದೇ ದೊಡ್ಡ ಬಂಡವಾಳಶಾಹಿ ದೇಶಗಳು ಎಷ್ಟು ಪುಟ್ಟ ರಾಷ್ಟ್ರಗಳನ್ನು ದಮನಿಸಿಲ್ಲ, ಒಲಿಸಿಲ್ಲ? ಉದಾಹರಣೆಗೆ ಯುಎಸ್ಎ, ಯುಕೆ ಮತ್ತು ಒಟ್ಟಾಗಿ ಹೇಳುವುದಾದರೆ, ಐರೋಪ್ಯ ಒಕ್ಕೂಟ ಎಷ್ಟು ದೇಶಗಳಲ್ಲಿ ಕೈಯಾಡಿಸಿವೆ? ಎಷ್ಟು ಯುದ್ಧಗಳನ್ನು, ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿವೆ? ಉದ್ದೇಶ ಏನು? ಉದ್ದೇಶ ಇಷ್ಟೇ, ಹೆಚ್ಚೇನಿಲ್ಲ. ಅದೆಂದರೆ, ಜಾಗತಿಕವಾಗಿ ಪ್ರಜಾಪ್ರಭುತ್ವ ಮತ್ತು ನ್ಯಾಯ ಇದೆ ಎಂದು ತೋರಿಸಬೇಕಾದ ಬಂಡವಾಳಶಾಹಿ ಅಗತ್ಯಕ್ಕೆ ತಕ್ಕಂತೆ ರೂಪು ಗೊಂಡಿರುವಂತದ್ದು. ಆದೇ ವಿಶ್ವಸಂಸ್ಥೆ . ಅಲ್ಲಿ ಮತಗಳು ಬೇಕು. ಅಲ್ಲಿ ಹೆಚ್ಚಿನ ಬಂಡವಾಳದ ದೇಶಗಳಿಗೆ ವಿಟೋ ಆಧಿಕಾರವಿದೆ. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತಕ್ಕೆ ಇಲ್ಲ. ಹೀಗಾಗಿಯೇ ಪುಟ್ಟ ರಾಷ್ಟ್ರಗಳನ್ನೂ ಓಲೈಸಬೇಕಾಗುತ್ತದೆ. ಯಾಕೆಂದರೆ, ಭಾರತಕ್ಕೂ ಒಂದು ಓಟು. ವೋದಿ ಕೆಂಗಣ್ಣು ತೋರಿಸಿರುವ ಮಾಲ್ದೀವ್ಸ್‌ಗೂ ಒಂದೇ ಓಟು.

ಹಾಗಾಗಿಯೇ, ಚೀನಾದಂತಹ ಕಮ್ಯುನಿಸ್ಟ್ ಹೆಸರಿನ ಅಧಿಕಾರಸ್ದ ಬಂಡವಾಳಶಾಹಿಯ ನಾಯಕನ ಜೊತೆ ಉಯ್ಯಾಲೆಯಾಟ ಆಡಿ, ಅಲ್ಲಿ ತನ್ನ ಧಣಿಯಾದ ಆಡಾಣಿಯ ಬಂಡವಾಳಕ್ಕೆ ಚಾಪೆ ಹಾಸಿ, ಹುಸಿಕೆಂಗಣ್ಣು ಬೀರುವ ಒಬ್ಬ ನಾಯಕ ೧೨೦೦ರಷ್ಟು ದ್ವೀಪ, ನಡುಗಡ್ಡೆ (atol) ಹೊಂದಿದ್ದರೂ, ನಮ್ಮ ಆಂದಾಜಿಗೆ ಎಲ್ಲಾ ಸೇರಿಸಿ ನಮ್ಮ ದಕ್ಷಿಣ ಕನ್ನಡದ ವಿಸ್ತಾರ ಇರುವ ಮಾಲ್ದೀವ್ಸ್ ಮೇಲೆ ಯಾಕೆ ಕೆಂಗಣ್ಣು ಬೀರುತ್ತಿದ್ದಾನೆ? ಇದು ಹಿನ್ನೆಲೆ.

ಬಹಳ ಹಿಂದೆ ಐದು ಲಕ್ಷ ಆಸುಪಾಸು ಜನರಿದ್ದ ಪುಟ್ಟ ಮಾಲ್ದೀವ್ಸ್ ಮೇಲೆ ಬಾಹ್ಯ ಒತ್ತಡ ಹೇರಿ ಅಥವಾ ಅಲ್ಲಿ ಕೈಗೊಂಬೆ ಸರಕಾರ ಸ್ಥಾಪಿಸಿ ಅದರ ಮೇಲೆ ನಿಯಂತ್ರಣ ಸ್ಥಾಪಿಸಬಹುದು ಎಂದು ಬಹಳಷ್ಟು ದೇಶಗಳು ಚಿಂತಿಸಿರಬಹುದು. ಆದರೆ, ಮಾಲ್ದೀವ್ಸ್‌ಗೆ ಇರುವ ಎರಡು ದೊಡ್ಡ ರಾಷ್ಟ್ರಗಳೆಂದರೆ ಶ್ರೀಲಂಕಾ ಮತ್ತು ಭಾರತ. ಆ ಚಿಕ್ಕದೇಶವು ಭಾರತವನ್ನು ಅಣ್ಣನಂತೆಯೇ ನೆಚ್ಚಿಕೊಂಡಿತ್ತು- ನೆಹರೂ ಕಾಲದಿಂದಲೂ. ಹಾಗಾಯಿಯೇ ಭಾರತ ಆ ದೇಶಕ್ಕೆ ಎಲ್ಲಾ ರೀತಿಯ ಸಹಕಾರಗಳನ್ನು ಒದಗಿಸಿದೆ.

ಈ ಅಪರೇಷನ್ ಕ್ಯಾಕ್ಟಸ್ ಎಂಬ ತಲೆಬರಹ ನಿಮ್ಮ ತಲೆಕಡಿಸಲೆಂದೇ ಕೊಟ್ಟದ್ದು. ನಾನು ಆದರ ಬಗ್ಗೆ ಬರೆದುದನ್ನು ಹೊರಗೂಇಟ್ಟು ಬೇರೆಯೇ ಬರೆಯುತ್ತಿದ್ದೇನೆ.
ಯಾಕೆಂದರೆ, ಮೋದಿಯವರು ತಾವೇ ಮಾಡಿದಂತೆ ಭಾರತೀಯ ಸೈನಿಕರು ಮಾಡಿದ ಒಂದು ಕಾರ್ಯಾಚರಣೆಯ ಶ್ರೇಯವನ್ನು ಆ ಧೀರ ಸೈನಿಕರಿಂದ ಕಿತ್ತು ಕೊಂಡರು. ಅದನ್ನು ತೋರಿಸಲು ಅವರ ಭಕ್ತರು ವಿಡಿಯೋ ಗೇಮೊಂದರ ಫೂಟೇಜ್ ಹಾಕಿದ್ದರು. ಎಲ್ಲಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿ, ರಾಜೀವ್ ಗಾಂಧಿ ಮಾಡಿದ ಒಂದು ಸರ್ಜಿಕಲ್ ಸ್ಟ್ರೈಕ್ ಮನಸ್ಸಿನಲ್ಲಿ ಉಳಿಯಬೇಕಾದು. ಆದೆಂದರೆ, “ಅಪರೇಷನ್ ಕ್ಯಾಕ್ಟಸ್ ” ಯಾಕೆಂದರೆ, ಮೂರು ದಶಕಗಳ ಹಿಂದೆ ಅವರು, ಮಾಡಿದ್ದನ್ನು ಹೇಳಿಕೊಳ್ಳಲಿಲ್ಲ. ಅದಕ್ಕಾಗಿಯೇ “ಅ ಮೇಲಿರುವ ಶೀರ್ಷಿಕೆಯಂತೆಯೇ, ಅವರು ಹೇಳಿದಂತೆಯೇ “ನನ್ನದೇನಿಲ್ಲ, ಸಾಹಸ, ಧೈರ್ಯ ಸೈನಿಕರದ್ದು”. ಆದುದರಿಂದ ನನದನ್ನು ವಿವರವಾಗಿ ಬರಿದ್ದರೂ, ಇಲ್ಲಿ ಹಾಕಿಲ್ಲ. ಮೋದಿ ಎಂಬ ಮಹಾನ್ ಸೈನಿಕನಿಗೆ ಒಂದು ಹೇಳಬೇಕು: ರಾಜೀವ್ ಕಾಲದ ಈ “ಅಪರೇಷನ್ ಕ್ಯಾಕ್ಟಸ್ ‘ ರೀತಿ ಬಾಂಗ್ಲಾದಲ್ಲಿ “ಅಪರೇಷನ್ ಕ್ಯಾಕ್ಟಸ್ ಲಿಲ್ಲಿ” ನಡೆದಿತ್ತು ಇಂದಿರಾ ಗಾಂಧಿ ಕಾಲದಲ್ಲಿ. ಅವರ್ಯಾರೂ ನಾಚಿಕೆಗೆಟ್ಟು ಭಾರತೀಯ ಸೈನಿಕರ ತ್ಯಾಗ ಬಲಿದಾನದ ಶ್ರೇಯಸ್ಸನ್ನು ಕದ್ದಿಲ್ಲ.

ಆದರೂ, ಈ ಬಗ್ಗೆ ಏನೇನೂ ತಿಳಿಯದ ಹೊಸ ಓದುಗರಿಗಾಗಿ ಕಳೆದ ಬೊಗಸೆಯ ಸೋರಿ ಹೋದ. “ಆಪರೇಷನ್ ಕ್ಯಾಕ್ಟಸ್” ಬಗ್ಗೆ ಸ್ವಲ್ಪ ಹಾಕುತ್ತಿದ್ದೇನೆ:

ಚುಟುಕಾಗಿ ಹೇಳುವುದಾದಲ್ಲಿ ೧೯೮೮ರ ನವೆಂಬರ್‌ನಲ್ಲಿ ಮಾಲ್ದೀವ್ಸ್‌ನ ಉದ್ಯಮಿ ಅಬ್ದುಲ್ಲಾ ಲುತುಫಿ ಎಂಬಾತ ಶ್ರೀಲಂಕಾದ ಪೀಪಲ್ಸ್ ಲಿಬರೇಷನ್ ಆರ್ಗನೈಸೇಷನ್ ಆಫ್ ತಮಿಳ್ ಈಳಂ (PLOTE)ನ ಸಶಸ್ತ್ರ ಬಾಡಿಗೆ ಸೈನಿಕರ ನೆರವಿನಿಂದ ದಂಗೆ ನಡೆಸಿದ್ದ. ಅಪಹರಿಸಲಾದ ಶ್ರೀಲಂಕಾ ಹಡಗುಗೊಂದರಲ್ಲಿ ಬಂದ ನೂರಕ್ಕೂ ಮೀರಿದ ಈ ಬಾಡಿಗೆ ಸೈನಿಕರು ಸ್ಪೀಡ್ ಬೋಟುಗಳಲ್ಲಿ ಇಳಿದು ಕೆಲವೇ ಗಂಟೆಗಳಲ್ಲಿ ಸರಕಾರಿ ಕಚೇರಿಗಳು, ವಿಮಾನ ನಿಲ್ದಾಣ, ಟಿವಿ ಕೇಂದ್ರ ಇತ್ಯಾದಿ ಎಲ್ಲವನ್ನೂ ವಶಕ್ಕೆ ಪಡೆದಿದ್ದರು. ಹಲವರನ್ನು ಒತ್ತೆಸೆರೆ ಇರಿಸಿದ್ದರು. ಆಗ ಭದ್ರತಾಪಡೆಗಳ ರಕ್ಷಣೆಯಲ್ಲಿ ಅಡಗಿದ್ದ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ಗಯೂಂ ಅವರು ಯುಎಸ್‌ಎ, ಬ್ರಿಟನ್, ಪಾಕಿಸ್ತಾನ, ಸಿಂಗಾಪುರ ಮುಂತಾದ ದೇಶಗಳನ್ನು ಸಂಪರ್ಕಿಸಿ ರಕ್ಷಣೆಗಾಗಿ ಮೊರೆಯಿಟ್ಟಿದ್ದರು. ಎಲ್ಲರೂ ಒಂದಲ್ಲ ಒಂದು ನೆಪ ಹೇಳಿ ಕೈಚೆಲ್ಲಿದ್ದರು. ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಮಾತ್ರವೇ ಸಾಂಪ್ರದಾಯಿಕ ಮಿತ್ರರಾಷ್ಟ್ರದ ರಕ್ಷಣೆಗೆ ಮುಂದಾಗಿ, ಭಾರತೀಯ ಸೇನಾಪಡೆಯ ಕಮಾಂಡೋ ಪಡೆಗಳನ್ನು ೧6 ಗಂಟೆಗಳ ಒಳಗಾಗಿ ಅಲ್ಲಿಗೆ ಕಳಿಸಿದ್ದರು.

“ಅಪರೇಷನ್ ಕ್ಯಾಕ್ಟಸ್ ” ಎಂಬ ಹೆಸರಿನಲ್ಲಿ ನಡೆದ ಈ ಅಪ್ಪಟ ಸರ್ಜಿಕಲ್ ಸ್ಟ್ರೈಕ್‌ನಲ್ಲಿ 50ನೇ ಇಂಡಿಪೆಂಡೆಂಟ್ ಪ್ಯಾರಾಚೂಟ್ ಬ್ರಿಗೇಡಿನ ಕಮಾಂಡೋಗಳು ಬ್ರಿಗೇಡಿಯರ್ ಫಾರೂಕ್ ಬುಲ್ಸಾರ ನೇತೃತ್ವದಲ್ಲಿ ವಾಯುಪಡೆಯ ಇಲ್ಯುಷಿನ್ ಐಎಲ್ 76 ವಿಮಾನದಲ್ಲಿ 2000 ಕಿ.ಮೀ ಪ್ರಯಾಣಿಸಿ, ಬಂಡುಕೋರರನ್ನು ಬಗ್ಗುಬಡಿದಿದ್ದರು. ಹಲವರನ್ನು ಕೊಂದು, ಅನೇಕರನ್ನು ಸೆರೆಹಿಡಿದು, ಒತ್ತೆಯಾಳುಗಳನ್ನು ಬಿಡಿಸಿದ್ದರು. ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದ ಮಾಲ್ದೀವ್ಸನ್ನು ಉಳಿಸಿದ್ದರು. ಅಪಹೃತ ಹಡಗಿನಲ್ಲಿ ಶ್ರೀಲಂಕಾಗೆ ಓಡಿಹೋಗುತ್ತಿದ್ದ ಉಳಿದ ಬಂಡುಕೋರರನ್ನು ಐಎನ್‌ಎಸ್ ಗೋದಾವರಿ ನೇತೃತ್ವದಲ್ಲಿ ನೌಕಾಪಡೆಯ ಹಡಗುಗಳು ಸುತ್ತುವರಿದು ಎಲ್ಲರನ್ನೂ ಬಂಧಿಸಲಾಗಿತ್ತು. ಭಾರತದ ಈ ಕ್ರಮವನ್ನು ಯುಎಸ್ಎ, ಬ್ರಿಟನ್‌ನಂತಹ ಬಲಿಷ್ಟ ರಾಷ್ಟ್ರಗಳು, ಇಂತಹ ಅಪಾಯ ಎದುರಿಸುತ್ತಿರುವ ಪುಟ್ಟ ದೇಶಗಳು, ನಮ್ಮ ನೆರೆಯ ಚಿಕ್ಕ ದೇಶಗಳು ಕೂಡಾ ಶ್ಲಾಘಿಸಿದ್ದವು.

ಒಬ್ಬ ನಾಯಕನ ನಿರ್ಣಾಯಕ ನಿರ್ಧಾರ ಎನ್ನುವುದು ಇದನ್ನೇ. ಆ ನಂತರವೇ ಮಾಲ್ದೀವ್ಸ್ ಭಾರತಕ್ಕೆ ಇನ್ನಷ್ಟು ಹತ್ತಿರ ಬಂತು. ಮೋದಿ ಬಂಟರೀಗ ಅದನ್ನು ಹಾಳುಗೆಡಹುತ್ತಾ ಆದನ್ನು ಚೀನಾದ ಕಡೆಗೆ ತಳ್ಳುತ್ತಿದ್ದಾರೆ. ಆಗ ರಾಜೀವ್‌ ಗಾಂಧಿಯವರು ಈ ಕುರಿತು ತನ್ನ ಬೆನ್ನನ್ನು ತಾನೇ ಕೆರೆದುಕೊಳ್ಳಲಿಲ್ಲ, ಭಟ್ಟಂಗಿಗಳಿಂದ ಕೆರೆಸಿಕೊಳ್ಳಲೂ ಇಲ್ಲ.

ಎಷ್ಟೆಂದರೂ ಒಬ್ಬ ಪ್ರಜಾಪ್ರಭುತ್ವವಾದಿ ನಾಯಕನಿಗೂ, ಸರ್ವಾಧಿಕಾರಿ ಪ್ರಚಾರಮೋಹಿ ನಾಯಕನಿಗೂ ಆನೆ ಆಡಿನ ವ್ಯತ್ಯಾಸ ಇರಲೇಬೇಕಲ್ಲವೆ!? ನನಗೆ ಯುದ್ಧವನ್ನು ವಿಜ್ರಂಭಿಸುವ ಇಲ್ಲದಿರುವುದರಿಂದ, “ಅಪರೇಷನ್ ಕ್ಯಾಕ್ಟಸ್” ಬಗ್ಗೆ ರಕ್ತಮಾಂಸಗಳ ವಿವರಗಳನ್ನು ಕೈಬಿಟ್ಟು ಮತ್ತೊಮ್ಮೆ ಬರೆದೆ.

ಮುನ್ನೆಲೆ ಏನೆಂದರೆ, ಸಾಂಪ್ರದಾಯಿಕವಾಗಿ, ರಾಜತಾಂತ್ರಿಕವಾಗಿ ಭಾರತದ ಗೆಳೆಯರಾಗಿದಾದ ನೇಪಾಳ, ಭೂತಾನ, ಶ್ರೀಲಂಕಾ ಸಹಿತ ASEAN ದೇಶಗಳ ಸಹಿತ ಎಲ್ಲರನ್ನೂ ಹಿಂದೂ ಶ್ರೇಷ್ಟತೆಯ ಹೆಸರಲ್ಲಿ ಅವಮಾನ ಮಾಡಿ ಈಗ ಮಾಲ್ದೀವ್ಸನ್ನು ಕೂಡಾ ಶತ್ರು ರಾಷ್ಟ್ರ ಮಾಡಿದ್ದೇ ಮೋದಿಯ ಸಾಧನೆ. ಈಗ ಮಾಲ್ದೀವ್ಸ್ ಮೇಲೆ ರೋಗಗ್ರಸ್ಥ ಕೆಂಗಣ್ಣು ಬೀರಲು ಕಾರಣ ಅದೂ ಮುಸ್ಲಿಮರೇ ಹೆಚ್ಚಾಗಿರುವ ದೇಶ ಎಂಬುದು. ಇದು ವಿನಾಶಕಾರಿ ಮತ್ತು ಭಾರತವು ವಿಶ್ವಗುರುವಿನ ಬದಲು ವಿಶ್ವಕುರುವಾಗುವ ಲಕ್ಷಣ! ಒಬ್ಬ ಶೋಕಿಲಾಲನಿಂದಾಗಿ ದೇಶವೇ ಸಂಕಷ್ಟಕ್ಕೆ ಸಿಲುಕಲಿದೆ.

You cannot copy content of this page

Exit mobile version