Thursday, June 20, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು : ತೆರೆಯ ಗುರುಗಳಂತೆ, ಮರೆಯ ಗುರುಗಳನ್ನು ಮರೆಯುವುದುಂಟೇ?!

ಬೇರೇನನ್ನೋ ಬರೆಯಬೇಕೆಂದು ಯೋಚಿಸಿದ್ದ ನಾನು, ಈ ಒಂದು ತಲೆಬರಹ ಹಿಡಿದುಕೊಂಡು ಬರೆಯಲು ಹೊರಟದ್ದಕ್ಕೆ ಕಾರಣ- ಮೊನ್ನೆ ತಾನೇ ಎಂಬಂತೆ ಕಾಲವಾದ ನನ್ನ ಹಲವಾರು ತೆರೆಮರೆಯ ಗುರುಗಳಲ್ಲಿ ದೊಡ್ಡ ಸ್ಥಾನದಲ್ಲಿ ಯಾವತ್ತೂ ಇರುವ ಅಮೃತ ಸೋಮೇಶ್ವರರು. ಅವರ ನಿಧನದ ಸುದ್ದಿ “ಫೇಸ್‌ಬುಕ್” ಮಾಧ್ಯಮದಲ್ಲಿ ನೋಡಿದ ನಾನು ತೀರಾ ಮಂಕಾದೆ. ಸಾವು, ಅದರಲ್ಲೂ ವಯೋವೃದ್ಧರಾದವರ ಸಾವು ಸಹಜ ಸತ್ಯವಾದುರಿಂದ ವಿಷಾದದ ಹೊರತಾಗಿ ನಾನು ಬಹಳಷ್ಟೇನೂ ಮರುಗಲಿಲ್ಲ. ಬಹಳಷ್ಟು ಹಿರಿಯರು ಮತ್ತು ಗೆಳೆಯರು ಬರೆದ ಅವರ ಜೀವನ ಚಿತ್ರಣಗಳನ್ನು ಓದಿದೆ. ಅವರಲ್ಲಿ ಅಮೃತರ ಜೊತೆಗೆ ನೇರ ಒಡನಾಟವಿದ್ದ ಪುರುಷೋತ್ತಮ ಬಿಳಿಮಲೆಯವರು ಮತ್ತು ಶ್ರೀನಿವಾಸ ಕಾರ್ಕಳ ಅವರು ಬರೆದದ್ದು- ಅಮೃತರ ವ್ಯಕ್ತಿತ್ವ ಏನಾಗಿತ್ತು ಎಂಬ ನನ್ನ ಕಲ್ಪನೆಗೆ ತೀರಾ ಹತ್ತಿರವಾಗಿತ್ತು.

“ಓಂಶಾತಿ” ಇತ್ಯಾದಿ ಶಿಷ್ಟಾಚಾರಗಳಿಗೆ ಎಂದೂ ಒಗ್ಗದ ನಾನು- ಒಂದು ವಿಷಾದದ ಛಾಯೆ, ಎಲ್ಲೋ ಒಂದು ಮೂಲೆಯಲ್ಲಿ ಉದುರುವ ಕೆಲವು ಹನಿ ಕಣ್ಣೀರು, ಮತ್ತು ನಿರಂತರ ನೆನಪೇ ನಿಜವಾದ ಶ್ರದ್ಧಾಂಜಲಿ ಎಂದು ಭಾವಿಸಿದ್ದೇನೆ. ಹೌದು, ಬರೆಯಲು ಗೊತ್ತಿರುವವರು ಅಗಲಿದವರ ಬಗ್ಗೆ ಅವರವರ ಅನುಭವಗಳನ್ನು ಬರೆದು ನಾಲ್ಕು ಜನರಿಗೆ ತಿಳಿಸುವುದು ಕೂಡಾ ಒಳ್ಳೆಯ ಶ್ರದ್ಧಾಂಜಲಿಯೇ. ಆದರೆ, ನಾನೇನು ಬರೆಯಲಿ? ನನಗೇನೂ ಅವರ ನೇರ ಒಡನಾಟವಿರಲಿಲ್ಲ! ನಿಮ್ಮಲ್ಲಿ ಕೆಲವರಿಗೆ ಗೊತ್ತಿರುವಂತೆ ನಿತ್ಯ ಸಾವುಗಳನ್ನು ಕಂಡು, ಕೇಳಿ ಅನುಭವ ಇರುವವರಿಗೆ (ನನ್ನ ಹಳೆಯ ಬ್ರಾಹ್ಮಣ ಗುರುಗಳ ಭಾಷೆಯಲ್ಲಿ ಹೇಳುವುದಾದರೆ, ಅನುಗ್ರಹಿತ ಮತ್ತು ಶಾಪಿತ ವೃತ್ತಿಯಲ್ಲಿ ಇರುವವರಿಗೆ) ಸಾವು ಒಮ್ಮೆಗೇ ತಟ್ಟುವುದಿಲ್ಲ. ಆ ಹೊತ್ತಿನಲ್ಲಿ ಕಲ್ಲಿನಂತೆ ಶೋ ಮಾಡುವವರೂ ಮುಂದೊಂದು ದಿನ ಸಾವಿನ, ಸತ್ತವರ ನೆನಪು ಹುಚ್ಚು ಕುದುರೆಯಂತೆ ಎದೆಗೆ ಒದ್ದಾಗ, ಬಿಕ್ಕಿಬಿಕ್ಕಿ ಅಳುತ್ತಾರೆ. ನನಗೆ ಹೀಗೆಯೇ ಆಗಿತ್ತು- ನನ್ನ ತಂದೆ ಸತ್ತಾಗ. ಅಮೃತರು ನನ್ನ ಮೇಲೆ ಬೀರಿದ ಪ್ರಭಾವ ಎಂತದ್ದೆಂದು ಅರ್ಥವಾದದ್ದು ಇಂತಹ ಕ್ಷಣದಲ್ಲೇ. ನನ್ನ ತೆರೆಮರೆಯ ಗುರುಗಳೆಲ್ಲರ ವಿಷಯದಲ್ಲಿಯೂ ಇದೇ ಆಗಿದೆ.

ಹೀಗಿರುತ್ತಾ, ನಾನು ಪ್ರತಿಕ್ರಿಯೆ ನೀಡುತ್ತಾ ಬರೆದದ್ದು, ಎರಡೇ ಮಾತಾಗಿತ್ತು. ಅದೆಂದರೆ, ತುಳುನಾಡಿನ ದೈವಗಳ ಬಗ್ಗೆ ಆಸ್ಥೆ ಇರುವಾಗಲೇ, ಅವುಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿ, ಬರೆಯುವ ಅವರ ಧೈರ್ಯ ನನಗೆ ಇಷ್ಟ ಎಂದು. ಇಂತಹ ಧೈರ್ಯ ಮತ್ತು ನಾನು ಬಾಲ್ಯದಿಂದಲೂ ಜೊತೆಜೊತೆಗೇ ಬೆಳೆದುಬಂದ ದೈವ ಬೂತಗಳ ಬಗ್ಗೆ ಐತಿಹಾಸಿಕ ಮತ್ತು ಜನಮನದ ದೃಷ್ಟಿಯಿಂದ ನೋಡುವ, ಮತ್ತು ಬರೇ “ಆರ್ನಾಕ್ಲಿ ಇಪ್ಪತ್ನಾಲು” ಎನ್ನುವ ವಿಜ್ಞಾನದ ದೃಷ್ಟಿಯಿಂದ ನೋಡದೇ ಕೆಲವರಿಗೆ “ಆರ್ನಾಕ್ಲಿ ಹತ್ತು” ಅಥವಾ ಇನ್ನೇನೂ ಆಗಲೂ ಸಾಧ್ಯವಿದೆ ಎಂಬ ಮನೋವೈಜ್ಞಾನಿಕ ದೃಷ್ಟಿಯಿಂದ ನೋಡಲೂ ಸಾಧ್ಯ ಎಂದು ಕಲಿಸಿದ್ದು ಅವರ ಬರವಣಿಗೆಯೇ! ಆದುದರಿಂದಲೇ ಅವರು ನನ್ನ ಗುರುಗಳಾಗಿ ನಮ್ಮ ದೈವಗಳಂತೆಯೇ ಎದೆಯಲ್ಲಿ ಕುಳಿತದ್ದು.

ನಾನು ಹಲವು ಸಲ ವೇದಿಕೆಗಳಲ್ಲಿ ಅವರನ್ನು ನೋಡಿದ್ದೇನಾದರೂ, ನನ್ನ ಸ್ವಭಾವಕ್ಕೆ ಅನುಗುಣವಾಗಿ ಯಾವತ್ತೂ ಮಾತನಾಡಿಸಲು ಹೋಗಿರಲೇ ಇಲ್ಲ. ನಾನು ಮೆಚ್ಚಿಕೊಂಡಿದ್ದ ಕಾರಂತರು ಮತ್ತು ಪೂರ್ಣಚಂದ್ರ ತೇಜಸ್ವಿಯವರನ್ನು ಒಮ್ಮೆಯಾದರೂ ಭೇಟಿ ಮಾಡಿ ಮಾತನಾಡಿಸಬೇಕು ಎಂಬ ಆಸೆ ಮೂಗಿನ ವರೆಗೆ ಇದ್ದರೂ, ಅವಕಾಶವಿದ್ದರೂ, ಕೊನೆಯ ತನಕವೂ ಮಾತನಾಡಿಸುವ ಧೈರ್ಯ ಆಗಿರಲೇ ಇಲ್ಲ. ಹಾಗೆ ನಾನು ಮಾತನಾಡಿಸಿ, ಪಟ್ಟಾಂಗ ಹೊಡೆದ ಇಬ್ಬರೇ ಇಬ್ಬರು ಎಂದರೆ, ಮುಂಬಯಿಯಲ್ಲಿ ಇದ್ದಾಗ ಯಶವಂತ ಚಿತ್ತಾಲರು ಮತ್ತು ಮೈಸೂರಿನಲ್ಲಿ ಇದ್ದಾಗ ದೇವನೂರ ಮಹಾದೇವರು ಮಾತ್ರ. ಇವರೂ ನನ್ನ ತೆರೆಮರೆಯ ಗುರುಗಳೇ. ನಾನು ಅಮೃತ ಸೋಮೇಶ್ವರರ ಮನೆಗೆ ಹೋಗಿ ಮಾತನಾಡಿಸಿದ್ದು ಎರಡೇ ಎರಡು ಬಾರಿ. ಒಮ್ಮೆ 1990ರ ದಶಕದ ಕೊನೆಯ ಭಾಗದಲ್ಲಿ “ಜನವಾಹಿನಿ” ಪತ್ರಿಕೆ ಆರಂಭವಾದ ಸಂದರ್ಭದಲ್ಲಿ. ಆರಂಭಕ್ಕೆ ತಿಂಗಳುಗಳ ಮುನ್ನವೇ ಸಿದ್ಧತೆ ನಡೆಸಿದ್ದ ನಾವು, ಅವಿಭಜಿತ ಜಿಲ್ಲೆಯ ಎಲ್ಲಾ ಪ್ರಮುಖರ ಮನೆಗೆ ಹೋಗಿ, ವಿಷಯ ತಿಳಿಸಿ ಮಾತನಾಡುವ ಕಾರ್ಯಕ್ರಮ ಇಟ್ಟಕೊಂಡಿದ್ದೆವು. ಆಗ ಗೆಳೆಯ ಎನ್‌ಎಎಂ ಇಸ್ಮಾಯಿಲ್ ಮತ್ತಿತರರ ಜೊತೆಗೆ ಅವರ ಮನೆಗೆ ಹೋಗಿ ಮಾತನಾಡಿಸಿದ್ದೆವು. ಮತ್ತೊಮ್ಮೆ 20004ರಲ್ಲಿ ಇರಬೇಕು- ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರವು ರಾಜ್ಯ ಸರಕಾರಕ್ಕಾಗಿ “ಕರ್ನಾಟಕದಲ್ಲಿ ಅಮಾನವೀಯ ಪದ್ಧತಿಗಳ ದಾಖಲಾತಿ” ಎಂಬ ಕಿರು ಯೋಜನೆಯಲ್ಲಿ ಮುಖ್ಯ ಸಂಯೋಜಕನಾಗಿದ್ದಾಗ, ಕರಾವಳಿಯ ಕೊರಗ ಸಮುದಾಯವನ್ನು ಗುರಿಪಡಿಸಲಾಗಿದ್ದ ಅಜಲು ಪದ್ಧತಿಯ ಕುರಿತು ತಿಳಿಯಲೆಂದು ಅವರನ್ನು ಭೇಟಿ ಮಾಡಿದ್ದೆ. ಎರಡೂ ಸಂದರ್ಭಗಳಲ್ಲಿ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದೆಂದರೆ, ಕಿರಿಯರು ಎಂಬ ಯಾವುದೇ ಅಸಡ್ಡೆ ತೋರದೇ, ಯಾವ ಕಾಲದಿಂದಲೋ ನಾವವರ ಶಿಷ್ಯರೋ ಎಂಬಂತೆ ಮೆಲುದನಿಯಲ್ಲಿ ಚರ್ಚಿಸಿದ, ವಿಚಾರ-ಮಾಹಿತಿಗಳನ್ನು ತಿಳಿಸಿದ ರೀತಿ. ಆಗಲೇ ಒಬ್ಬರು ಗುರುಗಳ ಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿತ್ತು.

ಆದರೆ, ಮಾನಸಿಕವಾಗಿ ಅವರು ಹತ್ತಿರವಾಗಿದ್ದದ್ದು ಅದಕ್ಕಿಂತಲೂ ಬಹಳ ಮೊದಲು. ಚಿಕ್ಕ ಹುಡುಗನಾಗಿದ್ದಾಗ ನಾನು ಮಂಗಳೂರಿನ, ಈಗ ಇಲ್ಲವಾಗಿರುವ “ಜ್ಯೋತಿ” ಚಿತ್ರ ಮಂದಿರದಲ್ಲಿ ವಿಶುಕುಮಾರ್ ಅವರ “ಕೋಟಿ ಚೆನ್ನಯ” ಚಿತ್ರನೋಡಿ, ಭಾರೀ ಪ್ರಭಾವಕ್ಕೆ ಒಳಗಾಗಿದ್ದೆ. ಅದರ ನಿರ್ದೇಶಕರ ಹೆಸರು ನಂತರ ಗೊತ್ತಾದ ಹಾಗೆಯೇ ಅದರಲ್ಲಿನ ಒಂದು ಹಾಡನ್ನು ಬರೆದವರು ಅಮೃತ ಸೋಮೇಶ್ವರರು ಎಂದು ಗೊತ್ತಾದುದೂ ನಂತರವೇ. ಅವರು ನಂತರವೂ ಹಲವಾರು ಸೊಗಸಾದ ಗೀತೆ ಮತ್ತು ಚಿತ್ರಗೀತೆಗಳನ್ನು ಬರೆದಿದ್ದಾರಾದರೂ, “ಜೋಡು ನಂದಾದೀಪ ಬೆಳಗ್ಂಡ್ ತುಳುವ ನಾಡ್‌ದ ಗುಂಡೊಡು..” (ಜೋಡಿ ನಂದಾದೀಪ ಬೆಳಗಿತು ತುಳುವ ನಾಡಿನ ಗುಡಿಯಲಿ) ಎಂಬ ಹಾಡೊಂದು ಕರಾವಳಿಯ ಹಳ್ಳಿಹಳ್ಳಿಯ ಜನರ ನಾಲಿಗೆಯಲ್ಲಿ ನಲಿದಾಡುತ್ತಿತ್ತು. ನಂತರ ಅವರ “ಗೋಂದೋಳು” ನಾಟಕವೂ ಪ್ರಸಿದ್ಧವಾಯಿತು.

ಮುಂದೆ ನಾನು “ಮುಂಗಾರು” ಪತ್ರಿಕೆ ಸೇರಿದಾಗ, ಆಲ್ಲಿ ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಬಿಸಿಬಿಸಿಯಾದ ಹಲವಾರು ಪತ್ರ ಚರ್ಚೆಗಳು ನಡೆಯುತ್ತಿದ್ದವು. ಪ್ರತೀ ದಿನವೂ ನಮ್ಮ ಮೊದಲ ಕುತೂಹಲವೆಂದರೆ, ಯಾರ ಪ್ರತಿಕ್ರಿಯೆ ಬಂದಿದೆ ಎಂದು ನೋಡುವುದಾಗಿತ್ತು. ಆ ಕುರಿತು ನಮ್ಮ ನ್ಯೂಸ್ ಡೆಸ್ಕಿನಲ್ಲಿಯೂ ಬಿಸಿಬಿಸಿ ಚರ್ಚೆ ನಡೆದು ಕೊನೆಗೆ ಬ್ರಾಹ್ಮಣ-ಶೂದ್ರ ಚರ್ಚೆಗೆ ತಿರುಗುತ್ತಿತ್ತು. ಇಂತಹ ಚರ್ಚೆಗಳಲ್ಲಿ ಹಲವಾರು ಹೆಸರುವಾಸಿಯಾದವರು ಭಾಗವಹಿಸುತ್ತಿದ್ದರೂ, ಪ್ರಖ್ಯಾತ ಎನ್ನುವುದಕ್ಕಿಂತ ಕುಖ್ಯಾತ ಎನ್ನಬಹುದಾದ ಚರ್ಚೆಯೊಂದಿತ್ತು. ಒಬ್ಬರು “ಕುರಿ” ಕುಂದಾಪುರ ಎಂಬ ಹೆಸರಿನಲ್ಲಿ ಬರೆಯುತ್ತಿದ್ದರು. ಇವರ ನಿಜ ಹೆಸರೇನು ಎಂದು ನನಗೆ ಇಂದಿಗೂ ಗೊತ್ತಿಲ್ಲ. ಅವರ ಪತ್ರ ಪ್ರಕಟವಾದದ್ದೇ ತಡ, ಪುತ್ತೂರು ಕಡೆಯಿಂದ ನೃತ್ಯ ವಿದ್ವಾಂಸರಾಗಿದ್ದ ಕುದ್ಕಾಡಿ ವಿಶ್ವನಾಥ ರೈ ಅವರ ಪತ್ರ ಬಂದು ಇಬ್ಬರು ಯಕ್ಷಗಾನ ತಾಳಮದ್ದಳೆಯ ವಿರೋಧಿ ಪಾತ್ರಗಳ ಹಾಗೆ ಬಡಿದಾಡಿಕೊಳ್ಳುತ್ತಿದ್ದರು. ನಾನಂತೂ ಇದಕ್ಕೆ “ಕುರಿ-ಕುದ್ಕ ಕಾಳಗ” (ಕುರಿ-ನರಿ ಕಾಳಗ) ಎಂದು ಹೆಸರಿಟ್ಟಿದ್ದೆ. ಅಮೃತ ಸೋಮೇಶ್ವರರು ನಾಡಿನ ಕೆಲವು ಪತ್ರಿಕೆಗಳಿಗೆ ಪತ್ರಗಳನ್ನು ಬರೆಯುತ್ತಿದ್ದರಾದರೂ, ಕ್ಷುಲ್ಲಕ ಚರ್ಚೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೂ, ಕೆಲವು ಸಲ ಏಕಾಏಕಿಯಾಗಿ ಅವರ ಪತ್ರ ಬರುತ್ತಿತ್ತು. ಆಗ ಸುದ್ದಿ ಸಂಪಾದಕರಾಗಿದ್ದ ಮಂಜುನಾಥ ಭಟ್ಟರು ಅವುಗಳನ್ನು ಓದಿ, ನನ್ನತ್ತ ತಳ್ಳಿ, “ಓದಿ. ಅಮೃತರು. ಚರ್ಚೆಯ ಕತೆ ಮುಗಿಯಿತು” ಎನ್ನುತ್ತಿದ್ದರು. ಅಮೃತ ಸೋಮೇಶ್ವರ ಅವರ ಅಭಿಪ್ರಾಯಗಳು ನಿರ್ದಿಷ್ಟವಾಗಿದ್ದು, ವಸ್ತುನಿಷ್ಟವಾಗಿ ಇರುತ್ತಿದ್ದವು. ಅದೇ ರೀತಿಯಲ್ಲಿ ಕದ್ರಿ ಮಂಜುನಾಥ ದೇವಾಲಯವು ಹಿಂದೆ ಬೌದ್ಧ ದೇವಾಲಯವಾಗಿದ್ದ ಕುರಿತು, ಅಲ್ಲಿರುವ ಅವಲೋಕಿತೇಶ್ವರ ವಿಗ್ರಹದ ಕುರಿತು ವಿವಾದಗಳು ಉಂಟಾದಾಗ, ಉಡುಪಿಯ ಕನಕನ ಕಿಂಡಿ ಮತ್ತು ಅಲ್ಲಿರುವ ಎರಡು ವಿಗ್ರಹಗಳ ಕುರಿತು ವಿವಾದಗಳು ಉಂಟಾದಾಗ ಅಮೃತ ಸೋಮೇಶ್ವರು ತೆಗೆದುಕೊಂಡಿದ್ದ ಖಚಿತ, ಗಟ್ಟಿ ನಿಲುವು ನನಗೆ ಇಷ್ಟವಾಗಿತ್ತು. ಸಾಹಿತ್ಯ, ಯಕ್ಷಗಾನ ಮತ್ತು ಇಡೀ ಸಾಂಸ್ಕೃತಿಕ, ಜಾನಪದ ರಂಗದಲ್ಲಿ ಬ್ರಾಹ್ಮಣ್ಯದ ಪ್ರಭಾವವು ದಟ್ಟವಾಗಿದ್ದ ಕಾಲದಲ್ಲಿಯೂ, ವಿನಯಶೀಲತೆಯನ್ನು ಕಾಪಿಟ್ಟಕೊಂಡೇ ದಿಟ್ಟವಾಗಿ ಬರೆಯಲೂ ಧೈರ್ಯ, ಪ್ರಾಮಾಣಿಕತೆ, ನಿಷ್ಟುರತೆ ಬೇಕಿತ್ತು. ಈ ರೀತಿಯ ಚಿಂತನೆಗಾಗಿಯೇ ಅವರು ನನ್ನ ಗುರುಗಳಲ್ಲಿ ಒಬ್ಬರಾದದ್ದು.

ಅಮೃತರು ಕತೆ, ಕಾವ್ಯ, ಗೀತೆ, ನಾಟಕ ಇತ್ಯಾದಿಯಾಗಿ ಬಹಳ ಕೃತಿಗಳನ್ನು ರಚಿಸಿದ್ದಾರಾದರೂ, ನನಗೆ ಬಹಳ ಇಷ್ಟವಾದದ್ದು ತುಳುನಾಡಿನ ಸಂಸ್ಕೃತಿ, ಇಲ್ಲಿನ ದೈವಗಳು- ಅಂದರೆ ಬೂತಗಳ ಬಗ್ಗೆ ಅವರ ಸಂಶೋಧನಾ, ವಿವರಣಾ ಬರಹಗಳು. ಇದರ ಬಗ್ಗೆ ಹಲವಾರು ವಿದ್ವಾಂಸರು ಬರೆದಿದ್ದಾರೆ. ಆದರೆ, ಅಮೃತರು ಅವುಗಳ ಬಗ್ಗೆ ಅಪಾರ ಆಸ್ಥೆ ಇಟ್ಟುಕೊಂಡರೂ, ಆರಾಧನೆಯಲ್ಲಿರುವ ತಾರತಮ್ಯಗಳ, ಶ್ರೇಣೀಕರಣಗಳ, ಕ್ಷುಲಕತನದ ಬಗ್ಗೆಯೂ ಬರೆಯಬಲ್ಲವರಾಗಿದ್ದರು. ಸಾಮಾನ್ಯವಾಗಿ ತುಳುನಾಡಿನವರು ಬೂತಗಳ ಬಗ್ಗೆ ಬರೆದಾಗ ರಕ್ತಗತ ಎಂಬಂತೆ ಒಂದು ರೀತಿಯ ಆರಾಧನಾ ಭಾವ ಹೊಂದಿರುತ್ತಾರೆ. “ಸರ್ವಶಕ್ತ” ಬೂತವು ನಗೆಪಾಟಲಾದ ವಿಷಯವನ್ನು ಬರೆಯಲೂ ಧೈರ್ಯ ಬೇಕು.

ಅವರು ಬರೆದಿರುವ ಅಂತಹ ಒಂದು ಘಟನೆಯನ್ನು ಓದಿ ನಾನು ದಂಗುಬಡಿದು ಹೋಗಿದ್ದೆ. ಯಾಕೆಂದರೆ, ಅದು ನಮ್ಮ ಊರು ಮತ್ತು ನಮ್ಮ ಪೇಟೆಗೇ ಸಂಬಂಧಿಸಿದ್ದಾಗಿತ್ತು. ನಮ್ಮ ಊರು ಎಂದರೆ ನರಿಕೊಂಬು ಎಂಬ ಗ್ರಾಮದಲ್ಲಿ ಮನೆಮನೆಯಲ್ಲಿ ಬೂತದ “ಮಂಚವು” (ಮರದ ಉಯ್ಯಾಲೆ-ತೂಗು ಮಂಚ), ಊರುಗಳಲ್ಲಿ “ಬೂತಸಾನ” (ಗುಡಿ)ಗಳಿದ್ದು, ಲೆಕ್ಕೆಸಿರಿ, ಪಂಜುರ್ಲಿ, ಕಲ್ಲುಟ್ಟಿ, ಕಲ್ಕುಡ, ಜುಮಾದಿ, ಗುಳಿಗ ಎಂದು ಹಲವಾರು ಬೂತಗಳು ವಿರಾಜಮಾನವಾಗಿವೆ. ಇವುಗಳಿಗೆ ತಂಬಿಲ, ಕೋಲ ನೇಮಗಳು ನಡೆಯುತ್ತವಾದರೂ ಇವುಗಳಲ್ಲಿ “ರಾಜನ್ ದೈವ” ಎಂದರೆ ಪಂಜುರ್ಲಿ. ಮನೆಮನೆಗಳಲ್ಲಿ ಬಿಡಿಬಿಡಿ ಪಂಜುರ್ಲಿಗಳಿದ್ದರೂ, ರಾಜನ್ ದೈವ ಎಂದರೆ, ಊರಿನ ದೈವ. ನಮ್ಮೂರಿನಲ್ಲಿ ಈ ಬೂತದ ನೇಮ ಮೂರು ಕಡೆ ನಡೆಯುತ್ತದೆ. ದೊಂಪದ ಬಲಿ (ದೊಂಪ ಎಂದರೆ ಚಪ್ಪರ), ಮಾಣಿ ಮಜಲು ಎಂಬಲ್ಲಿ ಗುಡಿಯಲ್ಲಿ ಮತ್ತು ಸುತ್ತಮುತ್ತಲಿನ ಊರುಗಳಿಗೆ “ಪೇಟೆ” ಆಗಿದ್ದ ಪಾಣೆಮಂಗಳೂರಿನ, ಬ್ರಿಟಿಷರು ಕಟ್ಟಿದ್ದ ನೇತ್ರಾವತಿ ಸೇತುವೆಯ ಪಕ್ಕದಲ್ಲೇ ಇರುವ ಸುಂಕದ ಕಟ್ಟೆಯಲ್ಲಿ. ಇಲ್ಲಿ ಟಿಪ್ಪು, ಬ್ರಿಟಿಷರು ಪೇಟೆಗೆ ಬರುವ ಸರಕುಗಳಿಗೆ, ದೋಣಿಗಳಿಗೆ ಸುಂಕ ವಸೂಲಿ ಮಾಡುತ್ತಿದ್ದರಂತೆ.

ಈ ಸುಂಕದ ಕಟ್ಟೆಯ ಭೂತಕ್ಕೆ ಜನರು ಸಿಕ್ಕಾಪಟ್ಟೆ ಹೆದರುತ್ತಿದ್ದರು. ಈ ಹೆದರಿಕೆ ಎಷ್ಟು ಇತ್ತೆಂದರೆ ಈ ಬೂತದ ಮನೆತನದ “ಗುಂಡೆರ್” ಎಂಬ ಹಿರಿಯರು ಏನೋ ಕಷ್ಟಕ್ಕೆ ಈ ಭೂತಕ್ಕೆ ಧರ್ಮನೇಮ ಕೊಡುತ್ತೇನೆ ಎಂದು ಹರಕೆ ಹೊತ್ತಿದ್ದರಂತೆ. ಆದರೆ, ಧರ್ಮನೇಮ ಅಂದರೆ ಬಹಳ ಖರ್ಚು ಇದ್ದು, ಊರಿಗೆಲ್ಲಾ ಊಟ ಹಾಕಬೇಕು. ನಾನು ಚಿಕ್ಕವನಿದ್ದಾಗ ಈ ಗುಂಡರಿಗೆ ತೊಂಬತ್ತು ದಾಟಿದರೂ ಆವರು ಧರ್ಮನೇಮ ಕೊಡಲೇ ಇಲ್ಲ! ಖರ್ಚಿಗೆ ಹೆದರಿ ಅಲ್ಲ. ಧರ್ಮ ನೇಮ ಕೊಟ್ಟವರು ಮರುವರ್ಷ ಸಾಯುತ್ತಾರೆ ಎಂದು ಪ್ರತೀತಿ. ಹಾಗಾಗಿ ಭಯ. ಕೊನೆಗೂ ಅವರು ಇನ್ನೇನು ಸಾಯುತ್ತಾರೆ ಎನ್ನುವಾಗ ಧರ್ಮನೇಮ ಕೊಡಲಾಯಿತು. ಆದರೆ, ಗುಂಡರು ಮರುವರ್ಷವೇನೂ ಸಾಯಲಿಲ್ಲ.

ಬಾಲಕನಾಗಿದ್ದ ನನಗೆ ಈ ಸುಂಕದ ಕಟ್ಟೆ ಬೂತದ ಮೇಲೆ “ಭಯಂಕರ” ಸಿಟ್ಟಿತ್ತು. ಬಾಲ್ಯದಲ್ಲಿಯೇ ಪ್ರಶ್ನಿಸಲು ಕಲಿಸಿದ್ದ ನನ್ನ ಮೊದಲ ಗುರುಗಳಾದ ತಾಯಿ, ತಂದೆಗೆ ನನ್ನ ಪ್ರಶ್ನೆಗಳು ಗಂಟಲ ಮುಳ್ಳಿನಂತೆ ಆಗಿದ್ದಿರಬಹುದು. ನಮ್ಮ ಊರಿನಲ್ಲಿ ರಾಮಣ್ಣ ಪೂಜಾರಿ ಎಂಬವರಿದ್ದರು. ಅವರಿಗೂ ಅವರ ಕುಟುಂಬದವರಿಗೂ ಬೂತದ “ಮಾಣಿ” (ಸೇವಕ) ಯಾರಾಗಬೇಕು ಎಂಬ ಹಕ್ಕಿನ ವಿವಾದ ಇತ್ತು. ಹೀಗಾಗಿ ನೇಮ ನಡೆಯುವ ಒಂದು ರಾತ್ರಿ ಇವರು ಬೂತ “ಮೈಮೇಲೆ ಬಂದು” ನಮ್ಮೂರಿಂದ ಎರಡು ಕಿ.ಮೀ. ದೂರ ಓಡಿಕೊಂಡೇ ಹೋದರು, ಬೂತದ ಬಳಿ ನ್ಯಾಯ ಕೇಳಲು. ಊರವರೂ ಕೆಲವರು ಇವರ ಹಿಂದೆಯೇ ಹೋದರು. ಅಲ್ಲಿ ಈ ರಾಮಣ್ಣ ಬೂತದ ಮಾತಿಗೆ ಒಪ್ಪದಾಗ ಬೂತವು ಸಿಟ್ಟಾಗಿ, ರಾಮಣ್ಣದ ಬರಿ ಎದೆಗೆ ಎಣ್ಣೆಯಲ್ಲಿ ಧಗದಗನೇ ಉರಿಯುತ್ತಿದ್ದ ದೀಟಿಗೆ (ಪಂಜು)ಯನ್ನು ಇಟ್ಟು ಕ್ರೌರ್ಯ ಮೆರೆಯಿತು. ಗಂಭೀರವಾದ ತಟ್ಟೆಯಗಲದ ಸುಟ್ಟ ಗಾಯಗಳಿಂದ ಚೇತರಿಸಲು ಅವರಿಗೆ ತಿಂಗಳುಗಳೇ ಕಳೆದವು. ಊರವರ್ಯಾರೂ ಮಾತನಾಡಲಿಲ್ಲ. ಬೂತಕ್ಕೆ ಎದುರು ಮಾತನಾಡುವುದುಂಟೆ!? ನನ್ನ ಮನಸ್ಸಿನಲ್ಲಿ ಬೂತದ ಬಗ್ಗೆ ನೂರಾರು ಪ್ರಶ್ನೆಗಳೆದ್ದವು. ಇದು ಅನ್ಯಾಯ ಎನಿಸಿತು. ಮನೆಯಲ್ಲೇ ಐದು ಬೂತಗಳ ಚಾವಡಿ ಇದ್ದರೂ, ಬಾಲಕ ನನಗೆ ಬೂತಗಳ ಮೇಲೆ ಉಡಾಫೆ ಉಂಟಾಗುತ್ತಾ, ರಾಮಾದಿ ಶಿಷ್ಟ ದೇವರುಗಳ ಬೂತ ಹಿಡಿಯಿತು. ಅದೂ ಯೌವನದಲ್ಲೇ ಇಳಿದು ವಿಚಾರವಾದ ಹತ್ತಿಕೊಂಡಿತು.

ನನಗೆ ಈ ಘಟನೆ ನೆನಪಾಗಿ ಒಂದು ರೀತಿಯ ತೃಪ್ತಿಯೂ, ಜಿಜ್ಞಾಸೆಯೂ ಉಂಟಾದದ್ದು ಇದೇ ಸುಂಕದ ಕಟ್ಟೆ ಬೂತದ ಬಗ್ಗೆ ಅಮೃತ ಸೋಮೇಶ್ವರರು ಒಂದು ಪುಸ್ತಕದಲ್ಲಿ ಬರೆದದ್ದು! ಅದಕ್ಕಿಂತ ಬಹಳ ವರ್ಷಗಳ ಹಿಂದೆ ಒಂದು ರಾತ್ರಿ ಇಲ್ಲಿ ನಡೆಯುತ್ತಿದ್ದಾಗ ಹತ್ತಿರದ ಬಾಂಗ್ಲೆ ಗುಡ್ಡೆಯ ಇನ್ಸ್‌ಪೆಕ್ಷನ್ ಬಂಗ್ಲೆಯಲ್ಲಿ ತಂಗಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ ದೇಶದ ತಾಸೆ, ಬ್ಯಾಂಡು, ಗರ್ನಾಲ್-ಕದೀನ (ಭಾರಿ ಸದ್ದು ಮಾಡುವ ಸುಡುಮದ್ದುಗಳು) ಸದ್ದಿಗೆ ಬಿದ್ದೆ, ಸಿಟ್ಟು ಬಂದು, ಕುದುರೆಯ ನೇಮಕ್ಕೆ ಬಂದವನೇ ಬೂತಕ್ಕೆ ಎರಡು ಬಾರಿಸಿದನು. ಜನರೆಲ್ಲಾ ಹೆದರಿ ನದಿ ಸೇರುವ ತೊಡೂ ಸೇರಿದಂತೆ ಎಲ್ಲಾ ಕಡೆ ದಿಕ್ಕಾಪಾಲಾಗಿ ಓಡಿದರಂತೆ! ಬೂತವೂ (ಅಂದರೆ, ಬೂತ ಕಟ್ಟುವವನು) ಓಡಿತು. ಆದರೆ ಅಗಲವಾದ ಅಣಿ ಕಟ್ಟಿದ್ದ (ಅಣಿ ಎಂದರೆ, ಕಂಗಿನ ಹಾಳೆ, ತೆಂಗಿನ ಎಳೆಗರಿಗಳಿಂದ ಮಾಡಿದ ಅಲಂಕಾರ. ಇದನ್ನು ಬೆನ್ನಿಗೆ ಕಟ್ಟುತ್ತಾರೆ) ಬೂತವು ಕತ್ತಲಲ್ಲಿ ಓಡುವಾಗ ತೊಡಿನ ಬದಿಯ ಬಿದಿರು ಮೆಳೆಗೆ ಅಣಿಯು ಸಿಕ್ಕಿಕೊಂಡಿತು. ಬೂತವನ್ನು ಬಿಡಿಸಲು ಜನರು ಯಾರೂ ಇಲ್ಲದೇ, ಬೂತವು ಬೆಳಗ್ಗಿನ ತನಕ ಬಿದುರು ಮೆಳೆಗೆ ನೇತಾಡಬೇಕಾಗಿದೆ. ಇದರ ಬಗ್ಗೆ ಹಿರಿಯರು ಗುಸುಗುಸು ಮಾನಾಡುತ್ತಿದ್ದನ್ನು ಕೇಳಿದ್ದೆನಾದರೂ, ಇದನ್ನು ಬರೆಯುವ ಧೈರ್ಯ ಮಾಡಿದ ಅಮೃತ ಸೋಮೇಶ್ವರರನ್ನು ಮೆಚ್ಚಿದೆ. ನಂಬಿಕೆಗಳು ಏನೇ ಇರಲಿ, ಸತ್ಯ ಬರೆಯಲು ಧೈರ್ಯ ಬೇಕು. ಇದು ಬ್ರಿಟಿಷ್ ಅಧಿಕಾರಿಯ ಕ್ರೌರ್ಯ, ರಾಮಣ್ಣನ ಎದೆಗೆ ಉರಿಯುವ ದೀಟಿಕೆ ಇಟ್ಟ ಬೂತದ ಕ್ರೌರ್ಯ, ಬೂತದ ಶಕ್ತಿ, ಅಲ್ಲಿರುವ ನಗಪಾಟಲುತನ ಎಲ್ಲವೂ ನನ್ನನ್ನು ಜಿಜ್ಞಾಸೆಗೆ ಒಡ್ಡಿತು.

ಹಾಗೆ ನೋಡಿದರೆ, ನಮ್ಮ ಊರಲ್ಲಿ ಇಲ್ಲದ ಹಲವಾರು ಬೂತಗಳು, ತುಳುನಾಡ ಸಿರಿ, ಕೋಟಿ ಚೆನ್ನಯರೆಂಬ ಬಿಲ್ಲವ ವೀರರ ಬಗ್ಗೆ ನನಗೆ ತಿಳಿದದ್ದೇ ಅಮೃತರ ಪುಸ್ತಕಗಳನ್ನು ಓದಿ. ಬೊಬ್ಬರ್ಯ, ಆಲಿ ಬೂತ ಮುಂತಾದ ಮುಸ್ಲಿಂ ಬೂತಗಳೂ ಇವೆಯೆಂದೂ, ನೀರಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಬ್ರಾಹ್ಮಣ ಹುಡುಗಿ ಬೂತವಾದದ್ದು ಇತ್ಯಾದಿ ತರಾವರಿ ಬೂತಗಳ ಬಗ್ಗೆ ನನಗೆ ತಿಳಿದದ್ದೂ ಅವರ ಮೂಲಕವೇ.

ಇಂದು ಜಾನಪದರ ಈ ಆರಾಧನೆಯಲ್ಲೂ ವೈದಿಕ ಬ್ರಾಹ್ಮಣ್ಯ ನುಗ್ಗಿದೆ. ಅದಕ್ಕಿಂತಲೂ ಕೋಮುವಾದಿ ವಿಷ ಹರಿಯುತ್ತಿದೆ. ಕೇಸರಿ ಬಾವುಟಗಳು ಹಾರಾಡುತ್ತಿವೆ. ಮುಸ್ಲಿಮರ ವ್ಯಾಪಾರವನ್ನು ದೇವರ, ದೈವದ ಹೆಸರಿನಲ್ಲಿ ತಡೆಯುವ ಪಾಪಕಾರ್ಯ ನಡೆಯುತ್ತಿದೆ. ಹಿಂದೆ ಕೋಲ, ನೇಮ, ಜಾತ್ರೆಗಳಲ್ಲಿ ಹೂ ಒದಗಿಸುವ, ಸಿಡಿಮದ್ದಿನ ಕೆಲಸ ಮುಸ್ಲಿಮರಿಗೇ ತಲೆತಲಾಂತರಗಳಿಂದ ಇತ್ತು. ಉಳ್ಳಾಲದಲ್ಲಿ ಬೂತವು ಮಸೀದಿಗೆ ಹೋಗುತ್ತದೆ. ಮುಸ್ಲಿಂ ಧಾರ್ಮಿಕ ನಾಯಕರಿಗೆ ಬೂತದ ಆರಾಧನೆಯಲ್ಲಿ ಗೌರವದ ಸ್ಥಾನವಿದೆ. ಇಂತಹ ಹಲವು ನಿದರ್ಶನಗಳನ್ನು ಅಮೃತ ಸೋಮೇಶ್ವರರು ನನಗೆ ಕಲಿಸಿದ್ದಾರೆ. ಅವರು ಬೂತಗಳ ಜಾತ್ಯತೀತತೆಯನ್ನು ಕುರಿತು ಹೇಳುತ್ತಾ, ಬೂತವು ತನ್ನ “ಅಭಯ”ದಲ್ಲಿ ತನಗೆ ಚಾವಡಿ, ಬಡವರಿಗೆ ಮನೆ ಕಟ್ಟಿಸಲು ಊರಿನ ನಾಯಕರಿಗೆ ಹೇಳುವಂತೆ, “ಬ್ಯಾರಿಲೆಗ್ ಪಳ್ಳಿ, ಕುಡುಂಬೆರೆಗ್ ಇಂಗ್ರೇಜಿ” (ಮುಸ್ಲಿಮರಿಗೆ ಪಳ್ಳಿ ಮತ್ತು ಕ್ರೈಸ್ತರಿಗೆ ಇಗರ್ಜಿ) ಕಟ್ಟಿಕೊಡಬೇಕೆಂದು ಹೇಳುವುದನ್ನು ಅಮೃತರು ಉಲ್ಲೇಖಿಸಿದ್ದಾರೆ. ಬೂತದ ಆಚರಣೆಯಲ್ಲಿ ಸೇರಿಕೊಂಡಿರುವ ಕೋಮುವಾದಿ ವಿಷದ ಬಗ್ಗೆ ಬರೆಯುವಾಗ ನಾನು ಅಮೃತರು ಬರೆದಿರುವ ಈ ವಿಷಯವನ್ನು ಹಲವು ಬಾರಿ ಉಲ್ಲೇಖಿಸಿದ್ದೇನೆ.

ತುಳು, ಬೂತ, ಸಂಸ್ಕೃತಿಗಳ ಬಗ್ಗೆ ಬರೆಯುತ್ತಾ ಹಲವರಂತೆ ಅಮೃತರೂ ಕೋಮುವಾದಿಯಾಗುವುದು ಸುಲಭವಿತ್ತು. ಅವರು ಹಾಗಾಗಲಿಲ್ಲ ಯಾಕೆಂದರೆ, ಅವರಿಗೆ ರಾಮನ ಬಗ್ಗೆ ಗೊತ್ತಿರುವಂತೆ ಪಾಡ್ದನ ಹಾಡುವ ರಾಮಕ್ಕನ ಬಗ್ಗೆಯೂ ಗೊತ್ತಿತ್ತು ಎಂಬ ಮಾತುಗಳನ್ನು ಪುರುಷೋತ್ತಮ ಬಿಳಿಮಲೆಯವರು ಬರೆದಿದ್ದಾರೆ. ಅಂತಹ ಅಮೃತರೇ ನನ್ನ ಗುರು. ಭಯಭಕ್ತಿ ಇಲ್ಲದೆಯೂ ಬೂತಗಳು ತುಳುವ ಜನಸಾಮಾನ್ಯರ ಬಂಡಾಯದ ಸಾಮೂಹಿಕ ಸೃತಿ ಎಂದು ಗೌರವದಿಂದ ಕಾಣುವುದನ್ನು ಅವರು ನನಗೆ ಕಲಿಸಿದ್ದಾರೆ.

ಅಮೃತರನ್ನು ಹತ್ತಿರದಿಂದ ಕಂಡು ಒಡನಾಟ ಇಲ್ಲದ ನಾನು, ಆವರ ನೆನಪಿನಲ್ಲಿ ಇಷ್ಟು ಬರೆಯಬಹುದು ಎಂದು ಭಾವಿಸಿರಲಿಲ್ಲ. ತೆರೆಯ ಮೇಲಿನ ತಾರೆಯರಂತೆ ನಮಗೆ ನೇರವಾಗಿ ಕಲಿಸಿದವರಂತೆ, ತೆರೆಯ ಮರೆಯಲ್ಲಿಯೇ ನಮಗೆ ಕಲಿಸಿದವರು ಹಲವರಿರುತ್ತಾರೆ. ನಾನು ಅಮೃತರ ಕುರಿತು ಸ್ವಲ್ಪವೇ ಬರೆದು, ನಾನು ನನ್ನ ಜೀವನದಲ್ಲಿ ಬಂದ ಬೇರೆ ಅಂತವರ ಬಗ್ಗೆ ಬರೆಯಬೇಕೆಂದಿದ್ದೆ. ಅಮೃತರು ಇಷ್ಟು ಬರೆಸಿದುದರಿಂದ ಅಂತವರ ಬಗ್ಗೆ ಇನ್ನೊಮ್ಮೆ ನೋಡೋಣ.

ಒಳ್ಳೆಯ ಗುರುಗಳು ಎಂದೂ ಸಾಯುವುದಿಲ್ಲ. ಅವರು ಎಂದಿಗೂ ಅಮೃತರು. ನಮ್ಮಂತ ಸಾವಿರಾರು ಪ್ರತ್ಯಕ್ಷ, ಪರೋಕ್ಷ, ಅಜ್ಞಾತ ಶಿಷ್ಯರ ಒಳಗೆ ಬದುಕಿರುತ್ತಾರೆ.


Related Articles

ಇತ್ತೀಚಿನ ಸುದ್ದಿಗಳು