Home ರಾಜಕೀಯ ಕುತೂಹಲ ಕೆರಳಿಸಿದ ನಿತೀಶ್ ಕುಮಾರ್ ಅವರ ಪ್ರತಿಪಕ್ಷಗಳ ನಾಯಕರ ಭೇಟಿ.!

ಕುತೂಹಲ ಕೆರಳಿಸಿದ ನಿತೀಶ್ ಕುಮಾರ್ ಅವರ ಪ್ರತಿಪಕ್ಷಗಳ ನಾಯಕರ ಭೇಟಿ.!

0

ಎರಡು ದಿನದ ದೆಹಲಿ ಪ್ರವಾಸದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಎದುರು ಪ್ರತಿಪಕ್ಷವಾಗಿ ನಿಂತ ಎಲ್ಲಾ ಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಎರಡು ದಿನಗಳ ದೆಹಲಿ ಭೇಟಿಯಲ್ಲಿ ಮೊದಲು ನಿತೀಶ್ ಕುಮಾರ್ ಸಿಪಿಎಂ ನಾಯಕ ಸೀತಾರಾಂ ಯಚೂರಿಯವರನ್ನು ಮತ್ತು ಸಿಪಿಐ ನಾಯಕರಾದ ಡಿ.ರಾಜಾ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಚರ್ಚೆಯ ನಂತರ ಸೀತಾರಾಂ ಯಚೂರಿಯವರು ನಿತೀಶ್ ಕುಮಾರ್ NDA ತೊರೆದದ್ದು ಉತ್ತಮ ನಿರ್ಧಾರ. ಆ ಮೂಲಕ ದೇಶದಲ್ಲಿ ಬಿಜೆಪಿ ವಿರುದ್ಧದ ಹೋರಾಟದ ಭಾಗವಾಗುವ ಅವರ ನಡೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದು ಭಾರತದ ರಾಜಕೀಯಕ್ಕೆ ಉತ್ತಮ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.

ಆ ನಂತರ ದೆಹಲಿಯ ಆಮ್ ಆದ್ಮಿ ಪಕ್ಷದ ನಾಯಕರಾದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭೇಟಿ ಮಾಡಿ ಅಗತ್ಯ ರಾಜಕೀಯ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಬಳಸುವ ಅಸಂವಿಧಾನಿಕ ಆಪರೇಷನ್ ಕಮಲ, ಶಾಸಕರ ಕುದುರೆ ವ್ಯಾಪಾರದಿಂದ ಆಗುತ್ತಿರುವ ಗಂಭೀರ ಸಮಸ್ಯೆಗಳ ಜೊತೆಗೆ ಆಡಳಿತಾತ್ಮಕವಾಗಿ ಅಗತ್ಯವಿರುವ ಶಿಕ್ಷಣ, ಆರೋಗ್ಯ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ನಂತರ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಅವರನ್ನೂ ಭೇಟಿ ಮಾಡುವ ನಿರೀಕ್ಷೆ ಇದೆ.

ಸೋಮವಾರವೇ ದೆಹಲಿಗೆ ಭೇಟಿ ನೀಡಿದ್ದ ನಿತೀಶ್ ಕುಮಾರ್ ಮೊದಲು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರನ್ನು ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನೂ ಭೇಟಿ ಮಾಡಿ ಮಹತ್ವದ ರಾಜಕೀಯ ಚರ್ಚೆ ನಡೆಸಿದರು. ನಿತೀಶ್ ಕುಮಾರ್ ಅವರ ಪ್ರತಿಪಕ್ಷ ನಾಯಕರ ಭೇಟಿಯ ಹಿಂದೆ ಮುಂಬರುವ ದಿನಗಳಲ್ಲಿ ಪ್ರಧಾನಿ ಹುದ್ದೆಯ ಆಕಾಂಕ್ಷಿ ಇರಬಹುದು ಎಂಬ ಅನುಮಾನವನ್ನು ನಿತೀಶ್ ಕುಮಾರ್ ತಳ್ಳಿ ಹಾಕಿದ್ದಾರೆ.

ಭಿನ್ನ ರಾಜಕೀಯ ಸಿದ್ಧಾಂತಗಳನ್ನು ಒಳಗೊಂಡ ವಿವಿಧ ರಾಜಕೀಯ ಪಕ್ಷಗಳಿಗೆ ಬಿಜೆಪಿ ಸಿದ್ಧಾಂತಗಳ ಮತ್ತು ಆಡಳಿತ ವಿರೋಧಿ ಅಲೆಯನ್ನು ಸದುಪಯೋಗ ಪಡಿಸಿಕೊಳ್ಳಲು ನಿತೀಶ್ ಕುಮಾರ್ ಅವಕಾಶ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಈ ಮೂಲಕ ಬಿಹಾರದಲ್ಲಿ ಧಿಡೀರ್ ರಾಜಕೀಯ ಬೆಳವಣಿಗೆ ಮೂಲಕ ‘ಮಹಾಘಟಬಂಧನ್’ ರಚನೆಯ ರೀತಿಯೇ ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ಮಾಡುತ್ತಿರುವುದು ಗಮನಾರ್ಹ ಸಂಗತಿ.

You cannot copy content of this page

Exit mobile version