ಬೆಂಗಳೂರು: ರಾಜ್ಯದ ಅರಣ್ಯ ಸಚಿವ ಉಮೇಶ್ ಕತ್ತಿಯವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಇಂದು ರಾತ್ರಿ 11 ಗಂಟೆ ಸುಮಾರಿಗೆ ಸಚಿವ ಉಮೇಶ್ ಕತ್ತಿಯವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಅವರ ಮನೆಯ ಬಳಿಯೇ ಇರುವ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣವೇ ವೈದ್ಯರು ತುರ್ತು ನಿಗಾ ಘಟಕಕ್ಕೆ ದಾಖಲಿಸಿಕೊಂಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಉಮೇಶ್ ಕತ್ತಿಯವರ ಪೂರ್ತಿ ಹೆಸರು ಉಮೇಶ್ ವಿಶ್ವನಾಥ್ ಕತ್ತಿ ಎಂದು. ಭಾರತೀಯ ಜನತಾ ಪಕ್ಷದ ಮುಖಂಡರಾಗಿ ಆಗಸ್ಟ್ 4, 2021 ರಂದು ರಾಜ್ಯ ಸರ್ಕಾರದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ಸಚಿವರಾಗಿ ಮತ್ತು ಅರಣ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಲ್ಲದೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದರು.
ಎಂಟು ಸಲ ಶಾಸಕರಾಗಿ ಆಯ್ಕೆಯಾಗಿದ್ದ ಉಮೇಶ್ ಕತ್ತಿ 1985ರಲ್ಲಿ ಶಾಸಕರಾಗಿದ್ದ ತಮ್ಮ ತಂದೆ ವಿಶ್ವನಾಥ ಕತ್ತಿಯವರ ನಿಧನದ ನಂತರದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಒಂಭತ್ತು ಸಲ ಚುನಾವಣೆಗೆ ಸ್ಪರ್ಧಿಸಿ ಒಮ್ಮೆ ಮಾತ್ರ ಸೋಲು ಕಂಡಿದ್ದ ಉಮೇಶ್ ಕತ್ತಿ ಆರು ಬಾರಿ ಪಕ್ಷಾಂತರ ಮಾಡಿದ್ದರು.
ಹೆಂಡತಿ ಶೀಲಾ, ಮಗ ನಿಖಿಲ್ ಹಾಗೂ ಮಗಳು ಸ್ನೇಹಾ ಅವರನ್ನು ಉಮೇಶ್ ಕತ್ತಿ ಅಗಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.