ಮೈಸೂರು : ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿಯು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ವಿದೇಶದಿಂದ ಬಂದ ಅವರ ಅಳಿಯ ಅಪಘಾತದ ರೀತಿಯಲ್ಲಿ ಕೊಲೆ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಹಿನ್ನಲೆ :ಮಾನಸ ಗಂಗೋತ್ರಿಯ ಆವರಣದಲ್ಲಿ ನಿವೃತ್ತ ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಯಾಗಿದ್ದ ಆರ್.ಎನ್ ಕುಲಕರ್ಣಿ ಅವರಿಗೆ ನೋಂದಣಿ ಸಂಖ್ಯೆಯಿಲ್ಲದ ಕಾರೊಂದು ಗುದ್ದಿ ಪರಾರಿಯಾಗಿರುವ ಘಟನೆ ನವೆಂಬರ್ 4ರಂದು ನಡೆದಿತ್ತು.
ಈ ಕುರಿತು ನವೆಂಬರ್ 5ರಂದು ಕುಲಕರ್ಣಿಯವರ ಅಳಿಯ ಸಂಜಯ್ ಅವರು ನನ್ನ ಮಾವನ ಸಾವು ಅಪಘಾತವಲ್ಲ, ಇದೊಂದು ಕೊಲೆ ಎಂದು ಜಯಲಕ್ಷ್ಮೀ ಪುರಂ ಠಾಣೆಗೆ ದೂರು ನೀಡಿದ್ದರು.
ದೂರಿನಲ್ಲಿ ʼಎನ್. ಆರ್ ಕುಲಕರ್ಣಿಯವರು ವಾಸವಿರುವ ಟಿ.ಕೆ ಲೇಔಟ್ನ ಮನೆಯ ದಕ್ಷಿಣ ಭಾಗದಲ್ಲಿ ಮಾದಪ್ಪ ಎಂಬುವವರು ಮನೆ ನಿರ್ಮಾಣ ಮಾಡುತ್ತಿದ್ದು, ಅದನ್ನು ಕಾನೂನು ಬಾಹಿರವಾಗಿ ಕಟ್ಟುತ್ತಿದ್ದಾರೆ ಎಂದು ನಗರ ಪಾಲಿಕೆಯವರಿಗೆ ದೂರು ನೀಡಿದ್ದರು. ಆದರೆ ನಗರ ಪಾಲಿಕೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ನಗರ ಪಾಲಿಕೆ ವಿರುದ್ದವೂ ನ್ಯಾಯಲಯದಲ್ಲಿ ದೂರು ದಾಖಲಿಸಿ ನ್ಯಾಯಾಲಯದಿಂದ ಮಾದಪ್ಪ ಮನೆ ಕಟ್ಟದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ವಿರುದ್ದ ಮಾದಪ್ಪ ಹೈಕೋರ್ಟ್ ಮೊರೆ ಹೋಗಿ ಒಂದು ವೇಳೆ ನನ್ನ ವಿರುದ್ದ ಆದೇಶವಾದರೆ ಮನೆಯನ್ನು ಒಡೆಯುತ್ತೇನೆʼ ಎಂದು ನಮ್ಮ ಮಾವನಿಗೆ ಹೇಳಿದ್ದರು.
ಹಾಗೆಯೇ ʼಕೊಲೆಯಾದ ನಮ್ಮ ಮಾವ ನಮಗೆ ವಿಡಿಯೋ ಕಾಲ್ ಮಾಡಿದಾಗ, ಮಾದಪ್ಪ ಕೊಲೆ ಬೆದರಿಕೆ ಹಾಕಿತ್ತಿರುವ ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡುತ್ತಿದ್ದರು. ಈ ಬೆದರಿಕೆ ವಿಚಾರವಾಗಿ ನನ್ನ ಮಾವ ಈಗಾಗಲೇ ನನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರುʼ ಎಂದು ಉಲ್ಲೇಖಿಸಿದ್ದರು.
ಈ ಮಧ್ಯೆ ಮಾದಪ್ಪ ಅಕ್ರಮವಾಗಿ ಮನೆ ಕಟ್ಟುತ್ತಿರುವ ಬಗ್ಗೆ ಕಳೆದ ಜೂನ್ನಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ನವೆಂಬರ್ 2ರಂದು ಮಾದಪ್ಪ ಕಟ್ಟುತ್ತಿರುವ ಮನೆ ಕಾನೂನು ಬಾಹಿರವಾಗಿದ್ದು, ಒತ್ತುವರಿಯಾಗಿರುವ ಮತ್ತು ಕಾನೂನು ಉಲ್ಲಂಘನೆ ಮಾಡಿ ಅಕ್ರಮವಾಗಿ ಕಟ್ಟಿರುವ ಭಾಗಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಈ ಆದೇಶದ ಆಧಾರದ ಮೇಲೆ ಅಳಿಯ ಸಂಜಯ್ ಮಾದಪ್ಪನ ವಿರುದ್ಧ ದೂರು ನೀಡಿದ್ದರು.
ದೂರಿನ ಕುರಿತು ನವೆಂಬರ್ 5ರಂದು ತನಿಖೆ ಆರಂಭಿಸಿದ್ದ ಜಯಲಕ್ಷ್ಮೀ ಪುರಂನ ಪೊಲೀಸರು, ಕ್ಯಾಂಪಾಸ್ನಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಇದೊಂದು ಕೊಲೆ ಎಂದು ಶಂಕಿಸಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.
ಈ ಕೊಲೆಗೆ ಸಂಬಂಧಪಟ್ಟ ದೂರಿನ ಹಿನ್ನೆಲೆಯಲ್ಲಿ ಮಾದಪ್ಪ , ಮಕ್ಕಳು ಮತ್ತು ಸಹಚರರನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದು , ವಿಚಾರಣೆ ನಡೆಸಲಾಗುತ್ತಿದೆ.