ಮೈಸೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಟಿಕೇಟ್ ಹಂಚಿಕೆ ವಿಷಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಯಾವ ಗೊಂದಲಗಳಿ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ನಮ್ಮ ಹೈಕಮಾಂಡ್ ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ. ಇದುವರೆಗೂ ಯಾವುದೇ ಗೊಂದಲಗಳಿಲ್ಲ. ಮುಂದೆಯೂ ಇರುವುದಿಲ್ಲ ಎಂದರು.
ಇತ್ತೀಚೆಗೆ ಮಂಗಳೂರಿನ ಮುಖಂಡ ಅರುಣ್ ಕುಮಾರ್ ಪುತ್ತಿಲ್ ನನ್ನನ್ನು ಭೇಟಿ ಮಾಡಿದ್ದು ಸತ್ಯ. ಬೇಷರತ್ ಆಗಿ ಬಿಜೆಪಿ ಸೇರ್ಪಡೆಯಾಗಿ, ಯಾವುದೇ ಷರತ್ತುಗಳು ಬೇಡ ಎಂದು ಅವರಿಗೆ ಹೇಳಿದ್ದೇನೆ. ನರೇಂದ್ರ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದೇನೆ. ಅವರು ಒಪ್ಪಿಗೆ ನೀಡಿದ್ದಾರೆ.ಅಲ್ಲಿನ ಸ್ಥಳೀಯ ಮುಖಂಡರ ಜೊತೆಗೂ ಚರ್ಚೆ ಮಾಡುತ್ತೇನೆ’ ಎಂದು ವಿಜಯೇಂದ್ರ ಹೇಳಿದರು.
ರಾಜ್ಯದ ಎಲ್ಲಾ ಕ್ಷೇತ್ರದಲ್ಲೂ ನಮಗೆ ಬಿಜೆಪಿ, ಕಮಲದ ಚಿಹ್ನೆ ಮಾತ್ರವೇ ಅಭ್ಯರ್ಥಿ. ಉಳಿದದ್ದು ಅಥವಾ ಬೇರೆ ಯಾವ ಭಿನ್ನಾಭಿಪ್ರಾಯಗಳೂ ನಮ್ಮ ನಡುವೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಮುಂದಿನ ದಿಕ್ಸೂಚಿಯಲ್ಲ. ಕಳೆದ ಬಾರಿ ನಂಜನಗೂಡು ಉಪ ಚುನಾವಣೆ ನಡೆದ ಮೇಲೆ ಸಿದ್ದರಾಮಯ್ಯ ಸರ್ಕಾರ ಏನಾಯಿತು ಎಂಬುದು ಜನರಿಗೆ ಗೊತ್ತಿದೆ. ಸರ್ಕಾರ ಇದ್ದಾಗ ಉಪ ಚುನಾವಣೆಗಳು ಹೇಗೆ ನಡೆಯುತ್ತದೆ ಎಂದೂ ಜನರಿಗೆ ಗೊತ್ತೆ ಇರುವಂಥದ್ದು ಅದೆಲ್ಲ ಲೆಕ್ಕಕ್ಕೆ ಬರಲ್ಲ ಎಂದು ಅವರು ಹೇಳಿದರು.