ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರ ಪರವಾಗಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಲೇವಡಿ ಮಾಡಿದರು.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕುರಿ, ಕೋಳಿಗಳನ್ನು ಬಲಿ ಕೊಡುವ ಮೊದಲು ಹಾರ ಹಾಕಿ ಮೆರವಣಿಗೆ ಮಾಡುವ ಹಾಗೆ ಈ ಸರ್ಕಾರ ಜನರಿಗೆ ಫ್ರೀ ಬಸ್ ನೀಡಿ ಮತದಾರರನ್ನು ಕುರಿ ಮಾಡುತ್ತಿದೆ” ಎಂದು ಹೇಳಿದರು.
ಆದರೆ ಈ ಸರ್ಕಾರ ಎಷ್ಟೇ ಉಚಿತ ಗ್ಯಾರಂಟಿಗಳನ್ನು ಕೊಟ್ಟರೂ ಮೋದಿ ಗ್ಯಾರಂಟಿಯೊಂದೇ ಶಾಶ್ವತ. ಉಚಿತಗಳಿಗೆ ಮರುಳಾದರೆ ನಾವು ನಮ್ಮ ಸ್ವಾಭಿಮಾನ ಮಾರಿಕೊಂಡಂತೆ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಚಿತ್ರನಟ ಜಗ್ಗೇಶ ಹೇಳಿದರು.
ಇತ್ತೀಚೆಗೆ ರಂಗನಾಯಕ ಎನ್ನುವ ಚಿತ್ರದಲ್ಲಿ ಜಗ್ಗೇಶ್ ನಟಿಸಿದ್ದರು. ಆದರೆ ಚಿತ್ರ ದಯನೀಯವಾಗಿ ಸೋಲು ಕಂಡಿತ್ತು. ನಂತರ ಫೇಸ್ಬುಕ್ ಲೈವ್ ಬಂದ ನಟ ಈ ಚಿತ್ರದ ನಿರ್ದೇಶಕನನ್ನು ನಂಬಿ ಕೆಟ್ಟೆ ಎಂದು ಹೇಳಿದ್ದರು. ಈ ಹಿಂದೆ ನಿರ್ದೇಶಕ ಗುರುಪ್ರಸಾದ್ ಜಗ್ಗೇಶ್ ಜೊತೆ ಸೇರಿ ಎದ್ದೇಳು ಮಂಜುನಾಥ ಎನ್ನುವ ಚಿತ್ರ ಮಾಡಿದ್ದರು. ಅದು ಸಾಕಷ್ಟು ಸದ್ದನ್ನೂ ಮಾಡಿತ್ತು. ಆದರೆ ಅವರದೇ ನಿರ್ದೇಶನದ ರಂಗನಾಯಕ ಜನರ ಗಮನ ಸೆಳೆಯುವಲ್ಲಿ ವಿಫಲವಾಗಿದೆ.
ಇನ್ನು ತೇಜಸ್ವಿ ಸೂರ್ಯ ಅವರ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಗ್ಗೇಶ್ ಮೋದಿಯವರಿಗೆ ಮತ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಿದರು.