Saturday, June 21, 2025

ಸತ್ಯ | ನ್ಯಾಯ |ಧರ್ಮ

ನಂದಿನಿ ಮಾತ್ರವಲ್ಲ, ಎಲ್ಲವನ್ನು ಕಿತ್ತುಕೊಳ್ಳಲಿದ್ದಾರೆ. ಎಚ್ಚರ!

ನಮ್ಮ ದೇಶದ ಶೈಕ್ಷಣಿಕ, ಸಾಹಿತ್ಯ ಇತಿಹಾಸ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಸಮಾನತೆಯ ವ್ಯವಸ್ಥೆಗಳನ್ನು ವಿಧ್ವಂಸಗೊಳಿಸುವುದೇ ʼಇವರʼ ಒಳಗಿನ ಅಜೆಂಡಾ. ನಿನ್ನೆ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳ ಮಾರಾಟ. ಇಂದು ನಂದಿನಿಯ ಪರಭಾರೆ – ಎಲ್.ಎನ್. ಮುಕುಂದರಾಜ್, ಚಿಂತಕರು

ಒಂದು ಕಾಲದಲ್ಲಿ ನಮ್ಮ ಕನ್ನಡಿಗರು ಗುಜರಾತ್ ಮುಂತಾದ ರಾಜ್ಯಗಳನ್ನು ಆಳಿದ್ದರು. ವಿಪರ್ಯಾಸ ಏನೆಂದರೆ ಈಗ ಗುಜರಾತಿನವರ ಕೈಯಲ್ಲಿ ಆಳಿಸಿಕೊಳ್ಳಲು ಹೊರಟಿದ್ದಾರೆ. ಹೈಕಮಾಂಡಿನ ಅಧಿಕಾರದ ಧಿಮಾಕಿನಲ್ಲಿ ಮೆರೆಯುತ್ತಿರುವ ಗುಜರಾತಿಗಳ ಎದುರು ಕರ್ನಾಟಕದ ಮುಖ್ಯಮಂತ್ರಿಯು ಸೇರಿದಂತೆ, ಹಲವಾರು ರಾಜಕಾರಣಿಗಳು ಡೊಗ್ಗು ಸಲಾಮು ಹೊಡೆಯುತ್ತಿದ್ದಾರೆ. 

ಇದರ ಪರಿಣಾಮದಿಂದಾಗಿಯೇ ನಮ್ಮ ರಾಜ್ಯಕ್ಕೆ ಸಿಕ್ಕಬೇಕಾದ ಕೇಂದ್ರದ ಆರ್ಥಿಕ ನೆರವು ಸಿಗುತ್ತಿಲ್ಲ. ಆದರೆ ಕೇಂದ್ರಕ್ಕೆ ಸಲ್ಲಿಸುತ್ತಿರುವ ತೆರಿಗೆಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿದೆ. ನಾವು ನ್ಯಾಯವಾಗಿ ಕೊಡಬೇಕಾದನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಮಾತ್ರ ನಮ್ಮ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ.

ನೂರು ವರ್ಷಗಳ ಹಿಂದೆ ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಎಲ್ಲ ಕನ್ನಡಿಗರ ಹೆಮ್ಮೆಯ ಮೈಸೂರು ಬ್ಯಾಂಕನ್ನು ಗುಜರಾತಿ ರಾಜಕಾರಣಿಗಳು ಮುಳುಗಿಸಿಬಿಟ್ಟರು. ಅದು ಲಾಭದಲ್ಲಿ ನಡೆಯುತ್ತಿತ್ತು ಎಂಬುದನ್ನು ಮರೆಯಬಾರದು. ಕನ್ನಡಿಗರು ಕಟ್ಟಿ ಬೆಳೆಸಿದ್ದ ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಗಳ ಕತೆಯನ್ನು ಮುಗಿಸಿದರು. ಇದರ ಬೆಂಕಿ ನಮ್ಮ ಅಂಡಿಗೆ ತಾಕಲಿಲ್ಲವೆಂಬಂತೆ ಕಣ್ಣು ಮುಚ್ಚಿ ಕುಳಿತೆವು. 

ಅಮಿತ್ ಶಾ ಎಂಬ ಮಾರ್ವಾಡಿ ಮಂಡ್ಯಕ್ಕೆ ಬಂದು ನಂದಿನಿಯನ್ನು ಅಮೂಲ್ ಜೊತೆಗೆ ವಿಲೀನ ಮಾಡುವುದಾಗಿ ಮಂಡ್ಯದ ಸ್ವಾಭಿಮಾನಿ ಜನತೆಯ ಎದುರು ಘೋಷಿಸುತ್ತಾನೆ. ಆ ಮಾತಿಗೆ ಪ್ರತ್ಯುತ್ತರವಾಗಿ ಒಕ್ಕಲಿಗರ ಮಹಿಳಾ ಸಂಘಟನೆ ಗೌಡತಿಯರ ಸೇನೆಯ ರಾಜ್ಯಾಧ್ಯಕ್ಷೆ ರೇಣುಕಮ್ಮ ಭಕ್ತರಹಳ್ಳಿ ಅವರು “ನಂದಿನಿಯ ತಂಟೆಗೆ ಬಂದರೆ ನಿನ್ನ ಕಣ್ಣು ಕಿತ್ತು ಕೈಗೆ ಕೊಡುವುದಾಗಿ” ಎಚ್ಚರಿಕೆ ಕೊಡುತ್ತಾರೆ. ಇದು ಆಕೆ ಒಬ್ಬಳು ಕೊಟ್ಟ ಎಚ್ಚರಿಕೆ ಮಾತ್ರವಲ್ಲ. ಇಡೀ ನಾಡಿನ ಒಕ್ಕಲುತನ ಮಾಡುವ ಎಲ್ಲ ಮಹಿಳೆಯರು ಕೊಟ್ಟಿರುವ ಎಚ್ಚರಿಕೆ ಎಂದ ನಾವು ಭಾವಿಸಬೇಕು.

VIDEO- ಅವರ ವಕ್ರದೃಷ್ಟಿ ನಮ್ಮ ನಂದಿನಿ ಮೇಲೆ ಬಿದ್ದಿದೆ – ಡಾ.ಮೀನಾಕ್ಷಿ ಬಾಳಿ

ಸುಮಾರು 2000 ವರ್ಷಗಳಿಂದ ʼಅವರುʼ ನಮ್ಮದು ಎನ್ನುವ ಎಲ್ಲವನ್ನು ಕಿತ್ತುಕೊಂಡು, ಇಡೀ ಭಾರತೀಯರನ್ನು ಬರಿಗೈ ದಾಸಯ್ಯರನ್ನಾಗಿ ಮಾಡಿಟ್ಟಿದ್ದರು. ಈ ದೇಶಕ್ಕೆ ಬ್ರಿಟಿಷರು ಬಂದ ಕಾರಣದಿಂದಾಗಿ ಮತ್ತು ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟ, ಆನಂತರ ನಮಗೆ ದಕ್ಕಿದ ಸ್ವಾತಂತ್ರ, ಸಮಾನತೆ, ಸಂವಿಧಾನಗಳ ಬಲದಿಂದ ಕಳೆದ 70 ವರ್ಷಗಳಿಂದೀಚೆಗೆ ಭಾರತೀಯರು ನಿಧಾನವಾಗಿ ಜಗತ್ತಿನ ಎದುರು ತಲೆಯೆತ್ತಿ ನಡೆಯತೊಡಗಿದರು. ಎಲ್ಲ ಜಾತಿ ಮತ ಧರ್ಮಗಳಿಗೆ ಸೇರಿದ ಮನುಷ್ಯರು; ಮುಖ್ಯವಾಗಿ ಹೆಣ್ಣುಮಕ್ಕಳು ವಿದ್ಯೆ, ಉದ್ಯೋಗಗಳನ್ನು ಪಡೆದುಕೊಂಡು ಸ್ವತಂತ್ರರಾದರು. ಇದನ್ನು ಸಹಿಸದ ವೈದಿಕ ರೋಗಗ್ರಸ್ತರು ತಮ್ಮ ಸುಳ್ಳು ಕಪಟ ವಂಚನೆಯ ಮಾತುಗಳಿಂದ ಭಾರತೀಯರನ್ನು ಪಾತಾಳಕ್ಕೆ ತಳ್ಳಿ ಇಡೀ ದೇಶದ ಅಧಿಕಾರವನ್ನು ಕೈವಶ ಮಾಡಿಕೊಳ್ಳುತ್ತಿದ್ದಾರೆ. ಇವರ ಉದ್ದೇಶ ಸ್ಪಷ್ಟವಾಗಿದೆ. ನಮ್ಮ ದೇಶದ ಶೈಕ್ಷಣಿಕ ಸಾಹಿತ್ಯ ಇತಿಹಾಸ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಸಮಾನತೆಯ ವ್ಯವಸ್ಥೆಗಳನ್ನು ವಿಧ್ವಂಸಗೊಳಿಸುವುದೇ ಇವರ ಒಳಗಿನ ಅಜೆಂಡಾ. ನಿನ್ನೆ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳ ಮಾರಾಟ. ಇಂದು ನಂದಿನಿಯ ಪರಭಾರೆ.

ನಾಳೆ ಇಡೀ ಕನ್ನಡಿಗರ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ ದುಸ್ಥಿತಿಗೆ ಈ ವೈದಿಕರು ತಳ್ಳುತ್ತಾರೆ. ಇಂದು ಕನ್ನಡಿಗರು ನಿದ್ದೆಯಿಂದ ಮೇಲೇಳದಿದ್ದರೆ,  ಪುರೋಹಿತರು ಸೃಷ್ಟಿಸಿರುವ ದೇವರು ಧರ್ಮ ಸಂಪ್ರದಾಯಗಳ ನಶೆಯಿಂದ ಹೊರ ಬರದಿದ್ದರೆ, ನಾಳೆ ನಮ್ಮ ಬದುಕು ಅತ್ಯಂತ ದಯನೀಯವಾಗಿ ನಾಶವಾಗಲಿದೆ. ಎರಡು ಸಾವಿರ ವರ್ಷಗಳ ಹೀನ ಚರಿತ್ರೆ ಪುನರಾವರ್ತನೆಗೊಳ್ಳಲಿದೆ. ಇದು ಕಲ್ಪನೆಯಲ್ಲ. ಕವಿಯೊಬ್ಬನ ಕಾಲಜ್ಞಾನ ಎಂಬುದನ್ನು ಕನ್ನಡಿಗರು ಮರೆಯಬಾರದು.

ಎಲ್.ಎನ್. ಮುಕುಂದರಾಜ್

ಸಾಹಿತ್ಯ‌ ಕ್ಷೇತ್ರದೊಂದಿಗೆ ಹೋರಾಟದ ಮುಂಚೂಣಿಯಲ್ಲಿರುವವರು.

ಇದನ್ನೂ ಓದಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page