Tuesday, June 18, 2024

ಸತ್ಯ | ನ್ಯಾಯ |ಧರ್ಮ

ಕರಾವಳಿಯಲ್ಲಿ ಧರ್ಮ ರಾಜಕಾರಣ ಚುನಾವಣೆಯ ಪ್ರಮುಖ ಅಸ್ತ್ರ- ಅಭಿವೃದ್ಧಿ ನಗಣ್ಯ

ರಾಜ್ಯದ ಇತರ ಕೆಲವು ಭಾಗಗಳಲ್ಲಿ ಹಣ, ಮದ್ಯ, ಉಡುಗೊರೆ ‌ಮುಂತಾದ ಆಮಿಷಗಳಿಂದ‌ ಮತ ಪಡೆಯುವುದು ಸಾಮಾನ್ಯ. ಆದರೆ ಕರಾವಳಿಯಲ್ಲಿ ಇದಾವುದೂ ನಡೆಯುವುದಿಲ್ಲ. ಅಭಿವೃದ್ಧಿ, ಆಡಳಿತ ವಿರೋಧಿ ಅಲೆ ಚುನಾವಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಇಲ್ಲಿ ಏನಿದ್ದರೂ ʼಧರ್ಮಯುದ್ಧʼವೇ ಪ್ರಧಾನ.

ದ.ಕ.ಜಿಲ್ಲೆಯಲ್ಲಿ ಬಿಸಿಲ ಧಗೆ ಏರುತ್ತಿದ್ದಂತೆ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಜಾತಿ, ಹಣ, ಇನ್ನಿತರ ಆಮಿಷಗಳು ಚುನಾವಣೆ ವೇಳೆ ಮುನ್ನೆಲೆಗೆ ಬರುತ್ತದೆ. ಆದರೆ ಕರಾವಳಿಯಲ್ಲಿ ಮಾತ್ರ ಇದಾವುದೂ ಯಾವ ಕಾರಣಕ್ಕೂ ಮೇಲ್ಪಂಕ್ತಿಗೆ ಬರುವುದೇ ಇಲ್ಲ. ಇಲ್ಲಿ ಏನಿದ್ದರೂ ಧರ್ಮ ರಾಜಕಾರಣವೊಂದೇ ಯಾವಾಗಲೂ ಸದ್ದು ಮಾಡುವುದು.

ಕರಾವಳಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರುತ್ತದೆ. ಈ ಮೂರು ಜಿಲ್ಲೆಗಳಲ್ಲಿ ಚುನಾವಣೆಗಿಂತ ಮೊದಲೇ ಧರ್ಮರಾಜಕಾರಣ ಒಂದಷ್ಟು ಚುನಾವಣಾ ಪ್ರಚಾರವನ್ನು ಮಾಡಿಸುತ್ತದೆ. ಚುನಾವಣೆ ಸಂದರ್ಭದಲ್ಲಂತೂ ಸದಾ ಇದೇ ವಿಚಾರವು ಮುನ್ನೆಲೆಗೆ ಬರುತ್ತಲೇ ಇರುತ್ತದೆ.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ ಪ್ರಕರಣದ ಬಳಿಕ ಕರಾವಳಿಯಲ್ಲಿ ತಾರಕಕ್ಕೇರಿದ ಧರ್ಮರಾಜಕಾರಣಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಹಿಂದೂ – ಮುಸ್ಲಿಂ ಎರಡು ಸಮುದಾಯಗಳ ಮೂಲಭೂತವಾದಿಗಳಿಂದ ಧರ್ಮರಾಜಕಾರಣ ನಡೆಯುತ್ತಿದ್ದು, ಇದೇ ವಿಚಾರ ಈ ಮೂರು ಜಿಲ್ಲೆಗಳ ರಾಜಕೀಯ ಕ್ಷೇತ್ರದ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ಕೋಮುದ್ವೇಷದ ಹತ್ಯೆಗಳು ಕರಾವಳಿ ರಾಜಕೀಯದ ಒಂದು ಭಾಗ. ಪ್ರತಿ ಚುನಾವಣೆಯ ವರ್ಷದ ಮೊದಲು ಕೋಮು ಸಂಘರ್ಷ, ಹತ್ಯೆಗಳು ನಡೆಯುವುದು ಸಾಮಾನ್ಯ ಎಂಬಂತಾಗಿದೆ.  2018ರ ವಿಧಾನಸಭಾ ಚುನಾವಣೆಗಿಂತ ಮೊದಲು ಪರೇಶ್ ಮೇಸ್ತ, ಶರತ್ ಮಡಿವಾಳ, ಅಶ್ರಫ್ ಕಲಾಯಿ ಪ್ರಕರಣಗಳು ರಾಜಕಾರಣದಲ್ಲಿ ಚರ್ಚೆಯಾದರೆ ಈ ಬಾರಿಯ ಚುನಾವಣೆಗೆ ಮೊದಲು ಪ್ರವೀಣ್ ನೆಟ್ಟಾರ್, ಜಲೀಲ್, ನೌಷದ್ ಹತ್ಯೆ ಪ್ರಕರಣಗಳು ಚರ್ಚಾ ವಿಷಯವಾಗಿದೆ. 

ಈ ಬಾರಿ ಪ್ರವೀಣ್ ನೆಟ್ಟಾರು ಹತ್ಯೆಯು ಬಿಜೆಪಿಗೆ ಭಾರೀ ಹೊಡೆತವನ್ನು ನೀಡಿತು. ಕಾರ್ಯಕರ್ತರೇ ನಾಯಕರಾದ ನಳಿನ್ ಕುಮಾರ್ ಕಟೀಲು, ಎಸ್.ಅಂಗಾರ, ಸುನಿಲ್ ಕುಮಾರ್ ಅವರ ವಿರುದ್ಧ ತಿರುಗಿ ಬಿದ್ದರು. ನಳಿನ್ ಕುಮಾರ್ ಕಟೀಲು ಅವರು ನೆಟ್ಟಾರು ಮನೆಗೆ ಹೋದಾಗ ಕಾರ್ಯಕರ್ತರು ಅವರ ವಿರುದ್ಧವೇ ತಿರುಗಿ ಬಿದ್ದು, ಅವರ ಕಾರನ್ನೇ ಸಂಪೂರ್ಣ ಅಲುಗಾಡಿಸಿ ಅವರು ಮನೆಗೂ ಹೋಗದೆ ಅಲ್ಲಿಂದಲೇ ವಾಪಸ್ ಆಗುವಂತೆ ಆಗಿತ್ತು. ಇದು ಅವರ ಧರ್ಮರಾಜಕಾರಣಕ್ಕೆ ಬಿದ್ದ ಭಾರೀ ಹೊಡೆತವೂ ಆಗಿತ್ತು. ಈ ವೇಳೆ ಇನ್ನಾದರೂ ರಾಜ್ಯದಲ್ಲಿ ರಾಜಕೀಯಕ್ಕೆ ಅಮಾಯಕರ ಬಲಿ ಆಗಬಾರದೆಂದು ಕೆಲವು ಯುವ ಕಾರ್ಯಕರ್ತರು ಬಿಜೆಪಿಯ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನಾಯಕರಿಗೆ ಬಿಸಿ ಮುಟ್ಟಿಸಿದ್ದರು.

ಇದರಿಂದ ಕಂಗೆಟ್ಟ ಬಿಜೆಪಿ, ತಮ್ಮದೇ ಕಾರ್ಯಕರ್ತರು ರೊಚ್ಚಿಗೆದ್ದಿರುವುದನ್ನು ತಣಿಸಲು ದೊಡ್ಡ ಕಾರ್ಯತಂತ್ರವನ್ನೇ ರೂಪಿಸಿತು. ಮೊದಲಾಗಿ ನೆಟ್ಟಾರು ಪತ್ನಿಗೆ ಸರಕಾರಿ ಕೆಲಸ, ಕುಟುಂಬಕ್ಕೆ ಪರಿಹಾರ ಹಾಗೂ ನೆಟ್ಟಾರು ಮನೆಯ ಕನಸನ್ನು ನೆರವೇರಿಸುವ ಭರವಸೆ ನೀಡಿ ಸ್ವಲ್ಪಮಟ್ಟಿಗೆ ಕಾರ್ಯಕರ್ತರು ತಣ್ಣಗಾಗುವಂತೆ ಮಾಡಿತು. ಅಷ್ಟಕ್ಕೆ ಸುಮ್ಮನಿರದೆ ಪ್ರಕರಣವನ್ನು ಎನ್ಐಎಗೆ ನೀಡಿ ನೆಟ್ಟಾರು ಹತ್ಯೆ ಪ್ರಕರಣದ ಹಿಂದೆ ಇದೆ ಎನ್ನಲಾದ ಪಿಎಫ್ಐ- ಸಿಎಫ್ಐಯನ್ನು ನಿಷೇಧಿಸಿತ್ತು. ಇದು ಕಾರ್ಯಕರ್ತರಿಗೆ ಬಿಜೆಪಿ ಪಕ್ಷದ ಬಗ್ಗೆ ಇದ್ದ ವೈಮನಸ್ಸು ಒಂದಷ್ಟು ತಿಳಿಯಾಗಲು ಕಾರಣವಾಯಿತು.

CAA Protest

ಸಿಎಎ ಗಲಭೆಯ ವೇಳೆ ಮಂಗಳೂರಿನ ಇಬ್ಬರು ಪೊಲೀಸ್ ಗುಂಡಿನ ದಾಳಿಗೆ ಬಲಿಯಾಗಿದ್ದರು. ಈ ಸಂದರ್ಭ ಅಂದು ಸಿಎಂ ಆಗಿದ್ದ ಯಡಿಯೂರಪ್ಪನವರು ಸರಕಾರದಿಂದ ಇಬ್ಬರ ಕುಟುಂಬಸ್ಥರಿಗೂ ಪರಿಹಾರವಾಗಿ ತಲಾ 10 ಲಕ್ಷ ರೂ. ಕೊಡುವುದಾಗಿ ಘೋಷಣೆ ಮಾಡಿ ಆ ಬಳಿಕ ಹಿಂಪಡೆದಿದ್ದರು. ಇದು ಅಂದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸರಕಾರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೇ ಮಾತು ಈ ಬಾರಿ ಕೋಮುದ್ವೇಷಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರ್, ಜಲೀಲ್, ನೌಷದ್ ವಿಚಾರದಲ್ಲೂ ಕೇಳಿ ಬಂದಿದೆ. ಸಿಎಂ ಬೊಮ್ಮಾಯಿಯರು ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಮಾತ್ರ ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದ್ದರು. ಅದೇ ಸಂದರ್ಭ ಹತ್ಯೆಯಾದ ಜಲೀಲ್ ಹಾಗೂ ನೌಷಾದ್ ವಿಚಾರದಲ್ಲಿ ಸಿಎಂ ಹಾಗೂ ಸರಕಾರ ಸಂಪೂರ್ಣ ತಾರತಮ್ಯ ಮಾಡಿದೆ. ಸ್ಥಳೀಯ ಶಾಸಕರು ಸಹ ಹತ್ಯೆಯಾದವರ ಮನೆಗೆ ಕನಿಷ್ಠ ಭೇಟಿಯನ್ನು ಮಾಡಿಲ್ಲ ಎಂಬ ಮಾತು ಕೇಳಿ ಬಂದಿತ್ತು.

ಎಸ್ ಡಿಪಿಐ ನ ಅಂಗಸಂಸ್ಥೆಗಳಾದ ಪಿಎಫ್ಐ, ಸಿಎಫ್ಐ ನಿಷೇಧ ಬಿಜೆಪಿಗೆ ಈ ಬಾರಿಯ ಚುನಾವಣೆಯ ಪ್ರಬಲ ಅಸ್ತ್ರ. ಹಿಜಾಬ್ ಪ್ರಕರಣದ ಹಿಂದೆ ಸಿಎಫ್ಐ ಇದ್ದರೆ, ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಸಂಚು ರೂಪಿಸಿರುವುದನ್ನು ಎನ್ಐಎ ಪತ್ತೆ ಹಚ್ಚಿತ್ತು. ಉಡುಪಿಯ ಕಾಲೇಜೊಂದರಲ್ಲಿ ಆರು ಮಂದಿ ವಿದ್ಯಾರ್ಥಿನಿಯರಿಂದ ತಣ್ಣಗೆ ಎದ್ದ ಹಿಜಾಬ್ ಪ್ರಕರಣವನ್ನು ಅಲ್ಲಿಯೇ ಇತ್ಯರ್ಥಗೊಳಿಸಬಹುದಿತ್ತು. ಆದರೆ ರಾಜಕೀಯ ಷಡ್ಯಂತರ ಹಾಗಾಗಲು ಬಿಡಲಿಲ್ಲ. ಎರಡೂ ಕೋಮು ಪಕ್ಷಗಳು ಇದರ ಕಾವು ಆರದಂತೆ ನೋಡಿಕೊಂಡವು. 

ಕೃಷ್ಣನೂರಿನಲ್ಲಿ ಎದ್ದ ಕಿಚ್ಚು ಇಡೀ ರಾಜ್ಯದಲ್ಲಿ ಕಾಡ್ಗಿಚ್ಚಿನಂತೆ ಆವರಿಸಿತು. ಪರಿಣಾಮ ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾದ ಶಾಲಾ – ಕಾಲೇಜುಗಳು ಧರ್ಮರಾಜಕೀಯದ ಜ್ವಾಲೆಯಲ್ಲಿ ಧಗಧಗಿಸಿತು. ಹಿಜಾಬ್ ಪ್ರಕರಣವನ್ನು ಕೆಲವು ಕಾಲದವರೆಗೆ ಜೀವಂತವಾಗಿರಿಸುವಲ್ಲಿ ಎಸ್ ಡಿಪಿಐ – ಬಿಜೆಪಿ ಎರಡೂ ಪಕ್ಷಗಳು ಸದಾ ಜಾಗೃತವಾಗಿದ್ದವು. ಅಲ್ಲದೆ ಈ ಎರಡೂ ಪ್ರಕರಣಗಳ ಲಾಭವನ್ನೂ ಪಡೆದಿತ್ತು.

ಅಲ್ಲದೆ ಕಳೆದ ವರ್ಷದಿಂದ ಇನ್ನೊಂದು ಧರ್ಮರಾಜಕಾರಣದ ಅಸ್ತ್ರವನ್ನು ಎಸೆಯಲಾಗಿದೆ. ಅದು ಹಿಂದೂ ದೇವಸ್ಥಾನದ ಜಾತ್ರಾಮಹೋತ್ಸವದಲ್ಲಿ ಅನ್ಯಮತೀಯ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಅಘೋಷಿತ ನಿರ್ಭಂಧ. ಇದು ಹಿಂದೂ ಸಂಘಟನೆಗಳಿಂದ ನಡೆದ ಕಾರ್ಯವಾದರೂ ಇದರ ಸಂಪೂರ್ಣ ಲಾಭ ಮಾತ್ರ ಬಿಜೆಪಿಗಾಯಿತು. 

ಕರಾವಳಿಯಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ. ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ಮತ್ಸೋದ್ಯಮಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ಬಡ ಮೀನುಗಾರರಿಗೆ ವಸತಿ ಸಮಸ್ಯೆ, ಕಡಲ್ಕೊರೆತ, ಸೀಮೆ ಎಣ್ಣೆ ಅಲಭ್ಯತೆ,  ಡೀಸೆಲ್ ಸಬ್ಸಿಡಿ ಸಿಗದಿರುವುದು ಮೊದಲಾದ ಸಮಸ್ಯೆಗಳಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವ ಬೀಡಿ ಉದ್ಯಮ ನಶಿಸುತ್ತಿದೆ. ನಿರುದ್ಯೋಗ ಸಮಸ್ಯೆ, ಸರಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು, ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ನೀಡದಿರುವುದು, ಕರಾವಳಿ ತಾಲೂಕುಗಳಲ್ಲಿ ಉಪ್ಪು ನೀರಿನ ಸಮಸ್ಯೆ, ಕೈಗಾರಿಕೆಗಳು ಇಲ್ಲದಿರುವುದು, ಸೀಬರ್ಡ್, ಕರಾವಳಿಯಲ್ಲಿ ಪ್ರವಾಹ ಪರಿಹಾರ ಬಾರದಿರುವುದು,  ಮೂಲಭೂತ ಸೌಕರ್ಯ ಸಮಸ್ಯೆಗಳು ಇತ್ಯಾದಿಗಳು ಬಹುದೊಡ್ಡ ಸಮಸ್ಯೆಗಳಾಗಿವೆ.

 ಜೊತೆಗೆ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿರುವ ಸಮುದ್ರ ಹಾಗೂ ನದಿಗಳನ್ನು ಸದ್ಬಳಕೆ ಮಾಡದಿರುವುದು ಬಹುದೊಡ್ಡ ಕೊರತೆಯಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಈ ವಿಚಾರಗಳು ಮುನ್ನೆಲೆಗೆ ಬರುವುದೇ ಇಲ್ಲ. ಇಲ್ಲಿ ಏನಿದ್ದರೂ ಧರ್ಮರಾಜಕಾರಣವೊಂದೇ ಮುಂದು!

ಕರಾವಳಿ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದೆ. ಜೆಡಿಎಸ್ ಈ ಭಾಗದಲ್ಲಿ ನೆಲೆಯೂರಿಲ್ಲ. ಈ ಕಾರಣದಿಂದಾಗಿ ಕೈ ಕಮಲದ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ.‌‌‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಈ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ (ಯು ಟಿ ಖಾದರ್)ಮತ್ತು ಉಳಿದ 7 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. 

ಕರಾವಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೊರತುಪಡಿಸಿ ಉಳಿದ ಪಕ್ಷಗಳಿಗೆ ಅಧಿಪತ್ಯ ಸಾಧಿಸುವುದು ಕಷ್ಟಸಾಧ್ಯ. ದ.ಕ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ 15 ಕ್ಷೇತ್ರದಲ್ಲಿ ಈ ಎರಡು ರಾಷ್ಟ್ರೀಯ ಪಕ್ಷಗಳಿಂದ ಮಾತ್ರ ಸ್ಪರ್ಧೆ ನಡೆಯುತ್ತದೆ. ರಾಜ್ಯದ ಇತರ ಕೆಲವು ಭಾಗಗಳಲ್ಲಿ ಹಣ, ಮದ್ಯ, ಉಡುಗೊರೆ ‌ಮುಂತಾದ ಆಮಿಷಗಳಿಂದ‌ ಮತ ಪಡೆಯುವುದು ಸಾಮಾನ್ಯ. ಆದರೆ ಕರಾವಳಿಯಲ್ಲಿ ಇದಾವುದು ನಡೆಯುವುದಿಲ್ಲ. ಇಲ್ಲಿ ಏನಿದ್ದರೂ ಧರ್ಮಯುದ್ಧವೇ ಪ್ರಧಾನ. ಹಿಂದೂ ಪರ ಹಾಗೂ ಹಿಂದೂ ವಿರೋಧಿ ಈ ವಿಷಯದ ಮೇಲೆಯೇ ಚುನಾವಣೆಯ ಚರ್ಚೆ ಕೇಂದ್ರೀಕೃತವಾಗುತ್ತದೆ. ಅಭಿವೃದ್ಧಿ, ಆಡಳಿತ ವಿರೋಧಿಯು ಚುನಾವಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. 

ಇದನ್ನೂ ಓದಿ – https://peepalmedia.com/congress-defeated-the-congress-in-the-coast/ಕರಾವಳಿಯಲ್ಲಿ ಕಾಂಗ್ರೆಸ್ ನ್ನು ಕಾಂಗ್ರೆಸಿಗರೇ ಸೋಲಿಸಿದರು!

Related Articles

ಇತ್ತೀಚಿನ ಸುದ್ದಿಗಳು