Saturday, June 21, 2025

ಸತ್ಯ | ನ್ಯಾಯ |ಧರ್ಮ

‘ಒಂದಂಕೆ ಕಾಡು’ ಅಂಗಳದಿಂದ ‘ಓ ಒಲವೇ’ ರೋಮ್ಯಾಂಟಿಕ್ ಸಾಂಗ್ ರಿಲೀಸ್

ಟೈಟಲ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಎಲ್ಲರ ಗಮನ ಸೆಳೆದ ಸಿನಿಮಾ ‘ಒಂದಂಕೆ ಕಾಡು’. ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗುತ್ತಿರುವ ಚಿತ್ರತಂಡ ಹಾಡಿನ ಮೂಲಕ ಮತ್ತೊಮ್ಮೆ ಎಲ್ಲರನ್ನು ಮೋಡಿ ಮಾಡಲು ಬಂದಿದೆ. ಚಿತ್ರದ ರೋಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ. ಕಪಿಲ್ ನಾಯರ್ ದನಿಯಲ್ಲಿ ಮೂಡಿ ಬಂದ ‘ಓ ಒಲವೇ’ ರೋಮ್ಯಾಂಟಿಕ್ ಹಾಡು ಎಲ್ಲರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಈ ಹಾಡಿಗೆ ಡಾ. ಉಮೇಶ್ ಪಿಲ್ಲಿಕುಡೇಲು ಸಾಹಿತ್ಯವಿದ್ದು, ಮಧು ಹೆಗ್ಡೆ ಇಂಪಾದ ಸಂಗೀತವಿದೆ.

ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಒಂದಂಕೆ ಕಾಡು’ ಸಿನಿಮಾದಲ್ಲಿ ರಥರ್ವ್ ಪೊನ್ನನ್ನ ಹಾಗೂ ಸೋನಿ ಮುಲೇವ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಕಿರಣ್ ನಾಯಕ್, ಮಧು ಹೆಗಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಕನ್ನಡ, ತೆಲುಗು ಎರಡು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರೀಕರಣ ಮುಗಿಸಿರುವ ಸಿನಿಮಾ ತಂಡ ಇದೇ ವರ್ಷ ಚಿತ್ರವನ್ನು ಪ್ರೇಕ್ಷಕರೆದುರು ತರುವ ತಯಾರಿಯಲ್ಲಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಅನೌನ್ಸ್ ಮಾಡಲಿದೆ.

ನಿರ್ದೇಶಕ ರಾಮಚಂದ್ರ ವೈದ್ಯ ಕಿರುತೆರೆಯಲ್ಲಿ ದೀರ್ಘ ಕಾಲದಿಂದ ಗುರುತಿಸಿಕೊಂಡಿದ್ದಾರೆ. ಜೊತೆ ಜೊತೆಯಲಿ, ಶುಭ ವಿವಾಹ, ಮಾನಸ ಸರೋವರ ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿ, ಸುಮಾರು ಹದಿನೈದು ವರ್ಷಗಳಿಂದ ಕಿರುತೆರೆ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದಂಕೆ ಕಾಡು ಇವರ ನಿರ್ದೇಶನದ ಮೊದಲ ಸಿನಿಮಾ. ಈ ಮೂಲಕ ನಿರ್ದೇಶಕನಾಗಿ ಬೆಳ್ಳಿತೆರೆಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

ಈ ಚಿತ್ರಕ್ಕೆ ಶ್ರಾವಣಿ ಶಿವ್ ಕಥೆ ಬರೆದಿದ್ದು, ರಾಮಚಂದ್ರ ವೈದ್ಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಟಿ.ಜಿ ನಂದೀಶ್ ಸಂಭಾಷಣೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಉಗ್ರಂ, ಕೆಜಿಎಫ್ ಚಾಪ್ಟರ್-1 ಸಿನಿಮಾ ಖ್ಯಾತಿಯ ಶ್ರೀಕಾಂತ್ ಸಂಕಲನ, ಮಧು ಹೆಗ್ಡೆ ಮ್ಯೂಸಿಕ್ ಸಿನಿಮಾದಲ್ಲಿದೆ. ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ, ಕನ್ನಡ ಹಾಡುಗಳಿಗೆ ಹೃದಯ ಶಿವ ಹಾಗೂ ಡಾಕ್ಟರ್ ಉಮೇಶ್ ಪಿಲ್ಲಿಕುಡೇಲು ಸಾಹಿತ್ಯ ಬರೆದಿದ್ದು,ಆರ್ ಆರ್ ಆರ್ ಸೇರಿದಂತೆ ಹಲವು ಸಿನಿಮಾಗಳಿಗೆ ಸಾಹಿತ್ಯ ಬರೆದಿರುವ ವರದರಾಜು ಚಿಕ್ಕಬಳ್ಳಾಪುರ ತೆಲುಗಿನಲ್ಲಿ ಈ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

Related Articles

ಇತ್ತೀಚಿನ ಸುದ್ದಿಗಳು

You cannot copy content of this page