Home ದೇಶ ಆಪರೇಷನ್ ಸಿಂಧೂರ್: ರಕ್ಷಣಾ ಬಜೆಟ್‌ 50 ಸಾವಿರ ಕೋಟಿ ರೂ. ಹೆಚ್ಚಳ!

ಆಪರೇಷನ್ ಸಿಂಧೂರ್: ರಕ್ಷಣಾ ಬಜೆಟ್‌ 50 ಸಾವಿರ ಕೋಟಿ ರೂ. ಹೆಚ್ಚಳ!

0

ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳಲಿದ್ದು, ರಕ್ಷಣಾ ಬಜೆಟ್‌ಗೆ 50,000 ಕೋಟಿ ರೂ.ಗಳಷ್ಟು ಹೆಚ್ಚುವರಿ ನಿಧಿಯನ್ನು ಕೇಂದ್ರವು ಮಂಜೂರು ಮಾಡಲಿದೆ ಎನ್ನಲಾಗಿದೆ.

ಆಪರೇಷನ್ ಸಿಂಧೂರ್ನ ಹಿನ್ನೆಲೆಯಲ್ಲಿ ಸರ್ಕಾರವು ಈ ದಿಶೆಯಲ್ಲಿ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ. ಈ ವರ್ಷದ ಬಜೆಟ್ಟಿನಲ್ಲಿ ರಕ್ಷಣಾ ಇಲಾಖೆಗೆ 6.81 ಲಕ್ಷ ಕೋಟಿ ರೂ.ಗಳ ಬಜೆಟ್ ಅನುದಾನ ನೀಡಲಾಗಿದೆ. ಈ ಹೆಚ್ಚುವರಿ ಅನುದಾನಕ್ಕೆ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಇದರಿಂದ ರಕ್ಷಣಾ ಕ್ಷೇತ್ರಕ್ಕೆ ಅನುದಾನಿತ ನಿಧಿ ಮೊತ್ತ 7 ಲಕ್ಷ ಕೋಟಿ ರೂ.ಗಳನ್ನು ಮೀರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ಮತ್ತು ಪಾಕಿಸ್ತಾನದಿಂದ ಭದ್ರತೆಗೆ ಎದುರಾಗುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ರಕ್ಷಣಾ ಕ್ಷೇತ್ರವನ್ನು ಬಲಪಡಿಸುವ ಗುರಿಯೊಂದಿಗೆ ಈ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಕೇಂದ್ರವು ಅನುದಾನವನ್ನು ಹೆಚ್ಚಿಸಿತ್ತು. ಈ ಯೋಜನೆಯಡಿ 6,81,210 ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿತ್ತು. 2024-25ರ ಬಜೆಟ್ ಅನುದಾನದ (6.22 ಲಕ್ಷ ಕೋಟಿ ರೂ.) ಜೊತೆ ಹೋಲಿಸಿದರೆ ಇದು 9.53% ಹೆಚ್ಚು.

ಸಂಶೋಧಿತ ಅಂದಾಜಿನ (6.41 ಲಕ್ಷ ಕೋಟಿ ರೂ.) ಜೊತೆಗೆ ಹೋಲಿಸಿದರೆ 6.2% ಹೆಚ್ಚಾಗಿದೆ. ಈ ಅನುದಾನದಲ್ಲಿ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗಳ ಖರೀದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ (GDP)ಯಲ್ಲಿ ರಕ್ಷಣಾ ವ್ಯವಸ್ಥೆಗೆ ಮೀಸಲಿಟ್ಟುರುವುದು 1.91%.

50,000 ಕೋಟಿ ರೂ.ಗಳಪೂರಕ ಬಜೆಟ್‌ನ ನಿಧಿಗಳನ್ನು ಸಂಶೋಧನೆ, ಶಸ್ತ್ರಾಸ್ತ್ರಗಳು ಮತ್ತು ಅಗತ್ಯ ಸಾಮಗ್ರಿಗಳ ಖರೀದಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ. 2014-15ರ ಆರ್ಥಿಕ ವರ್ಷದಲ್ಲಿ ಎನ್‌ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಬಜೆಟ್‌ನಲ್ಲಿ ರಕ್ಷಣಾ ಮೀಸಲು 2.29 ಲಕ್ಷ ಕೋಟಿ ರೂ.ಗಳಾಗಿತ್ತು. ಒಟ್ಟು ವಾರ್ಷಿಕ ಬಜೆಟ್‌ನ 13% ರಕ್ಷಣೆಗೆ ಮೀಸಲಿಡಲಾಗಿತ್ತು.

ಏಪ್ರಿಲ್ 22, 2025ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ಬೈಸರನ್ ಕಣಿವೆಯಲ್ಲಿ ಉಗ್ರರು ಮಾರಣಹೋಮ ನಡೆಸಿದ್ದರು. ಸೈನಿಕರ ಉಡುಗೆಯಲ್ಲಿ ಬಂದ ಉಗ್ರರು ಪ್ರವಾಸಿಗರನ್ನು ಸಮೀಪದಿಂದ ಗುಂಡಿಟ್ಟು ಕೊಂದಿದ್ದರು. ಈ ಘಟನೆಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತವು ಆಪರೇಷನ್ ಸಿಂಧೂರ್ನಡಿ ಪಿಒಕೆ ಮತ್ತು ಪಾಕಿಸ್ತಾನದ ಉಗ್ರಗಾಮಿ ನೆಲೆಗಳನ್ನು ಧ್ವಂಸಗೊಳಿಸಿತು.

ಈ ಕಾರ್ಯಾಚರಣೆಯನ್ನು ಜೀರ್ಣಿಸಿಕೊಳ್ಳಲಾಗದ ಪಾಕಿಸ್ತಾನವು ನಂತರ ಭಾರತವನ್ನು ಕೆರಳಿಸುವ ಕೃತ್ಯಗಳಲ್ಲಿ ತೊಡಗಿತು. ಇದರಿಂದ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಉಗ್ರ ಸ್ವರೂಪಕ್ಕೆ ತಿರುಗಿತು. ಆದರೆ, ಭಾರತದ ದಾಳಿಯ ತೀವ್ರತೆಯನ್ನು ತಡೆಯಲಾಗದ ಪಾಕಿಸ್ತಾನವು ಹಿಂದೆ ಸರಿದು, ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿತು.

You cannot copy content of this page

Exit mobile version