ಚೆನ್ನೈ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿಸುವ ಸಂಸದೀಯ ಸಮಿತಿಯ ಶಿಫಾರಸಿನ ವಿರುದ್ಧ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆಯ) ಯುವ ಮತ್ತು ವಿದ್ಯಾರ್ಥಿ ಘಟಕ ತಮಿಳುನಾಡಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಹಾಗೂ ಸ್ಟಾಲಿನ್ ಅವರ ಪುತ್ರ ಉದಯ್ ಸ್ಟಾಲಿನ್ ಮತ್ತು ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಸಿವಿಎಂಪಿ ಎಳಿಲರಸನ್ ಅವರು ಬುಧವಾರ ಜಂಟಿಯಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ಕೇಂದ್ರವನ್ನು ಖಂಡಿಸಿದ ನಂತರ, ಅವರು ತಮ್ಮ ಹೇಳಿಕೆಯಲ್ಲಿ ʼಹಿಂದಿ ಹೇರಿಕೆʼ ವಿರುದ್ಧ ಇತಿಹಾಸದಲ್ಲಿ ಯುವಕರು ಮಾಡಿದ ತ್ಯಾಗವನ್ನು ಪಟ್ಟಿ ಮಾಡಿದ್ದಾರೆ. ಅಮಿತ್ ಶಾ ಅವರ ಶಿಪಾರಸು ಭವಿಷ್ಯದ ಪೀಳಿಗೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಹೀಗಾಗಿ ʼನಮ್ಮ ಮೇಲೆ ಇನ್ನೊಂದು ಭಾಷಾ ಯುದ್ಧವನ್ನು ಹೇರಬೇಡಿʼ ಎಂದು ಹೇಳಿದರು.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ʼಹಿಂದಿ ಹೇರಿಕೆ ನೀತಿʼ ವಿರುದ್ಧ ಪ್ರತಿಭಟನೆಯನ್ನು ಘೋಷಿಸಿದರು. ನಂತರ ಅಕ್ಟೋಬರ್ 15 ರಂದು ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಲು ಡಿಎಂಕೆ ಯೋಜಿಸಿದೆ ಎಂದು ತಿಳಿಸಿದರು.
ಇದಕ್ಕೆ ಮೊದಲು ಅ.10ರಂದು ಸ್ಟಾಲಿನ್ ತಾವು ಮಾಡಿದ್ದ ಸರಣಿ ಟ್ವೀಟ್ ನಲ್ಲಿ ಹಿಂದಿ ಹೇರಿಕೆ ಪ್ರಯತ್ನದ ವಿರುದ್ಧ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ಅವರು ತಮ್ಮ ಟ್ವೀಟ್ ನಲ್ಲಿ ʼಭಾರತದ ಭಾಷಾ ವೈವಿದ್ಯತೆಯನ್ನು ಕಡೆಗಣಿಸಿ ಹಿಂದಿ ಹೇರಿಕೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ತೀವ್ರ ರೀತಿಯಲ್ಲಿ ನಡೆಸುತ್ತಿರುವ ಪ್ರಯತ್ನ ಆತಂಕದ ಮಟ್ಟ ತಲುಪಿದೆ. ಅಧಿಕೃತ ಭಾಷೆ ಕುರಿತ ಸಂಸದೀಯ ಸಮಿತಿಯ ವರದಿಯ 11ನೆಯ ಸಂಪುಟದ ಪ್ರಸ್ತಾವಗಳು ಭಾರತದ ಆತ್ಮದ ಮೇಲೆ ನಡೆಸಿರುವ ನೇರವಾದ ಪ್ರಹಾರವಾಗಿʼ ಎಂದು ಬರೆದಿದ್ದರು. ಮುಂದುವರೆದು, ʼಹಿಂದಿ ಹೇರಿಕೆ ಮಾಡಿದ್ದೇ ಆದಲ್ಲಿ ಹಿಂದಿ ಮಾತನಾಡದ ವಿಶಾಲ ಜನಮೂಹವು ಎರಡನೆಯ ದರ್ಜೆಯ ನಾಗರಿಕರಾಗುತ್ತಾರೆ. ಹಿಂದಿ ಹೇರಿಕೆ ನಡೆಸುವುದು ಭಾರತದ ಸಮಗ್ರತೆಗೆ ವಿರುದ್ಧವಾದ ನಡೆ. ಆಳುವ ಬಿಜೆಪಿ ಸರ್ಕಾರವು ಹಿಂದೆ ನಡೆದ ಹಿಂದಿ ವಿರೋಧಿ ಚಳವಳಿಗಳಿಂದ ಪಾಠ ಕಲಿಯುವುದು ಒಳ್ಳೆಯದುʼ ಎಂದು ಸಹ ಬಿಜೆಪಿ ಸರ್ಕಾರವನ್ನು ಎಚ್ಚರಿಸಿದ್ದರು.
ಇದೇ ಸಂದರ್ಭದಲ್ಲಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಅ.12ರಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಹಿಂದಿಯನ್ನು ಹೇರಲು ನಡೆಸುತ್ತಿರುವ ಪ್ರಯತ್ನಗಳನ್ನು ʼಒಪ್ಪಲಸಾಧ್ಯʼ ಎಂದಿದ್ದರು. ಕೇಂದ್ರ ಸರ್ಕಾರದ ಸೇವೆಗಳ ಪರೀಕ್ಷೆಗಳ ಮಾಧ್ಯಮವನ್ನು ಹಿಂದಿಯನ್ನಾಗಿಸುವ ಮತ್ತು ಐಐಟಿ, ಐಐಎಂಗಳಲ್ಲಿ ಅಧ್ಯಯನ ಭಾಷೆಯನ್ನು ಹಿಂದಿಯನ್ನಾಗಿಸುವ ಅಧಿಕೃತ ಭಾಷಾ ಸಂಸದೀಯ ಸಮಿತಿಯ ಪ್ರಸ್ತಾಪಗಳನ್ನು ಕೇರಳ ಸರ್ಕಾರ ಒಪ್ಪಲು ಸಾದ್ಯವೇ ಇಲ್ಲ ಎಂದು ತಿಳಿಸಿದ್ದರು.