ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆಡುವ ಮೌಖಿಕ ಮಾತುಗಳು ಕ್ಷಣಮಾತ್ರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ ಮತ್ತು ನ್ಯಾಯಾಧೀಶರು ದಿನದ ಕೆಲಸ ಮುಗಿಸಿ ಮನೆ ತಲುಪುವ ಮುನ್ನವೇ ಎಲ್ಲೆಡೆ ಹರಡಿರುತ್ತವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿ ಹೈಕೋರ್ಟ್ನಲ್ಲಿ ನಡೆದ ‘ಐಬಿಸಿ ಮಂತ್ರ: ದಿ ಲಾ ಅಂಡ್ ಪ್ರಾಕ್ಟೀಸ್ ಆಫ್ ಇನ್ಸಾಲ್ವೆನ್ಸಿ ಅಂಡ್ ಬ್ಯಾಂಕ್ರಪ್ಸಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
‘ಬಾರ್ ಅಂಡ್ ಬೆಂಚ್’ ವರದಿಯ ಪ್ರಕಾರ, ನ್ಯಾಯಮೂರ್ತಿ ನಾಥ್, “ನೀವು ಕೋರ್ಟ್ನಲ್ಲಿ ಯಾವುದೋ ಮಾತನ್ನು ಸಾಮಾನ್ಯ ಸಂಭಾಷಣೆಯಂತೆ ಹೇಳಿದರೂ, ನೀವು ಮನೆ ತಲುಪುವಷ್ಟರಲ್ಲಿ ಅದು ಎಲ್ಲೆಡೆ ಹರಡಿರುತ್ತದೆ. ಟ್ವಿಟರ್ (X), ಇನ್ಸ್ಟಾಗ್ರಾಮ್, ಲಿಂಕ್ಡ್ಇನ್ ಸೇರಿದಂತೆ ಎಲ್ಲಾ ಪ್ಲಾಟ್ಫಾರ್ಮ್ಗಳನ್ನು ತಲುಪಿರುತ್ತದೆ,” ಎಂದರು.
ಪುಸ್ತಕ ಬೇರೆಯವರು ತೆಗೆದುಕೊಂಡರೆ ಕಾಯಬೇಕಾಗುತ್ತಿತ್ತು: ನ್ಯಾಯಮೂರ್ತಿ ವಿಕ್ರಮ್ ನಾಥ್
ತಾವು ವೃತ್ತಿಗೆ ಬಂದಾಗ ಇದ್ದ ಕಾನೂನು ಸಂಶೋಧನೆಯ ವಿಧಾನಕ್ಕೂ, ಇಂದಿನ ವೇಗದ ಮಾಹಿತಿ ಯುಗಕ್ಕೂ ಇರುವ ವ್ಯತ್ಯಾಸವನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ವಿವರಿಸಿದರು. ಇಂದಿನ ಯುವ ವಕೀಲರ ಲ್ಯಾಪ್ಟಾಪ್ಗಳಲ್ಲೇ ಇಡೀ ಗ್ರಂಥಾಲಯದ ಸೌಲಭ್ಯ ಲಭ್ಯವಿದೆ. ಆದರೆ ಹಿಂದೆ ವಕೀಲರು ಭೌತಿಕ ಲೈಬ್ರರಿಗಳನ್ನು ನೆಚ್ಚಿಕೊಳ್ಳಬೇಕಿತ್ತು. ಹೆಚ್ಚಾಗಿ ತಮಗೆ ಬೇಕಾದ ಪುಸ್ತಕದ ಒಂದೇ ಪ್ರತಿ ಲಭ್ಯವಿರುತ್ತಿತ್ತು. ಯಾರಾದರೂ ಆ ಪುಸ್ತಕವನ್ನು ತೆಗೆದುಕೊಂಡು ಹೋಗಿದ್ದರೆ, ಅವರು ಕಾಯಬೇಕಿತ್ತು ಅಥವಾ ಬೇರೆ ಲೈಬ್ರರಿಯಲ್ಲಿ ಹುಡುಕಬೇಕಿತ್ತು ಎಂದು ನೆನಪಿಸಿಕೊಂಡರು.
ಹಿಂದೆ ಕಾನೂನು ಸಂಶೋಧನೆಗೆ ಹೆಚ್ಚಿನ ಸಮಯ ಹಿಡಿಯುತ್ತಿತ್ತಾದರೂ, ಆ ಪ್ರಕ್ರಿಯೆಯು ಸಂಪೂರ್ಣವಾಗಿ ಅನನುಕೂಲವೇನೂ ಆಗಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ವಕೀಲರು ತಮ್ಮ ಯೋಜನಾಬದ್ಧ ಓದಿಗಿಂತ ಹೆಚ್ಚಿನದನ್ನು ಓದುತ್ತಿದ್ದರು ಮತ್ತು ಒಂದು ವಿಷಯವನ್ನು ಹುಡುಕುವಾಗ ಅವರಿಗೆ ಇನ್ನಷ್ಟು ಉಪಯುಕ್ತವಾದ ಮತ್ತೊಂದು ಮಾಹಿತಿ ಸಿಗುತ್ತಿತ್ತು ಎಂದು ತಿಳಿಸಿದರು.
ತಂತ್ರಜ್ಞಾನವು ಕಾನೂನು ಸಂಶೋಧನೆಯನ್ನು ಸುಧಾರಿಸಿದೆ: ನ್ಯಾಯಮೂರ್ತಿ ವಿಕ್ರಮ್ ನಾಥ್
ತಂತ್ರಜ್ಞಾನವು ಖಂಡಿತವಾಗಿಯೂ ಕಾನೂನು ಸಂಶೋಧನೆಯನ್ನು ಸುಧಾರಿಸಿದೆ, ಆದರೆ ಇದರಿಂದ ಉತ್ತಮ ಕಾನೂನು ಜ್ಞಾನ ಮತ್ತು ತಿಳುವಳಿಕೆಯ ಅಗತ್ಯವೇನೂ ಕಡಿಮೆಯಾಗಿಲ್ಲ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು. “ಇಂದು ಅಪಾರ ಪ್ರಮಾಣದ ಮಾಹಿತಿ ಲಭ್ಯವಿದೆ. ಆದರೆ ಅತ್ಯಂತ ಕಷ್ಟಕರವಾದ ವಿಷಯವೆಂದರೆ ಸರಿಯಾದ ಲೋಕದೃಷ್ಟಿಯನ್ನು ಪಡೆದುಕೊಳ್ಳುವುದು,” ಎಂದು ಅವರು ಪ್ರತಿಪಾದಿಸಿದರು.
