Monday, July 28, 2025

ಸತ್ಯ | ನ್ಯಾಯ |ಧರ್ಮ

ಸ್ಟೀಲ್‌ ಬ್ರಿಡ್ಜ್‌ ಕಳಪೆ ಕಾಮಗಾರಿಗೆ ವಿರೋಧ: ಎಎಪಿ ಮುಖಂಡರಿಗೆ ಸಮನ್ಸ್

ಬೆಂಗಳೂರು: ಬೆಂಗಳೂರಿನ ಶಿವಾನಂದ ವೃತ್ತದ ಸ್ಟೀಲ್‌ ಬ್ರಿಡ್ಜ್‌ನಲ್ಲಿನ ಕಳಪೆ ಕಾಮಗಾರಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಆಮ್‌ ಆದ್ಮಿ ಪಾರ್ಟಿ ಮುಖಂಡರ ವಿರುದ್ಧ ಪೊಲೀಸ್‌ ಇಲಾಖೆಯು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಸಮನ್ಸ್‌ ಜಾರಿಗೊಳಿಸಿದೆ.

ಸ್ಟೀಲ್‌ ಬ್ರಿಡ್ಜ್‌ನಲ್ಲಿ ಹಲವು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಆಗಸ್ಟ್‌ 29, 2022ರಂದು ಆಮ್‌ ಆದ್ಮಿ ಪಾರ್ಟಿ ಮುಖಂಡರು “40% ಕಮಿಷನ್‌ ಮೇಲ್ಸೇತುವೆ” ಹೆಸರಿನಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಭಾಗವಹಿಸಿದ್ದ ಎಎಪಿ ಮುಖಂಡರಾದ ಮೋಹನ್‌ ದಾಸರಿ, ಜಗದೀಶ್‌ ವಿ ಸದಂ, ಸುರೇಶ್‌ ರಾಥೋಡ್‌, ಕುಶಲ ಸ್ವಾಮಿ , ಚನ್ನಪ್ಪಗೌಡ ನೆಲ್ಲೂರು, ಉಷಾ ಮೋಹನ್‌, ಶಾಶಾವಲಿ  ಸೇರಿದಂತೆ ಒಟ್ಟು 18 ನಾಯಕರ ವಿರುದ್ಧ ಸಮನ್ಸ್‌ ಜಾರಿಯಾಗಿದೆ.‌

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಅವ್ಯವಹಾರವನ್ನು ಪ್ರಶ್ನಿಸುವ ಹಾಗೂ ಅದರ ವಿರುದ್ಧ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರವು ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನ ಮಾಡುತ್ತಿದೆ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದರೂ ಮೊಕದ್ದಮೆ ದಾಖಲಿಸಿಕೊಂಡಿರುವುದು ಖಂಡನೀಯ. ರಾಜ್ಯ ಬಿಜೆಪಿಯು ಆಮ್‌ ಆದ್ಮಿ ಪಾರ್ಟಿಯ ಭಯದಿಂದ ಬಳಲುತ್ತಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.

ಶಿವಾನಂದ ವೃತ್ತದ ಸ್ಟೀಲ್‌ ಸೇತುವೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಳಪೆ ಗುಣಮಟ್ಟದ ಬೇರಿಂಗ್, ಶಾಕ್‌ ಅಬ್ಸರ್ವರ್‌ ಬಳಸಿ ನಿರ್ಮಿಸಿರುವ ಅನುಮಾನ ಮೂಡುತ್ತದೆ. ಸೇತುವೆಯಲ್ಲಿ ಸುಮಾರು 20 ಮೀಟರ್‌ಗೊಮ್ಮೆ ಜಾಯಿಂಟ್‌ಗಳಿದ್ದು, ಅಲ್ಲಿ ವಾಹನ ಸವಾರರಿಗೆ ಕಿರಿಕಿರಿಯಾಗುವಂತಹ ಅವೈಜ್ಞಾನಿಕ ಹಂಪುಗಳನ್ನು ನಿರ್ಮಿಸಲಾಗಿದೆ. ಲಘು ವಾಹನ ಸಂಚರಿಸಿದರೂ ಸೇತುವೆಯು ವೈಬ್ರೇಟ್‌ ಆಗುತ್ತಿದೆ. ಕಳಪೆ ಕಾಮಗಾರಿಯಿಂದಾಗಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸ್ಟೀಲ್‌ ಬ್ರಿಡ್ಜ್‌ ಮೇಲಿನ ಸಂಚಾರಕ್ಕೆ ಸರ್ಕಾರವೇ ನಿರ್ಬಂಧ ಹೇರಿದೆ. ಇದರ ವಿರುದ್ಧ ದನಿ ಎತ್ತಿದ್ದಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಅಕ್ರಮವನ್ನು ಮುಚ್ಚಿಡುವ ಪ್ರಯತ್ನ ಎಂದು ಮೋಹನ್‌ ದಾಸರಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page