Home ಜನ-ಗಣ-ಮನ ಹಾಸನ : ಪತ್ರಕರ್ತರ ಮೇಲೆ ದಬ್ಬಾಳಿಕೆ : ಪಿಎಸ್ಐ ದರ್ಪಕ್ಕೆ ಆಕ್ರೋಶ

ಹಾಸನ : ಪತ್ರಕರ್ತರ ಮೇಲೆ ದಬ್ಬಾಳಿಕೆ : ಪಿಎಸ್ಐ ದರ್ಪಕ್ಕೆ ಆಕ್ರೋಶ

0

ಹಾಸನ : ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸುವ ವೇಳೆಯಲ್ಲಿ ಫೋಟೊ ಕ್ಲಿಕ್ಕಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತ, ದಿನಪತ್ರಿಕೆ ಸಂಪಾದಕ ಬ್ಯಾಕರವಳ್ಳಿ ವೆಂಕಟೇಶ್ ಅವರಿಗೆ ಪಿಎಸ್ಐ ಅಧಿಕಾರಿಯೊಬ್ಬರು ಬೆದರಿಕೆ ಹಾಕಿರುವ ಘಟನೆ ಹಾಸನದ ವಾರ್ತಾ ಇಲಾಖೆ ಮುಂಭಾಗ ನಡೆದಿದೆ.

ಹಾಸನದ ವಾರ್ತಾ ಇಲಾಖೆ ಮುಂಭಾಗ ಹಣ್ಣು ಮಾರಾಟ ಮಾಡುತ್ತಿದ್ದ ಆಟೋವೊಂದನ್ನು ಪೊಲೀಸರು ತೆರವುಗೊಳಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆಗ ಅಲ್ಲಿಯೇ ಇದ್ದ ವೈಚಾರಿಕ ದಿನಪತ್ರಿಕೆ ಸಂಪಾದಕ ಬ್ಯಾಕರವಳ್ಳಿ ವೆಂಕಟೇಶ್ ಫೋಟೋ ಕ್ಲಿಕ್ಕಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ಐ ಮಣಿ ವೆಂಕಟೇಶ್ ಅವರನ್ನು ಕಟುವಾಗಿ ನಿಂದಿಸಿದ್ದಾರೆ.

ಪತ್ರಕರ್ತ ಎಂದು ಗುರುತಿನ ಕಾರ್ಡ್ ತೋರಿಸಿದರೆ ಅದನ್ನೂ ಕಿತ್ತುಕೊಂಡಿದ್ದಾರೆ. ನಿಮಗೆ ಫೋಟೋ ತೆಗೆಯುವುದಕ್ಕೆ ಪರ್ಮೀಷನ್ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ. ಅಲ್ಲಿದ್ದ ಇತರ ಪತ್ರಕರ್ತರನ್ನೂ ಬೆದರಿಸಿದ್ದಾರೆ. ಇದರಿಂದ ವಿಚಲಿತರಾದ ವೆಂಕಟೇಶ್ ಸಮಾಧಾನದಿಂದ ಉತ್ತರಿಸಿದರೂ ಯಾವುದೇ ಉಪಯೋಗ ಆಗಿಲ್ಲ.

ಪತ್ರಕರ್ತರು ಫೋಟೋ ಕ್ಲಿಕ್ಕಿಸಲು ಯಾರಿಂದ ಮತ್ತು ಎಲ್ಲಿಂದ ಅನುಮತಿ ಪಡೆಯಬೇಕು? ಯಾವ ಯಾವ ಸ್ಥಳದಲ್ಲಿ ಮಾತ್ರ ಫೋಟೋ ತೆಗೆಯಬಹುದು? ನಮ್ಮ ಕೆಲಸ ನಾವು ಮಾಡಲು ಪಿಎಸ್ಐ ಮಣಿ ಅವರ ಅನುಮತಿ ಕಡ್ಡಾಯವೇ? ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಇಂತಹ ಸರ್ವಾಧಿಕಾರಿ ಧೋರಣೆಯ ಅಧಿಕಾರಿಗಳಿಂದ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ಬರಲು ಸಾಧ್ಯವಿಲ್ಲ. ತಕ್ಷಣವೇ PSI ಮಣಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಪತ್ರಕರ್ತರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ (ಅದರಲ್ಲೂ ಯಾವ ನಿರ್ಬಂಧವೂ ಇಲ್ಲದ ಜಾಗದಲ್ಲಿ) ಫೋಟೋ ತೆಗೆಯಲು ಯಾರು ಪರ್ಮಿಷನ್ ಕೊಟ್ಟಿದ್ದಾರೆ? ಎಂದು ಪ್ರಶ್ನಿಸುವಷ್ಟು ದಡ್ಡತನ ಪ್ರದರ್ಶಿಸುವವರು ಹೇಗೆ ಪೊಲೀಸ್ ಇಲಾಖೆಯಲ್ಲಿ ಆ ಹುದ್ದೆ ಯಲ್ಲಿರಲು ಸಾಧ್ಯ ಎನ್ನುವ ಮೂಲಕ ಹಾಸನ ಪತ್ರಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಮೂಲತಃ ಮಂಡ್ಯದಲ್ಲಿ ಕರ್ತವ್ಯ ನಿರತರಾಗಿರುವ ಪಿಎಸ್ಐ ಮಣಿ, ಹಾಸನಾಂಬ ಜಾತ್ರೆಯ ಉತ್ಸವದ ಭದ್ರತಾ ಜವಾಬ್ದಾರಿಯ ಹಿನ್ನೆಲೆಯಲ್ಲಿ ನಿಯೋಜನೆಗೊಂಡವರಾಗಿದ್ದಾರೆ. ಪಿಎಸ್ಐ ಮಣಿ ಅವರ ವರ್ತನೆಗೆ ಹಾಸನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರಿಗೆ ಘಟನೆ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ನ್ಯಾಯ ಕೊಡಿಸುವ ಬಗ್ಗೆ ಒತ್ತಡ ಬಿದ್ದಿದೆ.

You cannot copy content of this page

Exit mobile version