Home ರಾಜ್ಯ ದಕ್ಷಿಣ ಕನ್ನಡ ಇತರ ಧರ್ಮಗಳ ವ್ಯಾಪಾರಿಗಳಿಗೆ ಬಹಿಷ್ಕಾರ: ವಿಹಿಂಪ ನಡೆಯನ್ನು ಖಂಡಿಸಿದ ನಾಗರಿಕ ಸಂಘಟನೆಗಳು

ಇತರ ಧರ್ಮಗಳ ವ್ಯಾಪಾರಿಗಳಿಗೆ ಬಹಿಷ್ಕಾರ: ವಿಹಿಂಪ ನಡೆಯನ್ನು ಖಂಡಿಸಿದ ನಾಗರಿಕ ಸಂಘಟನೆಗಳು

0

ಮಂಗಳೂರು: ಜಿಲ್ಲೆಯ ಮಂಗಳಾದೇವಿ ದೇವಸ್ಥಾನದ ರಥಬೀದಿಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಸ್ಥಳ ನೀಡಬಾರದೆಂದು ರಚ್ಚೆ ಹಿಡಿದಿದ್ದ ವಿಶ್ವ ಹಿಂದೂ ಪರಿಷದ್‌ ಈಗ ಹೊಸದೊಂದು ವರಾತ ತೆಗೆದಿದ್ದು, ಜನರಿಗೆ ಅಂಗಡಿಯ ಮುಂದೆ ಕೇಸರಿ ಬಾವುಟ ಕಟ್ಟಿರುವ ಜನರ ಬಳಿಯಷ್ಟೇ ವ್ಯಾಪಾರ ಮಾಡುವಂತೆ ಅದು ಕರೆ ನೀಡಿದೆ.

ಈ ಕರೆಗೆ ವಿರೋಧ ವ್ಯಕ್ತಪಡಿಸಿರುವ ದಕ್ಷಿಣ ಕನ್ನಡ, ಮಂಗಳೂರಿನ ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯು ಈ ಕರೆ ನೀಡಿರುವ ನಾಯಕರ ವಿರುದ್ಧ ಸರಕಾರ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ವಿಎಚ್‌ಪಿ ಇತರ ಧರ್ಮದ ವ್ಯಾಪಾರಿಗಳನ್ನು ಬಹಿಷ್ಕರಿಸಲು ಕರೆ ನೀಡುವ ಮೂಲಕ ಜನರನ್ನು ವಿಭಜಿಸುತ್ತಿದೆ ಅದು ಹೇಳಿದೆ.

ವಿಎಚ್‌ಪಿ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಅವರು ಹೇಳಿಕೆ ನೀಡಿ, 2002ರಲ್ಲಿ ಜಾರಿಗೆ ತಂದಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದತ್ತಿ ಕಾಯ್ದೆಯ ಪ್ರಕಾರ ಹಿಂದೂ ಧಾರ್ಮಿಕ ಸಂಸ್ಥೆಯ ಬಳಿ ಇರುವ ಜಾಗವನ್ನು ಅನ್ಯ ಧರ್ಮದ ವ್ಯಕ್ತಿಗೆ ಗುತ್ತಿಗೆ ನೀಡುವುದನ್ನು ನಿಷೇಧಿಸಲಾಗಿದೆ. ಆದರೆ ಮಂಗಳಾದೇವಿ ದೇವಿ ದೇವಸ್ಥಾನದ ಆಡಳಿತ ಮಂಡಳಿ ಇತರೆ ಧರ್ಮದ ಜನರಿಗೂ ಅವಕಾಶ ನೀಡಿದೆ ಎಂದು ಆರೋಪಿಸಿದ್ದಾರೆ.

ಆದರೆ ಈ ಹೇಳಿಕೆಯನ್ನು ಖಂಡಿಸಿರುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವ ಒಕ್ಕೂಟದ (ಡಿವೈಎಫ್‌ಐ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ “ಈ ಹೇಳಿಕೆಯನ್ನು ಖಂಡಿಸಿದ ಮಾತನಾಡಿ, ಶತಮಾನಗಳಿಂದಲೂ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಆಚರಣೆಯಲ್ಲಿ ಎಲ್ಲಾ ಧರ್ಮದ ಜನರು ಸೇರುತ್ತಿದ್ದರು. ದೇವಸ್ಥಾನದ ಆಸುಪಾಸಿನಲ್ಲಿ ಎಲ್ಲಾ ಧರ್ಮದ ಜನರು ನಿಂತು ದಸರಾ ಹುಲಿ ಕುಣಿತವನ್ನು ನೋಡಿ ಆನಂದಿಸುತ್ತಿದ್ದರು, ಜಾತ್ರೆಯ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಎಲ್ಲಾ ಧರ್ಮದ ಜನರು ಒಟ್ಟಾಗಿ ಸೇರುವ ಮೂಲಕ ಜಾತಿ, ಮತ ಮತ್ತು ಧರ್ಮದ ಮಿತಿಗಳನ್ನು ಮೀರಿ ಬದುಕು ನಡೆಸುತ್ತಿದ್ದಾರೆ” ಎಂದು ಹೇಳಿದರು.

ದೇವಸ್ಥಾನದ ಮುಂಭಾಗದ ರಸ್ತೆ ಮಂಗಳೂರು ಮಹಾನಗರ ಪಾಲಿಕೆಗೆ (ಎಂಸಿಸಿ) ಸೇರಿದ್ದು, ಅದರ ಜಮೀನಿನಲ್ಲಿ ಮಳಿಗೆಗಳನ್ನು ಹಾಕಲಾಗಿದೆ ಎಂದು ಹೇಳಿದರು.

ದೇವಸ್ಥಾನದ ಜಾತ್ರೆಯಲ್ಲಿ ಅನ್ಯ ಧರ್ಮದ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವಂತೆ ಕರೆ ನೀಡುವುದು ಅಪರಾಧ ಎಂದು ವೇದಿಕೆ ಹೇಳಿದೆ. ಇದು ಸಂವಿಧಾನದ ಉಲ್ಲಂಘನೆಯಾಗಿದ್ದು, ಪೊಲೀಸರು ಹಾಗೂ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅದು ಆಗ್ರಹಿಸಿದೆ.

ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವದಲ್ಲಿ ಬಿಜೆಪಿ ತನ್ನ ಕೋಮುವಾದಿ ತಂತ್ರ ಪ್ರಯೋಗ ಮಾಡುವ ಮೂಲಕ ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ ಸಮಾಜವನ್ನು ಧ್ರುವೀಕರಣಗೊಳಿಸಲು ವಿಎಚ್‌ಪಿ ಮತ್ತು ಬಜರಂಗದಳವನ್ನು ಬಳಸಿಕೊಳ್ಳುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು. ಕರಾವಳಿ ಭಾಗದ ಜನರು‌ ಇದಕ್ಕೆ ಮರುಳಾಗದೆ ಜಿಲ್ಲೆಯ ಒಗ್ಗಟ್ಟಿನ ಪರಂಪರೆಯನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಈ ನಡುವೆ ವಿಎಚ್‌ಪಿ ಕರೆಗೆ ಸ್ಪಂದಿಸಿರುವ ಕೆಲವು ವ್ಯಾಪಾರಿಗಳು ತಮ್ಮ ಸ್ಟಾಲ್‌ಗಳ ಮುಂದೆ ಕೇಸರಿ ಧ್ವಜವನ್ನು ಪ್ರದರ್ಶಿಸಿದ್ದಾರೆ.

You cannot copy content of this page

Exit mobile version