Wednesday, June 26, 2024

ಸತ್ಯ | ನ್ಯಾಯ |ಧರ್ಮ

2018 ರಿಂದ 13,000 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ-ಪಂಗಡ, ಒಬಿಸಿ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳು, ಐಐಟಿ, ಐಐಎಂಗಳಿಂದ ಹೊರಗೆ

ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳ ಸುಮಾರು 13,626 ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳು, ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗಳಿಂದ (ಐಐಎಂ) ಹೊರಗುಳಿದಿದ್ದಾರೆ ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳಿದ್ದಾರೆ.

ಈ ಸಂಸ್ಥೆಗಳಲ್ಲಿ ಇಂತಹ ಹೆಚ್ಚಿನ ಸಂಖ್ಯೆಯ ಡ್ರಾಪ್ಔಟ್‌ಗಳ ಕಾರಣವನ್ನು ಅರ್ಥಮಾಡಿಕೊಳ್ಳಲು ಸರ್ಕಾರವು ಯಾವುದಾದರೂ ಅಧ್ಯಯನಗಳನ್ನು ನಡೆಸಿದೆಯೇ ಎಂಬ ಪ್ರಶ್ನೆಗೆ ಸರ್ಕಾರ್ ಉತ್ತರಿಸಿದ್ದಾರೆ.

“ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳು ಬಹು ಆಯ್ಕೆಗಳನ್ನು ಹೊಂದಿರುತ್ತಾರೆ ಮತ್ತು ಅವರು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ, ಹಾಗೂ ಒಂದೇ ಸಂಸ್ಥೆಯಲ್ಲಿ ಒಂದು ಕೋರ್ಸ್/ಪ್ರೋಗ್ರಾಂನಿಂದ ಇನ್ನೊಂದಕ್ಕೆ ಹೋಗಲು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದರಿಂದ ಇನ್ನೊಂದಕ್ಕೆ ಹೋಗುವುದು/ಕೋರ್ಸ್‌ ಬಿಡುವುದು ಯಾವುದೇ ಇದ್ದರೂ, ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಇತರ ವಿಭಾಗಗಳು ಅಥವಾ ಸಂಸ್ಥೆಗಳಲ್ಲಿ ಅಥವಾ ಯಾವುದೇ ವೈಯಕ್ತಿಕ ನೆಲೆಯಲ್ಲಿ ಸೀಟುಗಳನ್ನು ಭದ್ರಪಡಿಸಿಕೊಳ್ಳುವ ಮಾಡುತ್ತಾರೆ.

ವಿವಿಧ ಶಿಕ್ಷಣ ಸಂಸ್ಥೆಗಳಿಂದ ಹೊರಗುಳಿದ ವಿದ್ಯಾರ್ಥಿಗಳ ವಿವರ ನೀಡಿರುವ ಸಚಿವ, ಕಳೆದ ಐದು ವರ್ಷಗಳಲ್ಲಿ ಸುಮಾರು 4,596 ಒಬಿಸಿ ಅಭ್ಯರ್ಥಿಗಳು, 2,424 ಎಸ್‌ಸಿ ಮತ್ತು 2,622 ಎಸ್‌ಟಿ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಿಂದ ಹೊರಗುಳಿದಿದ್ದಾರೆ. ಅದೇ ಅವಧಿಯಲ್ಲಿ 2,066 ಒಬಿಸಿ ಅಭ್ಯರ್ಥಿಗಳು, 1,068 ಎಸ್‌ಸಿ ಮತ್ತು 408 ಎಸ್‌ಟಿ ವಿದ್ಯಾರ್ಥಿಗಳು ಐಐಟಿಯಿಂದ ಹೊರಗುಳಿದಿದ್ದಾರೆ. 163 ಒಬಿಸಿ, 188 ಎಸ್‌ಸಿ ಮತ್ತು 91 ಎಸ್‌ಟಿ ವಿದ್ಯಾರ್ಥಿಗಳು ಇದೇ ಅವಧಿಯಲ್ಲಿ ಐಐಎಂಗಳಿಂದ ಹೊರಗುಳಿದಿದ್ದಾರೆ.

ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ಪರಿಹರಿಸಲು, ಶಿಕ್ಷಣ ಸಂಸ್ಥೆಗಳು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಘಟಕಗಳು, ಸಮಾನ ಅವಕಾಶ ಘಟಕ (Equal Opportunity Cell), ವಿದ್ಯಾರ್ಥಿ ಕುಂದುಕೊರತೆ ಘಟಕ (Student Grievance cell), ವಿದ್ಯಾರ್ಥಿ ಕುಂದುಕೊರತೆ ಸಮಿತಿ ((Student Grievance Committee), ವಿದ್ಯಾರ್ಥಿಗಳ ಸಾಮಾಜಿಕ ಕ್ಲಬ್ (Students Social Club), ಸಂಪರ್ಕಾಧಿಕಾರಿಗಳು (Liaison officers), ಸಂಪರ್ಕ ಸಮಿತಿ (Liaison Committee) ಮುಂತಾದ ಕಾರ್ಯವಿಧಾನಗಳನ್ನು ಸ್ಥಾಪಿಸಿವೆ ಎಂದು ಸಚಿವರು ಹೇಳಿದ್ದಾರೆ. ಇದಲ್ಲದೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಕಾಲಕಾಲಕ್ಕೆ ವಿದ್ಯಾರ್ಥಿಗಳ ನಡುವೆ ಸಮಾನತೆ ಮತ್ತು ಭ್ರಾತೃತ್ವವನ್ನು ಉತ್ತೇಜಿಸಲು ಸೂಚನೆಗಳನ್ನು ನೀಡಿದೆ,” ಎಂದು ಸಚಿವರು ಹೇಳಿದ್ದಾರೆ.

ಸರ್ಕಾರವು ಶುಲ್ಕವನ್ನು ಕಡಿಮೆ ಮಾಡಿದ್ದು, ಹೆಚ್ಚಿನ ಸಂಸ್ಥೆಗಳನ್ನು ಸ್ಥಾಪಿಸಿದೆ ಮತ್ತು ಈ ಸಮುದಾಯಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಲು ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಕ್ಕೆ ಆದ್ಯತೆ ನೀಡಿದೆ ಎಂದು ಸರ್ಕಾರ್ ಗಮನಸೆಳೆದಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕ್ಯಾಂಪಸ್‌ನಲ್ಲಿ ಈ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ಎದುರಿಸುತ್ತಿರುವ ಅತಿರೇಕದ ಜಾತೀಯ ತಾರತಮ್ಯ ಮತ್ತು ಇತರ ಅಸಮಾನತೆಗಳ ಹಿನ್ನೆಲೆಯಲ್ಲಿ ಐಐಟಿಗಳು ಮತ್ತು ಐಐಎಂಗಳಂತಹ ‘ಗಣ್ಯ’ ಸಂಸ್ಥೆಗಳು ಅನೇಕ ಬಾರಿ ಸುದ್ದಿಯಾಗಿವೆ.

ವಿವಿಧ ಐಐಟಿ ಮತ್ತು ಐಐಎಂ ಕ್ಯಾಂಪಸ್‌ಗಳಲ್ಲಿ 33ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯ ಈ ವರ್ಷದ ಆರಂಭದಲ್ಲಿ ಸಂಸತ್ತಿಗೆ ಮಾಹಿತಿ ನೀಡಿತ್ತು. ಡಿಸೆಂಬರ್ 2021 ರಲ್ಲಿ, ಕೇಂದ್ರ ಸರ್ಕಾರವು 2014 ಮತ್ತು 2021 ರ ನಡುವೆ ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಂಸತ್ತಿಗೆ ತಿಳಿಸಿತ್ತು. 122 ವಿದ್ಯಾರ್ಥಿಗಳಲ್ಲಿ 24 ಎಸ್‌ಸಿ ಸಮುದಾಯಕ್ಕೆ ಸೇರಿದವರು, ಮೂವರು ಎಸ್‌ಟಿಗಳು ಮತ್ತು 41 ಒಬಿಸಿಗಳು.

Related Articles

ಇತ್ತೀಚಿನ ಸುದ್ದಿಗಳು