Home ಅಂಕಣ ಬೊಗಸೆಗೆ ದಕ್ಕಿದ್ದು – 26 : ಪಂಚತಂತ್ರ ಮತ್ತು ಸರ್ವಾಧಿಕಾರಿ ಕೇಸರಿ ನರಿ!

ಬೊಗಸೆಗೆ ದಕ್ಕಿದ್ದು – 26 : ಪಂಚತಂತ್ರ ಮತ್ತು ಸರ್ವಾಧಿಕಾರಿ ಕೇಸರಿ ನರಿ!

0

ಬೊಗಸೆಗೆ ದಕ್ಕಿದ್ದು…25ರಲ್ಲಿ ನಾನು ಕ್ರಿಸ್ತಪೂರ್ವ 200ರ ಸುಮಾರಿಗೆ ಬರೆಯಲಾದ ಪಂಚತಂತ್ರ ಕತೆಗಳ ಬಗ್ಗೆ ಬರೆದಿದ್ದೆ. ಸಾಮಾಜಿಕ ನಡವಳಿಕೆ ಮತ್ತು ರಾಜನೀತಿಯನ್ನು ಬಹಳಷ್ಟು ಪ್ರಾಣಿಗಳ ಪಾತ್ರಗಳ ಮೂಲಕ ಕಲಿಸುವ ಈ ಕತೆಗಳಲ್ಲಿ ಬಹಳಷ್ಟನ್ನು ಸರ್ವಾಧಿಕಾರಿಗಳು ಮತ್ತವರ ನಾಚಿಕೆಗೆಟ್ಟ ಚೇಲಾಗಳಿಗೆ ಅನ್ವಯಿಸಬಹುದು. ಎರಡುಮೂರು ಕತೆಗಳನ್ನು ಚುಟುಕಾಗಿಯೇ ಹಿಂದೆ ಬರೆದಿದ್ದೆ. ಇಲ್ಲಿಯೂ ಇಂತಹ ಒಂದೆರಡು ಕತೆಗಳನ್ನು ಚುಟುಕಾಗಿಯೇ ನೋಡೋಣ.

ಇದನ್ನೂ ಓದಿ : ಬೊಗಸೆಗೆ ದಕ್ಕಿದ್ದು- 25 : ಪಂಚತಂತ್ರ ಮತ್ತು ಸರ್ವಾಧಿಕಾರಿ ಮಂಕಿ!

ಪಂಚತಂತ್ರದಲ್ಲಿ ಗದ್ಯ ರೂಪದ ಕತೆಗಳಿಗಳಷ್ಟೇ ಪದ್ಯ ರೂಪದ ನೀತಿ, ತಂತ್ರಗಳಿವೆ. ಅವುಗಳಲ್ಲಿ ಒಂದು ಪದ್ಯದ ಸಾರಾಂಶ ಹೀಗಿದೆ: ರಾಜನಿಂದ ತೊಂದರೆಗೊಳಗಾದ ನೌಕರರನು, ರಾಜನನ್ನು ಗೌರವಿಸುತ್ತಿದ್ದವನೂ ಆಗೌರವ ತೋರುತ್ತಾನೆ. ಸೇವೆ ಮಾಡಲೆಂದೇ ಹುಟ್ಟಿದವನೂ, ತರಬೇತಿ ಪಡೆದವನೂ ರಾಜನ ಸರ್ವನಾಶಕ್ಕೆ ಹಂಬಲಿಸುತ್ತಾನೆ!

ಇದು ಮೊದಲಿನಿಂದಲೂ ರಾಜರು, ನವಾಬರು, ಬ್ರಿಟಿಷರ ಅಡಿಯಲ್ಲಿ ನಲುಗಿ, ಗುಲಾಮಿಯನ್ನೇ ರಕ್ತಗತ ಮಾಡಿಕೊಂಡಿರುವ ಭಾರತೀಯರ ಈಗಿನ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಸರ್ವಾಧಿಕಾರಿಯಿಂದ ತೀರಾ ತೊಂದರೆಗೆ ಒಳಗಾಗಿರುವ ಅವರಲ್ಲಿ ಅನೇಕರು ಗುಲಾಮಿಯು ಅಭ್ಯಾಸವಾಗಿದ್ದರೂ ಈಗ, ಈ ಸರ್ವಾಧಿಕಾರಿಯ ನಾಶಕ್ಕೆ ಹಂಬಲಿಸುತ್ತಿದ್ದಾರೆ.

ಇನ್ನೊಂದು ಪದ್ಯ ಹೀಗೆ ಹೇಳುತ್ತದೆ: ಅಯೋಗ್ಯ ಮಂತ್ರಿಗಳಿಂದ ಸುತ್ತುವರಿಯಲ್ಪಟ್ಟಿರುವ ನೀಚ ರಾಜನಿಂದ ಪ್ರಜೆಗಳಿಗೆ ಒಳಿತಿಗಿಂತ ಕೆಡುಕೇ ಆಗುವುದು! ಸರ್ವಾಧಿಕಾರಿಯ ಅಡಿಯಲ್ಲಿ ಬದುಕುತ್ತಿರುವ ಜನರಿಗೆ ಒಂದಲ್ಲ ಒಂದು ದಿನ ಇದು ಮನವರಿಕೆಯಾಗಲೇ ಬೇಕು.

ಈಗ- ಪ್ರಜೆಗಳ ಭ್ರಮೆ, ಮೂಢನಂಬಿಕೆ ಮತ್ತು ಭಯದಿಂದಲೇ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುತ್ತಾರೆ ಮತ್ತು ಒಂದು ದಿನ ಅವರ ಮುಖವಾಡ ಕಳಚಿ ಹೋಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಒಂದು ಕತೆಯನ್ನು ಚುಟುಕಾಗಿ ನೋಡೋಣ:

ನೀಲ ನರಿ
ಒಂದು ಕಾಡಿನಲ್ಲಿ ಒಂದು ಗತಿಗೇಡಿ ನರಿಯು ಅಲೆದಾಡುತ್ತಿತ್ತು. ಒಂದು ದಿನ ಹಸಿವೆಯಿಂದ ತೊಳಲಾಡುತ್ತಿದ್ದ ಅದು ಕತ್ತಲಿನ ವೇಳೆಗೆ ಒಂದು ಪಟ್ಟಣದೊಳಗೆ ತಪ್ಪಿ ಪ್ರವೇಶಿಸಿತು. ಆಗ, ಅಲ್ಲಿನ ನಾಯಿಗಳು ಚೂಪಾದ ಹಲ್ಲುಗಳನ್ನು ತೋರಿಸುತ್ತಾ ನರಿಯ ಬೆನ್ನುಬಿದ್ದವು. ಪುಕ್ಕಲ ನರಿಯು ಸತ್ತೆನೋ ಕೆಟ್ಟೆನೋ ಎಂದು ಬಾಲ ಮುದುಡಿ ಓಡುತ್ತಾ, ಬಟ್ಟೆಗೆ ಬಣ್ಣ ಹಾಕುವವನೊಬ್ಬನ ಮನೆಯ ಅಂಗಳಕ್ಕೆ ನುಗ್ಗಿತು. ಅಲ್ಲಿ ಬಣ್ಣದ ಹಲವು ತೊಟ್ಟಿಗಳಿದ್ದವು. ನರಿಯು ನೀಲಿ ಬಣ್ಣವಿದ್ದ ತೊಟ್ಟಿಗೆ ಬಿದ್ದು ಅಲ್ಲಿಯೇ ಅಡಗಿತು.

ನಂತರ ಹೇಗೋ ತೊಟ್ಟಿಯಿಂದ ಹೊರಬಂದ ನರಿಯು ಕಾಡಿಗೆ ಪರಾರಿಯಾಯಿತು. ನೀಲ ಬಣ್ಣ ಮೆತ್ತಿದ್ದ ನರಿಯನ್ನು ಕಾಡಿನ ಬೇರೆ ಪ್ರಾಣಿಗಳು ಎಂದೂ ಕಂಡಿರಲಿಲ್ಲ. ಇದು ಆಕಾಶದಿಂದಲೇ ಉದುರಿರಬೇಕೆಂದು ನಂಬಿ ಅವು ಓಡಲಾರಂಭಿಸಿದವು. ಆಗ, ಸುಳ್ಳು ಹೇಳುವುದರಲ್ಲಿ ನಿಪುಣನಾದ ಈ ಕಂಕನರಿಯು ಅವುಗಳನ್ನು ಕರೆದು, ಈ ಕಾಡೇ ಅಪಾಯದಲ್ಲಿದೆ, ಕಾಡಿನ ಧರ್ಮ ಅಪಾಯದಲ್ಲಿದೆ, ಅದರ ರಕ್ಷಣೆಗೆ ತನ್ನನ್ನು ದೇವರೇ ಇಲ್ಲಿನ ರಾಜನನ್ನಾಗಿ ನೇಮಿಸಿ ಕಳಿಸಿದ್ದಾನೆ ಎಂದು ಬೊಗಳೆ ಬಿಟ್ಟಿತು. ಉಳಿದ ಮೂರ್ಖ ಪ್ರಾಣಿಗಳು ಅದನ್ನು ನಂಬಿದವು.

ಈ ಕುಟಿಲ ನರಿಯು ಕೆಲವು ಪ್ರಾಣಿಗಳನ್ನು ಬೇರೆಬೇರೆ ಹುದ್ದೆಗಳಿಗೆ ನೇಮಿಸಿ, ತನ್ನದೇ ಜಾತಿಯ ಇತರ ನರಿಗಳನ್ನು ನೆರೆಯ ಕಾಡಿಗೆ ಓಡಿಸಿತು. ಅಂದಿನಿಂದ ಉಳಿದ ಪ್ರಾಣಿಗಳು ಬೇಟೆಯಾಡಿ ತಂದುಕೊಟ್ಟ ಮಾಂಸವನ್ನು ತಿನ್ನುತ್ತಾ, ಈ ಶೋಕಿಲಾಲ ನರಿಯು ಮಹಾರಾಜರನ್ನೂ ಮೀರಿಸುವಂತೆ ಐಷಾರಾಮಿ ಜೀವನ ನಡೆಸಿತು. ಉಳಿದ ಪ್ರಾಣಿಗಳು ಗುಲಾಮರಂತೆ ಅದರ ಸೇವೆ ಮಾಡಿದವು.

ಹೀಗಿರುತ್ತಾ, ಒಂದು ದಿನ ಪಕ್ಕದ (ರಷ್ಯಾ, ಉತ್ತರ ಕೊರಿಯಾ, ಇಸ್ರೇಲ್ ಮುಂತಾದ) ಕಾಡುಗಳಲ್ಲಿ ನರಿಗಳು ಗಟ್ಟಿಯಾಗಿ ಊಳಿಟ್ಟವು. ಈ ನರಿಯ ಕಣ್ಣಿನಿಂದ ಆನಂದಬಾಷ್ಪ ಸುರಿದು, ಅದೂ ಗಟ್ಟಿಯಾಗಿ ಊಳಿಡಲು ಆರಂಭಿಸಿತು. ಆಗ ಇತರ ಪ್ರಾಣಿಗಳಿಗೆ ಇದೊಂದು ನರಿ ಎಂದು ಗೊತ್ತಾಯಿತು. ಸಿಟ್ಟುಗೊಂಡ ಅವು ಅದನ್ನು ಸಿಗಿದು ಕೊಂದವು.

ಈ ಕತೆಯಲ್ಲಿ ನರಿ ನೀಲ ಬಣ್ಣದ ತೊಟ್ಟಿಗೆ ಬಿದ್ದದ್ದಲ್ಲ; ಕೇಸರಿ ಬಣ್ಣದ ತೊಟ್ಟಿಗೆ ಬಿದ್ದದ್ದು ಎಂದು ಊಹಿಸಿದರೆ ಸಾಕು, ಎಲ್ಲವೂ ಅರ್ಥವಾಗುತ್ತದೆ. ಕಾಡಿನ ರಕ್ಷಣೆಗೆ ದೇವರು ರಾಜನಾಗಿ ಮಾಡಿ ಕಳಿಸಿದ್ದು, ಧರ್ಮ ರಕ್ಷಣೆ, ಚಹಾ ಮಾರಿದ್ದು, ಹಿಮಾಲಯ ತಿರುಗಿದ್ದು, ಭಿಕ್ಷೆ ಬೇಡಿದ್ದು, ಮೊಸಳೆ ಹಿಡಿದ ಬೊಗಳೆಗಳೆಲ್ಲಾ ನೆನಪಾಗುತ್ತವೆ. ಈಗ ಈ ಕೇಸರಿ ನರಿ ಬಾಯಿಗೆ ಬಂದಂತೆ ಊಳಿಡುತ್ತಿದೆ. ಪ್ರಜೆಗಳಿಗೆ ಅರ್ಥವಾದೀತೆ?

ಇದೇ ಕತೆಯ ಇನ್ನೊಂದು ಆವೃತ್ತಿಯಲ್ಲಿ ನೀಲ ನರಿಯ ನೀಚತನ ಊಳಿಟ್ಟದ್ದರಿಂದ ಗೊತ್ತಾದುದಲ್ಲ! ಅದು “ಮೋದ”ಲ ದಿನದಿಂದಲೇ ಊಳಿಡುತ್ತಿತ್ತು. ಒಂದು ದಿನ ಕಾಡಿನಲ್ಲಿ ಭಾರೀ ಮಳೆ ಸುರಿಯುತ್ತದೆ. ಆಗ ನರಿಯ ಬಣ್ಣವೆಲ್ಲಾ ಕರಗಿ, ಅದು ಉಳಿದ ಪ್ರಾಣಿಗಳ ಎದುರು ಬತ್ತಲೆಯಾಗಿ ನಿಲ್ಲುತ್ತದೆ. ಅವು ಕೋಪದಿಂದ ಅದನ್ನು ಕೊಲ್ಲುತ್ತವೆ. ಈ ಕಷ್ಟಕಾಲದ ಬಿರುಬೇಸಗೆಯಲ್ಲೂ ಪ್ರಜಾಪ್ರಭುತ್ವದ ಮಹಾಮೋಡದಿಂದ ಚುನಾವಣೆಯ ಮಳೆ ಸುರಿಯುತ್ತಿದೆ. ಕೇಸರಿ ನರಿಯ ಬಣ್ಣ ಕರಗಿ ಅದೂ ಬೆತ್ತಲಾಗಬಹುದೆ?

ಪಂಚತಂತ್ರದಲ್ಲಿ ಸರ್ವಾಧಿಕಾರಿಗಳು ಮತ್ತು ಅವರ ಕುಟಿಲ ಚೇಲಾಗಳು ಮುಗ್ಧ ಜನರನ್ನು, ಜೊತೆಗಾರರನ್ನೇ ಹೇಗೆ ವಂಚಿಸುತ್ತಾರೆ, ಮುಗಿಸಿಬಿಡುತ್ತಾರೆ ಎಂಬುದನ್ನೂ ಸೂಚಿಸುವ ಕತೆಗಳಿವೆ. ಅವುಗಳಲ್ಲಿ ಒಂದನ್ನು ಚುಟುಕಾಗಿ ಹೇಳುತ್ತೇನೆ:

ಮೋಸಹೋದ ಒಂಟೆ
ಒಮ್ಮೆ ಒಬ್ಬ ವರ್ತಕ ಹಲವು ಒಂಟೆಗಳ ಮೇಲೆ ಸರಕುಗಳನ್ನು ಹೇರಿ ಒಂದು ಕಡೆ ಹೋರಟಿದ್ದ. ಕಾಡಿನ ಮಧ್ಯೆ ಒಂದು ಒಂಟೆ ಕುಂಟಲಾರಂಭಿಸಿತು. ಕಾಡಿನ ನಡುವೆ ನಿಧಾನ ಮಾಡುವುದು ಅಪಾಯವಾದುದರಿಂದ, ವರ್ತಕ ಆ ಒಂಟೆಯ ಸರಕುಗಳನ್ನು ಬೇರೆ ಒಂಟೆಗಳಿಗೆ ಹೇರಿ, ಅದನ್ನು ಅಲ್ಲಿಯೇ ಬಿಟ್ಟು ಮುಂದುವರಿದ.

ಆ ಕಾಡಿನಲ್ಲಿ ಒಂದು ಮುದಿ (ಗಡ್ಡದ) ಸಿಂಹವಿತ್ತು. ಅದಕ್ಕೆ ಸಲಹೆಗಾರರಾಗಿ ಒಂದು ಚಿರತೆ, ಒಂದು (ಬೋಡ) ನರಿ, ಒಂದು (ಯೋಗಿ) ಕಾಗೆ ಸಲಹೆಗಾರರಾಗಿ ಇದ್ದರು. ಇವರೆಲ್ಲರೂ ಕುಟಿಲ ಬುದ್ಧಿಯ ನೀಚರು. ಸಿಂಹವು ಭಾರತದ ಕಾಡಿನಲ್ಲಿ (ಚೀತಾದಷ್ಟೇ ಅಪರೂಪವಾದ) ವಿಚಿತ್ರ ರೂಪದ ಒಂಟೆಯನ್ನು ಕಂಡು ಅಚ್ಚರಿಗೊಂಡು ಅದಕ್ಕೆ ಆಶ್ರಯ ನೀಡಿತು.

ಒಂದು ದಿನ ಸಿಂಹವು (ಚೀನಾದ) ಕಾಡಿನ ಆನೆಯೊಂದಿಗೆ ಹೋರಾಡುವಾಗ ಗಾಯಗೊಂಡು ಅದಕ್ಕೆ ಬೇಟೆ ಸಾಧ್ಯವಾಗದೇ ಅದಕ್ಕೆ ಬಾಯಿಬಡಕೊಳ್ಳುವುದು ಮಾತ್ರ ಸಾಧ್ಯವಾಯಿತು. ಇದರಿಂದಾಗಿ ಅದೂ, ಅದು ತಿಂದು ಉಳಿದ ಎಂಜಲನ್ನೇ ತಿಂದು ಅಭ್ಯಾಸವಾಗಿದ್ದ ಚಿರತೆ, (ಬೋಡ) ನರಿ, (ಯೋಗಿ) ಕಾಗೆ ಕೂಡಾ ಉಪವಾಸಬಿದ್ದವು. ಬಡ ಒಂಟೆ ಮಾತ್ರ ಹುಲ್ಲು ತಿಂದು ಆರಾಮವಾಗಿ ಬದುಕಿತ್ತು.

ಆಗ ಈ ಮೂರೂ ಕುಟಿಲ ಸಲಹೆಗಾರರು ಸಿಂಹಕ್ಕೆ ಒಂಟೆಯನ್ನೇ ಕೊಂದು ತಿನ್ನುವ ಸಲಹೆ ನೀಡಿದವು. ಆದರೆ, ರಕ್ಷಣೆಯ ಭರವಸೆ ನೀಡಿದ್ದ ಸಿಂಹವು (ಕಾಡಿನ ಸಾಮಾಜಿಕ ಮಾಧ್ಯಮಗಳಿಗೆ ಅಂಜಿ) ಹಾಗೆ ಮಾಡಲು ಒಪ್ಪಲಿಲ್ಲ. ಆಗ ಅವು- ಒಂಟೆ ತಾನಾಗಿಯೇ ಕಾಡಿಗಾಗಿ ಪ್ರಾಣ ಕೊಡಲು ಒಪ್ಪಿ ಮುಂದೆ ಬಂದರೆ, ನೀವದನ್ನು ಕೊಲ್ಲಬಹುದಲ್ಲವೆ ಎಂದು ಕೇಳಿದವು. ಸಿಂಹಕ್ಕೂ ಅದೇ ಬೇಕಿತ್ತು. ಅದು ಒಪ್ಪಿತು.

ಒಂಟೆಯ ಮುಂದೆ ಕಾಡಿನ ರಾಜ ಅಪಾಯದಲ್ಲಿ, ಕಾಡು ಅಪಾಯದಲ್ಲಿ, ಧರ್ಮ ಅಪಾಯದಲ್ಲಿ ಇತ್ಯಾದಿ ಕೋರಸ್ ಗೀತೆಗಳನ್ನು ಹಾಡಲಾರಂಭಿಸಿದವು. ನಾವು ದೇಶಕ್ಕಾಗಿ ತ್ಯಾಗ ಮಾಡಬೇಕು, ನಮ್ಮ ರಾಜ ಸತ್ತರೆ ನಮಗ್ಯಾರು ಗತಿ? ಈ ಕಾಡು ನಾಶವಾಗುತ್ತದೆ, ಕಾಡು ಅಪಾಯದಲ್ಲಿ! ದೇಶ, ಧರ್ಮ ಅಪಾಯದಲ್ಲಿ! ಒಂಟೆ ಬಹಳ ಇಂಪ್ರೆಸ್ ಆಯಿತು!

ಮೂರೂ ಕುಟಿಲ ಪ್ರಾಣಿಗಳೂ, ನಮ್ಮನ್ನು ಕೊಂದು ತಿಂದು ನಿಮ್ಮ ಜೀವ ಉಳಿಸಿಕೊಂಡು ದೇಶ ರಕ್ಷಿಸಿ, ಧರ್ಮ ರಕ್ಷಿಸಿ ಎಂದು ಸಿಂಹದ ಬಳಿ ಅಂಗಲಾಚಿದವು! (ಗಡ್ಡದ) ಸಿಂಹವು ಒಂದೊಂದು ಕಾರಣ ನೀಡಿ ಅವುಗಳನ್ನು ಕೊಲ್ಲಲು ನಿರಾಕರಿಸಿತು. (ಒಂದೇ ಜಾತಿ, ಒಂದೇ ಧರ್ಮ, ಒಂದೇ ರಾಜ್ಯ ಒಂದೇ ಪಕ್ಷ ಇತ್ಯಾದಿ). ಒಮ್ಮೆಲೇ ಉತ್ತೇಜಿತಗೊಂಡ ಮೂರ್ಖ, ಭಕ್ತ ಒಂಟೆಯಲ್ಲಿ ದೇಶಪ್ರೇಮ, ಧರ್ಮ ಪ್ರೇಮ ಜಾಗೃತವಾಗಿ, ಅದು- ನನ್ನನ್ನೇ ಕೊಂದು ತಿಂದು ನಿಮ್ಮ ಹಸಿವು ನೀಗಿಸಿ, ಬದುಕಿ, ದೇಶ ಮತ್ತು ಧರ್ಮದ ರಕ್ಷಣೆ ಮಾಡಿ ಎಂದು ಹೇಳಿತು. ಅಷ್ಟು ಹೇಳಿದ್ದೇ ತಡ, ಸಿಂಹವು ಅದನ್ನು ಕೊಂದಿತು. ಎಲ್ಲಾ ದುಷ್ಟರು ಮೃಷ್ಟಾನ್ನ ಭೋಜನ ಮಾಡಿದವು, ಗೆಳೆಯರಿಗೂ ಪಾಲು ಕೊಟ್ಟವು!

ಒಂಟೆಗೆ ದೇಶಪ್ರೇಮಿ ಶೌರ್ಯ ಪ್ರಶಸ್ತಿ, ಪರಮವೀರ ಚಕ್ರ, ಪದ್ಮ ಪ್ರಶಸ್ತಿ, ಜ್ಞಾನಪೀಠ ಇತ್ಯಾದಿ ಕೊಡಲಾಯಿತೆ ಎಂಬುದು ನನಗೆ ಗೊತ್ತಿಲ್ಲ! ಅದರ ಮೂರ್ಖತನದ ಬಗ್ಗೆ ಮರುಕವಾಗುತ್ತದೆ. ಗಡ್ಡದ ಸಿಂಹವು ಬಳಸಿ ಎಸೆದವರು ನೆನಪಾಗುತ್ತಾರೆ. ಸೈನಿಕರು ಬಿಸಿಲು, ಮಳೆ, ಚಳಿ ಎನ್ನದೇ ನಿಮಗಾಗಿ ದೇಶ ಕಾಯುತ್ತಿದ್ದಾರೆ, ಗಡ್ಡದ ಮಹಾರಾಜರು ನೆರೆಯ ದೇಶಗಳಿಗೆ ಲಾಲ್ ಆಂಖ್ ತೋರಿಸುತ್ತಾರೆ, ಅವರು ವಿಶ್ವಗುರು, ದೇಶಕ್ಕಾಗಿ ಗ್ಯಾಸ್ ಬಿಡಿ, ಅದು ಬಿಡಿ, ಇದು ಬಿಡಿ, ತ್ಯಾಗ ಮಾಡಿ… ದೇಶಕ್ಕಾಗಿ ಇಷ್ಟೂ ಮಾಡಲು ಸಾಧ್ಯವಿಲ್ಲವೇ?… ಇತ್ಯಾದಿ ನೆನಪಾಗುತ್ತವೆ. ಜೊತೆಗೆ ಕೈಲಾಗದ, ನಾಲಾಯಕ್ ಮುದಿ ಗಡ್ಡದ ಸಿಂಹ ಕೂಡಾ! ನಿಮಗೆ ನೆನಪಾಯಿತೆ?

ಸಾವಿರಾರು ವರ್ಷಗಳಲ್ಲಿ ಪಂಚತಂತ್ರದ ಕತೆಗಳು ಹಲವು ಬದಲಾವಣೆಗಳೊಂದಿಗೆ ಪ್ರಪಂಚದಾದ್ಯಂತ ನೂರಾರು ಆವೃತ್ತಿಗಳು ಚಾಲ್ತಿಯಲ್ಲಿವೆ. ನಾನೂ ಇಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿರುವುದಕ್ಕೆ ಯಾರ ಕ್ಷಮೆಯನ್ನೂ ಕೇಳಬೇಕಾದದ್ದಿಲ್ಲ. ಪಂಚತಂತ್ರದಲ್ಲಿ ಪ್ರಬಲರಾದ ಸರ್ವಾಧಿಕಾರಿಗಳನ್ನು ತೊಲಗಿಸುವುದು ಹೇಗೆ ಎಂಬುದನ್ನು ಸೂಚಿಸುವ ಕತೆಗಳೂ ಕೆಲವಿವೆ. ಅವುಗಳನ್ನು ಮುಂದೆ ನೋಡೋಣ.


You cannot copy content of this page

Exit mobile version