ಕಾರ್ಕಳ ಬಳಿಯ ಪರಶುರಾಮ ಥೀಂ ಪಾರ್ಕ್ ನಲ್ಲಿ ತುಳುವರ ಆರಾಧ್ಯ ದೈವಗಳನ್ನು ಪರಶುರಾಮನ ಪದತಲದಲ್ಲಿರಿಸಿ ಚಿತ್ರಿಸಿರುವುದು ತುಳುವರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿವಾದದ ಬೆಂಕಿ ಆರುವ ಮುನ್ನವೇ ಕಾರ್ಕಳದ ಯಕ್ಷರಂಗಾಯಣದ ಪರಶುರಾಮ ನಾಟಕವೂ ಅಂಥದ್ದೇ ಒಂದು ವಿವಾದವನ್ನು ಹುಟ್ಟುಹಾಕಿದೆ. ಮೂಲ ಪರಶುರಾಮ ಕಥೆಯನ್ನು ತಿರುಚಿ, ವರ್ತಮಾನದ ಮತೀಯ ರಾಜಕಾರಣಕ್ಕೆ ಪೂರಕವೆನಿಸುವಂತೆ ಕತೆಯನ್ನು ಬದಲಾಯಿಸಲಾಗಿದೆ. ಯಕ್ಷ ಪ್ರೇಮಿ ಮಹೇಶ ಮಂಗಳೂರು, ಎತ್ತಿದ ಆಕ್ಷೇಪಗಳತ್ತ ನಾಡಿನ ಸಂಸ್ಕೃತಿ ಚಿಂತಕರು ಗಮನಹರಿಸಬೇಕಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ಪರಶುರಾಮ ಎಂಬ ನಾಟಕ ಪ್ರದರ್ಶನಗೊಂಡಿತು. ದೃಶ್ಯ ಸಂಯೋಜನೆ, ರಂಗಚಲನೆ, ನಿರೂಪಣಾ ತಂತ್ರ, ಅಭಿನಯ ಸಂಗೀತ ಎಲ್ಲವೂ ಪ್ರಶಂಸಾರ್ಹ. ನಿರ್ದೇಶಕರ ಜಾಣ್ಮೆಯನ್ನು ಮೆಚ್ಚಬೇಕಾಗಿದೆ. ಆದರೆ ನಾಟಕದ ಕಥಾವಸ್ತು ಮಾತ್ರ ಪ್ರಶ್ನಾರ್ಹ.
ಶಶಿರಾಜ್ ಕಾವೂರು ರಚಿಸಿದ, ಖ್ಯಾತ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶಿಸಿ, ಕಾರ್ಕಳದ ಯಕ್ಷರಂಗಾಯಣದ ಕಲಾವಿದರು ಆಡಿ ತೋರಿಸಿದ ‘ಪರಶುರಾಮ’ ನಾಟಕವು ಜನರನ್ನು ತಪ್ಪುದಾರಿಗೆಳೆಯುವ ಒಂದು ಪ್ರಯತ್ನವೆನ್ನದೆ ವಿಧಿಯಿಲ್ಲ. ನೂರಾರು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಪ್ರಯೋಗಗೊಂಡ ಪರಶುರಾಮನ ಕತೆಯನ್ನು ತಿರುಚಿ ಇಲ್ಲಿ ಬೇರೇ ರೀತಿಯಲ್ಲಿ ನಿರೂಪಿಸಲಾಗಿದೆ.
ಈ ನಾಟಕದಲ್ಲಿ ಪರಶುರಾಮ ದನವನ್ನು ಪ್ರೀತಿಸುವ ಓರ್ವ ಬ್ರಾಹ್ಮಣ ಹುಡುಗ. ದನಗಳೊಂದಿಗೆ ಆಟವಾಡುತ್ತಾ ಅವುಗಳನ್ನು ಮುದ್ದಿಸುತ್ತಾ, ರಂಗದ ಮೇಲೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವ ದನಗಳ ನಡುವೆ ನಲಿದಾಡುವ ದೃಶ್ಯಕ್ಕೆ ನಾಟಕದಲ್ಲಿ ಪ್ರಾಧಾನ್ಯ ನೀಡಲಾಗಿದೆ. ಪರಶುರಾಮನ ದನಪ್ರೀತಿ, ಯಕ್ಷಗಾನದ ಕತೆಯಲ್ಲಿ ಕಾಣಿಸುವುದೇ ಇಲ್ಲ.
ಯಕ್ಷಗಾನದಲ್ಲಿ ಪರಶುರಾಮನ ತಂದೆ ಜಮದಗ್ನಿಯು, ಆತನೊಡನೆ ತನ್ನ ತಾಯಿಯ ತಲೆ ಕಡಿಯಲು ಆಜ್ಞಾಪಿಸುತ್ತಾನೆ. ಪರಶುರಾಮ ಕಾರಣವೇನನ್ನೂ ಕೇಳದೆ, ತಂದೆಯ ಮಾತನ್ನು ಮೀರದೆ ತನ್ನ ತಾಯಿಯನ್ನೇ ಕೊಂದುಬಿಡುತ್ತಾನೆ. ಆ ಬಳಿಕ ತಾಯಿಯನ್ನು ತಂದೆಯ ಮೂಲಕವೇ ಮತ್ತೆ ಬದುಕಿಸುತ್ತಾನೆ.
ಆದರೆ ನಾಟಕದಲ್ಲಿ ಪರಶುರಾಮ ಜಮದಗ್ನಿ ಹೇಳಿದ ಮಾತನ್ನು ನಡೆಸಿ ಕೊಡುವುದಿಲ್ಲ. ಆತನಿಗೆ ತಾಯಿಯನ್ನು ಕೊಲ್ಲುವ ಮನಸ್ಸು ಬರುವುದಿಲ್ಲ. ಅಂದರೆ ಇದು ತನಕ ತಾಯಿಯ ತಲೆ ಕಡಿದವನೆಂದೇ ಹೆಸರು ಪಡೆದಿದ್ದ ಬ್ರಾಹ್ಮಣ ಪರಶುರಾಮನನ್ನು, ಆ ಅಪವಾದದಿಂದ ಈ ನಾಟಕದ ಮೂಲಕ ಮುಕ್ತಗೊಳಿಸಲಾಗಿದೆ.
ಆದರೆ ಜಮದಗ್ನಿಯ ಮಾತು ಗಾಳಿಯಲ್ಲಿ ತೇಲಿ ಹೋಗುವುದು ನಾಟಕಕಾರರಿಗೆ ಮನಸ್ಸಿಲ್ಲ. ಹಾಗಾಗಿ ನಾಟಕದಲ್ಲಿ ರೇಣುಕೆ ಪರಶುರಾಮನ ಕೊಡಲಿಯನ್ನು, ತಾನೇ ಆತನ ಕೈಯಿಂದ ತೆಗೆದುಕೊಂಡು ತನ್ನ ಕುತ್ತಿಗೆ ಕಡಿದುಕೊಳ್ಳುತ್ತಾಳೆ. ಪತಿಯ ಮಾತು ಹುಸಿಯಾಗದಿರಲು ಆತ್ಮಹತ್ಯೆ ಮಾಡಿಕೊಂಡು ಆ ಮೂಲಕ ಆಕೆ ಮಹಾನ್ ಆಗುತ್ತಾಳೆ.
ಜಮದಗ್ನಿ ತನ್ನ ಮಡದಿ ರೇಣುಕೆಗೆ ಮರಣದಂಡನೆ ವಿಧಿಸಲು ಕಾರಣವಾದ ಘಟನೆಯನ್ನು ನಾಟಕದಲ್ಲಿ ಬದಲಿಸಲಾಗಿದೆ. ಯಕ್ಷಗಾನದ ಕತೆಯ ಪ್ರಕಾರ ಆಶ್ರಮಕ್ಕೆ ನೀರು ತರಲು ನದಿ ಬದಿಗೆ ಹೋದ ರೇಣುಕೆ ಅಲ್ಲಿ ಗಂಧರ್ವನೋರ್ವನು ತನ್ನ ಸತಿಯರ ಜೊತೆಗೆ ವಿನೋದ ಕೇಳಿಯಲ್ಲಿರುವುದನ್ನು ಕಾಣುತ್ತಾಳೆ. ಅಲ್ಲಿ ಆಕೆಯ ಚಿತ್ತ ಚಂಚಲಗೊಳ್ಳುತ್ತದೆ.
ರಾಜಕುಮಾರಿಯಾಗಿದ್ದೂ ತಾನು ಸನ್ಯಾಸಿಯೋರ್ವನನ್ನು ಮದುವೆಯಾದ ಕಾರಣದಿಂದ ತನಗೆ ಸಿಗದೆ ಇದ್ದ ಈ ಸುಖದ ಬಗ್ಗೆ ಒಂದು ಕ್ಷಣ ಯೋಚಿಸುತ್ತಾಳೆ. ಅಷ್ಟರಲ್ಲೇ ಆಕೆಯ ಪಾತಿವ್ರತ್ಯ ಕೆಡುತ್ತದೆ. ಜ್ಞಾನದೃಷ್ಟಿಯಿಂದ ವಿಷಯವನ್ನು ಗ್ರಹಿಸಿದ ಜಮದಗ್ನಿ ಆಕೆಗೆ ಮರಣದಂಡನೆ ವಿಧಿಸುತ್ತಾನೆ.
ನಾಟಕದಲ್ಲಿ ಈ ಕತೆಯನ್ನು ಕೈಬಿಡಲಾಗಿದೆ. ಸನ್ಯಾಸಿಯನ್ನು ವಿವಾಹವಾದುದಕ್ಕೆ ಒಂದು ಕ್ಷಣ ಮನಸ್ಸಿನಲ್ಲೇ ಪರಿತಪಿಸಿದ ಸ್ತ್ರೀ ರೇಣುಕೆ, ಎಂದು ನಿರೂಪಿಸುವುದು ನಾಟಕಕಾರರಿಗೆ ಮನಸ್ಸಿಲ್ಲವೇನೋ. ನಾಟಕದಲ್ಲಿ ಕತೆ ಹೀಗಿದೆ. ಕಾರ್ತವೀರ್ಯನೆಂಬಾತ ಒಂದು ದಿನ ದಾರಿಯಲ್ಲಿ ಹೋಗುತ್ತಿರುವಾಗ ರೇಣುಕೆಯನ್ನು ನೋಡಿಬಿಡುತ್ತಾನೆ. ಆಕೆಯ ಮೇಲೆ ಮೋಹಗೊಂಡು ಆಕೆಯ ಕೈ ಹಿಡಿದೆಳೆಯುತ್ತಾನೆ. ಇದನ್ನು ಪ್ರತಿಭಟಿಸಿದ ರೇಣುಕೆ ಆತನಿಂದ ತಪ್ಪಿಸಿ ಪಾರಾಗುತ್ತಾಳೆ. ಕಾರ್ತವೀರ್ಯನೆಂಬಾತ ತನ್ನ ಮಡದಿಯ ಕೈಯನ್ನು ಬಲಾತ್ಕಾರವಾಗಿಯೇ ಹಿಡಿದಿದ್ದರೂ, ಆ ತಪ್ಪು ರೇಣುಕೆಯದ್ದೆಂದು ಜಮದಗ್ನಿ ತೀರ್ಮಾನಿಸುತ್ತಾನೆ. ನಿರಪರಾಧಿ, ಅಬಲೆ ಹೆಣ್ಣು ರೇಣುಕೆ, ಕ್ಷುಲ್ಲಕ ಕಾರಣವೊಂದಕ್ಕೆ ಮರಣದಂಡನೆಗೆ ಒಳಗಾಗುತ್ತಾಳೆ. ಎಷ್ಟೆಂದರೂ ಆಕೆ ಬ್ರಾಹ್ಮಣ ಹೆಣ್ಣು ಅಲ್ಲವಲ್ಲ, ಹಾಗಾಗಿ ವಧಾರ್ಹಳೆಂದು ನಾಟಕಕಾರರು ತೀರ್ಮಾನಿಸಿರಬೇಕು!
ಯಕ್ಷಗಾನದ ಕತೆಯಲ್ಲಿ ಕಾರ್ತವೀರ್ಯಾರ್ಜುನನೆಂಬವ ಮಾಹಿಷ್ಮತಿಯ ಅರಸ. ಆತನಿಗೆ ಸಾವಿರ ಕೈಗಳು. ಒಮ್ಮೆ ಆತ ತನ್ನ ಮಡದಿಯರೊಂದಿಗೆ ನರ್ಮದಾ ನದಿಗೆ ವಿಹಾರಕ್ಕಾಗಿ ಹೋಗುತ್ತಾನೆ. ಎಲ್ಲರೊಂದಿಗೆ ಆತ ನದಿಗಿಳಿದಾಗ, ನೀರಿನ ಮಟ್ಟ ಕಡಿಮೆ ಇರುವುದರಿಂದ ತಮಗೆ ಇಲ್ಲಿ ನೀರೊಳಗೆ ಆಟವಾಡಲು ಸಾಧ್ಯವಾಗುವುದಿಲ್ಲ ಎಂದು ಆತನ ಸತಿಯರೆಲ್ಲ ಹೇಳುತ್ತಾರೆ. ಆಗ ಕಾರ್ತವೀರ್ಯಾರ್ಜುನ ತನ್ನ ಸಾವಿರ ಬಾಹುಗಳನ್ನು ವಿಸ್ತರಿಸಿ ಹಿಡಿದು, ನದಿಯ ಪ್ರವಾಹವನ್ನು ತಡೆಯುತ್ತಾನೆ. ತಕ್ಷಣ ನದಿಯ ನೀರಿನ ಮಟ್ಟ ಮೇಲೇರುತ್ತದೆ.
ಆದರೆ ಪರಶುರಾಮ ನಾಟಕದಲ್ಲಿ ಇದನ್ನು ನದಿ ತಿರುಗಿಸುವ ಪ್ರಕರಣ ಎಂದು ತಿರುಚಿದ್ದಾರೆ. ಅಲ್ಲದೆ ನಾಟಕದಲ್ಲಿ ಮಾಹಿಷ್ಮತಿಯ ಅರಸ ಬೇರೆ, ಕಾರ್ತವೀರ್ಯ ಬೇರೆ.
ಯಕ್ಷಗಾನದ ಕತೆಯಲ್ಲಿ ಕಾರ್ತವೀರ್ಯಾರ್ಜುನ ಒಂದು ದಿನ ಬೇಟೆಯಾಡಲು ತನ್ನ ಪರಿವಾರದೊಂದಿಗೆ ಕಾಡಿಗೆ ಬಂದವ ಸಮೀಪದಲ್ಲೇ ಇರುವ ಜಮದಗ್ನಿಯ ಆಶ್ರಮಕ್ಕೆ ಬರುತ್ತಾನೆ. ಜಮದಗ್ನಿ ರಾಜನಿಗೂ ಆತನ ಪರಿವಾರಕ್ಕೂ ಮೃಷ್ಟಾನ್ನ ಭೋಜನ ನೀಡುತ್ತಾನೆ. ಕಾಡಿನೊಳಗಿದ್ದ ಈ ಆಶ್ರಮದಲ್ಲಿ ಇಂತಹ ಭೋಜನ ಸಿದ್ಧಗೊಂಡುದು ಹೇಗೆಂದು ಜಮದಗ್ನಿಯೊಡನೆ ಕಾರ್ತವೀರ್ಯಾರ್ಜುನ ಕೇಳಿದಾಗ, ಅದು ತನ್ನಲ್ಲಿರುವ ಸ್ವರ್ಗದ ಕಾಮಧೇನುವಿನ ಮಗಳಾದ ಕಪಿಲೆಯಿಂದ ಸಾಧ್ಯವಾಯಿತು ಎನ್ನುತ್ತಾನೆ. ಆಗ ಅರಸನು ಇಂತಹ ಮಹತ್ವದ ದನ ಕಾಡಿನಲ್ಲಿರುವುದಕ್ಕಿಂತ ಅರಮನೆಯಲ್ಲಿರುವುದು ಯೋಗ್ಯವೆಂದು ಅದನ್ನು ತನಗೊಪ್ಪಿಸಲು ಕೇಳುತ್ತಾನೆ. ಆದರೆ ಜಮದಗ್ನಿ ಒಪ್ಪುವುದಿಲ್ಲ. ಕಡೆಗೆ ಅರಸನು ಕಪಿಲೆಯನ್ನು ಬಲಾತ್ಕಾರದಿಂದ ಕೊಂಡೊಯ್ಯುತ್ತಾನೆ. ಈ ವಿಚಾರ ತಿಳಿದ ಪರಶುರಾಮ ಮುಂದೆ ಮಾಹಿಷ್ಮತಿಗೆ ಮುತ್ತಿಗೆ ಹಾಕಿ ಅರಸನನ್ನು ಕೊಲ್ಲುತ್ತಾನೆ.
ನಾಟಕದ ಕತೆಯಲ್ಲಿ, ಪರಶುರಾಮನಿಗೂ, ಜಮದಗ್ನಿಗೂ ಕಾರ್ತವೀರ್ಯನಲ್ಲಿ ದ್ವೇಷವಿರಲು ಮತ್ತೊಂದು ಕಾರಣವೂ ಇದೆ. ಅದೇನು ಗೊತ್ತೇ? ಕಾರ್ತವೀರ್ಯನು ದನದ ಮಾಂಸ ತಿನ್ನುವವನು ಎಂಬುದೇ ದ್ವೇಷಕ್ಕೆ ಕಾರಣ.
ಪರಶುರಾಮನೆಂಬ ಬ್ರಾಹ್ಮಣ, ತಾಯಿಯ ತಲೆ ಕಡಿಯುವವನಲ್ಲ, ಆತ ಗೋರಕ್ಷಕ ಎಂಬ ಸಂದೇಶವನ್ನು ನೀಡುವುದಕ್ಕೆಂದೇ ಈ ಕತೆಯನ್ನು ತಿರುಚಲಾಗಿದೆ. ಮುಂದಿನ ದಿನಗಳಲ್ಲಿ ಪುರಾಣದ ಕತೆಗಳಲ್ಲಿ ಗೋರಕ್ಷಣೆ, ಬ್ರಾಹ್ಮಣ ಶ್ರೇಷ್ಠತೆಯಂತಹ ಅಂಶಗಳು ಸೇರ್ಪಡೆಗೊಂಡರೆ ಆಶ್ಚರ್ಯವಿಲ್ಲ. ಇಂತಹ ಪ್ರಯೋಗಗಳು ಮುಂದುವರೆದರೆ ಕಲೆ ಸಂಸ್ಕೃತಿಗಳು ಕುಲಗೆಟ್ಟು ಮಾನವನ ಬದುಕು ಅಸಹನೀಯ ದುರಂತದೆಡೆಗೆ ಚಲಿಸಲೂಬಹುದು!
ಮಹೇಶ, ಮಂಗಳೂರು
ಯಕ್ಷಪ್ರೇಮಿ