ತಿರುಮಲ ಲಡ್ಡು ಕಲಬೆರಕೆ ವಿವಾದದೊಂದಿಗೆ ಆರಂಭವಾದ ಆಂಧ್ರ ಪ್ರದೇಶದ ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್ ಹಾಗೂ ಖ್ಯಾತ ಚಿತ್ರನಟ ಪ್ರಕಾಶ್ ರಾಜ್ ನಡುವಿನ ವಾರ್ ಇನ್ನೂ ಮುಂದುವರೆದಿದೆ.
ಸನಾತನ ಧರ್ಮದ ಕುರಿತು ಪವನ್ ಕಲ್ಯಾಣ್ ನೀಡಿರುವ ಹೇಳಿಕೆಗಳಿಗೆ ಪ್ರತಿಯಾಗಿ ಪ್ರಕಾಶ್ ರಾಜ್ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಇದೀಗ ಪ್ರಕಾಶ್ ರಾಜ್ ಪವನ್ ಕುರಿತು ಮತ್ತೊಮ್ಮೆ ವ್ಯಂಗ್ಯವಾಡಿದ್ದಾರೆ. ಪವನ್ ರಾಜಕೀಯದಲ್ಲಿ ಫುಟ್ ಬಾಲ್ ಇದ್ದಂತೆ ಎಂದು ಅವರು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಪವನ್ ಕಲ್ಯಾಣ್ ರಾಜಕೀಯದಲ್ಲಿ ಫುಟ್ಬಾಲ್ ಇದ್ದಂತೆ. ಯಾರೋ ಅವರನ್ನು ಬಳಸುತ್ತಾರೆ. ಪವನ್ ಹೇಳುತ್ತಿರುವಂತೆ ಸನಾತನ ಧರ್ಮ ಮತ್ತು ಹಿಂದೂ ಧರ್ಮ ಅಪಾಯದಲ್ಲಿಲ್ಲ. ಬಿಜೆಪಿ ಮಾತ್ರ ಸಂಕಷ್ಟದಲ್ಲಿದೆ ಎಂದು ಅವರು ಹೇಳಿದ್ದಾರೆ. ನಟನಾಗಿ ಪವನ್ ಕಲ್ಯಾಣ್ ವಿಭಿನ್ನ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾರೆ. ರಾಜಕೀಯ ಹಾಗಲ್ಲ, ಅಲ್ಲಿ ಸ್ಥಿರವಾದ ಆಲೋಚನೆ ಇದ್ದರೆ ಒಳಿತು ಎಂದು ಹಿತವಚನವನ್ನೂ ಹೇಳಿದ್ದಾರೆ.