ಬೆಂಗಳೂರು: ಶಿಕಾರಿಪುರದ ಬಿಜೆಪಿ ಮುಖಂಡ ಹಾಗೂ ನಿಗಮ/ಮಂಡಳಿಯ ಅಧ್ಯಕ್ಷರಾಗಿದ್ದ ಡಾ. ಬಿ.ಡಿ. ಭೂಕಾಂತ್ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವರ ದರ್ಜೆಯ ಸ್ಥಾನಮಾನವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಪೀಪಲ್ ಮೀಡಿಯಾ ಈ ವಿಚಾರವನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ಕ್ರಮ ಸಂಖ್ಯೆ 54ರ ಅಡಿಯಲ್ಲಿ ಭೂಕಾಂತ್ ಅವರನ್ನು ನಿಗಮ/ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಜೊತೆಗೆ ಅವರಿಗೆ ರಾಜ್ಯ ಸಚಿವರ ದರ್ಜೆಯ ಸ್ಥಾನಮಾನವೂ ನೀಡಲಾಗಿತ್ತು. ಈ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಭೂಕಾಂತ್ ಅವರು ಬಿಜೆಪಿ ಮುಖಂಡರಾಗಿರುವುದರ ಜೊತೆಗೆ, ಅವರ ಧರ್ಮಪತ್ನಿಯೂ ಬಿಜೆಪಿಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ಅಲ್ಲದೇ, ಭೂಕಾಂತ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯಕ್ಕೆ ಸೇರಿರುವವರು ಎಂಬ ಆರೋಪಗಳು ಕೂಡ ಇತ್ತು.

ಬಿಜೆಪಿ ನಾಯಕನಿಗೆ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ಸಚಿವರ ದರ್ಜೆ ನೀಡಲಾಗಿದೆ ಎಂಬ ವಿಚಾರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳಷ್ಟೇ ಅಲ್ಲದೆ, ಕಾಂಗ್ರೆಸ್ ಒಳಗೂ ಈ ನೇಮಕಾತಿಗೆ ವಿರೋಧ ವ್ಯಕ್ತವಾಗಿತ್ತು.
ಪೀಪಲ್ ಮೀಡಿಯಾ ಈ ವಿಚಾರವನ್ನು ಪ್ರಮುಖವಾಗಿ ವರದಿ ಮಾಡಿದ ಬೆನ್ನಲ್ಲೇ ಸರ್ಕಾರ ತುರ್ತು ಕ್ರಮವಾಗಿ ಭೂಕಾಂತ್ ಅವರಿಗೆ ನೀಡಿದ್ದ ರಾಜ್ಯ ಸಚಿವರ ಸ್ಥಾನಮಾನವನ್ನು ಹಿಂಪಡೆದಿದ್ದು, ಇದು ಮಾಧ್ಯಮ ವರದಿಯ ನೇರ ಪರಿಣಾಮವಾಗಿದೆ.
ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ನೇಮಕಾತಿ ನೀತಿಯ ಮೇಲೂ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಬಿಜೆಪಿ ಮುಖಂಡರಿಗೆ ಸರ್ಕಾರದೊಳಗೆ ಸ್ಥಾನಮಾನ ನೀಡುವ ಪ್ರಯತ್ನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ಕೇಳಿಬರುತ್ತಿವೆ.