ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಸಮಾವೇಶದಲ್ಲಿ 12,692 ಮಂದಿ ಪೌರ ಕಾರ್ಮಿಕರಿಗೆ ಸೇವೆ ಕಾಯಂ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಭಾಗಿಯಾಗಿದ್ದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇಮಕಾತಿ ಪತ್ರ ವಿತರಣೆ ಮಾಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಡಿಸಿಎಂ, ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ. ಪೌರ ಕಾರ್ಮಿಕರನ್ನು ಖಾಯಂ ಮಾಡುವ ಮೂಲಕ ಅವರ ಬದುಕಿನಲ್ಲಿ ಬದಲಾವಣೆ ತಂದು ಸಮಾಜದಲ್ಲಿ ಸಮಾನತೆ ತರುವ ಕೆಲಸ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರವು 600 ಕೋಟಿ ರೂ. ಬಜೆಟ್ ಮೀಸಲಿಟ್ಟಿದ್ದು, ಯಾವುದೇ ಲಂಚವಿಲ್ಲದೆ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ದಾಖಲೆಗಳ ಪರಿಶೀಲನೆಗಾಗಿ ಬೂತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಹಾಗೆಯೇ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಪಿಂಚಣಿ ಮತ್ತು ವಸತಿ ಎಲ್ಲಾ ಕಾಳಜಿಯೊಂದಿಗೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಪೌರ ಕಾರ್ಮಿಕರು ಸರ್ಕಾರದ ಸೇವಕರಾಗಿ ಗೌರವ ಪಡೆಯಬೇಕೆಂಬುದು ಸರ್ಕಾರದ ದೃಷ್ಟಿಕೋನ ಎಂದು ಡಿಸಿಎಂ ಹೇಳಿದ್ದಾರೆ.
ಪ್ರಸ್ತುತ, 15,400 ಪೌರಕಾರ್ಮಿಕರಿಗೆ ಡಿಪಿಎಸ್ ಮೂಲಕ ವೇತನ ನೀಡಲಾಗುತ್ತಿದೆ. ಅವರಲ್ಲಿ ಕೇವಲ 12,692 ಜನರನ್ನು ಮಾತ್ರ ಕ್ರಮಬದ್ಧಗೊಳಿಸಲಾಗುತ್ತಿದ್ದು, 2,708 ಜನರನ್ನು ಇನ್ನೂ ಡಿಪಿಎಸ್ ಅಡಿಯಲ್ಲಿಯೇ ಉಳಿಸಿಕೊಂಡಿದೆ. ಡಿಪಿಎಸ್ ಅಡಿಯಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಮತ್ತು 55 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸೇವೆಗಳನ್ನು ಕ್ರಮಬದ್ಧಗೊಳಿಸಲಾಗುವುದು ಎಂದು ಬಿಬಿಎಂಪಿ ಮಾನದಂಡವನ್ನು ಅಳವಡಿಸಿಕೊಂಡಿದೆ. ಹೊರಗುಳಿದವರಲ್ಲಿ ಹೆಚ್ಚಿನವರು 55 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಮೂಲಗಳು ತಿಳಿಸಿವೆ.