ಇದ್ರಿಷ್ ಪಾಷಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಗೋರಕ್ಷಣೆ ನೆಪದಲ್ಲಿ ಸಮಾಜದ ಶಾಂತಿಭಂಗ, ಗಲಭೆಗೆ ಪ್ರಚೋದನೆ ನೀಡುತ್ತಿದ್ದ ಪುನೀತ್ ಕೆರೆಹಳ್ಳಿ ಅಲಿಯಾಸ್ ಪುನೀತ್ ಕುಮಾರ್ ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದು ಅಕ್ರಮ ಎಂದು ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.
ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠದ ಮುಂದೆ ಈ ಒಂದು ಅರ್ಜಿ ಬಂದಿದ್ದು, ಆತನ ಮೇಲಿರುವ ಆರೋಪದ ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರ ರಕ್ಷಣಾ ಪಡೆ ಎಂಬ ಪುಂಡರ ಗುಂಪು ಕಟ್ಟಿಕೊಂಡು, ಸಮಾಜದಲ್ಲಿ ಸಾಮರಸ್ಯ ಕದಡುವ, ಸಮಾಜ ವಿರೋಧಿ ಕಾರ್ಯಗಳ, ಹಾಗೂ ಹಿಂದಿನ ಅಪರಾಧ ಪ್ರಕರಣಗಳನ್ನು ಆಧರಿಸಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಅಷ್ಟೆ ಅಲ್ಲದೆ ಗೋ ರಕ್ಷಣೆ ಹೆಸರಿನಲ್ಲಿ ವ್ಯಾಪಾರಿಗಳನ್ನು ಬೆದರಿಸುವುದು, ದೈಹಿಕ ಹಲ್ಲಿಯಂತಹ ಕೃತ್ಯಗಳಲ್ಲಿ ಈತ ತೊಡಗಿದ ಬಗ್ಗೆ ಗಂಭೀರ ಆರೋಪಗಳಿದ್ದವು.
ಈವರೆಗೆ ಈತನ ಮೇಲಿದ್ದ ಆರೋಪ, ದಾಖಲಾದ ಪ್ರಕರಣಗಳು, ಸಾಮಾಜಿಕ ಜಾಲತಾಣಗಳ ಮೂಲಕ ಈಚ ಗಲಭೆಗೆ ಕರೆ ನೀಡುತ್ತಿದ್ದ ಪ್ರಕರಣದ ಜೊತೆಗೆ ಬಿಜೆಪಿ ಹೊರತಾದ ರಾಜಕೀಯ ಪಕ್ಷಗಳ ನಾಯಕರಿಗೆ ಏಕವಚನದಲ್ಲಿ ನಿಂಧನೆ ಮಾಡುತ್ತಿದ್ದ ಪ್ರತ್ಯಕ್ಷ ಸಾಕ್ಷ್ಯಗಳು ಈತನ ಮೇಲಿದ್ದವು.
ಇವೆಲ್ಲವುಗಳನ್ನು ಆಧರಿಸಿ ಈತನ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ, ಆಗಸ್ಟ್ 11 ರ ಶುಕ್ರವಾರ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಧ್ಯ ಈ ಬಂಧನ ಅಕ್ರಮ ಎಂದು ಈಗ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.