ದೇಶದ ಈಶಾನ್ಯ ಭಾಗದಲ್ಲಿ ಗಲಭೆ ಹೊತ್ತಿ ಉರಿಯುತ್ತಿದ್ದರೆ ಇತ್ತ ಪ್ರಧಾನಿ ಲೋಕಸಭೆಯಲ್ಲಿ ಜೋಕ್ ಹೇಳುತ್ತಾ ಅಸೂಕ್ಷ್ಮತೆಯನ್ನು ಮೆರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಆರೋಪಿಸಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ ರೀತಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಮತ್ತೊಂದೆಡೆ, ಈಶಾನ್ಯ ರಾಜ್ಯ ಮಣಿಪುರವು ತಿಂಗಳುಗಳಿಂದ ಗಲಭೆಯಿಂದ ಹೊತ್ತಿ ಉರಿಯುತ್ತಿದ್ದರೆ, ಪ್ರಧಾನಿ ನಗುತ್ತಾ ತಮಾಷೆ ಮಾಡುತ್ತಿದ್ದರು. ಅವರು ಮಾತನಾಡುವ ರೀತಿ ತುಂಬಾ ದುಃಖಕರವಾಗಿದೆ.
ಪ್ರಧಾನಿ ಮೋದಿ ಗುರುವಾರ ಲೋಕಸಭೆಯಲ್ಲಿ 2 ಗಂಟೆ 13 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದರು.
ಆದರೆ ಮಣಿಪುರವನ್ನು ಕೇವಲ 2 ನಿಮಿಷಗಳ ಕಾಲ ಉಲ್ಲೇಖಿಸಲಾಗಿದೆ. ಒಂದೆಡೆ ಮಣಿಪುರ ಗಲಭೆ, ಅತ್ಯಾಚಾರ, ಕೊಲೆಗಳಿಂದ ನಲುಗುತ್ತಿದ್ದರೆ, ಪ್ರಧಾನಿ ಸಂಸತ್ತಿನಲ್ಲಿ ನಗುತ್ತಾ ತಮಾಷೆ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಪ್ರಧಾನಿಗಳನ್ನು ನೋಡಿದ್ದೇನೆ.
ಆದರೆ, ಇಷ್ಟು ಕೀಳು ಮಟ್ಟದಲ್ಲಿ ಮಾತನಾಡಿದ ಪ್ರಧಾನಿಯನ್ನು ನಾನು ನೋಡಿಲ್ಲ. ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿ ರಾಜಕಾರಣಿಯಂತೆ ಮಾತನಾಡಬಾರದು. ಅವರು ದೇಶದ ಎಲ್ಲ ಜನರ ಪ್ರತಿನಿಧಿ ಎನ್ನುವುದನ್ನು ನೆನಪಿನಲ್ಲಿಡಬೇಕು,’’ ಎಂದು ರಾಹುಲ್ ಹೇಳಿದರು.