ಬೆಂಗಳೂರು: ತಮಿಳುನಾಡಿನಲ್ಲಿ ದಶಕಗಳ ಕಾಲ ತನ್ನ ಮಿತ್ರಪಕ್ಷವಾಗಿದ್ದ ಡಿಎಂಕೆಗೆ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಆರೋಪಿಸಿದ್ದಾರೆ. ಅಧಿಕಾರದ ಹಪಾಹಪಿಯಿಂದಾಗಿ ಕಾಂಗ್ರೆಸ್ ತನ್ನ ಹಳೆಯ ಮಿತ್ರನನ್ನೇ ಕೈಬಿಟ್ಟಿದೆ ಎಂದು ಅವರು ಟೀಕಿಸಿದರು.
ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಏನನ್ನೂ ಮಾಡಲು ಸಿದ್ಧವಿರುವ ‘ಪರಾವಲಂಬಿಜೀವಿ’ ಎಂದು ಕಾಂಗ್ರೆಸ್ ಅನ್ನು ಪ್ರಧಾನಿ ಮೋದಿ ಬಣ್ಣಿಸಿದರು. ಭಾನುವಾರ ಬೆಂಗಳೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ಅವಕಾಶವಾದಿ ರಾಜಕಾರಣದಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿದರು.
ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದದ್ದೇ ಡಿಎಂಕೆ ಬೆಂಬಲದಿಂದ. ಆದರೆ ಅಂತಹ ಪಕ್ಷವನ್ನು ಕಷ್ಟಕಾಲದಲ್ಲಿ ಕಾಂಗ್ರೆಸ್ ಕೈಬಿಟ್ಟಿದೆ. ಅಧಿಕಾರದ ಮೇಲಿನ ದುರಾಸೆಯಿಂದ ಸ್ಟಾಲಿನ್ ಅವರನ್ನು ಬಿಟ್ಟು, ಟಿವಿಕೆ ಜೊತೆ ಕೈಜೋಡಿಸಿದೆ ಎಂದು ಮೋದಿ ಕಿಡಿಕಾರಿದರು.
ಅಲ್ಲದೆ, ಆಂತರಿಕ ಕಚ್ಚಾಟಗಳಿಂದಾಗಿ ಕರ್ನಾಟಕದಲ್ಲಿ ಒಳ್ಳೆಯ ಅಧಿಕಾರ ನೀಡುವಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಟೀಕಿಸಿದರು. ರಾಜ್ಯಗಳಲ್ಲಿ ದ್ರೋಹದ ರಾಜಕಾರಣ ಮತ್ತು ಆಡಳಿತಾತ್ಮಕ ವೈಫಲ್ಯಗಳಿಗೆ ಕಾಂಗ್ರೆಸ್ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು.
ಇನ್ನು ಮೋದಿ ಅವರ ಕಾರ್ಯಕ್ರಮ ನಡೆದ ವೇದಿಕೆಯ ಸಮೀಪದಲ್ಲೇ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
