ದೇಶದಲ್ಲಿ ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಪ್ರತಿ ಕಡೆಯೂ ಕಮಲ ಅರಳಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸಾಂಪ್ರದಾಯಿಕ ಬೆಂಗಾಲಿ ಶೈಲಿಯ ಧೋತಿಯನ್ನು ಧರಿಸಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಉತ್ಸಾಹದಿಂದ ನೆರೆದಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ ಮತ್ತು ಈಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಎನ್ಡಿಎ ಸರ್ಕಾರಗಳೇ ಅಧಿಕಾರಕ್ಕೆ ಬಂದಿವೆ ಎಂದು ಅವರು ಹೇಳಿದರು. ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಜನಿಸಿದ ಬಂಗಾಳದಲ್ಲಿ ಜಯಗಳಿಸುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು. ಬಂಗಾಳದಲ್ಲಿ ಗಾಳಿ ಬದಲಾಗಿದೆ, ಆದ್ದರಿಂದಲೇ ಬಂಗಾಳದ ಜನರು ಬಿಜೆಪಿಗೆ ಅವಕಾಶ ನೀಡಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಇಂದಿನಿಂದ ಬಂಗಾಳದ ಜನರು ಯಾವುದೇ ಭಯವಿಲ್ಲದೆ ಇರಬಹುದು ಮತ್ತು ರಾಜ್ಯವು ಸಂಪೂರ್ಣ ವಿಶ್ವಾಸದೊಂದಿಗೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಕಳೆದ ಆಡಳಿತದಲ್ಲಿ ಬಿಜೆಪಿಯ ಹಲವು ಮಹಿಳಾ ಕಾರ್ಯಕರ್ತರು ತೀವ್ರ ಕಿರುಕುಳವನ್ನು ಎದುರಿಸಿದ್ದರು ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
