Saturday, April 19, 2025

ಸತ್ಯ | ನ್ಯಾಯ |ಧರ್ಮ

ಕವನ |ಬಾಪು ಕಣ್ತೆರೆದಾಗ,,,,

(ಗಾಂಧಿಜಯಂತಿ ವಿಶೇಷ)

ನದಿಯ ಬದಿ ಎರಡು ಹಕ್ಕಿಗಳು
ದನಿಗೂಡಿಸುವ ಸಾಹಸದಲಿ
ರೆಕ್ಕೆ ಹರಿದ ಹಕ್ಕಿಗೆ ಹಾರುವ ತವಕ
ಕೊಕ್ಕು ಮುರಿದ ಜೀವ ಹಾಡುವ ತುಡಿತ
ಬೇಟೆಗಾರನ ಬಾಣದ ಬಿರುಸಿಗೆ
ಚದುರಿ ಚೆಲ್ಲಾಡಿದ ಗರಿಕೆಗಳು ;

ನೀರಿನ ಕಲರವದ ನಡುವೆ
ಓಂಕಾರದ ಸುನಾದ
ಜಲದುಂದುಭಿಗೆ ಅಲೆಗಳೆಲ್ಲವು ಸ್ತಬ್ಧ ;
ಬೊಗಸೆ ನೀರಿಗೆ ಸೆರಗೊಡ್ಡಿದ ಗಂಗೆ
ಅರ್ಘ್ಯ ಅರ್ಪಿಸಿದ ಕೈಗಳಲಿ ಕಂಡದ್ದು
ತನ್ನೊಡಲಿನ ನಾಗರಿಕತೆಯ ನೆತ್ತರು ;

ಮುಸುಕು ಯುದ್ಧದ ಕ್ರೌರ್ಯದಲಿ
ಮಗುಚಿ ಮುಳುಗಿದ ದೋಣಿ
ಹುಟ್ಟಡಗಿಸುವ ಅಂಬಿಗನ ವಾಂಛೆಗೆ
ದಡದ ಮತ್ಸ್ಯಗಳ ವಿಲವಿಲ
ಆಚೀಚೆಯ ಮರಳು ದಿಬ್ಬಗಳ ಮೇಲೆ
ಸಾಮ್ರಾಟನ ಸೆಂಗೋಲು ;

ಜೀವಗಂಬನಿಯ ಹನಿಹನಿ ಧಾರೆ
ಎತ್ತರಕೆ ನೆಗೆದು ಥಟ್ಟನೆ ವಿರಮಿಸಿದಾಗ
ಎತ್ತಲಿನದೋ ಹದ್ದಿಗೆ ರಸದೂಟ
ನಾ-ನೀ-ಅವ-ಇವ ಓಕುಳಿಯ ಬಣ್ಣ
ದಡದಾಚೆಯ ಮಸಣದಲಿ ರಾಶಿರಾಶಿ
ದೂರ ಸಮಾಧಿಯ ಇಕ್ಕೆಲಗಳಲಿ
ಮತ್ತದೇ ಮೆಲುದನಿ – ಹೇ ರಾಂ ;

ಬಾಪೂ ಕಣ್ತೆರೆದಿರಬೇಕು,,,,,
ಒಳಗಣ್ಣ ತುಸು ತೆರೆದಿರಲೇಬೇಕು !!! 

ನಾ ದಿವಾಕರ

ಕವಿ, ಲೇಖಕ

Related Articles

ಇತ್ತೀಚಿನ ಸುದ್ದಿಗಳು

You cannot copy content of this page