ಬೆಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 50 ಸಾವಿರ ಲಂಚ ಪಡೆಯುತ್ತಿದ್ದಾಗ ಹೆಡ್ ಕಾನ್ಸ್ ಟೇಬಲ್ ಆಂಜನೇಯ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಶ್ರೀ ಸಾಗರ್ ಎಂಬವರು ನೀಡಿದ ದೂರಿನ ಮೇರೆಗೆ ಭ್ರಷ್ಟ ಪೊಲೀಸರನ್ನು ಹಿಡಿಯಲು ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಪ್ರಕರಣವೊಂದಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಪೊಲೀಸ್ ಪೇದೆ 50,000 ರೂ.ಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ರಾಜಾಜಿನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾರುತಿ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಲಕ್ಷ್ಮಣ ಗೌಡ ಕೂಡ ಲಂಚ ಸ್ವೀಕರಿಸಿದ ಆರೋಪ ಹೊತ್ತಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಬಸವರಾಜ ಪುಲಾರಿ ಮತ್ತು ಅವರ ತಂಡದಿಂದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದಿದೆ.
ಲೋಕಾಯುಕ್ತ ಪೊಲೀಸರು ಹೆಡ್ ಕಾನ್ಸ್ಟೆಬಲ್ನನ್ನು ಬಂಧಿಸಿದ್ದು, ಮಾರುತಿ ಮತ್ತು ಲಕ್ಷ್ಮಣಗೌಡ ಅವರನ್ನು ಹುಡುಕುತ್ತಿದ್ದಾರೆ.