ಸದ್ಯ ಜಾಮೀನಿನ ಮೇಲೆ ಹೊರಗಿರುವ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿದ್ದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವೊಂದು ಸಿಕ್ಕಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರನ್ನು ಸಿಐಡಿ ತನಿಖಾ ತಂಡ ಬಂಧಿಸಿದೆ.
ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಬಂಧಿತ ಅಧಿಕಾರಿ. ಇವರನ್ನು ಸಿಐಡಿ ವಿಶೇಷ ತನಿಖಾ ದಳ (ಎಸ್ಐಟಿ)ದ ಪೊಲೀಸರು ಗುರುವಾರ (ನ.14) ಬಂಧಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಸಕರಿಗೆ ಹನಿಟ್ರ್ಯಾಪ್ ಮಾಡಲು ಸಹಕರಿಸಿದ್ದಲ್ಲದೆ, ಏಡ್ಸ್ ಹರಡುತ್ತಿರುವ ಬಗ್ಗೆ ಗೊತ್ತಿದ್ದೂ ಸುಮ್ಮನಿದ್ದ ಅವರ ಆರೋಪ ಅವರ ಮೇಲಿದೆ ಎಂದು ವರದಿಗಳು ಹೇಳಿವೆ.
ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಹಾಗೂ ಹನಿಟ್ರ್ಯಾಪ್ಗೆ ಸಂಬಂಧಿಸಿದಂತೆ ತನಿಖಾ ತಂಡವು ಪ್ರಕರಣದ ಸಂತ್ರಸ್ತೆ ಮತ್ತು ಬಿಬಿಎಂಪಿ ಸದಸ್ಯ ವೇಲುನಾಯ್ಕರ್ ಅವರನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಕೂಡಾ ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿದೆ ಎನ್ನಲಾಗಿದೆ.
ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರವನ್ನು ಬಿಜೆಪಿ ಟಿಕೆಟ್ ಮೂಲಕ ಗೆದ್ದಿದ್ದ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಬಾಯಿಗೆ ಬಂದಂತೆ ಬಯ್ದು ಸುದ್ದಿಯಾಗಿದ್ದರು. ಅದರ ನಂತರ ಅವರ ವಿರುದ್ಧ ಜಾತಿ ನಿಂದನೆ ಮೊದಲಾದ ಪ್ರಕರಣಗಳು ದಾಖಲಾಗಿ ಬಂಧನಕ್ಕೆ ಒಳಗಾಗಿದ್ದರು. ಬಂಧನದ ನಂತರ ಕೆಲವು ತಿಂಗಳ ಕಾಲ ಜೈಲಿನಲ್ಲಿದ್ದ ಶಾಸಕ ನಂತರ ಜಾಮೀನಿನಡಿ ಹೊರಗೆ ಬಂದಿದ್ದಾರೆ.
ಪ್ರಕರಣದ ತನಿಖೆ ಮುಂದುವರೆದಿದ್ದು, ನಂತರವೂ ಹಲವು ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದವು. ಅವುಗಳಲ್ಲಿ ಹನಿಟ್ರ್ಯಾಪ್ ಪ್ರಕರಣವೂ ಒಂದು.