Saturday, March 15, 2025

ಸತ್ಯ | ನ್ಯಾಯ |ಧರ್ಮ

ಸೌಜನ್ಯ ಪರ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಗೆ ಪೊಲೀಸ್ ನೋಟಿಸ್

ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವಿಡಿಯೋ ಮಾಡಿದ್ದ ಸಮೀರ್ ಎಂ.ಡಿ. ಅವರ ಮನೆಗೆ ಮಾರ್ಚ್ 6ರ, ಬುಧವಾರ ತಡರಾತ್ರಿ ಪೊಲೀಸರು ಪ್ರವೇಶಿಸಿದ್ದಾರೆ. ಬಂಧಿಸಲು ಯತ್ನಿಸಿ, ಆನಂತರ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಬುಧವಾರ ರಾತ್ರಿ 1ಗಂಟೆ ಸುಮಾರಿ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಮಾಹಿತಿ ನೀಡಿರುವ ಸಮೀರ್ ತಮ್ಮ ಮೇಲಾಗುತ್ತಿರುವ ಟ್ರೋಲ್ ಗಳು, ಮತ್ತು ಅವರ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. 

ಸಮೀರ್ ತಮ್ಮ ಯೂಟ್ಯೂಬ್ ನಲ್ಲಿ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಇತ್ತೀಚೆಗೆ ಮಾಡಿದ್ದ ವೀಡಿಯೊವೊಂದು ಹೆಚ್ಚು ವೈರಲ್ ಆಗಿತ್ತು, ಆ ಮೂಲಕ ರಾಜ್ಯದಾದ್ಯಂತ ಮತ್ತೆ ಸೌಜನ್ಯ ಪ್ರಕರಣ ಮುನ್ನಲೆಗೆ ಬಂದಿದೆ. ಈ ನಡುವೆ ಸಮೀರ್ ಅವರ ಧರ್ಮವನ್ನು ಮುನ್ನಲೆಗೆ ತಂದು ಅವರನ್ನು ಅವಮಾನಿಸುತ್ತಿರುವವರಿಗೆ ಪ್ರತಿಕ್ರಿಯೆ ನೀಡಿರುವ ಸಮೀರ್, ಜನರು ಜಾತಿ ಮತ್ತು ಧರ್ಮವನ್ನು ಈ ವಿಷಯಕ್ಕೆ ಏಕೆ ಎಳೆದು ತರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ  ನಡುವೆ ಎಡಿಜಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಅವರು ಹೊರಡಿಸಿದ್ದಾರೆ ಎನ್ನಲಾದ ಆದೇಶದ ಪ್ರತಿಯೊಂದು ಬುಧವಾರ ಸಂಜೆಯಿಂದ ವೈರಲ್ ಆಗಿದೆ. ಈ ಆದೇಶದಲ್ಲಿ “ಸಮೀರ್ ವೀಡಿಯೊದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಲ್ ಚುರುಕುಗೊಳಿಸಿ ಕ್ರಮ ಕೈಗೊಳ್ಳಬೇಕು” ಎಂಬ ಆದೇಶ ನೀಡಲಾಗಿದ್ದು, ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. 

ಎಡಿಜಿಪಿ ಹೊರಡಿಸಿದ್ದಾರೆ ಎನ್ನಲಾದ ಈ ಆದೇಶದಲ್ಲಿ, “ಇತ್ತೀಚಿಗೆ ಸಮೀರ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಹರಿಬಿಟ್ಟದ್ದು, ಘಟಕಾಧಿಕಾರಿಗಳು ಈ ವಿಷಯವನ್ನು ತಮ್ಮ ಘಟಕಗಳಲ್ಲಿರುವ Social Media Monitoring Cell ಮುಖೇನ ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿರುತ್ತೀರಿ. ಈ ವಿಷಯ ಕುರಿತಂತೆ ಸಾರ್ವಜನಿಕರಲ್ಲಿ ಪರ/ವಿರೋಧ ಅನಿಸಿಕೆಗಳು ಉದ್ಭವಿಸಿ ಸಾಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿರುತ್ತದೆ. ಆದ್ದರಿಂದ, Social Media Monitoring Cell ಚುರುಕುಗೊಳಿಸುವುದು ಹಾಗೂ ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಮಾನ್ಯ ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ರವರಿಗೆ ಮಾಹಿತಿ ನೀಡುವುದು” ಎಂದು ಹೇಳಿದೆ.

ಮಾಜಿ ಪೊಲೀಸ್ ಅಧಿಕಾರಿ, ಸೌಜನ್ಯ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಗಿರೀಶ್ ಮಟ್ಟಣ್ಣನವರ್ ಅವರ ಜೊತೆಗೆ ಸಮೀರ್ ಅವರು ಬುಧವಾರ ತಡರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ತನಗೆ ವ್ಯಾಪಕ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ.

ಲೈವ್‌ನಲ್ಲಿ ಮಾತನಾಡಿದ ಸಮೀರ್, “ಪ್ರಸ್ತುತ ನನ್ನ ಪರಿಸ್ಥತಿ ತುಂಬಾ ಕೆಟ್ಟದಾಗಿದ್ದು, ಈಗಾಗಲೆ ಪೊಲೀಸ್ ನೋಟಿಸ್ ಬಂದಿದೆ. ಸುಮಾರು ರಾತ್ರಿ 10;45ರ ಹೊತ್ತಿಗೆ ಪೊಲೀಸರು ಬಂದು ನೋಟಿಸ್ ಕೊಟ್ಟು ಹೋಗಿದ್ದಾರೆ. ಅದಾಗ್ಯೂ ನನಗೆ ಯಾವುದೇ ಭಯವಿಲ್ಲ. ನಾನು ವಿಡಿಯೊದಲ್ಲಿ ಹೇಳಿರುವ ಎಲ್ಲಾ ವಿಚಾರಗಳಿಗೂ ಸಾಕ್ಷಿಯಿದೆ. ನನಗೆ ಕಾನೂನಿನ ಮೇಲೆ ನಂಬಿಕೆಯಿದ್ದು, ಕೋರ್ಟ್‌ನ ಮುಂದೆ ಮತ್ತಷ್ಟು ವಿಸೃತವಾಗಿ ಮಂಡಿಸುತ್ತೇನೆ. ಈ ಬಗ್ಗೆ ಯಾವುದೇ ತೊಂದರೆಯಿಲ್ಲ” ಎಂದು ಹೇಳಿದ್ದಾರೆ.

ಪ್ರಸ್ತುತ ತನಗೆ ತೊಂದರೆ ಆಗುತ್ತಿರುವುದು, ಮುಸ್ಲಿಮನೊಬ್ಬ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದೆ ತಪ್ಪು ಹಾಗೂ ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಆದರೆ, ನಾನು ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದೇನೆ, ಅದು ನನ್ನ ಧರ್ಮ, ಅದನ್ನು ನಾನು ಪಾಲಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

“ಒಂದು ವೇಳೆ ನಾನು ಹಿಂದೂ ವಿರೋಧಿ ಆಗಿದ್ದರೆ, ಒಬ್ಬ ಹಿಂದೂ ಹುಡುಗಿಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಯಾಕೆ ಧ್ವನಿ ಎತ್ತಬೇಕು? ನ್ಯಾಯದ ಬಗ್ಗೆ ಮಾತನಾಡೋಣ. ಅದುವೇ ಧರ್ಮ” ಎಂದು ಸಮೀರ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page