ಬೆಂಗಳೂರು: ಸರ್ಕಾರ ರಚನೆಯಾದ ಎರಡು ತಿಂಗಳುಗಳ ನಂತರ ವಿರೋಧ ಪಕ್ಷದ ನಾಯಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವಂತಿದೆ. ಗೊಂದಲದ ಗೂಡಾಗಿರುವ ರಾಜ್ಯ ಬಿಜೆಪಿ ಇದುವರೆಗೂ ವಿರೋಧ ಪಕ್ಷದ ನಾಯಕನನ್ನಾಗಿ ಯಾರ ಹೆಸರನ್ನೂ ಘೋಷಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ವೀಕ್ಷಕರನ್ನಾಗಿ ನೇಮಿಸಿದ್ದಾರೆಂದು ಮೂಲಗಳು ತಿಳಿಸಿವೆ.
ವಿರೋಧ ಪಕ್ಷದ ನಾಯಕರಾಗಿ ಅರವಿಂದ ಬೆಲ್ಲದ, ನಿರಾಣಿ ಹಾಗೂ ಯತ್ನಾಳ ಅವರುಗಳ ಹೆಸರು ಮುಂಚೂಣಿಯಲ್ಲಿದ್ದರೂ ಒಬ್ಬರನ್ನು ನೇಮಿಸಿದರೆ ಇನ್ನೊಂದು ಬಣ ಉರಿದು ಬೀಳುವ ಸಾಧ್ಯತೆಯಿರುವುದರಿಂದಾಗಿ, ಸನ್ನಿವೇಶವನ್ನು ಕೇಂದ್ರದ ನಾಯಕರು ಹೇಗೆ ನಿಭಾಯಿಸಲಿದ್ದಾರೆನ್ನುವ ಕುತೂಹಲ ರಾಜಕೀಯ ಆಸಕ್ತರಲ್ಲಿ ಮೂಡಿದೆ.