Home ರಾಜಕೀಯ ಇಂದಿನಿಂದ ರಾಜ್ಯ ಬಜೆಟ್ ಮೊದಲ ಅಧಿವೇಶನ ; ವಿಪಕ್ಷಗಳಿಗೆ ಅಸ್ತ್ರವಾಗುವ ‘ಗ್ಯಾರಂಟಿ’ ಅಂಶಗಳು

ಇಂದಿನಿಂದ ರಾಜ್ಯ ಬಜೆಟ್ ಮೊದಲ ಅಧಿವೇಶನ ; ವಿಪಕ್ಷಗಳಿಗೆ ಅಸ್ತ್ರವಾಗುವ ‘ಗ್ಯಾರಂಟಿ’ ಅಂಶಗಳು

0

ಇಂದಿನಿಂದ (ಜುಲೈ 3) ವಿಧಾನಸಭೆಯ ಮೊದಲ ಬಜೆಟ್ ಅಧಿವೇಶನ ನಡೆಯಲಿದ್ದು, ಹೊಸ ಸರ್ಕಾರದ ಮೊದಲ ಜಂಟಿ ಅಧಿವೇಶನ ಇದಾಗಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮ್ಮ ಭಾಷಣದ ಮೂಲಕ ಚಾಲನೆ ನೀಡಲಿದ್ದಾರೆ.

ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಜಟಾಪಟಿಯ ಕಲರವ ಕೇಳಿ ಬರಲಿದೆ. ಬಹು ಮುಖ್ಯವಾಗಿ ಬಿಜೆಪಿ ಪಕ್ಷದ ವಿರೋಧ ಪಕ್ಷದ ನಾಯಕರ ಘೋಷಣೆ ಇಂದು ಆಗಲಿದ್ದು, ಬಿಜೆಪಿ ಪಕ್ಷ ತನ್ನ ಹೊಸ ಶಾಸಕಾಂಗದ ನಾಯಕನನ್ನು ಎದಿರು ನೋಡಲಿದೆ‌.

ನಿರೀಕ್ಷೆಯಂತೆ ವಿಪಕ್ಷಗಳಿಗೆ ಕಾಂಗ್ರೆಸ್ ಪಕ್ಷದ ‘ಗ್ಯಾರಂಟಿ ಅಂಶಗಳು’ ವಿರೋಧದ ಅಸ್ತ್ರವಾಗುವ ಸಾಧ್ಯತೆ ಇದೆ. ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ವಿರುದ್ಧ ಮುಗಿಬೀಳಲು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ನಿರ್ಧಾರ ಮಾಡಿದ್ದಾರೆ. ಸದನದ ಒಳಗಡೆ ಮತ್ತು ಹೊರಗಡೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಎರಡೂ ವಿರೋಧ ಪಕ್ಷಗಳ ನಾಯಕರು ಪ್ಲ್ಯಾನ್ ಮಾಡಿದ್ದಾರೆ.

ಒಂದು ಕಡೆ ಕೇಂದ್ರ ಬಿಜೆಪಿ ಸರ್ಕಾರ ‘ಅನ್ನಭಾಗ್ಯ ಯೋಜನೆ’ಯ ಅಕ್ಕಿ ವಿತರಣೆಗೆ ಹಿಂದೇಟು ಹಾಕಿದ್ದನ್ನು ಕಾಂಗ್ರೆಸ್ ಪಕ್ಷ ಅಸ್ತ್ರ ಮಾಡಿಕೊಂಡರೆ, ಬಿಜೆಪಿ ಪಕ್ಷ ಕೇಂದ್ರದ ಅನುಮತಿ ಪಡೆದು ಗ್ಯಾರಂಟಿ ಘೋಷಣೆ ಮಾಡಿದ್ದೀರಾ ಎಂಬಂತಹ ಪ್ರಶ್ನೆಗೆ ಮುಂದಾಗಲಿದೆ. ಮುಖ್ಯವಾಗಿ ಹತ್ತು ಕೆಜಿ ಅಕ್ಕಿಗೆ ಹಣ ಕೊಡಬೇಕು. ಕೆಜಿಗೆ 34 ರೂಪಾಯಿ ನೀಡೋದಲ್ಲ, ಮಾರ್ಕೆಟ್ ದರ ಕೆಜಿಗೆ 60 ರೂಪಾಯಿ ಇದೆ. ಅಷ್ಟೇ ಕೊಡಬೇಕು ಎಂದು ಆಗ್ರಹಿಸುವ ಸಾಧ್ಯತೆ ಇದೆ. ಆ ಮೂಲಕ ಸದನದ ಒಳಗೆ ಹಾಗೂ ಹೊರಗೆ ಸರ್ಕಾರವನ್ನ ಕಟ್ಟಿಹಾಕಲು ಬಿಜೆಪಿ ನಾಯಕರು ತಯಾರಿ ಮಾಡಿಕೊಂಡಿದ್ದಾರೆ.

ಇನ್ನು ಮತ್ತೊಂದು ವಿರೋಧ ಪಕ್ಷ ಜೆಡಿಎಸ್ ಕೂಡಾ ಸರ್ಕಾರದ ಗ್ಯಾರಂಟಿ ಗೊಂದಲ, ಗ್ಯಾರಂಟಿಗಳಿಂದ ರಾಜ್ಯಕ್ಕೆ ಆಗುವ ನಷ್ಟ, ಗ್ಯಾರಂಟಿಗಳಿಂದ ಜನರು ಮುಂದೆ ಎದುರಿಸಬೇಕಾದ ತೊಂದರೆಯನ್ನು ರಾಜ್ಯದ ಜನತೆಗೆ ಸದನದ ಮೂಲಕ ತಿಳಿಸಲು ತಯಾರಿ ಮಾಡಿಕೊಂಡಿದೆ.

ಒಟ್ಟಾರೆ ಇಂದಿನಿಂದ ನಡೆಯುವ ರಾಜ್ಯ ಬಜೆಟ್ ಅಧಿವೇಶನ ಹಲವಷ್ಟು ವಿಶೇಷತೆಗಳಿಂದ ಕೂಡಿದ್ದು, ಗ್ಯಾರಂಟಿ ಅಂಶಗಳೇ ಈ ಬಜೆಟ್ ನ ಪ್ರಮುಖ ಆಕರ್ಷಣೆ ಆಗುವುದರಲ್ಲಿ ಅನುಮಾನವಿಲ್ಲ.

You cannot copy content of this page

Exit mobile version