Home ರಾಜ್ಯ ಶಿವಮೊಗ್ಗ ಕುಪ್ಪಳಿ | ಅದ್ದೂರಿ ಮಂತ್ರ ಮಾಂಗಲ್ಯ ವಿವಾದ; ಪ್ರತಿಷ್ಠಾನದ ಸ್ಥಾನಕ್ಕೆ ಪ್ರಕಾಶ್‌ ಕಡಿದಾಳ್‌ ರಾಜೀನಾಮೆ

ಕುಪ್ಪಳಿ | ಅದ್ದೂರಿ ಮಂತ್ರ ಮಾಂಗಲ್ಯ ವಿವಾದ; ಪ್ರತಿಷ್ಠಾನದ ಸ್ಥಾನಕ್ಕೆ ಪ್ರಕಾಶ್‌ ಕಡಿದಾಳ್‌ ರಾಜೀನಾಮೆ

0

ತೀರ್ಥಹಳ್ಳಿ: ರೈತರು ಮತ್ತು ಬಡವರು ಮದುವೆಯ ಹೆಸರಿನಲ್ಲಿ ಸಾಲದ ಹೊರೆಯಲ್ಲಿ ಮುಳುಗುವುದು ಮತ್ತು ಪುರೋಹಿತಶಾಹಿಯ ಕೈಯಲ್ಲಿ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲೆಂದು ಕುವೆಂಪು ಮಂತ್ರ ಮಾಂಗಲ್ಯ ಎನ್ನುವ ಹೊಸ ಬಗೆಯ ಮದುವೆ ಪರಿಕಲ್ಪನೆಯೊಂದನ್ನು ಕಳೆದ ಶತಮಾನದ ಆರನೇ ದಶಕದಲ್ಲಿ ಚಾಲ್ತಿಗೆ ತಂದಿದ್ದರು.

ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಇಂತಹ ಮದುವೆಗಳು ಸಾಕಷ್ಟು ನಡೆಯುತ್ತಿದ್ದವು. ಹಿರಿಯರ ಹೆಜ್ಜೆಯನ್ನು ಅನುಕರಿಸಿ ಈಗಿನ ಕಿರಿಯರು ಸಹ ಆಗಾಗ ಮಂತ್ರ ಮಾಂಗಲ್ಯ ಪದ್ಧತಿಯಡಿ ಮದುವೆಯಾಗುವ ಮೂಲಕ ಈ ಪರಂಪರೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ಆದರೆ ಇತ್ತೀಚೆಗೆ ಕುವೆಂಪು ಅವರ ಜನ್ಮಸ್ಥಳ ಕುಪ್ಪಳಿಯಲ್ಲಿ ನಡೆದ ಮಂತ್ರ ಮಾಂಗಲ್ಯದ ಅದ್ದೂರಿತನ ಬಾರೀ ಟೀಕೆಗೆ ಒಳಗಾಗಿತ್ತು. ಜೊತೆಗೆ ಅಲ್ಲಿನ ಆಡಳಿತ ನೋಡಿಕೊಳ್ಳುವ ಟ್ರಸ್ಟಿನ ಕುರಿತಾಗಿ ಟೀಕೆಗಳೂ ಎದ್ದಿದ್ದವು.

ಈ ಹಿನ್ನೆಲೆಯಲ್ಲಿ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬಿ.ಎಲ್. ಶಂಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಕುಟುಂಬದವರೇ ಅದ್ದೂರಿಯಾಗಿ ಮಂತ್ರ ಮಾಂಗಲ್ಯ ಆಚರಿಸಿ ಕುವೆಂಪು ಆಶಯಕ್ಕೆ ಧಕ್ಕೆ ತಂದಿರುವುದಾಗಿ ವಿರೋಧ ವ್ಯಕ್ತವಾಗಿತ್ತು.

ತಮ್ಮ ಸಂಬಂಧಿಕರ ಮದುವೆ ಎಂಬುದನ್ನು ಒಪ್ಪಿಕೊಂಡಿದ್ದ ಕಡಿದಾಳ್ ಪ್ರಕಾಶ್, ಇಂತಹ ಮದುವೆಗಳಿಗೆ ಮುಂದೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಇದೀಗ ಅವರು ರಾಜೀನಾಮೆ ನೀಡಿದ್ದಾರೆ.

You cannot copy content of this page

Exit mobile version